Wednesday, 9 July 2014

ಗರ್ಭಪಾತ - ಆ ಇನ್ನೊಂದು ಮುಖ



   ಸ್ತ್ರೀ ಭ್ರೂಣಹತ್ಯೆ ಆಧುನಿಕ ಭಾರತಕ್ಕೆ ಅಂಟಿರುವ ಕಳಂಕ. ಇದು ಗರ್ಭಪಾತಕ್ಕಿರುವ ನಿಸರ್ಗ ವಿರೋಧಿ, ಮಾನವ ವಿರೋಧಿ ಮುಖ. ಲಿಂಗಾನುಪಾತ ವರ್ಷದಿಂದ ವರ್ಷಕ್ಕೆ ಕುಸಿಯುತ್ತ ಈಗ ಪ್ರತಿ ಸಾವಿರ ಗಂಡುಮಕ್ಕಳಿಗೆ ೯೧೪ ಹೆಣ್ಣುಮಕ್ಕಳಿದ್ದಾರೆ. ವರದಕ್ಷಿಣೆ, ಪಿತೃಪ್ರಧಾನ ವ್ಯವಸ್ಥೆ, ಒಂದೇ ಮಗು ಸಾಕೆಂಬ ಧೋರಣೆ, ಗಂಡುಮೋಹ ಇವೆಲ್ಲವೂ ಹೆಣ್ಣುಮಗುವಿನ ವಿರುದ್ಧ ಕೆಲಸ ಮಾಡುತ್ತಿರುವಾಗ ಸಮಕಾಲೀನ ವಿಜ್ಞಾನವೂ ಅದಕ್ಕೆ ಕೈಜೋಡಿಸಿದೆ.

   ನಿರ್ಲಿಪ್ತ ವಿಜ್ಞಾನ-ತಂತ್ರಜ್ಞಾನವನ್ನೂ ಪುರುಷ ಪ್ರಧಾನ ವ್ಯವಸ್ಥೆ ನಿಯಂತ್ರಿಸುತ್ತಿದೆ. ಆಮ್ನಿಯೋಸೆಂಟೆಸಿಸ್ ಮತ್ತು ಸೊನೋಗ್ರಫಿ ಎಂಬ ತಪಾಸಣಾ ತಂತ್ರಗಳು ಸ್ತ್ರೀಭ್ರೂಣ ಹತ್ಯೆಯ ಭಾಗವಾಗಿದ್ದು ಈ ಕಾಲದ ದುರಂತವೇ ಸರಿ. ಆಮ್ನಿಯೋಸೆಂಟೆಸಿಸ್ ತಪಾಸಣೆಯಲ್ಲಿ ಗರ್ಭಚೀಲದಲ್ಲಿ ಭ್ರೂಣದ ಸುತ್ತ ಆವರಿಸಿಕೊಂಡಿರುವ ಆಮ್ನಿಯಾಟಿಕ್ ಫ್ಲುಯಿಡ್ ಎಂಬ ದ್ರವವನ್ನು ಹೊರತೆಗೆದು ಪರೀಕ್ಷೆಗೊಳಪಡಿಸಿ ಭ್ರೂಣವು ಕ್ರೋಮೋಸೋಮ್ ಸಂಬಂಧಿ ಅನುವಂಶಿಕ ಕಾಯಿಲೆಗಳಿಂದ ಬಳಲುತ್ತಿದ್ದರೆ ಪತ್ತೆ ಮಾಡಲಾಗುತ್ತಿತ್ತು. ಅದೇ ಕ್ರೋಮೋಸೋಮ್ ಅನಾಲಿಸಿಸ್ ಈಗ ಲಿಂಗಪತ್ತೆಗೆ ಬಳಕೆಯಾಗುತ್ತಿದೆ. ಆಮ್ನಿಯೋಸೆಂಟೆಸಿಸ್ ದುಬಾರಿ ಮತ್ತು ಎಲ್ಲೆಡೆ ಲಭ್ಯವಿಲ್ಲ. ಆದರೆ ಊರೂರಿನಲ್ಲಿರುವ ಅಲ್ಟ್ರಾಸೌಂಡ್‌ಸ್ಕ್ಯಾನಿಂಗ್ ಮಶೀನುಗಳು ಲಿಂಗಪತ್ತೆಗೆ ಬಳಕೆಯಾಗುತ್ತಿವೆ. ನವದೆಹಲಿಯೊಂದರಲ್ಲೇ ೧೮೦೦ ಸ್ಕ್ಯಾನಿಂಗ್ ಕೇಂದ್ರಗಳಿವೆ!

   ಗಂಡುಮಗುವೇ ಬೇಕೆನ್ನುವುದು ಏಷಿಯಾ ಜನರ ಕಾಯಿಲೆ. ದಕ್ಷಿಣ ಕೊರಿಯಾ, ತೈವಾನ್, ಭಾರತ ಮತ್ತು ಚೀನಾಗಳು ಸ್ತ್ರೀ ಭ್ರೂಣಹತ್ಯೆಯ ಮುಂಚೂಣಿಯಲ್ಲಿವೆ. ೧೯೭೯ರಲ್ಲಿ ಚೀನಾ ಕುಟುಂಬ ಯೋಜನೆ ಕಡ್ಡಾಯ ಮಾಡಿ ಒಂದೇ ಮಗು ಹೆರಲು ಉತ್ತೇಜಿಸಿದ ನಂತರ ಒಂದೇ ಮಗು ಸಾಕು, ಅದು ಗಂಡಾಗಿರಬೇಕೆನ್ನುವ ಪಾಲಕರು ಹೆಚ್ಚತೊಡಗಿದರು. ಅದೇ ರೋಗ ಭಾರತಕ್ಕೂ ಹಬ್ಬಿದೆ. ಪ್ರಪಂಚದಾದ್ಯಂತ ಇರುವ ಗಂಡು ಮೋಹದಿಂದ ಉತ್ತೇಜಿತನಾದ ಅಮೆರಿಕದ ರೊನಾಲ್ಡ್ ಎರಿಕ್ಸನ್ ಎಂಬ ತಜ್ಞವೈದ್ಯ, ಗರ್ಭಧಾರಣೆಗೆ ಮುನ್ನವೇ ಗಂಡುಮಗು ಆಯ್ದುಕೊಳ್ಳಬಹುದಾದ ತಂತ್ರಜ್ಞಾನ ಅಭಿವೃದ್ಧಿಪಡಿಸಿ ಪೇಟೆಂಟ್ ಪಡೆದುಕೊಳ್ಳಲು ಹೊರಟಿದ್ದ! ಜಪಾನಿನ ಡಾ. ಎಹಾಚಿ ಇಜಕಾ ಶೇ. ೮೫% ಯಶಸ್ವಿ ಗಂಡು ಹೆರುವ ತಂತ್ರವನ್ನು ಪ್ರಚಾರಪಡಿಸಿದ್ದ. ಋತುಸ್ರಾವವಾದ ಯಾವ್ಯಾವ ದಿನಗಳಲ್ಲಿ ದಂಪತಿಗಳು ಹೇಗೆ ದೈಹಿಕ ಸಂಪರ್ಕ ಮಾಡಿದರೆ ಗಂಡುಮಗು ಹುಟ್ಟುತ್ತದೆಂದು ಹೇಳುವ ಚೀನೀ ಕ್ಯಾಲೆಂಡರ್ ಮಹಿಳಾ ನಿಯತಕಾಲಿಕಗಳಲ್ಲಿ ಪ್ರಕಟವಾಗುತ್ತಿರುತ್ತದೆ. ಹೀಗೆ ವಿಜ್ಞಾನ ತಂತ್ರಜ್ಞಾನಗಳೂ ಲಿಂಗತಾರತಮ್ಯ ಬೆಳೆಸುವತ್ತ ಅಭಿವೃದ್ಧಿಯಾದವು.

   ಆಯ್ದ ಲಿಂಗ ಹತ್ಯೆ ಅನೈಸರ್ಗಿಕ, ಅಪರಾಧ. ಇದು ಇಂದು ನಿನ್ನೆಯ ವಿದ್ಯಮಾನವಲ್ಲ. ಮೊದಲು ಸ್ತ್ರೀ ಶಿಶುಹತ್ಯೆ ನಡೆಯುತ್ತಿತ್ತು. ಹುಟ್ಟಿದ ಹೆಣ್ಣುಮಗುವಿಗೆ ಬಿಗಿಯಾದ ಬಳೆ ತೊಡಿಸಿ ಇಲ್ಲವೇ ಬಟ್ಟೆ ಸುತ್ತಿ ಉಸಿರುಗಟ್ಟಿಸಿ ಕೊಲ್ಲುತ್ತಿದ್ದರು. ತೀವ್ರ ಅನಾದರ, ತಾರತಮ್ಯ, ನಿಷ್ಕಾಳಜಿಗೆ ಎಷ್ಟೋ ಹೆಣ್ಣುಮಕ್ಕಳು ಸಾಯುತ್ತಿದ್ದವು. ಹೆಣ್ಣುಗಳ ಮಾರಾಟವೂ ನಡೆದಿತ್ತು. ಈಗ ಒಂಭತ್ತು ತಿಂಗಳು ಹೊರುವುದು, ಹೆರುವುದು ಯಾವುದೂ ಇಲ್ಲದೇ ಹೆಣ್ಣೆಂದು ತಿಳಿದಿದ್ದೇ ‘ಕೆಲಸ ಮುಗಿಸಿಬಿಡುವ’ ಆತುರ ಹೆತ್ತವರದ್ದು. ಈ ಹತ್ಯೆಗೆ ಯಾರನ್ನು ಹೊಣೆ ಮಾಡುವುದು? ಇದರಲ್ಲಿ ನೇರವಾಗಿ ಮಗುವಿನ ಸೃಷ್ಟಿಕರ್ತರೇ ಪಾಲ್ಗೊಂಡಿರುತ್ತಾರೆ. ಹುಟ್ಟಿಸಿದವರಿಗೇ ಹೆಣ್ಣು ಏಕೆ ಬೇಡವಾಗುತ್ತಾಳೆ? ನಮ್ಮ ಜನಪದರ ಎಷ್ಟೋ ಹಾಡುಗಳಲ್ಲಿ ತಮ್ಮಂತೆ ಕಷ್ಟಪಡುವ ಹೆಣ್ಣುಜೀವ ಹುಟ್ಟಿತಲ್ಲ ಎಂದು ಹೆಣ್ಣು ಹುಟ್ಟಿದ್ದರ ಬಗೆಗೆ ದುಃಖಿಸಿದ್ದಾರೆ. ಮಾರ್ಗರೆಟ್ ಗಾರ್ನರ್ ಎಂಬ ಗುಲಾಮಿ ಮಹಿಳೆ ತನ್ನ ಮಗಳನ್ನು ಕೊಂದು ಅದಕ್ಕಾಗಿ ವಿಚಾರಣೆ ಎದುರಿಸುವಾಗ ‘ನನ್ನ ಮಗಳು ಎಂದಿಗೂ ಗುಲಾಮ ಹೆಣ್ಣಾಗಿ ನೋವನುಭವಿಸುತ್ತ ಬಾಳುವುದು ಬೇಡ. ಅದಕ್ಕೇ ಕೊಂದೆ. ನನಗೆ ಘನಘೋರ ಶಿಕ್ಷೆಯನ್ನೇ ನೀಡಿ. ಗಲ್ಲುಗಂಬಕ್ಕೆ ಹಾಡಾಡುತ್ತ ಬೇಕಾದರೂ ಹೋಗುತ್ತೇನೆ, ಆದರೆ ಬಿಡುಗಡೆ ಮಾಡಿ ಮತ್ತೆ ಗುಲಾಮಳಾಗಿ ದಯವಿಟ್ಟು ಕಳಿಸಬೇಡಿ’ ಎಂದು ಅಂಗಲಾಚುತ್ತಾಳೆ. ಅಮ್ಮನಿಗೂ ಮಗಳು ಬೇಡವಾಗುವುದು ಈ ಕಾರಣಕ್ಕೆ.

     ಸ್ತ್ರೀ ಭ್ರೂಣಹತ್ಯೆ ವಿರೋಧಿಸುವ ಭರದಲ್ಲಿ ಕೆಲ ‘ಜೀವಪರ’ ಹೋರಾಟಗಾರರು ಗರ್ಭಪಾತವನ್ನೇ ನಿಷೇಧಿಸಬೇಕೆಂಬ ಉಗ್ರಬೇಡಿಕೆ ಮುಂದಿಡುತ್ತಿದ್ದಾರೆ. ಗರ್ಭಪಾತ ವಿರೋಧಿಸಿ ಹರಿದಾಡುವ ಮೇಲ್-ಸಂದೇಶಗಳನ್ನು ಗಮನಿಸಿದರೆ ಇದು ಅರ್ಥವಾಗುತ್ತದೆ. ಆದರೆ ಎಲ್ಲ ಗರ್ಭಪಾತಗಳು ಸ್ತ್ರೀ ಭ್ರೂಣಹತ್ಯೆಯಲ್ಲ. ಗರ್ಭಪಾತ ಎಂದ ಕೂಡಲೇ ಜನರ ಭಾವುಕ ಪ್ರಜ್ಞೆ ಜಾಗೃತವಾಗುತ್ತದೆ. ಮಾಡುವವರು ನರಹಂತಕರಾಗಿಯೂ, ಮಾಡಿಕೊಳ್ಳುವಾಕೆ ರಾಕ್ಷಸಿಯಾಗಿಯೂ ಬಿಂಬಿಸಲ್ಪಡುತ್ತಾರೆ. ಕಾಮ, ಕುಟುಂಬ, ಮಹಿಳೆಗೆ ಸಂಬಂಧಿಸಿದ ಪರಂಪರಾಗತ ರೂಢಿಗಳ ಕುರಿತು ಆಧುನಿಕ ಭಾರತಕ್ಕೆ ದ್ವಂದ್ವಗಳಿವೆ. ಅಂಥವುಗಳಲ್ಲಿ ಗರ್ಭಪಾತವೂ ಒಂದು. ಮೊದಲಿನಿಂದಲೂ ಗರ್ಭಪಾತ ಕೊಲೆ, ಪಾಪಕರ ಎಂದೇ ಪರಿಗಣಿಸಲ್ಪಟ್ಟಿದೆ. ಹೆಣ್ಣು ಬಿಡುಗಡೆಯ ದಾರಿ ಎಂದು ಬಯಸಿದ್ದು, ತನ್ನ ಹಕ್ಕೆಂದು ತಿಳಿದಿದ್ದು, ಆಯ್ಕೆಯ ಅವಕಾಶವೆಂದು ಬಗೆದಿದ್ದು ಜೀವವಿರೋಧಿ ಎಂದು ಬಿಂಬಿಸಲ್ಪಟ್ಟರೆ?

   ಸ್ತ್ರೀ ಭ್ರೂಣಹತ್ಯೆಯನ್ನು ಒತ್ತಟ್ಟಿಗಿಟ್ಟು ನೋಡಿದರೆ, ಯಾವ ಲಿಂಗದ್ದೇ ಆಗಿರಲಿ ತನಗೆ ಈ ಮಗು ಬೇಡ ಎಂದು ನಿರ್ಧರಿಸುವುದು ಮಹಿಳಾ ಹಕ್ಕು ಎಂದೇ ಪರಿಗಣಿಸಲಾಗಿದೆ. ಈ ಹಕ್ಕನ್ನು ಮಹಿಳೆ ಸುಲಭದಲ್ಲಿ ಬಿಟ್ಟುಕೊಡಲಾರಳು. ಗರ್ಭಪಾತ ಹಕ್ಕು ಕೈಜಾರಿದರೆ ಅಚಾತುರ್ಯಕ್ಕೆ ಬಸುರಾದ ಎಳೆಬಾಲೆಯರು, ಧಾರ್ಮಿಕ ಹಾಗೂ ಪಾತಿವ್ರತ್ಯದ ಪೊಲೀಸಿಂಗ್ ನಡೆಸಬಯಸುವ ಗಂಡನ ಕಾರಣದಿಂದ ಕುಟುಂಬ ಯೋಜನೆ ಅಳವಡಿಸಿಕೊಳ್ಳಲಾರದವರು, ಮರುಮದುವೆಯಾಗದ ವಿಧವೆಯರು, ಮತ್ತೆ ಮಕ್ಕಳ ಒಲ್ಲದ ಹಿರಿ ಅಮ್ಮಂದಿರು ಇವರೆಲ್ಲ ಬೇಡದ ಮಕ್ಕಳನ್ನು ಹೆರಬೇಕಾಗುತ್ತದೆ. ಗರ್ಭಪಾತ ಜನಸಂಖ್ಯಾ ನಿಯಂತ್ರಣದ ಅಥವಾ ಕುಟುಂಬ ಯೋಜನೆಯ ಮಾರ್ಗವಲ್ಲ. ಅದು ನಾವು ಸಮರ್ಥಿಸಿಕೊಳ್ಳುವ ಮಾನವ ಹತ್ಯೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಮಹಿಳೆಯ ಗರ್ಭದೊಳಗಿರುವ ಮಗುವಿನ ಕುರಿತ ಕಾಳಜಿ ಗರ್ಭ ಹೊರುವ ಮಹಿಳೆಯ ಬಗೆಗೂ ಇರಬೇಕಲ್ಲವೆ?



   ಭಾರತದಲ್ಲಿ ವರ್ಷಕ್ಕೆ ಎಷ್ಟು ಗರ್ಭಪಾತಗಳಾಗುತ್ತವೆಂಬ ನಿಖರ ಅಂಕಿಅಂಶ ಲಭ್ಯವಿಲ್ಲ. ಸರ್ಕಾರ ಪ್ರತಿವರ್ಷ ೨೫ ಲಕ್ಷ ಕಾನೂನುಬದ್ಧ ಗರ್ಭಪಾತ ನಡೆಯುತ್ತದೆಂದು ಹೇಳಿದರೆ ಸರ್ಕಾರೇತರ ಸಂಸ್ಥೆಗಳ ಪ್ರಕಾರ ಈ ಸಂಖ್ಯೆ ೧.೧ ಕೋಟಿ. ಅದರಲ್ಲಿ ಅರ್ಧದಷ್ಟು ಕಾನೂನುಬಾಹಿರ ಗರ್ಭಪಾತಗಳು. ಐದನೇ ಒಂದು ಭಾಗ ಸ್ತ್ರೀ ಭ್ರೂಣಹತ್ಯೆ. ಪ್ರತಿವರ್ಷ ೨೮ ಸಾವಿರಕ್ಕಿಂತ ಅಧಿಕ ಮಹಿಳೆಯರು ಗರ್ಭಪಾತದ ಕಾಂಪ್ಲಿಕೇಷನ್‌ಗಳಿಂದ ಸಾವನ್ನಪ್ಪುತ್ತಿದ್ದಾರೆ. ೮೦% ಗರ್ಭಪಾತಗಳನ್ನು ಕುಟುಂಬ ಯೋಜನಾ ವಿಧಾನ ಅಳವಡಿಸಿಕೊಳ್ಳದ ವಿವಾಹಿತ ಸ್ತ್ರೀಯರು ಮಾಡಿಕೊಂಡರೆ, ಉಳಿದ ೨೦% ಬೇರೆ ಕಾರಣಗಳಿಗಾಗಿ ಆಗುವಂಥದು.

   ಗರ್ಭಪಾತ ವಿಶ್ವಾದ್ಯಂತ ಎಂದಿನಿಂದ ನಡೆದುಬಂದಿರುವಂಥದ್ದು. ಐದು ಸಾವಿರ ವರ್ಷದ ಕೆಳಗೆ ಚೀನಾದ ಷೆನಾಂಗ್ ರಾಜ ಮಹಿಳೆಯರಿಗೆ ಪಾದರಸ ನೀಡಿ ಗರ್ಭಪಾತ ಮಾಡಿಸಲು ಸೂಚಿಸಿದ್ದ. ಅರಿಸ್ಟಾಟಲ್ ಪ್ರಕಾರ ಗಂಡು ಭ್ರೂಣಕ್ಕೆ ೪೦ ಹಾಗೂ ಹೆಣ್ಣು ಭ್ರೂಣಕ್ಕೆ ೯೦ ದಿನವಾದಾಗ ‘ಮಾನವ ಪ್ರಜ್ಞೆ’ ಬರುತ್ತದೆ. ಈ ಅವಧಿಗಿಂತ ಮೊದಲು ಗರ್ಭಪಾತ ಸಮ್ಮತವಾಗಿತ್ತು. ಹಿಪೋಕ್ರೆಟಿಸ್ ಪ್ರತಿಜ್ಞಾವಿಧಿಯಲ್ಲಿ ‘ಗರ್ಭಪಾತ ಮಾಡುವ ಪೆಸರಿಗಳನ್ನು ಮಹಿಳೆಗೆ ಕೊಡುವುದಿಲ್ಲ’ ಎನ್ನುವ ಅಂಶ ಇತ್ತು. ಭಾರತದಲ್ಲೂ ಸ್ಮೃತಿಗಳು ವಿಧಿಸುವ ನಿಯಮಗಳಲ್ಲಿ ಮೊದಲ ಮೂರು ವರ್ಣಗಳು ಗರ್ಭಪಾತ ಮಾಡಿಕೊಳ್ಳುವಂತಿರಲಿಲ್ಲ. ಹಾಗೇನಾದರೂ ಮಾಡಿದಲ್ಲಿ ಅವರನ್ನೂ, ಅವರಿಗೆ ಸಹಾಯ ನೀಡಿದವರನ್ನೂ ಶಿಕ್ಷೆಗೆ ಒಳಪಡಿಸಲಾಗುತ್ತಿತ್ತು.

   ಗರ್ಭಪಾತಕ್ಕೆ ಹತ್ತುಹಲವು ವಿಧಾನಗಳು ಚಾಲ್ತಿಯಲ್ಲಿದ್ದವು. ತಿನ್ನಬಾರದ್ದನ್ನು ತಿನ್ನುವುದು, ಅತಿ ಶ್ರಮದ ಕೆಲಸ ಮಾಡುವುದು, ಉಪವಾಸ, ಹೊಟ್ಟೆಗೆ ಬಿಗಿಯಾಗಿ ಬಟ್ಟೆ ಸುತ್ತುವುದು ಮತ್ತು ಬಿಸಿನೀರು ಎರಚುವುದು, ಕಾದ ಕರಟದ ಮೇಲೆ ಮಕಾಡೆ ಮಲಗುವುದು, ದೇಹದಿಂದ ರಕ್ತ ಹರಿಯಗೊಡುವುದು, ಜಜ್ಜಿದ ಈರುಳ್ಳಿ ಅಥವಾ ಹಬೆ ಮೇಲೆ ಕೂರುವುದು, ಮಾರ್ಜಕವನ್ನು ಗರ್ಭದ್ವಾರದೊಳಗೆ ತುಂಬುವುದು, ಗರ್ಭದ್ವಾರದಲ್ಲಿ ಅಥವಾ ಒಳಗೆ ಔಷಧಿ ಹಚ್ಚಿದ ಕಡ್ಡಿ ಚುಚ್ಚಿ ಗರ್ಭ ಹೊರಹಾಕಲು ಪ್ರಯತ್ನಿಸುವುದು ಇತ್ಯಾದಿ. ಇಂಥ ವಿಧಾನಗಳಿಂದ ತಾಯಿಗೆಷ್ಟು ಅಪಾಯವಿತ್ತು ಎಂದು ಯಾರಾದರೂ ಊಹಿಸಬಹುದು. ಗಾಯ, ಕೀವು, ನಂಜು, ಅವಮಾನ.. ಓಹ್, ಅದೆಷ್ಟು ತಾಯಂದಿರು ಪ್ರಾಣ ತೆತ್ತರೋ?! ಇಳಿಯದ ಬಸುರಿಗೆ ಅದೆಷ್ಟು ಜನ ಆತ್ಮಹತ್ಯೆಗೆ ಶರಣಾದರೋ?  

     ಹಿಂದಿನ ತಲೆಮಾರಿನ ಅಮ್ಮಂದಿರು ಅನುಭವಿಸಿದ ಇಂಥ ದಾರುಣ ಅಸಹಾಯಕತೆಗಳು ನಮ್ಮ ದೇಶಕ್ಕಷ್ಟೇ ಸೀಮಿತವಾಗಿರಲಿಲ್ಲ. ಪ್ರಪಂಚದ ಬಹಳಷ್ಟು ದೇಶಗಳ ಹೆಂಗಸರೂ ಹೆರುವ ಯಂತ್ರಗಳಾಗಿದ್ದರು. ವಿಜ್ಞಾನ ತಂತ್ರಜ್ಞಾನದಲ್ಲಿ ಉನ್ನತಿ ಸಾಧಿಸಿ ಮಾನವಹಕ್ಕು ಜಾಗೃತಿ ಮೂಡಿದ್ದರೂ ಜನನ ನಿಯಂತ್ರಣದ ಮಟ್ಟಿಗೆ ಅಮೆರಿಕ ಸಮಾಜದ್ದು ಸನಾತನ ಧೋರಣೆಯೇ. ೧೮೫೦ರ ಸುಮಾರಿನ ಈ ಘಟನೆ ನೋಡಿ: ನ್ಯೂಯಾರ್ಕ್‌ನ ಹೊರಭಾಗದ ಒಂದು ಆರೋಗ್ಯ ಶಿಬಿರದಲ್ಲಿ ೨೮ ವರ್ಷದ ಸ್ಯಾಡಿ ಸ್ಯಾಕ್ಸ್ ಎಂಬ ಮಹಿಳೆ ತನಗೆ ಮಕ್ಕಳನ್ನು ಹೆತ್ತುಹೆತ್ತು ಸಾಕಾಗಿ ಈಗಷ್ಟೇ ಮೂರು ತಿಂಗಳ ಬಸುರನ್ನು ಗರ್ಭಪಾತ ಮಾಡಿಕೊಂಡಿದ್ದಾಗಿಯೂ, ಗ್ಯಾರಂಟಿ ಫಲಿತಾಂಶ ಇರುವ ಜನನನಿಯಂತ್ರಣದ ಬಗ್ಗೆ ತಿಳಿಸಬೇಕೆಂದೂ ಅಲವತ್ತುಕೊಂಡಳು. ಅದಕ್ಕೆ ವೈದ್ಯರು ನಸುನಗುತ್ತ, ‘ಹಾಗಾದರೆ ನಿನ್ನ ಗಂಡನನ್ನು ಮನೆ ಚಾವಣಿಯ ಮೇಲೆ ಮಲಗಲು ಹೇಳು. ಅದು ಗ್ಯಾರಂಟಿ ಗರ್ಭನಿರೋಧಕ’ ಎಂದು ಕಳಿಸಿಬಿಟ್ಟರು. ಕಣ್ಣೀರು ತುಂಬಿಕೊಂಡು ಹೊರಬಂದ ಆಕೆ ಶಿಬಿರದ ನರ್ಸ್ ಬಳಿ ಗರ್ಭನಿರೋಧಕದ ಮಾಹಿತಿ ಕೇಳಿದರೆ ಲಭ್ಯವಿರಲಿಲ್ಲ. ಕೆಲ ತಿಂಗಳುಗಳಲ್ಲೇ ಮತ್ತೊಂದು ಗರ್ಭಪಾತದ ವೇಳೆ ಸ್ಯಾಡಿ ಸತ್ತು ಹೋದಳು.

  ಇಂಥ ಸಾವು, ಹತಾಶೆ, ನಿಸ್ಸಹಾಯಕತೆಗಳು ಪ್ರಪಂಚದ ಕೋಟ್ಯಂತರ ಮಹಿಳೆಯರ ಕತೆಯಾಗಿತ್ತು. ಅವ್ಯಾಹತವಾಗಿ ನಡೆದರೂ ಗರ್ಭಪಾತ ನೈತಿಕ ಒಪ್ಪಿಗೆ ಪಡೆದಿರಲಿಲ್ಲ. ಕುಟುಂಬ ಯೋಜನೆ ಮತ್ತು ಗರ್ಭಪಾತ ಕಾನೂನು ಮನ್ನಣೆಯನ್ನೂ ಪಡೆದಿರಲಿಲ್ಲ. ಈಗಲೂ ಗರ್ಭಪಾತಕ್ಕೆ ಧಾರ್ಮಿಕ, ಸಾಮಾಜಿಕ, ನೈತಿಕ ನಿರ್ಬಂಧಗಳಿವೆ. ಕೆಲ ಕ್ರಿಶ್ಚಿಯನ್ ಪಂಥಗಳಲ್ಲಿ ಗರ್ಭಪಾತಕ್ಕೆ ಅವಕಾಶ ನೀಡಿದ್ದರೂ ಕ್ಯಾಥೊಲಿಕ್ ಪಂಥ ಖಡಾಖಂಡಿತ ಕುಟುಂಬ ಯೋಜನೆ ವಿರೋಧಿಸುತ್ತದೆ. ಕೆಲ ಇಸ್ಲಾಂ ಸಮುದಾಯಗಳು ತಾಯಿಯ ಆರೋಗ್ಯಕ್ಕೆ ಮುಳುವಾಗುವುದಾದರೆ ಏಳು ವಾರದೊಳಗಿನ ಗರ್ಭ ತೆಗೆಯಲು ಸಮ್ಮತಿಸಿದರೆ ಕೆಲವೆಡೆ ಈ ಅವಧಿಯನ್ನು ೪ ತಿಂಗಳವರೆಗೆ ವಿಸ್ತರಿಸಲಾಗಿದೆ. ಹೀಗೆ ಧರ್ಮ, ಲೋಕರೂಢಿಗಳು ಹೆರುವವಳ ಇಷ್ಟಾನಿಷ್ಟದ ಕುರಿತು ಕಿಂಚಿತ್ತೂ ಚಿಂತಿಸದೆ ಹುಟ್ಟಲಿರುವ ಕೂಸಿಗೆ ಕುಲಾವಿ ಹೊಲಿದಿರುವುದು ಕಂಡುಬರುತ್ತದೆ.

    ೧೯ನೇ ಶತಮಾನದ ಹೊತ್ತಿಗೆ ಸ್ತ್ರೀವಾದಿ ದನಿಗಳು ಗಟ್ಟಿಯಾಗತೊಡಗಿದವು. ಹೆಣ್ಣಿಗೆ ಪುರುಷನಿಗಿರುವ ಎಲ್ಲ ನಾಗರಿಕ ಅಧಿಕಾರ ಸವಲತ್ತುಗಳೂ ಸಿಗಬೇಕು; ಮಕ್ಕಳ ನಿರ್ವಹಣೆ ಮಹಿಳೆಯ ಜೈವಿಕ ಕರ್ತವ್ಯವಾದ್ದರಿಂದ ಯಾವಾಗ, ಎಷ್ಟು ಮಕ್ಕಳು ಬೇಕೆಂದು ನಿರ್ಧರಿಸುವ ಹಕ್ಕನ್ನು ಅವಳಿಗೇ ಕೊಡಬೇಕೆನ್ನುವ ಒತ್ತಾಯ ಆರಂಭಿಕ ಮಹಿಳಾ ಹೋರಾಟಗಳಲ್ಲಿ ಕಾಣಿಸಿತು. ಕುಟುಂಬ ಯೋಜನೆ ಮತ್ತು ಜನನ ನಿಯಂತ್ರಣ ಇವೆರೆಡೂ ಮಹಿಳೆಯ ಬಿಡುಗಡೆಗೆ ಮೊದಲ ಮೆಟ್ಟಿಲುಗಳು ಎಂದೇ ಭಾವಿಸಲಾಗಿತ್ತು. ‘ಬರ್ತ್ ಸ್ಟ್ರೈಕ್- ಜನನ ಮುಷ್ಕರ’ ಎಂಬ ಹೊಸ ಆಲೋಚನೆಯನ್ನು ಮಹಿಳಾ ಚಳುವಳಿಯ ಮುಂಚೂಣಿಯಲ್ಲಿದ್ದ ಅನತೋಲ್ ಫ್ರಾನ್ಸ್ ಹಾಗೂ ರೋಸಾ ಲಕ್ಸೆಂಬರ್ಗ್ ಮುಂದಿಟ್ಟರು. ಏರುತ್ತಿರುವ ಜನಸಂಖ್ಯೆ, ಮಕ್ಕಳ ಪಾಲನೆ ಪೋಷಣೆಯಲ್ಲೇ ಸವೆದು ಹೋಗುವ ಮಹಿಳಾ ಮಾನವ ಸಂಪನ್ಮೂಲ ಇವನ್ನೆಲ್ಲ ಗಮನದಲ್ಲಿಟ್ಟುಕೊಂಡು ಕೆಲ ದೇಶಗಳು ಕುಟುಂಬಯೋಜನೆ/ಗರ್ಭಪಾತಕ್ಕೆ ಸಮ್ಮತಿ ನೀಡಿದವು.

   ಭಾರತದಲ್ಲಿ ಕಾನೂನುಬದ್ಧ ಗರ್ಭಪಾತ ನಿಯಂತ್ರಣಕ್ಕಾಗಿ ಎಂಟಿಪಿ ಆಕ್ಟ್ - ೧೯೭೧ ಬಂತು. ಅದರ ಪ್ರಕಾರ ಗರ್ಭಪಾತ ಎಂದರೆ ೨೮ ವಾರ ಅವಧಿಯೊಳಗಿನ ಗರ್ಭ ತೆಗೆಸಿಕೊಳ್ಳುವುದು. ಗರ್ಭಪಾತವನ್ನು ಯಾರು, ಯಾರಿಗೆ, ಎಲ್ಲಿ ಮಾಡಬಹುದು ಎಂಬ ಸ್ಪಷ್ಟ ನಿಯಮಾವಳಿ/ನಿರ್ದೇಶನವನ್ನು ಆ ಕಾಯಿದೆ ನೀಡಿತು. ಇದರ ಪ್ರಕಾರ ತಾಯಿಯ ಪ್ರಾಣಕ್ಕೆ ಅಪಾಯವಿದ್ದರೆ; ಹುಟ್ಟಿದಲ್ಲಿ ಮಗುವಿಗೆ ವೈಕಲ್ಯ ಮತ್ತಿತರೆ ತೊಂದರೆಯಾಗುವಂತಿದ್ದರೆ; ಅತ್ಯಾಚಾರದಿಂದ ಗರ್ಭ ಧರಿಸಿದ್ದರೆ; ವಿವಾಹಿತ ಮಹಿಳೆಯಲ್ಲಿ ಕುಟುಂಬ ಯೋಜನೆ ವಿಫಲವಾಗಿ ಗರ್ಭ ಧರಿಸಿದ್ದರೆ ಗರ್ಭಪಾತಕ್ಕೆ ಅವಕಾಶವಿದೆ. ೫ ತಿಂಗಳಿಗಿಂತ ಹೆಚ್ಚು ಅವಧಿಯ ಗರ್ಭ ತೆಗೆಯಬೇಕಿದ್ದರೆ ಇಬ್ಬರು ತಜ್ಞ ವೈದ್ಯರ ಅಭಿಪ್ರಾಯವಿರಬೇಕು. ಕಾನೂನು ಅನುಮತಿ ಪಡೆದ ಸ್ಥಳದಲ್ಲಿ ಅನುಮತಿ ಪಡೆದ ವೈದ್ಯರೇ ಮಾಡಬೇಕು.


ಮನದ ಮಾತು:

    ಅಮಾನುಷ ಕೊಲೆ, ಯುದ್ಧ, ಪೋಲಿಸ್ ಹಿಂಸೆ, ಲಾಕಪ್ ಡೆತ್, ಕೌಟುಂಬಿಕ ದೌರ್ಜನ್ಯಗಳು ಇವೆಲ್ಲ ಎಂಥ ಕಠಿಣ ಕಾನೂನು ಬಂದರೂ ಕಡಿಮೆಯಾಗಲಿಲ್ಲ, ಏಕೆ? ಹಿಂಸೆ ನಮ್ಮಲ್ಲಿ ಅಂತರ್ಗತವಾಗಿದೆ. ಅದರ ಒಂದು ಮುಖ ಗರ್ಭಪಾತ. ಒಳಗೆಲ್ಲೋ ಅಡಗಿಕೊಂಡಿರುವ ಹಿಂಸೆಯನ್ನು ಹುಡುಕಿ ನಾಶ ಮಾಡಿ ಜೀವಕಾರುಣ್ಯದ ಗಿಡ ಬೆಳೆಸಬೇಕಾಗಿದೆ.

   ಅಮ್ಮಂದಿರೇ, ಭಾವೀ ಅಮ್ಮಂದಿರನ್ನು ಹುಡುಕಿ ನಾಶಮಾಡುವ ಜಾಲದಲ್ಲಿ ದಯವಿಟ್ಟು ಭಾಗಿಯಾಗಬೇಡಿ. ಗರ್ಭಪಾತಕ್ಕೆಳಸುವ ಬದಲು ಬೇಡದ ಗರ್ಭ ನಿಲ್ಲದಂತೆ ಕುಟುಂಬ ಯೋಜನೆ ಅಳವಡಿಸಿಕೊಳ್ಳಿ. ಅದು ಸಾಧ್ಯವಾಗದಿದ್ದಲ್ಲಿ ಅಥವಾ ವಿಫಲವಾದಲ್ಲಿ ತಿಂಗಳ ಸ್ರಾವ ನಾಲ್ಕೈದು ದಿನ ತಡವಾದ ಕೂಡಲೇ ಮೂತ್ರ ತಪಾಸಣೆ ಮಾಡಿಸಿ. ವೈದ್ಯರನ್ನು ಸಂಪರ್ಕಿಸಿ.  

Monday, 7 July 2014

ಮಂಡೇಲಾ ಮತ್ತು ಆಫ್ರಿಕಾ: ನೋ ಈಸಿ ವಾಕ್ ಟು ಫ್ರೀಡಂ..



ಏಳು ಬಣ್ಣ ನುಂಗಿ ಕಪ್ಪು ಕತ್ತಲಾಯಿತು


ಹೋಮೋ ಸೆಪಿಯನ್ ಎಂಬ ಎರಡು ಕಾಲಿನ ಪ್ರಾಣಿ ತನ್ನ ಪೂರ್ವಜ ಮಂಗನಿಂದ ಮೊದಲು ರೂಪುಗೊಂಡಿದ್ದೇ ಆಫ್ರಿಕಾದಲ್ಲಿ. ಆಫ್ರಿಕಾ ಎಂಬ ಅಸಂಖ್ಯ ಬುಡಕಟ್ಟು ಕುಲಗಳ ನಾಡು ಸಮೃದ್ಧ ನದಿ-ಸರೋವರ ತೀರ ಪ್ರದೇಶಗಳನ್ನೂ, ಪ್ರಪಂಚದಲ್ಲೇ ದೊಡ್ಡ ಮರುಭೂಮಿ ಸಹಾರಾವನ್ನೂ; ಚಿನ್ನ, ವಜ್ರದ ಅಮೂಲ್ಯ ಗಣಿಗಳನ್ನೂ, ಭೀಕರ ಬರಗಾಲದ ರ‍್ವಾಂಡಾ, ಈಥಿಯೋಪಿಯಾ, ಸೊಮಾಲಿಯಾಗಳನ್ನೂ; ಸಧೃಢ ಕ್ರೀಡಾಪಟುಗಳನ್ನೂ, ಜಗತ್ತಿನಲ್ಲೇ ಅತಿ ಹೆಚ್ಚು ಅಪೌಷ್ಟಿಕತೆ, ಅನಕ್ಷರತೆಯನ್ನೂ ಏಕಕಾಲದಲ್ಲಿ ಹೊಂದಿ ಕಾಮನ ಬಿಲ್ಲಿನ ಬಣ್ಣಗಳನೆಲ್ಲ ತನ್ನ ಕಗ್ಗತ್ತಲೆಯಲ್ಲಿ ಕರಗಿಸಿಬಿಟ್ಟಿದೆ. ಅಪರಿಮಿತ ಸಂಪನ್ಮೂಲದ ಹೊರತಾಗಿಯೂ ಅಂತರ್ಯುದ್ಧದಲ್ಲಿ; ಸರ್ವಾಧಿಕಾರಿಗಳ ದುಷ್ಟ ರಾಜಕಾರಣದಲ್ಲಿ; ಸಾಂಕ್ರಾಮಿಕ ರೋಗಗಳಲ್ಲಿ; ವ್ಯಾಪಾರೀ ವಸಾಹತುಶಾಹಿಗಳ ಕುಯುಕ್ತಿಯ ನಡೆಗಳಲ್ಲಿ ಸೊರಗಿ ಹೋಗಿದೆ.

ಜನಸಂಖ್ಯೆಯ ೫೦% ೧೯ ವರ್ಷ ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನವರಿರುವ ಎಳೆಯರ ಖಂಡ ಆಫ್ರಿಕಾ ಮನುಷ್ಯನ ಅತಿ ಹಳೆಯ ವಾಸಸ್ಥಳ. ಒಂದು ಬಿಲಿಯನ್ ಜನಸಂಖ್ಯೆಯಿರುವ ೫೪ ದೇಶಗಳ ಗುಚ್ಛ. ಕ್ರೈಸ್ತ ಮತ್ತು ಇಸ್ಲಾಂ ಧರ್ಮಗಳು ಕಳೆದ ಸಹಸ್ರಮಾನದಿಂದಲೂ ಅಲ್ಲಿ ಮುಖಾಮುಖಿಯಾಗಿವೆ. ವಸಾಹತುಶಾಹಿಗಳು ಬರುವ ಮೊದಲು ೧೦ ಸಾವಿರ ಭಿನ್ನ ಪಾಳೆಯಪಟ್ಟು-ರಾಜ್ಯಗಳಿದ್ದ ಆಫ್ರಿಕಾದಲ್ಲಿ ಬೇಟೆ ಕುಲಗಳ ಅಧೀನ ಪ್ರದೇಶದಿಂದ ಹಿಡಿದು ರಾಜ್ಯ-ಸಾಮ್ರಾಜ್ಯದ ತನಕ ವಿಭಿನ್ನ ರೂಪದ ಆಳ್ವಿಕರ ಗುಂಪುಗಳಿದ್ದವು.

ಬಹುಶಃ ಭೂಮಿಯ ಇನ್ಯಾವ ಭಾಗದಲ್ಲೂ ಕಾಣದ ಭೀಕರ ಗುಲಾಮಿ ವ್ಯಾಪಾರ ನಡೆದ ನೆಲ ಆಫ್ರಿಕಾ. ಪ್ರಾಕೃತಿಕ ಸಂಪನ್ಮೂಲಕ್ಕಿಂತ ಹೆಚ್ಚು ಗುಲಾಮರನ್ನೇ ಅಲ್ಲಿನ ಆಳ್ವಿಕರು ವ್ಯಾಪಾರದ ವಸ್ತುವಾಗಿಸಿದ್ದರು. ಅರಬ್ ಗುಲಾಮಿ ವಹಿವಾಟು ಒಂದೇ ೭ರಿಂದ ೨೦ನೇ ಶತಮಾನದವರೆಗೆ ಹಿಂದೂ ಮಹಾಸಾಗರ ದಾರಿಯಲ್ಲಿ ೧೮ ಮಿಲಿಯನ್ ಗುಲಾಮರನ್ನು; ಅಟ್ಲಾಂಟಿಕ್ ದಾರಿಯಲ್ಲಿ ೭-೧೨ ಮಿಲಿಯನ್ ಗುಲಾಮರನ್ನು ಸಾಗಾಟ ಮಾಡಿ ಹೊಸಜಗತ್ತಿಗೆ ಮಾರಿದೆ. ಒಂದರ್ಥದಲ್ಲಿ ಜಗತ್ತಿನಾದ್ಯಂತ ತುಂಬಿಕೊಂಡ ಆಫ್ರಿಕನ್ ಗುಲಾಮರಿಂದ ಕಳೆದ ಸಹಸ್ರಮಾನದಲ್ಲೇ ಆಫ್ರಿಕಾ ಜಾಗತೀಕರಣಗೊಂಡಿದೆ. ಬರಬರುತ್ತ ಹೊಸಜಗಕ್ಕೆ ಕಡಿಮೆಯಾದ ಗುಲಾಮರ ಅವಶ್ಯಕತೆ, ಗುಲಾಮಿ ಪದ್ಧತಿ ನಿಷೇಧ ಕಾಯ್ದೆಗಳು ಗುಲಾಮಿ ವ್ಯಾಪಾರ ನಿಲಿಸಿದವು. ೧೮೦೮ರಿಂದ ೧೮೬೦ರ ತನಕ ರಾಯಲ್ ನೇವಿ ಒಂದೇ ೧.೬ ಮಿಲಿಯನ್ ಗುಲಾಮರನ್ನು ಹಡಗುಗಳಿಂದ ಬಿಡಿಸಿ ವಾಪಸು ಅವರ ನಾಡಿಗೆ ಕಳಿಸಿತು. ಆದರೆ ಗುಲಾಮಿ ವ್ಯಾಪಾರ ನಿಂತಿದ್ದೇ ಆಫ್ರಿಕಾದ ಸಾಮ್ರಾಜ್ಯ-ವ್ಯಾಪಾರ-ವಹಿವಾಟಿನ ಸ್ವರೂಪವೇ ಬದಲಾಯಿತು. ಕೆಲವು ರಾಜ್ಯಗಳು ಕುಸಿದು ಅಂತರ್ಯುದ್ಧದಲ್ಲಿ ನಾಶವಾದರೆ ಮತ್ತೆ ಕೆಲ ರಾಜ್ಯಗಳು ಕೋಕೋ, ಮರಮುಟ್ಟು, ಚಿನ್ನ, ಎಣ್ಣೆಯ ವ್ಯಾಪಾರದಲ್ಲಿ ತೊಡಗಿದವು.

ವಸಾಹತುಶಾಹಿ ಆಳ್ವಿಕೆಗೊಳಪಟ್ಟಮೇಲೆ ಮಾನವ ಶೋಷಣೆಯ ಹೊಸ ಅಧ್ಯಾಯ ಶುರುವಾಯಿತು. ಯೂರೋಪಿನ ಸಾಮ್ರಾಜ್ಯಶಾಹಿಗಳ ಕಾಲನಿಯಾಗಿದ್ದ ಆಫ್ರಿಕಾ ಎಷ್ಟೋ ಹಿಂಸಾತ್ಮಕ ಹೋರಾಟಗಳ ನಂತರ ಎರಡನೇ ಮಹಾಯುದ್ಧದ ಆಸುಪಾಸು ಸ್ವತಂತ್ರ ದೇಶಗಳ ಖಂಡವಾಗಿ ರೂಪುಗೊಂಡಿತು. ಆದರೆ ಆಫ್ರಿಕಾದಲ್ಲಿ ಇಂದು ಹಲವು ರಿಪಬ್ಲಿಕ್‌ಗಳಿದ್ದರೂ ಪ್ರತಿ ರಿಪಬ್ಲಿಕ್ ಒಳಗಿರುವ ಬುಡಕಟ್ಟುಗಳು ತಮ್ಮದೇ ಸ್ವಂತ ಆಡಳಿತ, ನೀತಿನಿಯಮ ಹೊಂದಿ ಮರಿ ರಿಪಬ್ಲಿಕ್‌ಗಳಂತೆ ಕಾರ್ಯ ನಿರ್ವಹಿಸುತ್ತಲಿವೆ. ರಾಷ್ಟ್ರೀಯತೆಯ ಮನೋಭಾವ ಬೆಳೆಯಗೊಡದೆ ಪರಸ್ಪರ ಅಂತರ್ಯುದ್ಧದಲ್ಲಿ ತೊಡಗಿವೆ. ಮಾನವ ಅಭಿವೃದ್ಧಿ ಸೂಚ್ಯಂಕದ ಅಂಕಿಸಂಖ್ಯೆಯ ರಸಾತಳದಲ್ಲಿವೆ. ಹೊಸಹೊಸ ಸಾಂಕ್ರಾಮಿಕ ರೋಗಗಳು ಆ ನಾಡನ್ನು ಮೊದಲು ಅಮರಿಕೊಳ್ಳುತ್ತವೆ. ಎಚ್‌ಐವಿ ಒಂದು ಮಹಾಪಿಡುಗಾಗಿ ಬಾಧಿಸುತ್ತಿದೆ. ಮನುಷ್ಯ ಕಳ್ಳಸಾಗಾಣಿಕೆ, ಮಾದಕ ವಸ್ತು ವ್ಯಾಪಾರ ಅವ್ಯಾಹತವಾಗಿ ನಡೆಯುತ್ತಿದೆ. ತೀವ್ರ ಬಡತನವಿದೆ. ಅತಿಹೆಚ್ಚು ಅಪರಾಧ ಸರಾಸರಿಯಿದೆ.

ವರ್ಣಭೇದ, ಗುಲಾಮಿ ಸ್ಥಿತಿ, ದಲ್ಲಾಳಿ, ಸರ್ವಾಧಿಕಾರಿ - ಹೀಗೆ ಹಲವು ಗುಣಗಳ ದ್ರಾವಣದಂತಿರುವ ಆಫ್ರಿಕನ್ ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳಲು, ಇವತ್ತಿನ ಇಡೀ ಆಫ್ರಿಕಾವನ್ನು ಗ್ರಹಿಸಲು ಅದರ ನೆಲ-ಜಲ-ಜನರ ಇತಿಹಾಸವನ್ನು ನೋಡಲೇಬೇಕು. ಆಗ ಮಾತ್ರ ಕಗ್ಗತ್ತಲ ಖಂಡದ ಇತಿಹಾಸದ ನಡುವೆ ಆವಾಗೀವಾಗ ಜನರನ್ನು ಒಗ್ಗೂಡಿಸುತ್ತ, ಹೋರಾಟಕ್ಕೆ ಅಣಿಗೊಳಿಸಲು ಯತ್ನಿಸಿದ ದನಿಗಳೂ; ಇಡೀ ಆಫ್ರಿಕಾ ಖಂಡವನ್ನು ಒಂದೇ ಆಗಿಸುವ ಪ್ರಯತ್ನದ ಹಲವು ಕನಸು-ಹೋರಾಟಗಳೂ, ಅದರ ವಿಶೇಷತೆಯೂ ಅರಿವಾಗುತ್ತದೆ. ಮೊನ್ನೆ ಮರೆಯಾದ ಆಫ್ರಿಕಾ ನೆಲದ ಅಮೂಲ್ಯ ವಜ್ರ ರೋಲಿಹ್ಲಾಹ್ಲಾ ಮದಿಬಾ ಮಂಡೇಲಾರಂತೆಯೇ ಸಿಸಿಲೊ, ಡೆಸ್ಮಂಡ್ ಟುಟು, ಬುಥೆಲೆಜಿ, ವಂಗಾರಿ ಮಥಾಯ್, ಅಚಿಬೆ, ಗೂಗಿ ಥಿಯಾಂಗೋರಂಥವರು ವಿಮೋಚನೆಯ ಹಾದಿಯ ಪ್ರವರ್ತಕರೆಂದು ಏಕೆ ಬಣ್ಣಿಸಲ್ಪಡುತ್ತಾರೆ ಎಂದೂ ತಿಳಿಯುತ್ತದೆ.

ರೋಲಿಹ್ಲಾಹ್ಲಾ = ‘ತೊಂದರೆ ಕೊಡುವವ’



೧೯೧೮ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಹುಟ್ಟಿದ ಮಂಡೇಲಾ ಸ್ವಾತಂತ್ರ್ಯದೆಡೆಗೆ ನಡೆಸಿದ ಪಯಣ ಒಳದಾರಿಯದಲ್ಲ. ಸಿದ್ಧವಾದ ರಾಜಮಾರ್ಗದ ಹಾದಿಯೂ ಅಲ್ಲ. ಅವರು ಭಿನ್ನವಾದ ಹಾಗೂ ಸಾಧ್ಯವಿರುವ ಹಲವು ಹಾದಿಗಳನ್ನು ಪರೀಕ್ಷಿಸಿ ತಮ್ಮ ಗುರಿಯತ್ತ ಸಾಗಿದ್ದಾರೆ. ಅವರು ಹುಟ್ಟುವ ಹೊತ್ತಿಗೆ ದಕ್ಷಿಣ ಆಫ್ರಿಕಾದ ರಾಜಕೀಯ ಚಟುವಟಿಕೆಗಳು ಬಿರುಸಾಗಿದ್ದವು. ಆಗಷ್ಟೇ ಸ್ವತಂತ್ರಗೊಂಡ ದೇಶದಲ್ಲಿ ಸೌಥ್ ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್ (ಎಎನ್‌ಸಿ) ತನ್ನ ಕಾರ್ಯ ಚಟುವಟಿಕೆಯನ್ನು ಆರಂಭಿಸಿತ್ತು. ‘ಈ ಸಾರ್ವಜನಿಕ ಸ್ಥಳವನ್ನು, ಸೌಲಭ್ಯವನ್ನು ಬಿಳಿಯರಷ್ಟೇ ಉಪಯೋಗಿಸಬೇಕು’ ಎಂಬ ಫಲಕ ಎಲ್ಲೆಂದರಲ್ಲಿ ಕಾಣುತ್ತಿತ್ತು. ಉಲ್ಲಂಘಿಸಿದವರಿಗೆ ಕಠಿಣ ಶಿಕ್ಷೆಯಿತ್ತು. ನಿರಾಯುಧರಾಗಿದ್ದ, ನಾಗರಿಕ ದುಷ್ಟ ವರಸೆಗಳ ಅರಿವಿರದ ಹಾಗೂ ಇಂಗ್ಲಿಷ್ ಬರದ ಕರಿಯರನ್ನು ಬಿಳಿಯರು ಪ್ರಾಣಿಗಳಿಗಿಂತ ಕಡೆಯಾಗಿ ನಡೆಸಿಕೊಳ್ಳುತ್ತಿದ್ದರು.

೧೯೧೩ರಲ್ಲಿ ಬಂದ ನೇಟಿವ್ಸ್ ಲ್ಯಾಂಡ್ ಆಕ್ಟ್ ಕರಿಯರು ಭೂಮಿ ಮತ್ತಿತರೆ ಸಂಪನ್ಮೂಲಗಳ ಮಾಲೀಕತ್ವ ಹೊಂದದಂತೆ ನಿರ್ಬಂಧ ವಿಧಿಸಿತು. ಇಡೀ ದೇಶದಲ್ಲಿ ೭೫% ಜನಸಂಖ್ಯೆಯಿದ್ದ ಕರಿಯರು ೭% ಸಂಪನ್ಮೂಲದ ಮೇಲಷ್ಟೇ ಹಿಡಿತ ಪಡೆದಿದ್ದರು. ವರ್ಣಭೇಧ ನೀತಿ ಉತ್ತುಂಗದಲ್ಲಿದ್ದಾಗ ಹುಟ್ಟಿದ, ಬುಡಕಟ್ಟು ಕುಲವೊಂದರ ನಾಯಕನ ವಂಶಸ್ಥನಾದ ಹುಡುಗ ರೋಲಿಹ್ಲಾಹ್ಲಾ ಮಿಷನರಿ ಶಾಲೆಗೆ ಕಳಿಸಲ್ಪಟ್ಟ. ಪ್ರತಿ ಮಗುವಿಗೂ ಹೊಸ ಹೆಸರು ಕೊಟ್ಟು ಶಾಲೆಗೆ ಸೇರಿಸಿಕೊಳ್ಳುತ್ತಿದ್ದ ಅಲ್ಲಿನ ಉಪಾಧ್ಯಾಯಿನಿ ಮದಿಬಾಗೆ ಕೊಟ್ಟ ಹೆಸರು ನೆಲ್ಸನ್. ಅವನ ಭಾಷೆಯಲ್ಲಿ ತೊಂದರೆ ಕೊಡುವವ ಎಂಬರ್ಥದ ಹೆಸರು ಹೊಂದಿದ್ದ ರೋಲಿಹ್ಲಾಹ್ಲಾಗೆ ಹೊಸ ಭಾಷೆಯು ಹೆಸರಷ್ಟೇ ಅಲ್ಲ, ತನ್ನ ಸಮುದಾಯ, ಅದರ ಕಷ್ಟ-ಹಿರಿಮೆಗಳು, ಎದುರಿಸುತ್ತಿದ್ದ ತಾರತಮ್ಯ ಎಲ್ಲವನ್ನೂ ಅರಿಯಲು ಸಹಾಯ ಮಾಡಿತು.

೧೯೩೬ರಲ್ಲಿ ಕರಿಯರನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿತ್ತು. ಇಡೀ ಜನಸಮುದಾಯವನ್ನು ಬಿಳಿಯರು, ಕರಿಯರು ಮತ್ತು ವರ್ಣೀಯರು ಎಂದು ಮೂರು ಭಾಗ ಮಾಡಿ ಎಲ್ಲರಿಗೂ ಬೇರೆಬೇರೆ ಹಕ್ಕು, ಅಧಿಕಾರ ನೀಡಲಾಗಿತ್ತು. ವಿದ್ಯಾರ್ಥಿಯಾಗಿ ಮಂಡೇಲಾ ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್ ಅನ್ನು ಬೆಂಬಲಿಸುತ್ತಿದ್ದರು. ೧೯೪೩ರಲ್ಲಿ ಎಎನ್‌ಸಿ ಯುತ್ ವಿಂಗ್‌ನ ಪದಾಧಿಕಾರಿಯಾದರು. ಬಸ್ ದರ ಏರಿಕೆ ವಿರುದ್ಧ ಪ್ರತಿಭಟನೆಯಲ್ಲಿ ಭಾಗವಹಿಸಿದರು. ೧೯೪೮ರಲ್ಲಿ ಚುನಾವಣೆ ನಡೆದು ಸರ್ಕಾರ ರಚನೆಯಾದಾಗ ಬಿಳಿಯರಷ್ಟೇ ಮತದಾನ ಮಾಡಿದ್ದರು. ಈ ಅನ್ಯಾಯದ ವಿರುದ್ಧ ಅಲ್ಲಿನ ಭಾರತೀಯರಂತೆ ಬಂದ್, ಸತ್ಯಾಗ್ರಹದಂತಹ ಕ್ರಮಗಳ ಮೂಲಕ ಹೋರಾಟ ನಡೆಯಬೇಕೆಂದು ಮಂಡೇಲಾ ಭಾವಿಸಿದ್ದರು. ೧೯೫೦ರಲ್ಲಿ ಎಎನ್‌ಸಿಯ ಕಾರ್ಯಕಾರಿ ಸಮಿತಿ ಸೇರಿದರು.

ಇಲ್ಲಿ ಕಮ್ಯುನಿಸ್ಟ್ ಪಕ್ಷದ ಬಗೆಗೆ ಅವರ ನಿಲುವುಗಳ ಕುರಿತು ಕೆಲ ಮಾತು ಹೇಳಬೇಕು ಏಕೆಂದರೆ ಅವರ ನಿಧನದವರೆಗೂ ಎಎನ್‌ಸಿಯಾಗಲೀ, ದಕ್ಷಿಣ ಆಫ್ರಿಕಾ ಕಮ್ಯುನಿಸ್ಟ್ ಪಕ್ಷವಾಗಲೀ ಅವರ ಕಮ್ಯುನಿಸ್ಟ್ ನಂಟನ್ನು ರಾಜಕೀಯ ಕಾರಣಗಳಿಗಾಗಿ ಬಹಿರಂಗಗೊಳಿಸಿರಲಿಲ್ಲ. ಎಲ್ಲ ಬಣ್ಣದವರನ್ನೂ ಒಟ್ಟು ಹಾಕುತ್ತಿದ್ದ ಕಮ್ಯುನಿಸ್ಟ್ ಪಕ್ಷದತ್ತ ವಿದ್ಯಾರ್ಥಿ ದೆಸೆಯಲ್ಲಿ ಒಲವು ಹೊಂದಿದ್ದರೂ ಆಳವಾಗಿ ಕ್ರಿಶ್ಚಿಯನ್ ಧರ್ಮದಲ್ಲಿ ನಂಬಿಕೆ ಹೊಂದಿದ್ದ ಕಾರಣ ಹಾಗೂ ಅದು ವರ್ಗ ಸಂಘರ್ಷದ ಮಾತುಗಳನಷ್ಟೇ ಆಡುತ್ತಿದ್ದ ಕಾರಣ ಅವರು ಆ ಪಕ್ಷ ಸೇರಿರಲಿಲ್ಲ. ಎಎನ್‌ಸಿ ಮಾತ್ರ ಕರಿಯರ ವಿಮೋಚನೆಯ ಹೋರಾಟ ಮಾಡಬಹುದೇ ಹೊರತು ಉಳಿದ ಯಾವ ಗುಂಪಿನ ಹೋರಾಟವೂ ಸಿಂಧುವಲ್ಲ; ಕರಿಯರ ಬಿಡುಗಡೆಯ ಹೋರಾಟ ಕೇವಲ ಕರಿಯರಿರುವ ಎಎನ್‌ಸಿಯಿಂದಲೇ ಆಗಬೇಕೇ ಹೊರತು ಬಹುವರ್ಣೀಯ ಕಮ್ಯುನಿಸ್ಟ್ ಪಕ್ಷದಿಂದಲ್ಲ ಎಂದು ಭಾವಿಸಿ ತನ್ನ ಪಕ್ಷದೊಳ ಬಂದ ಕಮ್ಯುನಿಸ್ಟ್ ಒಲವಿನ ನಾಯಕರನ್ನೂ ವಿರೋಧಿಸುತ್ತಿದ್ದರು. ೧೯೫೦ರಲ್ಲಿ ವಾಕ್ ಸ್ವಾತಂತ್ರ್ಯ ಕುರಿತ ಹಕ್ಕೊತ್ತಾಯ ಸಮಾವೇಶ ಜರುಗಿ ವರ್ಣಭೇದ ನೀತಿಯ ವಿರುದ್ಧ ಪ್ರತಿಭಟನೆ ನಡೆದರೂ ಅದು ಎಎನ್‌ಸಿ ನೇತೃತ್ವದಲ್ಲಿ ಆಗಿಲ್ಲದೇ ಇದ್ದುದರಿಂದ ನಿರಾಕರಿಸಿದ್ದರು. ಆದರೆ ಅದೇ ವರ್ಷ ‘ಕಮ್ಯುನಿಸಂ ಸಪ್ರೆಷನ್ ಆಕ್ಟ್’ ಬಂದ ಮೇಲೆ ಯಾವ ಗುಂಪೂ ಪ್ರತಿಭಟನೆ ನಡೆಸುವುದು ಕಷ್ಟವಾಯಿತು. ಅದೇ ಹೊತ್ತಿಗೆ ಮಾರ್ಕ್ಸ್, ಎಂಗೆಲ್ಸ್, ಮಾವೋ, ಲೆನಿನ್‌ರನ್ನು ಓದಿಕೊಂಡ ಮಂಡೇಲಾ ಅಭಿಪ್ರಾಯಗಳು ಸಂಪೂರ್ಣ ಬದಲಾದವು. ೧೯೫೨ರಲ್ಲಿ ದಕ್ಷಿಣ ಆಫ್ರಿಕಾ ಕಮ್ಯುನಿಸ್ಟ್ ಪಕ್ಷ ಸೇರಿದರು.

೧೯೫೨ರಲ್ಲಿ ಎಎನ್‌ಸಿಯು ಭಾರತೀಯರು ಹಾಗೂ ಕಮ್ಯುನಿಸ್ಟ್ ಪಕ್ಷದೊಂದಿಗೆ ಸೇರಿ ಸಂಘಟಿಸಿದ ‘ಡಿಫಾಯನ್ಸ್ ಕ್ಯಾಂಪೇನ್’ನಲ್ಲಿ ಸಕ್ರಿಯವಾಗಿ ತೊಡಗಿಕೊಂಡರು. ೧೦ ಸಾವಿರ ಜನರೆದುರು ಮಾತನಾಡಿದ ಮಂಡೇಲಾ ಗಾಂಧಿಯ ಅಹಿಂಸಾತ್ಮಕ ಮಾರ್ಗವನ್ನು ಪ್ರತಿಪಾದಿಸಿದರು. ಎಎನ್‌ಸಿ ಸದಸ್ಯತ್ವ ಹೆಚ್ಚುತ್ತ ಹೋದಾಗ ಸರ್ಕಾರವು ಅದರ ನಾಯಕರು ಸಾರ್ವಜನಿಕ ಭಾಷಣ ಮಾಡುವುದನ್ನು ನಿಷೇಧಿಸಿತು. ಮಂಡೇಲಾರನ್ನು ಕಮ್ಯುನಿಸಂ ಪ್ರತಿಪಾದಿಸಿದ ಕಾರಣ ಕಠಿಣ ಕೆಲಸದ ಸೆರೆವಾಸದ ಶಿಕ್ಷೆ ವಿಧಿಸಿ ಬಂಧಿಸಿ, ಒಬ್ಬರಿಗಿಂತ ಹೆಚ್ಚು ಜನರೊಡನೆ ಮಾತನಾಡಬಾರದೆಂಬ ನಿರ್ಬಂಧದೊಂದಿಗೆ ಬಿಡುಗಡೆ ಮಾಡಲಾಯ್ತು. ಎಎನ್‌ಸಿ ಸಭೆಗಳಲ್ಲಿ ಅವರ ಭಾಷಣವನ್ನು ಬೇರೆಯವರು ಓದಬಹುದಿತ್ತು. ಮಂಡೇಲಾರ ನಿಕಟವರ್ತಿ ನೆಹರೂ ಬರೆದ ಸಾಲಿನ ಶೀರ್ಷಿಕೆ ಹೊತ್ತ ಅಂಥ ಒಂದು ಪ್ರಸಿದ್ಧ ಭಾಷಣ, ‘ನೋ ಈಸಿ ವಾಕ್ ಟು ಫ್ರೀಡಂ..’

೧೯೫೫ರಲ್ಲಿ ಜೋಹಾನ್ಸ್‌ಬರ್ಗ್‌ನ ಕರಿಯರಿದ್ದ ಪ್ರದೇಶವೊಂದನ್ನು ನೆಲಸಮಗೊಳಿಸತೊಡಗಿದಾಗ ಅದನ್ನು ಪ್ರತಿಭಟಿಸಿದರೂ ತಡೆಯಲಾಗಲಿಲ್ಲ. ಪ್ರತಿಭಟನೆಯ ದಾರಿ ವಿಫಲವೆನಿಸಿದಾಗ ಸಶಸ್ತ್ರ ಹೋರಾಟವೇ ಮಾರ್ಗ ಎಂದು ಮಂಡೇಲಾ ಭಾವಿಸಿದರು. ಆಗಲೇ ಚೀನಾದಿಂದ ಶಸ್ತ್ರಾಸ್ತ್ರ ಸಹಾಯ ಪಡೆವ ಸಲಹೆಯನ್ನೂ ಸಂಗಾತಿಗಳ ಮುಂದಿಟ್ಟರು. ಆದರೆ ಚೀನಾ ಹೋರಾಟವನ್ನು ಬೆಂಬಲಿಸಿತಾದರೂ ಸಶಸ್ತ್ರ ಕ್ರಾಂತಿಗೆ ಸಮಯ ಸೂಕ್ತವಾಗಿಲ್ಲವೆಂದು ಹೇಳಿತು. ಸರ್ಕಾರದ ಮೇಲೆ ಒತ್ತಡ ತರಲು ಸೈನಿಕರ ಸೆಟಲ್‌ಮೆಂಟ್‌ಗಳು, ರಸ್ತೆ, ದೂರವಾಣಿ ಕಚೇರಿ, ವಿದ್ಯುತ್ ಸ್ಥಾವರ ಮೊದಲಾದ ಕಡೆ ಬಾಂಬ್ ದಾಳಿ ನಡೆಸಲಾಯಿತು. ಸಾರ್ವಜನಿಕರ ಸಾವುನೋವು ಅತಿ ಕಡಿಮೆ ಆಗಲಿ ಎಂಬ ಕಾರಣಕ್ಕೆ ರಾತ್ರಿ ವೇಳೆ ಕಾರ್ಯಾಚರಣೆ ನಡೆಸಲಾಗುತ್ತಿತ್ತು. ಪರಸ್ಪರ ವೈರತ್ವ, ಸ್ಪರ್ಧೆ ಹೊಂದಿದ್ದ; ಹಿಂಸೆಯನ್ನೇ ಮೂಲ ಅಸ್ತ್ರವನ್ನಾಗಿಸಿಕೊಂಡಿದ್ದ ಹಲವು ಬುಡಕಟ್ಟು ಗುಂಪುಗಳೂ ವಸಾಹತುಶಾಹಿ ವಿರುದ್ಧ ಹೋರಾಟದಲ್ಲಿ ತೊಡಗಿದ್ದವು. ದೊಡ್ಡ ಪ್ರಮಾಣದ ಹಿಂಸೆ, ರಕ್ತಪಾತ ತಪ್ಪಿಸಲು ಹಾಗೂ ತಂತಮ್ಮಲ್ಲೇ ಹೊಡೆದಾಡುತ್ತಿದ್ದ ವಿಭಿನ್ನ ಪಂಗಡಗಳ ನಡುವೆ ಐಕ್ಯತೆ ತರಲು ‘ಸಾವು ನೋವು ಅತಿ ಕಡಿಮೆ ಇರುವಂತೆ ಸಶಸ್ತ್ರ ಕಾರ್ಯಾಚರಣೆ ನಡೆಸುತ್ತೇವೆ’ ಎಂದು ಮಂಡೇಲಾ ಹೇಳಿದರು.

೧೯೫೬ರಲ್ಲಿ ದೇಶದ್ರೋಹದ ಆಪಾದನೆ ಮೇಲೆ ಬಂಧನವಾಯ್ತು. ಬೇಲ್ ಮೇಲೆ ಬಿಡುಗಡೆಯೂ ಆಯಿತು. ಸಾರ್ವಜನಿಕವಾಗಿ ತಿರುಗಾಡಲು ಕರಿಯರಿಗೆ ಅನುಮತಿ ನೀಡುವ ಪಾಸ್‌ಗಳನ್ನು ರಾಶಿ ಹಾಕಿ ಸುಟ್ಟರು. ಮಂಡೇಲಾ ಡ್ರೈವರನಂತೆ ವೇಷ ಮರೆಸಿ ದೇಶ ಸುತ್ತಿದರು. ಕ್ಯಾಸ್ಟ್ರೋ ಅವರ ೨೬ ಜುಲೈ ಚಳುವಳಿಯಿಂದ ಪ್ರೇರಿತರಾಗಿ ೧೯೬೧ರಲ್ಲಿ ತೀವ್ರಗಾಮಿ ಗುಂಪು ‘ಎಂಕೆ’ ಸಂಘಟನೆಯನ್ನು ಗೆಳೆಯರೊಂದಿಗೆ ಆರಂಭಿಸಿದರು. ಎಎನ್‌ಸಿ ನಾಯಕ ಲುಥುಲಿ ೧೯೬೧ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿ ಪಡೆದಾಗ ಎಂಕೆ ಗುಂಪು ೫೭ ಕಡೆ ಬಾಂಬ್ ಸಿಡಿಸುವ ಮೂಲಕ ತನ್ನ ಅಸ್ತಿತ್ವ ಸಾಬೀತುಪಡಿಸಿತು.

೧೯೬೨ರಲ್ಲಿ ಸಬೊಟೇಜ್ ಕ್ಯಾಂಪೇನ್ ಶುರುವಾಯಿತು. ಮಂಡೇಲಾ ಇಡೀ ಆಫ್ರಿಕಾ ತಿರುಗಾಡಿ ಹಣ ಸಂಗ್ರಹಿಸತೊಡಗಿದರು. ಎಲ್ಲ ರಾಷ್ಟ್ರಗಳೂ ಒಗ್ಗೂಡಬೇಕಾದ ಅನಿವಾರ್ಯತೆ ಕುರಿತು ಮಾತನಾಡಿದರು. ಎಂಕೆ ಗುಂಪಿನ ಚಟುವಟಿಕೆ ರಾಷ್ಟ್ರದ್ರೋಹ ಎಂದು ಆಪಾದಿಸಿ ಮಂಡೇಲಾ ಜೊತೆ ಹಲವರನ್ನು ಬಂಧಿಸಲಾಯ್ತು. ಹೊರಗೆ ತಿರುಗಾಡಲು ನೀಡಿದ್ದ ಅನುಮತಿ ಹಿಂಪಡೆಯಲಾಯ್ತು. ಕೋರ್ಟಿನ ವಿಚಾರಣೆಯನ್ನು ತಮ್ಮ ರಾಜಕೀಯ ಭಾಷಣದ ವೇದಿಕೆಯಾಗಿಸಿಕೊಂಡು ತಾಸುಗಟ್ಟಲೇ ಮಾತಾಡುತ್ತಿದ್ದ ವಕೀಲ  ಮಂಡೇಲಾ ತಮ್ಮ ಕೇಸನ್ನು ತಾವೇ ವಾದಿಸಿದರು. ಕೊನೆಗೆ ವಿಚಾರಣೆ ಕೊನೆಗೊಂಡು ಜೀವಾವಧಿ ಜೈಲು ಶಿಕ್ಷೆ ನೀಡಲಾಯ್ತು.



೧೯೬೪ರಿಂದ ೮೨ರ ತನಕ ರಾಬನ್ ದ್ವೀಪದ ಸೆರೆಮನೆಯಲ್ಲಿದ್ದ ಮಂಡೇಲಾ ಅತಿ ಕೆಳದರ್ಜೆಯ ಬಂದಿ ಎಂದು ನಮೂದಾಗಿದ್ದರು. ಆದ ಕಾರಣ ಆರು ತಿಂಗಳಿಗೊಂದು ಪತ್ರ ಮತ್ತು ಒಬ್ಬರ ಭೇಟಿ ಮಾತ್ರ ಅವರಿಗೆ ಸಾಧ್ಯವಾಗಿತ್ತು. ಗಣಿಕೆಲಸ ಮಾಡುತ್ತ ರಕ್ಷಣಾ ಕನ್ನಡಕ ಹಾಕಿಕೊಳ್ಳದೇ ಬೆಣಚುಕಲ್ಲಿನ ಮೇಲೆ ಬಿದ್ದ ಬಿಸಿಲಿನ ಪ್ರತಿಫಲನದಿಂದ ಸೂಕ್ಷ್ಮದೃಷ್ಟಿ ನಾಶವಾಯಿತು. ಜೈಲಿನಲ್ಲಿದ್ದಾಗಲೇ ಪ್ರಾಸ್ಟೇಟ್ ಗ್ರಂಥಿಯ ಆಪರೇಷನ್ ಆಯಿತು. ಟಿಬಿಯಿಂದ ಬಾಧಿತರಾಗಿ ಚಿಕಿತ್ಸೆ ಪಡೆದರು. ಜಲ್ಲಿ ಕುಟ್ಟುತ್ತ, ಸುಣ್ಣದ ಭಟ್ಟಿ-ಗಣಿಗಳಲ್ಲಿ ಕೆಲಸ ಮಾಡುತ್ತ ದಿನಗಳೆದರೂ ಇಡೀ ಜಗತ್ತಿನ ಹೋರಾಟಗಾರರ ಸಾಕ್ಷಿಪ್ರಜ್ಞೆಯಾಗಿ ಬೆಳೆದರು. ಮಂಡೇಲಾ ಬಿಡುಗಡೆಗಾಗಿ ೧೯೮೦ರ ಹೊತ್ತಿಗೆ ಅಂತರರಾಷ್ಟ್ರೀಯ ಒತ್ತಡಗಳು ಬೆಳೆಯತೊಡಗಿದರೂ ಅಮೆರಿಕಾ ಮತ್ತು ಬ್ರಿಟನ್ ಅವರನ್ನು ಕಮ್ಯುನಿಸ್ಟ್ ಭಯೋತ್ಪಾದಕ ಎಂದೇ ಪರಿಗಣಿಸಿ ಬಿಡುಗಡೆಯಾಗದಂತೆ ನೋಡಿಕೊಂಡವು.

ನಂತರ ಅವರನ್ನು ಪೋಲ್ಸ್ ಮೂರ್ ಜೈಲಿನಲ್ಲಿ ಆರು ವರ್ಷ, ವಿಕ್ಟರ್ ಜೈಲಿನಲ್ಲಿ ಎರಡು ವರ್ಷ ಇಡಲಾಯ್ತು. ೧೯೮೫ರಲ್ಲಿ ರಾಜಕೀಯ ಚಟುವಟಿಕೆ ನಡೆಸಬಾರದೆಂಬ ಷರತ್ತಿನೊಂದಿಗೆ ಅವರ ಬಿಡುಗಡೆ ಮಾಡುವ ಪ್ರಸ್ತಾಪ ಬಂದಾಗ, ‘ಬಂಧಿತ ಯಾವ ಒಪ್ಪಂದಕ್ಕೂ ಬರಲಾರ, ಎಎನ್‌ಸಿ ನಿಷೇಧಿಸಲ್ಪಟ್ಟಿರುವಾಗ ನಾನಷ್ಟೇ ಬಿಡುಗಡೆಯಾಗಿ ಮಾಡುವುದಾದರೂ ಏನು’ ಎಂದು ಸ್ಪಷ್ಟವಾಗಿ ನಿರಾಕರಿಸಿದರು. ದಕ್ಷಿಣ ಆಫ್ರಿಕಾದ ಮೇಲೆ ಆರ್ಥಿಕ ದಿಗ್ಭಂಧನ ಹೇರಲಾಯಿತು. ಅಂತರರಾಷ್ಟ್ರೀಯ ಒತ್ತಡ ಹೆಚ್ಚುತ್ತ ಹೋದಾಗ ೧೯೯೦ರಲ್ಲಿ ಅವರನ್ನು ಬಿಡುಗಡೆ ಮಾಡಲಾಯ್ತು.  


***

೧೯೯೯ರಲ್ಲಿ ಸಾರ್ವಜನಿಕ ಜೀವನದಿಂದ ನಿವೃತ್ತರಾದರೂ, ನಿವೃತ್ತ ಜೀವನದಿಂದ ನಾನಿನ್ನು ನಿವೃತ್ತನಾದೆ ಎಂದು ೨೦೦೪ರಲ್ಲಿ ಘೋಷಿಸಿಕೊಂಡರೂ, ‘ದಯವಿಟ್ಟು ನೀವು ಕರೆ ಮಾಡಬೇಡಿ, ನಾನೇ ಮಾಡುತ್ತೇನೆ’ ಎಂದು ಅಂಗಲಾಚಿದರೂ, ಮೊನ್ನೆ ಡಿಸೆಂಬರ್ ಆರರಂದು ಕೊನೆಯುಸಿರೆಳೆದರೂ ಅವರಿಗೆ ನಿವೃತ್ತಿ ದೊರೆತಂತಿಲ್ಲ. ಎಲ್ಲರೂ ಒಂದಿಲ್ಲೊಂದು ರೀತಿ ಮಂಡೇಲಾರಿಂದ ಪ್ರಭಾವಿತರಾಗುತ್ತಿದ್ದಾರೆ. ಅದೇ ವೇಳೆ ಮಂಡೇಲಾ ಎಂಬ ಹಿರಿಯಜ್ಜನನ್ನು ಗಾಂಧಿ, ಅಂಬೇಡ್ಕರ್, ಮಾರ್ಟಿನ್ ಲೂಥರ್ ಕಿಂಗ್ ಮೊದಲಾದವರೊಂದಿಗೆ ಹೋಲಿಸಿ ತುಲನಾತ್ಮಕ ಅಧ್ಯಯನಗಳೂ ನಡೆಯುತ್ತಿವೆ. ತೌಲನಿಕ ಮಾತುಗಳೆಲ್ಲ ನಮ್ಮ ಭಾವುಕ ಅಗತ್ಯವನ್ನಷ್ಟೇ ಪೂರೈಸಬಲ್ಲವು.

ಆದರೂ..

‘ದಕ್ಷಿಣ ಆಫ್ರಿಕಾದ ರಾಷ್ಟ್ರಪಿತ’ ಎಂಬ ಗೌರವದಿಂದ, ಗಾಂಧಿಯ ಅಹಿಂಸಾ ತತ್ವದಿಂದ ತಾನು ಪ್ರೇರಿತ ಎಂದು ಹೇಳಿದ ಕಾರಣದಿಂದ ದಕ್ಷಿಣ ಆಫ್ರಿಕಾದ ಗಾಂಧಿ ಎಂಬ ಬಿರುದು ಅವರಿಗೆ ಸಹಜವಾಗಿ ಬಂದುಬಿಟ್ಟಿತು. ಹೋರಾಟಗಾರ ಮಂಡೇಲಾ ಬದುಕನ್ನು ಸೂಕ್ಷ್ಮವಾಗಿ ಗಮನಿಸಿದರೆ ಅವರ ಹಾದಿ ಗಾಂಧಿ ಬೋಧಿಸಿದ ಅಹಿಂಸೆಗಿಂತ ಭಿನ್ನವಾಗಿರುವುದು ತಿಳಿಯುತ್ತದೆ. ಬುಡಕಟ್ಟು ಕುಲದ ಮಂಡೇಲಾಗೆ ಹೋರಾಡುವ ಗುಣ ರಕ್ತಗತವಾಗಿ ಬಂದಿತ್ತೇ ಹೊರತು ಅಹಿಂಸೆಯಲ್ಲ. ರಾಬನ್ ದ್ವೀಪದ ಜೈಲಿನಲ್ಲಿದ್ದಾಗಲೂ ಸಹವಾಸಿಗಳು ಜೈಲು ಪರಿಸ್ಥಿತಿ ಸುಧಾರಣೆಗೆ ಉಪವಾಸ ಸತ್ಯಾಗ್ರಹ ಮಾಡಿದಾಗ ಅದು ನಿರುಪಯೋಗಿ ಎಂದೇ ಮಂಡೇಲಾ ಪ್ರತಿಕ್ರಿಯಿಸಿದ್ದರು. ೧೯೯೦ರಲ್ಲಿ ಅವರ ಬಿಡುಗಡೆಯಾದಾಗಲೂ ‘ಎಎನ್‌ಸಿಯ ಶಸ್ತ್ರಸಜ್ಜಿತ ಹೋರಾಟ ನಿಂತಿಲ್ಲ. ಆದರೆ ಅದು ವರ್ಣಭೇದ ನೀತಿಯ ವಿರುದ್ಧ ರಕ್ಷಣಾತ್ಮಕವಾಗಿ ಮಾತ್ರ. ಸರ್ಕಾರ ನಮ್ಮ ಬೇಡಿಕೆಗಳಿಗೆ ಒಪ್ಪಿ ಶಸ್ತ್ರಾಸ್ತ್ರ ಹೋರಾಟಕ್ಕೆ ದಾರಿ ಮಾಡಿಕೊಡಲಾರದೆಂದೇ ಭಾವಿಸಿದ್ದೇನೆ’ ಎಂದು ಹೇಳಿದರು. ಅವರು ಅಹಿಂಸೆಯನ್ನು ನೈತಿಕ ಮಾರ್ಗ ಎಂದು ಭಾವಿಸುವುದಕ್ಕಿಂತ ಅದೊಂದು ವ್ಯಾವಹಾರಿಕ ಮಾರ್ಗವೆಂದು ನಂಬಿದ್ದರು. ಇವು ಗಾಂಧಿಗಿಂತ ಭಿನ್ನ ಅಹಿಂಸಾವಾದಿಯಾಗಿ ಮಂಡೇಲಾರನ್ನು ಕಟ್ಟಿಕೊಡುವ ಅಂಶಗಳು.

ಆದರೆ ಜೈಲಿನಿಂದ ಬಿಡುಗಡೆಯಾಗದ ನಂತರ ಮಂಡೇಲಾ ಗಾಂಧೀತನಕ್ಕೆ ಒಲಿದಂತೆ ಕಾಣುತ್ತದೆ. ವಸಾಹತುಶಾಹಿ ಸರ್ಕಾರವನ್ನು ಮಾತುಕತೆಗೆ ಕರೆದು, ಬಹುವರ್ಣೀಯ ಚುನಾವಣೆಯನ್ನು ನಡೆಸುವಂತೆ ಒಪ್ಪಿಸಿದರು. ವರ್ಣಭೇದ ನೀತಿ ನಿಷೇಧಿಸಲ್ಪಟ್ಟಿತು. ದಕ್ಷಿಣ ಆಫ್ರಿಕಾ ಪರಮಾಣು ಅಸ್ತ್ರಗಳನ್ನು ನಾಶಗೊಳಿಸಿ ಒಪ್ಪಂದಕ್ಕೆ ಸಹಿ ಹಾಕಿತು. ೧೯೯೪ರ ಚುನಾವಣೆಯಲ್ಲಿ ಎಎನ್‌ಸಿ ಗೆಲುವು ಸಾಧಿಸಿ ಅವರು ಅಧ್ಯಕ್ಷರಾದ ಮೇಲೆ ಬಿಳಿಯರ ಮೇಲೆ ಪ್ರತೀಕಾರ ಕ್ರಮಗಳಿಗೆ ಮುಂದಾಗದೇ ‘ಸತ್ಯ ಮತ್ತು ಸಂಧಾನ ಸಮಿತಿ’ಯನ್ನು ರಚಿಸಿದರು. ಸಮಿತಿ ರಚಿಸಿದ ಮಂಡೇಲಾ ನಿರ್ಧಾರ ಮತ್ತು ಅದರೆದುರು ಹಾಜರಾಗುವ ಡಿಕ್ಲರ್ಕ್ ನಿರ್ಧಾರ ಎರಡೂ ಅವರಿಬ್ಬರೂ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಹಂಚಿಕೊಳ್ಳುವಂತೆ ಮಾಡಿತು. ಈ ಮೊದಲ ಮಾನವ ಹಕ್ಕುಗಳ ಉಲ್ಲಂಘನೆ ಕೇಸುಗಳ ವಿಚಾರಣೆಯನ್ನು ಅದು ಆರಂಭಿಸಿತು.

ಅವಮಾನ-ಶೋಷಣೆಯಿಂದ ಹುಟ್ಟಿದ ಕರಿಯರ ಸಿಟ್ಟು ಬಿಳಿಯರ ಮೇಲಿನ ಹಿಂಸೆಯಲ್ಲಿ ಕೊನೆಗೊಳ್ಳದಂತೆ ನೋಡಿಕೊಂಡರು. ‘ನಾನು ಬಿಳಿಯ ದುರಹಂಕಾರಿಯನ್ನು ಹೇಗೆ ಇಷ್ಟಪಡುವುದಿಲ್ಲವೋ ಹಾಗೇ ದುರಹಂಕಾರಿ ಕರಿಯರನ್ನೂ ಸಹಿಸುವುದಿಲ್ಲ’ ಎಂದು ಹೇಳಿಕೆ ಕೊಟ್ಟರು. ಈ ಮಾತುಗಳ ಹಿಂದೆ ಗಾಂಧಿತನವಿತ್ತು. ಆಫ್ರಿಕಾದ ದುಷ್ಟ ಸರ್ವಾಧಿಕಾರಿಗಳನ್ನು ಗಮನದಲ್ಲಿಟ್ಟುಕೊಂಡರೆ ಅವರೆಲ್ಲ ದಶಕಗಟ್ಟಲೆ ಆಳಿದರು; ಕೆಲವರನ್ನು ಒತ್ತಾಯದಿಂದ ಕೆಳಗಿಳಿಸಬೇಕಾಯಿತು. ಆದರೆ ಮಂಡೇಲಾ ಒಂದು ಅವಧಿಗಷ್ಟೆ ಅಧ್ಯಕ್ಷ ಪದವಿಯಲ್ಲಿದ್ದು ನಂತರ ನಿವೃತ್ತಿಯಾದರು. ಅಧಿಕಾರದೆಡೆಗಿನ ಈ ನಿಸ್ಪೃಹತೆಯಲ್ಲಿ ಗಾಂಧೀತನವಿತ್ತು. ಮನುಷ್ಯನೊಳಗಿನ ಮನುಷ್ಯನನ್ನು ನಾಶಮಾಡುವ ವರ್ಣಭೇದ ಬಿಳಿಯರು-ಕರಿಯರು ಇಬ್ಬರನ್ನೂ ಅಮಾನವೀಯಗೊಳಿಸಿದೆ ಎಂದು ಗುರುತಿಸುವಲ್ಲಿ ಗಾಂಧಿತನವಿತ್ತು. ಆತ ಅನುಸರಿಸಿದ್ದು ಗಾಂಧಿ ಅಹಿಂಸಾವಾದ ಹೌದೋ ಅಲ್ಲವೋ, ಆದರೆ ಶೋಷಿತರನ್ನು ಒಗ್ಗೂಡಿಸುತ್ತಲೇ, ಶೋಷಕರ ವಿರುದ್ಧ ನಿಷ್ಠುರ ನಿಲುವಿಟ್ಟುಕೊಳ್ಳುತ್ತಲೇ, ಎದೆಯಲ್ಲಿ ಎಲ್ಲರಿಗಾಗಿ ಕರುಣೆ ಮತ್ತು ಪ್ರೇಮ ಹೊಂದಿದ್ದ ಮಾನವತಾವಾದಿ ಎಂದಷ್ಟೇ ಅವರ ಕುರಿತು ಹೇಳಬಹುದು.

ಮಂಡೇಲಾ ಗಾಂಧಿಗಿಂತ ಭಿನ್ನ ಎಂದ ಕೂಡಲೇ ಭಾರತೀಯ ಕಣ್ಣುಗಳೆದುರು ಅಂಬೇಡ್ಕರ್ ನಿಲ್ಲುತ್ತಾರೆ. ಅಂಬೇಡ್ಕರ್ ಪ್ರಭಾವ ಅವರ ಮೇಲಿರಲಿಲ್ಲವೇ ಎಂಬ ಕುತೂಹಲ ಹುಟ್ಟುತ್ತದೆ. ಧಾರ್ಮಿಕ-ಸಾಂಸ್ಕೃತಿಕ ಅಸ್ಮಿತೆಗಳ ಮೊರೆಹೋಗದೇ, ರಾಜಕೀಯ ಕಾರಣಗಳಿಂದಲೇ ಸಮುದಾಯಗಳನ್ನು ಒಗ್ಗೂಡಿಸಿ, ಹೋರಾಟದಿಂದಲೇ ತನ್ನ ನೆಲಕ್ಕೆ ಬಿಡುಗಡೆಯನ್ನೂ, ಪ್ರಾತಿನಿಧ್ಯದ ಮೂಲಕ ಅಧಿಕಾರವನ್ನೂ ಗಳಿಸಿಕೊಟ್ಟ ಅಂಬೇಡ್ಕರರ ಹೋರಾಟದೊಂದಿಗೆ ಮಂಡೇಲಾ ಕೆಲ ಸಾಮ್ಯತೆ ಹೊಂದಿದ್ದಾರೆ. ಅಕ್ಷರ ಕಲಿಯದ ಕುಟುಂಬವೊಂದರಿಂದ ಬಂದು, ವಸಾಹತುಶಾಹಿಗಳು ಆರಂಭಿಸಿದ ಶಾಲೆಯಲ್ಲಿ ಇಂಗ್ಲಿಷ್ ಕಲಿತು, ಮುಂದೆ ಅವೇ ಶಿಕ್ಷಣ ಸಂಸ್ಥೆಗಳಲ್ಲಿ ಕಾನೂನು ವ್ಯಾಸಂಗ ಮಾಡಿ, ತನ್ನ ನೆಲದ-ಜನರ ಪರಿಸ್ಥಿತಿಯ ಅರಿವಾಗಿ, ಬಿಡುಗಡೆಯ ದಾರಿಗಾಗಿ ಹೋರಾಟ ರೂಪಿಸಿದ ಮಂಡೇಲಾ ತಾವರಿಯದೇ ಅಂಬೇಡ್ಕರರ ಹಾದಿಯನ್ನೂ ತುಳಿದಿದ್ದಾರೆ. ಅಧಿಕಾರ-ಸಂಪನ್ಮೂಲಗಳಷ್ಟೇ ಅಲ್ಲ, ಬದುಕುವ ಹಕ್ಕು, ಮತದಾನದ ಹಕ್ಕು ಮತ್ತಿತರೆ ರಾಜಕೀಯ ಹಕ್ಕುಗಳಿಂದಲೂ ವಂಚಿತವಾಗಿದ್ದ ಜನಸಮುದಾಯವೊಂದರ ಪ್ರತಿನಿಧಿಯಾಗಿ ಎಳವೆಯಿಂದಲೂ ಹೋರಾಟ ರೂಪಿಸಿದ ಮಂಡೇಲಾ ಅಂಬೇಡ್ಕರ್ ಹೇಗೆ ಭಾರತದಾದ್ಯಂತ ದಲಿತ ಸಮುದಾಯವನ್ನು ಒಂದು ಅಸ್ಮಿತೆಯಡಿ ತರಲು ಶ್ರಮಿಸಿದರೋ ಹಾಗೆಯೇ ಭಿನ್ನ ಜನಾಂಗಗಳ ಆಫ್ರಿಕನ್ನರನ್ನು ಒಂದು ಅಸ್ಮಿತೆಯಡಿ ತರಲು ಯತ್ನಿಸಿದ್ದಾರೆ.

ಆದರೆ ಅಲ್ಲೂ ಭಿನ್ನತೆಗಳಿವೆ. ಅಂಬೇಡ್ಕರ್ ಎಂದೂ ಕಮ್ಯುನಿಸ್ಟ್ ಪಕ್ಷದೊಡನೆ ಸಾಗಲಿಲ್ಲ. ಸಶಸ್ತ್ರ ಕ್ರಾಂತಿಯನ್ನು ಬೆಂಬಲಿಸಲಿಲ್ಲ. ಅಂಬೇಡ್ಕರ್ ಎದುರಿಗಿದ್ದ ಶೋಷಕರು ಅವರದೇ ದೇಶಬಾಂಧವರು. ಆ ತಾರತಮ್ಯಕ್ಕೆ ಕೇವಲ ಆಳರಸರಷ್ಟೇ ಅಲ್ಲ, ಧರ್ಮವೂ ಒಪ್ಪಿಗೆ ನೀಡಿತ್ತು. ತನ್ನದೇ ದೇಶಬಾಂಧವರಿಂದ ಪಡೆಯಲಾಗದ ಹಕ್ಕುಗಳನ್ನು ದೇಶ ಆಕ್ರಮಿಸಿದ್ದ ವಸಾಹತುಶಾಹಿಗಳೊಡನೆ ಚೌಕಾಸಿ ನಡೆಸಿ ಅವರು ಪಡೆಯಬೇಕಿತ್ತು. ಎಂದೇ ಅಂಬೇಡ್ಕರ್ ಕಟ್ಟಬೇಕಿದ್ದ ಹೋರಾಟ, ಕ್ರಮಿಸಬೇಕಿದ್ದ ದಾರಿ ಭಿನ್ನವಾಗಿತ್ತು.

ಭಾರತದ ಪ್ರತಿ ಜಾತಿಯೂ ಒಂದೊಂದು ಧರ್ಮದಂತೆ ವರ್ತಿಸಿದರೆ ಆಫ್ರಿಕಾದ ಒಂದೊಂದು ಬುಡಕಟ್ಟೂ ಒಂದೊಂದು ಗಣರಾಜ್ಯದಂತೆ ವರ್ತಿಸುತ್ತದೆ. ಭಾರತದ ಜಾತಿ ಸಂಘರ್ಷ ಮತ್ತು ಆಫ್ರಿಕಾದ ಬುಡಕಟ್ಟುಗಳ ಸಂಘರ್ಷದ ಸ್ವರೂಪ ಭಿನ್ನವಾಗಿದೆ. ಈ ಹಿನ್ನೆಲೆಯಲ್ಲಿ ನೋಡಿದರೆ ಜಾತಿರೋಗದಿಂದ ನರಳುವ ಭಾರತಕ್ಕೆ ಗಾಂಧಿ-ಅಂಬೇಡ್ಕರ್ ಮಾರ್ಗ ಸೂಕ್ತವಾದರೆ; ಅಮೆರಿಕದ ಕರಿಯ ಗುಲಾಮರಿಗೆ ಬೂಕರ್ ವಾಷಿಂಗ್ಟನ್ ಮತ್ತು ಮಾರ್ಟಿನ್ ಲೂಥರ್ ಕಿಂಗ್ ಮಾರ್ಗ ಸೂಕ್ತವಾಗುತ್ತದೆ. ಆಫ್ರಿಕಾಗೆ ಮಂಡೇಲಾ, ಟುಟು, ಸಿಸುಲು, ಮಥಾಯಿಯ ಮಾರ್ಗ ಸೂಕ್ತವಾಗಿದೆ. ಇದರರ್ಥ ಜನ ಚಳುವಳಿ ಕಟ್ಟುವ ನಾಯಕರ ಬದ್ಧತೆ, ಕಾಳಜಿ, ಹೋರಾಟಗಳನ್ನು ಹೋಲಿಸಿದಂತೆ ಅವರ ಮಾರ್ಗಗಳನ್ನು ತೌಲನಿಕವಾಗಿ ನೋಡುವುದು ಸಿಂಧುವಲ್ಲ.

ಈ ಹೋಲಿಕೆಗಳೆಲ್ಲ ಒತ್ತಟ್ಟಿಗಿರಲಿ..

೯೫ ವರ್ಷ ಬದುಕಿದ, ಏರು ಹರೆಯದ ೨೭ ವರ್ಷಗಳನ್ನು ಜೈಲಿನಲ್ಲಿ ಕಳೆದ ಬುಡಕಟ್ಟು ನಾಯಕ ಮಂಡೇಲಾ ಎಲ್ಲ ಹೋರಾಟಗಾರರೊಡನೆ ಸಾಮ್ಯತೆಯನ್ನೂ, ಭಿನ್ನತೆಯನ್ನೂ ಹೊಂದಿದಂತೆ ಕಾಣಿಸುತ್ತಾರೆ. ಜೊತೆಗೆ ಮಂಡೇಲಾ ಎಂಬ ಹಿರಿಯಜ್ಜನನ್ನು ಮಂಡೇಲಾ ಆಗಿಯೇ ನೋಡಬೇಕಾದ ಅವಶ್ಯಕತೆಯನ್ನು ಮನಗಾಣಿಸುತ್ತಾರೆ.  

***

ಮಂಡೇಲಾರ ಹೋರಾಟದ ಬದುಕು ನೀಡುವ ಸ್ಫೂರ್ತಿ, ಹುಟ್ಟಿಸುವ ಭರವಸೆಗಳಿಗೆ ಯಾವ ಉತ್ತರಾಧಿಕಾರ ಕಾನೂನೂ ಅನ್ವಯಿಸದೇ ಹೋಗಬಹುದು, ಆದರೆ ಉಸಿರಾಡುವಾಗ ಮತ್ತು ನಂತರ ಅವರ ದೇಹ, ಸಂಪತ್ತುಗಳ ಮೇಲೆ ರಕ್ತಸಂಬಂಧಿಗಳ ಅಧಿಕಾರವಿರುತ್ತದೆ. ಈ ವರ್ಷ ಜೂನ್‌ನಲ್ಲಿ ಪ್ರಾಸ್ಟೇಟ್ ಕ್ಯಾನ್ಸರಿನಿಂದ ಹೆಚ್ಚುಕಮ್ಮಿ ತೀರಿಕೊಂಡಿದ್ದ ಮಂಡೇಲಾ ಡಿಸೆಂಬರ್ ಆರರವರೆಗೆ ಉಸಿರಾಡುತ್ತಿರುವಂತೆ ನೋಡಿಕೊಂಡಿದ್ದು ಉತ್ತರಾಧಿಕಾರದ ವಿವಾದವೇ ಎಂದರೂ ತಪ್ಪಲ್ಲ.

ಸಹಜವಾಗಿಯೇ ೯೫ ವರ್ಷ ತುಂಬು ಜೀವನ ನಡೆಸಿದ ಹೋರಾಟಗಾರನ ವೈಯಕ್ತಿಕ ಬದುಕು ಹಲವು ಏರಿಳಿತಗಳನ್ನು ಕಂಡಿದೆ. ಮೂರು ಮದುವೆ, ಎರಡು ವಿಚ್ಛೇದನ, ಆರು ಮಕ್ಕಳು, ಹಲವು ಮೊಮ್ಮಕ್ಕಳು-ಮರಿಮಕ್ಕಳನ್ನು ಹೊಂದಿದ್ದ ಮಂಡೇಲಾ ಹಲವರನ್ನು ಪ್ರೇಮಿಸಿ ಕೆಲವರನ್ನು ವಿವಾಹವಾದರು. ೧೯೪೪ರಲ್ಲಿ ನರ್ಸ್ ಕೋರ್ಸ್ ಓದುತ್ತಿದ್ದ ಎವೆಲಿನ್‌ರನ್ನು ವಿವಾಹವಾದರು. ಯಹೋವಾನ ಸಾಕ್ಷಿಗಳು ಎಂಬ ಕ್ರಿಶ್ಚಿಯನ್ ಧಾರ್ಮಿಕ ಪಂಥದಲ್ಲಿದ್ದ ಎವೆಲಿನ್ ಕ್ರಮೇಣ ಅವರೊಡನೆ ಭಿನ್ನಾಭಿಪ್ರಾಯ ತಳೆದು ರಾಜಕೀಯ ಸಂಪರ್ಕ, ಹೋರಾಟದಿಂದ ವಿಮುಖರಾದರು. ಎವೆಲಿನ್‌ರ ಧಾರ್ಮಿಕ ಪಂಥ ರಾಜಕೀಯ ಚಟುವಟಿಕೆಯನ್ನು ನಿಷೇಧಿಸಿದರೆ ಮಂಡೇಲಾರ ರಾಜಕೀಯ ಚಟುವಟಿಕೆ ಬೆಳೆಯುತ್ತ ಹೋಯಿತು. ಅದರ ಜೊತೆಜೊತೆಗೆ ಬೇರೆ ಮಹಿಳೆಯರೊಡನೆ ಸ್ನೇಹ-ಸಲುಗೆಯೂ ಆಯಿತು. ಮತ್ತಿಬ್ಬರು ಗೆಳತಿಯರು; ಒಬ್ಬಳೊಡನೆ ಸಂಸಾರ ನಡೆಸಿ ಮಗುವಾಗಿದ್ದು - ಈ ಎಲ್ಲದರಿಂದ ಎವೆಲಿನ್ ಬೇಸರಗೊಂಡು ೧೯೫೮ರಲ್ಲಿ ವಿಚ್ಛೇದನೆ ಪಡೆದರು.

೧೯೫೮ರಲ್ಲಿ ಸಾಮಾಜಿಕ ಕಾರ್ಯಕರ್ತೆ ವಿನ್ನಿ ಪರಿಚಯವಾಗಿ ಮದುವೆಯಾದರು. ಮದುವೆಯಾದ ಕೆಲ ವರ್ಷಗಳಲ್ಲೇ ಸೆರೆಮನೆ ಸೇರಿದ ಮಂಡೇಲಾರ ಹೋರಾಟವನ್ನು ಸಕ್ರಿಯವಾಗಿಟ್ಟಾಕೆ ವಿನ್ನಿ. ತಾನೂ ಜೈಲು ಸೇರುತ್ತ, ಬಿಡುಗಡೆಯಾಗುತ್ತ ೨೭ ವರ್ಷ ಸಂಗಾತಿಗೆ ಬೆಂಬಲವಾಗಿ ನಿಂತರು. ಜೈಲಿನಿಂದ ಹೊರಬಂದ ನಂತರ ಮಂಡೇಲಾ ಆಕೆಯ ಜೊತೆಯೇ ಇದ್ದರೂ ಬೇರೊಬ್ಬ ವ್ಯಕ್ತಿಯೊಡನೆ ವಿನ್ನಿಗಿದ್ದ ಸಂಬಂಧ, ಎಎನ್‌ಸಿಯಲ್ಲಿ ಆಕೆ ನಡೆಸಿದ ಅಕ್ರಮಗಳು, ಹಣ ದುರುಪಯೋಗ ಇಂಥ ಹಲವು ವಿಷಯಗಳಿಂದ ಇಬ್ಬರ ನಡುವೆ ಭಿನ್ನಮತ ಉಂಟಾಗಿ ೧೯೯೨ರಲ್ಲಿ ಡೈವೋರ್ಸ್ ಪಡೆದರು. ತಮ್ಮ ೮೦ನೇ ವಯಸ್ಸಿನಲ್ಲಿ, ೧೯೯೮ರಲ್ಲಿ ತಮಗಿಂತ ೨೭ ವರ್ಷ ಸಣ್ಣವರಾಗಿದ್ದ ಮೊಝಾಂಬಿಕ್‌ನ ಗ್ರಾಕಾ ಮಷೆಲ್ ಜೊತೆ ಮೂರನೇ ಬಾರಿಗೆ ವಿವಾಹವಾದರು.

***



ಮಂಡೇಲಾ ೧೯೯೪ರ ಚುನಾವಣೆಗೆ ನಿಂತು ಗೆಲುವು ಸಾಧಿಸಿ, ತನ್ನ ೭೬ನೇ ವಯಸ್ಸಿನಲ್ಲಿ ದಕ್ಷಿಣ ಆಫ್ರಿಕಾದ ಮೊದಲ ಕರಿಯ ಅಧ್ಯಕ್ಷರಾದರು.

ಅವರು ಅಧ್ಯಕ್ಷರಾದ ಕಾಲವಾದರೂ ಹೇಗಿತ್ತು? ವರ್ಣಭೇದ ಎಲ್ಲೆಡೆ ಕಾಣಿಸುತ್ತಿತ್ತು. ಕರಿಯರ ನಡುವಿನ ಹಿಂಸೆ ಹೆಚ್ಚುತ್ತ ಸಾವಿರಾರು ಜನ ಸಾಯುತ್ತಿದ್ದರು. ೪ ಕೋಟಿ ಜನಸಂಖ್ಯೆಯ ದಕ್ಷಿಣ ಆಫ್ರಿಕಾದ ೨.೩ ಕೋಟಿ ಜನಸಂಖ್ಯೆಗೆ ವಿದ್ಯುತ್ ಸಂಪರ್ಕವಿರಲಿಲ್ಲ, ಆರೋಗ್ಯ ಸೌಲಭ್ಯವಿರಲಿಲ್ಲ, ಶೌಚಾಲಯವಿರಲಿಲ್ಲ. ೨೦ ಲಕ್ಷ ಮಕ್ಕಳು ಶಾಲೆಗೆ ಹೋಗುತ್ತಿರಲಿಲ್ಲ. ದೇಶದ ಮೂರನೇ ಒಂದು ಭಾಗ ಜನತೆ ಅನಕ್ಷರಸ್ಥರು. ೧೦% ಜನ ಎಚ್‌ಐವಿ ಪೀಡಿತರು. ಅಪರಾಧ ಅತಿ ಹೆಚ್ಚಿದ್ದು ಬಂಡವಾಳ ಹೂಡಲು ಉದ್ಯಮಿಗಳು ಧೈರ್ಯ ಮಾಡುತ್ತಿರಲಿಲ್ಲ. ನಿರುದ್ಯೋಗ ತಾಂಡವವಾಡುತ್ತಿತ್ತು. ಮಾನವ ಕಳ್ಳ ಸಾಗಣೆ, ಮಾದಕ ವಸ್ತು ವ್ಯವಹಾರ ದೇಶವನ್ನು ನುಂಗುತ್ತಿದ್ದವು. ಕಾಲು ಭಾಗದ ಬಜೆಟ್ ಹಣ ಸಾಲಕ್ಕೆ ಹೋಗುತ್ತಿತ್ತು. ೫೦% ಜನ ಬಡತನ ರೇಖೆಯ ಕೆಳಗೆ ಇದ್ದರು.

ಅಂಥ ಸೂಕ್ಷ್ಮ ಆರ್ಥಿಕ-ಸಾಮಾಜಿಕ ಪರಿಸ್ಥಿತಿಯಲ್ಲಿ ಮಂಡೇಲಾ ವಿಶ್ವಾದ್ಯಂತ ಬೀಸತೊಡಗಿದ್ದ ಆರ್ಥಿಕ ಉದಾರೀಕರಣದ ಸುಳಿಗೆ ಸಿಕ್ಕರು. ವಿದೇಶೀ ಬಂಡವಾಳ ಹರಿದು ಬರಲು ಮುಕ್ತ ಆರ್ಥಿಕ ನೀತಿಯನ್ನು ಅಪ್ಪಿಕೊಂಡರು. ಅದು ೨೧ನೇ ಶತಮಾನದಲ್ಲಿ ದಕ್ಷಿಣ ಆಫ್ರಿಕಾವನ್ನು ‘ಅಭಿವೃದ್ಧಿ’ಯತ್ತ ಕೊಂಡೊಯ್ಯುತ್ತಿದೆಯೆ? ಕರಿಯ ಜನರ ಸ್ಥಿತಿಗತಿಗಳಲ್ಲಿ ಬದಲಾಗಿದೆಯೇ? ಮಂಡೇಲಾರ ಆಡಳಿತ ಹೇಗಿತ್ತು? ಮಂಡೇಲಾರನ್ನು ಪ್ರತಿಮೀಕರಣಗೊಳಿಸದೇ ಈ ಬಗ್ಗೆ ಮುಕ್ತವಾಗಿ ಯೋಚಿಸಬೇಕಿದೆ.

೧೬೫೨ರಲ್ಲಿ ಡಚ್ ಈಸ್ಟ್ ಇಂಡಿಯಾ ಕಂಪನಿ ಕಾಲಿಟ್ಟ ದಿನದಿಂದ ಜನಸಂಖ್ಯೆಯ ಶೇ. ೮.೯ರಷ್ಟಿದ್ದ ಬಿಳಿಯರು ಅಲ್ಲಿನ ಎಲ್ಲ ಸಂಪನ್ಮೂಲವನ್ನು ಬಾಚಿಕೊಳ್ಳುತ್ತ, ಅದರ ಹಕ್ಕುದಾರರಾಗಿದ್ದಾರೆ. ಗ್ರೂಪ್ ಏರಿಯಾ ಆಕ್ಟ್ ದೆಸೆಯಿಂದ ಬಿಳಿಯರಲ್ಲದವರ ಮೇಲೆ ತೀವ್ರ ನಿರ್ಬಂಧ ಹೇರಿದ್ದರಿಂದ ಕರಿಯರು ಅನಿವಾರ್ಯವಾಗಿ ನಗರಗಳಿಂದ ಗ್ರಾಮೀಣ ಭಾಗಕ್ಕೆ ತೆರಳಿ ತೀವ್ರ ಬಡತನದಲ್ಲಿ ಬದುಕು ಕಳೆದಿದ್ದಾರೆ. ಈಗ ಸ್ವಾತಂತ್ರ್ಯ ಬಂದಿದೆ. ಆದರೆ ಬಹುಪಾಲು ಉದ್ದಿಮೆಗಳು, ಬೃಹತ್ ಸಂಪನ್ಮೂಲಗಳು, ವಹಿವಾಟಿನ ಮೇಲೆ ಬಿಳಿಯರ ಹಿಡಿತವೇ ಇದೆ. ಕರಿಯರ ಬಡತನ, ನಿರುದ್ಯೋಗ ಏರುತ್ತಲೇ ಇದ್ದು ಅವರ ಆರ್ಥಿಕ ಪರಿಸ್ಥಿತಿ ಕುಸಿಯುತ್ತಿದೆ.

ಹಾಗಾದರೆ ಸ್ವಾತಂತ್ರ್ಯ ಬಂದು ಏನು ವ್ಯತ್ಯಾಸವಾಯಿತು?

ಇಷ್ಟೇ ವ್ಯತ್ಯಾಸ, ಎಲ್ಲಕ್ಕೂ ಕರಿಯ ಅಧ್ಯಕ್ಷರ ಅಂಕಿತ ಬೀಳುತ್ತಿದೆ!

ಬಹುಶಃ ಆಫ್ರಿಕಾ ಎಂಬ ವಜ್ರದೊಡಲ ನೆಲಕ್ಕೆ ಗಂಟುಕಳ್ಳರನ್ನು ಓಡಿಸುವವರಷ್ಟೇ ಅಲ್ಲ, ಒಳಗಿನ ಬೆಳಕು ಪ್ರತಿಫಲಿಸುವಂತೆ ಸಾಣೆ ಹಿಡಿವ ಇನ್ನಷ್ಟು ಸಾಣೆಕಾರರೂ ಅವಶ್ಯವಾಗಿದ್ದಾರೆ.





Thursday, 3 July 2014

ಇಷ್ಟೆ ಇಷ್ಟೇ



ನಾನು
ಒಂದೇಒಂದು ಗುಟುಕನರಸಿ ಅರಳುವ ಹಕ್ಕಿಯ ಕಣ್ಣು
ಸುಡುಬಿಸಿಲಿಗೆ ಆವಿಯಾಗುವ ಶರತ್ಕಾಲದ ಗರಿಕೆ ಹನಿ
ಮುಳ್ಳಿನ ಜೊತೆಜೊತೆಯೇ ಅರಳಿ ಎಚ್ಚರಿಸುವ ಹೂವು
ಗೆಲುವಿನ ಉನ್ಮಾದ ಸೋಲಿನ ಹತಾಶೆ ಅರಿಯದ ಮಿಣುಕುಹುಳ

ನಾನು ರೂಮಿಯಲ್ಲ
ಶಂಸನೆಂಬ ತಳವಿರದ ಗುಡಾಣ ತುಂಬಿದ ಗಾಳಿ

ನಾನು ಬುದ್ಧನಲ್ಲ
ಲೋಕಕ್ಕೆ ಭಿಕ್ಷುವನಿತ್ತು ಬಿಕ್ಕುಳಿಸಿಕೊಂಡ
ಯಶೋಧರೆಯ ನಡುರಾತ್ರಿಯ ಮೌನ

ನಾನು ಅಕ್ಕ ಪಾರ್ವತಿ ಹಾಜಿಮಾ ಅಲ್ಲ
ಮೊಟ್ಟೆಯೊಡೆದು ಮರಿಯಾಗದೇ ಹೋದ
ಅವರ ಗರ್ಭಚೀಲದ ಕನಸು..

ನಾನು ಚೆ ಅಲ್ಲ
ಅವನ ಬಂದೂಕಿನ ಬಾಯಲ್ಲಿ ಗೂಡುಕಟ್ಟಿ
ನೆರೂಡನ ಹಾಡಲು ಕಾದ ಹಕ್ಕಿಯ ಕೊರಳು

ನಾನು ಬೆಟ್ಟವಲ್ಲ ಜಲಪಾತವಲ್ಲ
ಗುಹೆಯಲ್ಲ ಕಣಿವೆಯಲ್ಲ
ಕಂಡಷ್ಟೂ ದೂರ ಹಬ್ಬಿರುವ ಬಯಲಲಿ
ನಿನ್ನೊಡನಿಟ್ಟ ಹೆಜ್ಜೆಗುರುತುಗಳ ಹೊರತು
ಮತ್ಯಾವ ಆಳ ಎತ್ತರ ವಿಸ್ತಾರಗಳ ಕಲ್ಪನೆ
ಈ ಪುಟ್ಟ ಮಿದುಳಿನ ಅಳವಿನೊಳಗಿಲ್ಲ..

Wednesday, 2 July 2014

ಕುಣಬಿ: ಕೊಂಕಣದ ಮಕ್ಕಳ ಕತೆ-ವ್ಯಥೆ



ಉತ್ತರಕನ್ನಡಕ್ಕೆ ೨೧ ವರ್ಷಗಳ ಕೆಳಗೆ ಬಂದಾಗ ಇಲ್ಲಿನ ಭಾಷಾ ಮತ್ತು ಜನಾಂಗ ವೈವಿಧ್ಯತೆ ಗಮನ ಸೆಳೆದಿದ್ದವು. ಅದರಲ್ಲೂ ಘಟ್ಟದಲ್ಲಿದ್ದ ಬೆಟ್ಟಗಳಲ್ಲಿದ್ದ, ದೂರದೂರದ ಊರಿನಿಂದ ಬರುತ್ತಿದ್ದ ಮರಾಠಿ ಮಿಶ್ರಿತ ಕೊಂಕಣಿ ಮಾತನಾಡುವವರು ವಿಶಿಷ್ಟವೆನಿಸಿದ್ದರು. ಅವರಲ್ಲಿ ಬಹುತೇಕರು ಅಶಿಕ್ಷಿತರು. ಆಧುನಿಕ, ವೈಜ್ಞಾನಿಕ ತಿಳುವಳಿಕೆ ಕಡಿಮೆಯಿದ್ದು ಎಲ್ಲಕ್ಕೂ ದೇವರನ್ನು, ದೆವ್ವವನ್ನು ನಂಬಿದವರು. ಹಿಂಡುಹಿಂಡಾಗಿ ಆಸ್ಪತ್ರೆಗೆ ಬರುತ್ತಿದ್ದರು. ಅವರು ಬಡವರಾಗಿರಲಿಲ್ಲ. ಆದರೆ ಅತಿ ಪಥ್ಯ, ವ್ರತನೇಮ ಉಪವಾಸಗಳು, ಆಹಾರ ಕುರಿತ ತಪ್ಪು ತಿಳುವಳಿಕೆಗಳು ಅಪೌಷ್ಟಿಕತೆಗೆ ಕಾರಣವಾಗಿದ್ದವು. ಅಂಗಳದಲ್ಲಿ ಬೆಳೆದ ಅಬ್ಬಲಿಗೆ ಹೂವಿನಿಂದ ಹಿಡಿದು ಅನಾನಸು, ಬೆಲ್ಲ, ಜೇನು, ಪರಿಮಳದ ಅಕ್ಕಿ ಏನೇನನ್ನೋ ತಂದುಕೊಡುತ್ತಿದ್ದರು. ಒರಟು ಅಂಗೈ, ಜಡ್ಡುಹಿಡಿದ ಕಾಲು, ಕಂದು ಚರ್ಮ ಅವರೆಂಥ ಶ್ರಮಜೀವಿಗಳೆನ್ನುವುದನ್ನು ಹೇಳುತ್ತಿದ್ದವು. ಕಡಿಮೆ ಬಟ್ಟೆಯಲ್ಲಿರುತ್ತಿದ್ದ ಹಿರಿಯರು ಮತ್ತು ಎಳೆದು ಆಡುವ ಅವರ ಕನ್ನಡ ಎದ್ದು ಕಾಣುತ್ತಿತ್ತು. ಹೆರಿಗೆ ಮತ್ತಿತರ ಆಸ್ಪತ್ರೆಯಲ್ಲಿ ಉಳಿಯುವಂತಹ ಕಾಯಿಲೆ-ಸಂಕಟಗಳು ಬಂದಾಗ ಕುಟುಂಬಕ್ಕೆ ಕುಟುಂಬವೇ ಆಸ್ಪತ್ರೆಯಲ್ಲಿ ತಂಗುತ್ತಿತ್ತು. ಒಂದು ವಾಹನ ಮಾಡಿಕೊಂಡು ಪೇಶೆಂಟ್ ಕರೆತಂದರೆ ವಾಹನದ ತುಂಬ ಜನ ಬರುತ್ತಿದ್ದರು. ಹೆರಿಗೆಗಾಗಿ ಒಬ್ಬ ಮಹಿಳೆ ಬಂದರೆ ಅವಳ ಜೊತೆ ಹತ್ತಿಪ್ಪತ್ತು ಜನ ಬರುತ್ತಿದ್ದರು. ದಿನ ತುಂಬಿದ ಬಸುರಿಯನ್ನು ಹೇಗೆ ಕರೆತಂದಾರೋ ಎಂದು ನನಗೆ ಗಾಬರಿಯಾದರೆ ಅವರು ಏನಿಲ್ಲ, ‘ನೀವಿದೀರಲ್ರಾ ಅಮಾ. ದೇವ್ರು ನಡೆಸಿದಂಗೆ ಆಗ್ತೀತೆ’ ಎನ್ನುತ್ತ ಎಲ್ಲ ಭಾರ ತಮ್ಮ ಹೆಗಲಿಂದ ವರ್ಗಾಯಿಸಿಬಿಡುತ್ತಿದ್ದರು. ಅವರಿಗೆ ಪೇಟೆಯಲ್ಲಿ ಒಬ್ಬ ಸಂಬಂಧಿಯೂ ಇರಲಿಲ್ಲ. ನೆಂಟರಿಷ್ಟರು ಅವರಂತೆಯೇ ಗುಡ್ಡಗಾಡು ಪ್ರದೇಶಗಳಲ್ಲಿರುತ್ತಿದ್ದರು. ತುಂಬ ಸಂಕೋಚದ, ಲೆಕ್ಕಾಚಾರದ, ಪ್ರಾಕ್ಟಿಕಲ್ ಆದ ಜನ ಅವರು. ಕನ್ನಡ ಸರಿಯಾಗಿ ಬರದ, ಆಧುನಿಕ ವರಸೆಗಳೊಂದೂ ತಿಳಿಯದವರ ಬಳಿ ವ್ಯವಹರಿಸುವುದು ಸುಲಭವಲ್ಲ. ಪ್ರತಿ ಗುಂಪಿನೊಟ್ಟಿಗೂ ಒಬ್ಬ ಮುಖ್ಯಸ್ಥೆ ಯಾ ಹಿರಿಯ ಇರುತ್ತಿದ್ದು ಅವರ ಬಳಿ ಮೊದಲು ಮಾತುಕತೆಯಾಡಬೇಕಿತ್ತು. ಯಾವುದನ್ನೂ ಸುಲಭಕ್ಕೆ ನಂಬರು, ನಂಬಿದ ಮೇಲೆ ಮುಗಿಯಿತು, ಮತ್ತೆ ಅನುಮಾನ ಇಟ್ಟುಕೊಳ್ಳರು.

ಈ ಇಂಥ ನಮ್ಮವರು ಮರಾಠಿ ಮಾತಾಡುತ್ತಿದ್ದರು. ಇವರು ಯಾವಾಗ ಮತ್ತು ಹೇಗೆ ಕರ್ನಾಟಕದ ಉತ್ತರಕನ್ನಡದ ಗುಡ್ಡಬೆಟ್ಟಗಳ ಹತ್ತಿ ಕುಳಿತರು? ಯುದ್ಧ ಕಾರಣವಾಗಿ ಔರಂಗಜೇಬನ ಸೈನ್ಯ, ಪೇಶ್ವೆ ಸೈನ್ಯ ನಗರ ಸಂಸ್ಥಾನ, ಕೆಳದಿ, ಶಿವಮೊಗ್ಗೆಗೆಲ್ಲ ಬಂದಿತ್ತಂತೆ. ಗೊತ್ತಿಲ್ಲದೆ ಮಳೆಗಾಲದಲ್ಲಿ ಬಂದವರು ಕಾಡಿನಲ್ಲಿ ಇಂಬಳ ಕಚ್ಚಿಸಿಕೊಂಡು ತಡೆಯಲಾಗದೇ ಹಿಮ್ಮೆಟ್ಟಿದರಂತೆ. ಆಗೇನಾದರೂ ಮಳೆಗೆ ಹೆದರಿ ಗುಡ್ಡ ಹತ್ತಿ ಕುಳಿತವರೆ ಇವರು?

ಸ್ಪಷ್ಟ ಜನಾಂಗೀಯ ಜ್ಞಾನವಿಲ್ಲದ ನನ್ನ ಕಲ್ಪನಾವಿಲಾಸ ಆಗ ಇತಿಹಾಸದ ಯಾವ್ಯಾವುದೋ ಪುಟ ಸುತ್ತುತ್ತಿತ್ತು. ನಂತರ ತಿಳಿಯಿತು, ಅವರು ‘ಕುಮ್ರಿ ಮರಾಟಿ’ ಎಂದು ಕರೆಯಲ್ಪಡುವ ಸಮುದಾಯ ಎಂದು. ಅವರ ಹಿನ್ನೆಲೆ ಅರಸುತ್ತ ಹೋದಾಗ ಕೆಲ ಆಸಕ್ತಿ ಮೂಡಿಸುವ ವಿಷಯಗಳು ತಿಳಿದುಬಂದವು.

***



ಕುಂಡಲ.

ಮಳೆಗಾಲದ ನಾಲ್ಕು ತಿಂಗಳು ಹಿನ್ನೀರಿನಲ್ಲಿ ದ್ವೀಪವಾಗಿಬಿಡುವ ಊರು ಕುಂಡಲ. ಆದರೆ ಊರ ಜನ ದ್ವೀಪವಾಗಿ ಉಳಿಯಲು ಬಯಸದವರು. ಕುಂಡಲದ ಕಲಾತಂಡ ತಾಳ ಬಾರಿಸುತ್ತಾ, ಕೋಲು ಹಾಕುತ್ತಾ ಕೊಂಕಣಿ ಭಾಷೆಯಲ್ಲಿ ಹಾಡುತ್ತಾ ಹೆಜ್ಜೆ ಹಾಕುತ್ತಿತ್ತು. ಅವರ ವೇಷಭೂಷಣಗಳಲ್ಲಿ ಮರಾಠಿ ಪ್ರಭಾವ ಎದ್ದು ಕಾಣುತ್ತದೆ. ಹಾಡಿನಲ್ಲಿ ಆ ಭಾಗದ ಕಾಡಿನ ಮರಗಳ, ಹೂಗಳ, ನಾನಾ ಫಲಗಳ ಹೆಸರು ಸುಳಿಯುತ್ತಿದ್ದವು. ದೂರದಲ್ಲಿ ಹಿರಿಯ ಹೆಣ್ಮಕ್ಕಳು ಅವರ ಹಾಡು ಕುಣಿತವನ್ನು ಕೇಳುತ್ತ ಸುಮ್ಮನೆ ಕೂತಿದ್ದರು. ಎರಡೂ ಹೆಗಲು ಕಾಣುವಂತೆ ಸೀರೆಯುಡುವ ಆ ಮಹಿಳೆಯರು ನಾಗರಿಕರ ನಡುವೆ ‘ಶಿಷ್ಟ’ವಾಗಿ ಕಾಣಲು ಟವೆಲು ಹೊದ್ದುಕೊಂಡಿದ್ದರು!

ನಂತರ ಹೆಣ್ಮಕ್ಕಳ ಸರದಿ. ಡೋಲು ಹಿಡಿದು ಗುಂಪಿನಲ್ಲಿ ರೌಂಡಾಗಿ ತಿರುಗುತ್ತ ಎಲ್ಲ ಒಟ್ಟಿಗೆ ಹಾಡಿಕೊಳ್ಳತೊಡಗಿದರು. ಒಬ್ಬರಾದರೂ ಮೈಕ್ ಎದುರು ಬನ್ನಿ, ಆಗ ಹಾಡು ಎಲ್ಲರಿಗೆ ಕೇಳೀತು ಎಂದರೆ ಊಂಹ್ಞೂಂ, ಗುಂಪು ಬಿಟ್ಟರೆ, ಹೆಜ್ಜೆ ಹಾಕದಿದ್ದರೆ ಹಾಡು ಹೊರಡುವುದೇ ಇಲ್ಲ ಎಂದರು! ಹುಟ್ಟಾ ಕೃಷಿಕರಾದ ಅವರ ಹಾಡಿನ ತುಂಬ ಕೃಷಿಯ ವಿವರಗಳು. ನಿಂಬೆ ಗಿಡ ನೆಟ್ಟದ್ದು, ಮಣ್ಣು-ನೀರು-ಗೊಬ್ಬರ ಹಾಕಿದ್ದು; ಮೊದಲ ಎಲೆ ಚಿಗುರಿದ್ದು; ಎರಡೆಲೆ ಆಗಿದ್ದು; ನಾಲ್ಕೆಲೆ, ಎಂಟೆಲೆ ಹೀಗೇ ಚಿಗುರುತ್ತ ಹೋಗಿ ಕೊನೆಗೆ ಹೂವಾಗಿದ್ದು; ಫಲವಾಗಿ ‘ಹಳೂದಿ’ ನಿಂಬೆ ಹಣ್ಣಾಗಿದ್ದು ಎಲ್ಲವೂ ಹಾಡಿನಲ್ಲಿ ಸುಳಿದವು. ‘ಹಣ್ಣು ಕಿತ್ತು ಬುಟ್ಟಿಯಲಿಟ್ಟು ಸಂತೆಗೆಂದು ಜೋಯ್ಡಾಕ್ಕೆ ಒಯ್ದೆ, ನೂರಕ್ಕೆ ಮೂರು ರೂಪಾಯಿ ಎಂದರು. ದಾಂಡೇಲಿಗೆ ಒಯ್ದೆ - ಮೂರು ರೂಪಾಯಿ ಎಂದರು. ಲೋಂಡಾಕ್ಕೆ ಒಯ್ದೆ, ಅಲ್ಲೂ ಮೂರೇ ರೂಪಾಯಿ ಎಂದರು..’ ಎಂದು ಹಾಡು ಕೊನೆಯಾಗುತ್ತದೆ. ಎಂದರೆ ತಾವು ತಿಂಗಳುಗಟ್ಟಲೆ ಬೆಳೆಸಿದ್ದಕ್ಕೆ ಯಾವ ಪೇಟೆಗೆ ಹೋದರೂ ಸೂಕ್ತ ದರ ಸಿಗಲಿಲ್ಲ ಎಂಬುದು ಒಟ್ಟೂ ಹಾಡಿನ ತಾತ್ಪರ್ಯ.

ಬೆಳೆ ಬೆಳೆಯುವ; ಅದನ್ನು ವನ್ಯಪ್ರಾಣಿಗಳಿಂದ ರಕ್ಷಿಸಿ ಹೊತ್ತು ಮಾರುಕಟ್ಟೆಗೆ ತರುವ ಕೆಲಸ ಸೂಕ್ತ ದರ ಸಿಗದೇ ಹೋದರೆ ಶ್ರಮವೆನಿಸಿ ಹೇಗೆ ನಿರಾಸೆ ಆವರಿಸುತ್ತದೆ ಎನ್ನುವುದು ಅವರ ಸಾಲಿನಲ್ಲಿ ವ್ಯಕ್ತವಾಗುತ್ತಿತ್ತು.

ಈ ಹಾಡು, ಮೇಳದಿಂದ ದೂರದಲ್ಲಿ ಕೆಲವರು ಮಂಕಾಗಿ ಕೂತಿದ್ದರು. ಅವರ ಮ್ಲಾನಮುಖಗಳು ಎಷ್ಟೋ ಸಮಸ್ಯೆಗಳನ್ನು ಹೇಳುತ್ತಿದ್ದವು. ಅವರು ಆನೆ ತುಳಿತಕ್ಕೊಳಗಾಗಿ ತೀರಿಕೊಂಡಾತನ ಕುಟುಂಬದವರು. ಕಾಡಿನಂಚಿನಲ್ಲಿ ಸಾಗುವಳಿ ಮಾಡಿಕೊಂಡಿದ್ದ ಆ ಪುಟ್ಟ ಸಂಸಾರದ ಏಕಮಾತ್ರ ದುಡಿವ ವ್ಯಕ್ತಿ ಆನೆಯ ತುಳಿತಕ್ಕೆ ಒಳಗಾಗಿ ಪುಡಿಪುಡಿಯಾಗಿ ಹೋಗಿದ್ದ. ಅವನನ್ನೇ ನೆಚ್ಚಿದ್ದ ವಯಸ್ಸಾದ ತಾಯಿ, ಅಂಗವಿಕಲ ಹೆಂಡತಿ ಹಾಗೂ ಎರಡು ಪುಟ್ಟ ಮಕ್ಕಳ ಸಂಸಾರ ಅಕ್ಷರಶಃ ಅನಾಥವಾಗಿತ್ತು. ಆ ಜಮೀನನ್ನು ಅವರು ತಲೆತಲಾಂತರದಿಂದ ಮಾಡಿಕೊಂಡು ಬಂದಿದ್ದರೂ ಅಧಿಕೃತ ದಾಖಲೆ ಪ್ರಕಾರ ಅದು ಫಾರೆಸ್ಟ್ ಡಿಪಾರ್ಟ್‌ಮೆಂಟಿಗೆ ಸೇರಿತ್ತು. ಅದರ ದಾಖಲೆಗಳನ್ನು ಪಡೆದುಕೊಳ್ಳುವಷ್ಟು ಕಚೇರಿ/ಕನ್ನಡ ಜ್ಞಾನವೂ ಅವರಲ್ಲಿರಲಿಲ್ಲ. ಇನ್ನು ಪರಿಹಾರ ದೂರದ ಮಾತು. ಮನುಷ್ಯನಿಂದ ಆನೆಯೂ, ಆನೆಯಿಂದ ಮನುಷ್ಯರೂ ಪರಸ್ಪರ ಪೀಡಿತರಾಗಿದ್ದು ಕಾಲ ಅವರ ಬದುಕನ್ನು ದುರ್ಭರಗೊಳಿಸಿತ್ತು.

ಈ ಜನ ಕುಣಬಿಗಳು. ಗುಜರಾತ್, ಗೋವಾ, ಕರ್ನಾಟಕ, ಆಂಧ್ರ, ಕೇರಳಗಳಲ್ಲಿ ಮುಖ್ಯವಾಗಿ ಕಾಣುವ ಇವರು ಮಹಾರಾಷ್ಟ್ರ, ಗುಜರಾತ್, ಗೋವಾಗಳ ಮೂಲ ನಿವಾಸಿಗಳು. ವಲಸೆ ಬಂದ ಉತ್ತರದ ಮುಂಡಾರಿ ಸಮುದಾಯವೇ ನಂತರ ಕುಣಬಿ ಎಂದಾಯಿತು ಎಂದೂ ಕೆಲವರ ಅಭಿಪ್ರಾಯ. ದಕ್ಷಿಣದ ವಿಭಿನ್ನ ರಾಜ್ಯಗಳಲ್ಲಿ ಅವರು ಹಂಚಿ ಹೋಗಿದ್ದಾರೆ. ಮಹಾರಾಷ್ಟ್ರದಲ್ಲಿ ತಮ್ಮ ಸಂಖ್ಯೆಯಿಂದಲೂ, ಅಧಿಕಾರದ ಸನಿಹಕ್ಕೆ ಪಡೆದ ಮೇಲ್ಚಲನೆಯಿಂದಲೂ ಕುಣಬಿಗಳು ಅನುಕೂಲಕರ ಪರಿಸ್ಥಿತಿಯಲ್ಲಿದ್ದಾರೆ. ಪೇಶ್ವೆಗಳ ಕಾಲದಲ್ಲಿ ಪಾರಂಪರಿಕ ಕೃಷಿ ವೃತ್ತಿಯಿಂದ ಸೈನ್ಯ ಪ್ರವೇಶ ಪಡೆದ ಕುಣಬಿಗಳು ನಂತರ ಸಣ್ಣಪುಟ್ಟ ಪಾಳೆಯಪಟ್ಟುಗಳ ಆಡಳಿತಗಾರರಾಗುವ ತನಕ ಅಧಿಕಾರಸ್ಥರಾದರು. ತಮ್ಮನ್ನು ಮರಾಠ ಕುಣಬಿಗಳೆಂದು ದಾಖಲಿಸಿದರು. ಶಿಂಧೆ (ಸಿಂಧಿಯಾ), ಗಾಯಕ್ವಾಡ್ ಮುಂತಾದ ಆಳುವ ಮನೆತನಗಳು ಕುಣಬಿ ಮೂಲದವರೆಂದು ಹೇಳಲಾಗುತ್ತದೆ. ಕರ್ನಾಟಕ, ಕೇರಳದಲ್ಲಿ ಇವರು ವಲಸೆಬಂದ ಸಮುದಾಯಗಳು. ಕರ್ನಾಟಕದ ಉತ್ತರಕನ್ನಡ ಜಿಲ್ಲೆಯ ಅತಿ ಹಿಂದುಳಿದ ಬುಡಕಟ್ಟು ಜನಾಂಗ. ಬುಡಕಟ್ಟು ಆದರೂ ಬುಡಕಟ್ಟು ಎನಿಸಿಕೊಳದೇ ‘ಹಿಂದುಳಿದ ಜಾತಿ’ಯಾಗಿ ಪರಿಗಣಿಸಲ್ಪಟ್ಟ ಜನಾಂಗ. ಇವರು ಉತ್ತರಕನ್ನಡದ ಇತರ ತಾಲೂಕುಗಳಲ್ಲಿ ಅಲ್ಲದೇ ಕರ್ನಾಟಕದ ಶಿವಮೊಗ್ಗ, ಉಡುಪಿ, ದಕ್ಷಿಣಕನ್ನಡ, ಬೆಳಗಾವಿ ಜಿಲ್ಲೆಗಳಲ್ಲೂ ಇದ್ದಾರೆ.

ಉಳಿದ ಜಿಲ್ಲೆಗಳ ಕುಣಬಿಗಳಿಗಿಂತ ಉತ್ತರ ಕನ್ನಡದವರು; ಉತ್ತರ ಕನ್ನಡದ ಕುಣಬಿಗಳಲ್ಲೇ ಜೋಯ್ಡಾ ತಾಲೂಕಿನವರು ಅತಿ ಹಿಂದುಳಿದಿದ್ದಾರೆ. ಈ ಲೇಖನವು ಜೋಯ್ಡಾ ಕುಣಬಿಗಳನ್ನು ಗಮನದಲ್ಲಿರಿಸಿಕೊಂಡಿದೆ. ಅವರ ಸಮಸ್ಯೆಗಳ ಕಾರಣ, ಪರಿಹಾರಗಳನ್ನು ಅವರ ಬಾಯಿಂದಲೇ ಕೇಳಿದಾಗ ದೊರೆತ ಅಭಿಪ್ರಾಯಗಳು ಇಲ್ಲಿವೆ:

ಪ್ರಕೃತಿಯ ಜೊತೆಗೆ ಬದುಕುವ, ಪ್ರಕೃತಿಯ ಆರಾಧಕರಾದ ಕುಣಬಿಗಳು ಹಲವು ವಿಪರ್ಯಾಸಗಳ ನಡುವೆ ಬದುಕು ಸಾಗಿಸಿದ್ದಾರೆ. ಅವರಿಗೆ ಪ್ರಕೃತಿ ಪೊರೆವ ತಾಯಿಯಾಗಿರುವಂತೆಯೇ ಸಮಸ್ಯೆಯ ಮೂಲವೂ ಆಗಿದೆ. ಯಾವ ಕಾಡು ಅವರಿಗೆ ಸಕಲ ಸಂಪತ್ತಾಗಿದೆಯೋ ಅದೇ ಕಾಡು ಉಳಿದ ಜಗತ್ತಿನೊಂದಿಗೆ ಸಂಪರ್ಕ ಕಡಿಯುವ ಗೋಡೆಯೂ ಆಗಿದೆ. ಯಾವ ನದಿ ಜೀವಜಲ ಉಣಿಸುವುದೋ ಅದೇ ನದಿ ಅವರ ಊರು-ಕೇರಿ-ಹಾಡಿಗಳನ್ನು ಮುಳುಗಿಸಿದೆ; ಅಥವಾ ಯೋಜನೆಗಳ ನೆಪದಲ್ಲಿ ಎತ್ತಂಗಡಿಗೆ ಕಾರಣವಾಗಿದೆ. ಯಾವ ಕಾಡುಪ್ರಾಣಿಗಳನ್ನು ಅವರು ಪೂಜಿಸುವರೋ ಅವೇ ತಂತಮ್ಮ ರಕ್ಷಣೆಯ ಹೆಸರಿನ ಯೋಜನೆಗಳ ಕಾರಣದಿಂದ ಮುಳುವಾಗಿವೆ. ಆನೆಯಂತೂ ಯೋಜನೆಯ ನೆಪದಲ್ಲಿ ಅಷ್ಟು; ಹೊಲಗದ್ದೆತೋಟಮನೆಗಳ ಮೇಲಿನ ದಾಳಿಯಿಂದ ಅಷ್ಟು; ಕೊನೆಗೆ ವಿದ್ಯುತ್ ತಂತಿ ಬೇಲಿ ಹಾಯ್ದು ಅದು ಯಾರ ಜಾಗದಲ್ಲಿ ಸತ್ತುಬಿದ್ದಿತೋ ಅವರನ್ನು ಜೈಲಿಗೆ ಕಳಿಸುವಷ್ಟು ಅವರಿಗೆ ತೊಂದರೆ ಒಡ್ಡಿದೆ.



ಅವರಿಗೆ ಈಗ ಆನೆ ಒಂದು ಸಮಸ್ಯೆ; ಕಾಡು ಒಂದು ಸಮಸ್ಯೆ; ಹುಲಿ ಒಂದು ಸಮಸ್ಯೆ; ಜಿಲ್ಲಾ ಕೇಂದ್ರದಿಂದಿರುವ ದೂರ ಒಂದು ಸಮಸ್ಯೆ. ಆಡುವ ಭಾಷೆ, ಆಡಳಿತ ಭಾಷೆ ಎರಡೂ ಸಮಸ್ಯೆಗಳೇ. ಕಡಿಮೆ ಜನಸಂಖ್ಯೆ ಒಂದು ಸಮಸ್ಯೆ, ಅಧಿಕಾರ ಕೇಂದ್ರದಿಂದ ದೂರ ಇರುವುದೇ ಮುಖ್ಯ ಸಮಸ್ಯೆ.

ಕುಣಬಿಗಳ ಹಿಂದುಳಿದಿರುವಿಕೆಯ ಒಂದು ಕಾರಣ ಅವರ ಸಮುದಾಯ ಆಧುನಿಕ ಶಿಕ್ಷಣ, ಉದ್ಯೋಗ ಪಡೆಯಲಾಗದೇ ಇರುವುದರಲ್ಲಿ ಇದೆ. ಜೊತೆಗೆ ಅವರು ವಾಸಿಸುವ ಜೋಯ್ಡಾ ಪ್ರದೇಶದ ಭೌಗೋಳಿಕ ಪರಿಸರವೂ ಕಾರಣವಾಗಿದೆ. ಏಕೆಂದರೆ ಉಳಿದೆಡೆಗಳಲ್ಲಿ ವಾಸಿಸುವವರಿಗಿಂತ ಜೋಯ್ಡಾದ ಜನಸಮುದಾಯ ಕೆಲವು ವಿಶೇಷ ಸಮಸ್ಯೆಗಳನ್ನು ಎದುರಿಸುತ್ತಿದೆ. ಬಸ್ ಬರದ, ಕರೆಂಟ್ ಇರದ, ಆಸ್ಪತ್ರೆ-ಮೆಡಿಕಲ್ ಶಾಪುಗಳಿರದ, ಶಾಲೆಯಿರದ, ಯಾವುದೇ ಆಧುನಿಕ ಸಂಪರ್ಕ ವ್ಯವಸ್ಥೆ ಇಲ್ಲದ ಎಷ್ಟೋ ಹಳ್ಳಿಗಳು ಜೋಯ್ಡಾದ ಕಾಡುಗಳಲ್ಲಿವೆ. ಬಹುಪಾಲು ಮಹಿಳೆಯರು ಮನೆಯಲ್ಲೇ ಹೆರುತ್ತಾರೆ. ತಾಲೂಕಾ ಆಸ್ಪತ್ರೆಯಿದೆ, ತಜ್ಞ ವೈದ್ಯರಿದ್ದಾರೆ ಆದರೆ ಅಲ್ಲಿಗೆ ತಲುಪಲು ಸಾಧ್ಯವಿರದ, ೧೦೮ ಆಂಬುಲೆನ್ಸ್ ಮುಟ್ಟಲಾಗದ ಹಾಡಿಗಳಿವೆ. ಅಪೌಷ್ಟಿಕತೆಯ ಮಕ್ಕಳಿವೆ, ಅಶಿಕ್ಷಿತ ಮಕ್ಕಳಿವೆ, ತಮ್ಮ ಪಾರಂಪರಿಕ ನಂಬಿಕೆ-ಮೂಢನಂಬಿಕೆಗಳಲ್ಲಿ ಮುಳುಗಿ ಆಧುನಿಕತೆಗೆ, ರಾಜಕೀಯಕ್ಕೆ ಕೊಂಚವೂ ತೆರೆದುಕೊಳ್ಳದವರಿದ್ದಾರೆ.

ಅವರ ಭಾಷೆ ಕುಣಬಿ ಕೊಂಕಣಿ. ಜೋಯ್ಡಾದ ೬೫% ಜನ ಆಡುವ ಭಾಷೆ ಕೊಂಕಣಿ. ಆದರೆ ಭಾಷೆ ಅವರಿಗೆ ಹೇಗೆ ಅಸ್ಮಿತೆಯಾಗಿದೆಯೋ ಹಾಗೇ ತಡೆಗೋಡೆಯೂ ಆಗಿದೆ. ಆ ಸಮಾಜದ ಮುಖಂಡರು ಸಹಾ ತಮಗೆ ‘ಕನ್ನಡ್ ಅಷ್ಟ್ ಸರೀ ಬರೂದಿಲ್ಲ, ಹ್ಞಾಂವ್ ಕೊಂಕಣಿ ಉಲಯತಾ’ ಎನ್ನುತ್ತ ಕೊಂಕಣಿಯಲ್ಲೇ ಮಾತನಾಡುತ್ತಾರೆ. ಕುಣಬಿ ಮಕ್ಕಳು ಶಾಲೆಗೆ ಹೋದರೂ ಕನ್ನಡ ಅವರಿಗೆ ಇಂಗ್ಲೀಷಿನಷ್ಟೇ ಕಾಡುತ್ತದೆ. ಅವರು ಬೆಳೆದ ಪರಿಸರ ಪೂರ್ತಿ ಕೊಂಕಣಿಮಯವಾಗಿರುವುದರಿಂದ ಕನ್ನಡ ಅವರಿಗೆ ಪರಕೀಯ ಭಾಷೆ. ಅದರ ಜೊತೆಗೆ ಇಂಗ್ಲಿಷ್, ಹಿಂದಿ ಎಂಬ ಇನ್ನಷ್ಟು ಪರಕೀಯ ಭಾಷೆ ಸೇರಿದರಂತೂ ಮುಗಿಯಿತು, ಮಕ್ಕಳನ್ನು ಅಪರಿಚಿತ ಭಾಷೆಗಳೇ ಶಾಲೆಯಿಂದ ಹೊರತಳ್ಳುತ್ತವೆ.


೪೬ ಸಾವಿರ ಜನಸಂಖ್ಯೆಯ ಜೋಯ್ಡಾ ತಾಲೂಕಿನಲ್ಲಿ ೧೯ ಸಾವಿರ ಜನ ಕುಣಬಿಗಳಿದ್ದಾರೆ. ೧೯೬೦ರ ತನಕ ಕರ್ನಾಟಕದಲ್ಲಿ ಪ.ಪಂಗಡಕ್ಕೆ ಸೇರಿದ್ದ ಈ ಸಮುದಾಯ ಪ. ಪಂಗಡ ಪುನರ್‌ವಿಂಗಡಣೆಯಾದಾಗ ಹಿಂದುಳಿದ ಜಾತಿಯಾಗಿ ಗುರುತಿಸಲ್ಪಟ್ಟಿತು. ದಕ್ಷಿಣ ಭಾರತದ ಜನಸಮುದಾಯಗಳ ಅಧ್ಯಯನ ನಡೆಸಿ ೧೯೦೪ರಲ್ಲಿ ಪುಸ್ತಕ ಪ್ರಕಟಿಸಿದ ಎಡ್ಗರ್ ಥರ್ಸ್ಟನ್ ಈ ಸಮುದಾಯ ಹಲವು ಹೆಸರುಗಳಿಂದ ಕರೆಯಲ್ಪಡುವುದನ್ನು ಗುರುತಿಸಿದ್ದ. ಕುಣಬಿ, ಕುಮ್ರಿ, ಕುನಪಿ, ಕುಣ್ಬಿ, ಕುಡುಬಿ, ಕುಡುಂಬಿ, ಮರಾಠ ಕುಣಬಿ, ಕುಮ್ರಿ ಮರಾಠಿ ಎಂದೆಲ್ಲ ವಿವಿಧ ಹೆಸರುಗಳಿಂದ ಕರೆಯಲ್ಪಡುವ ಸಮುದಾಯ ಒಂದೇ ಎಂದು ಆತ ಗುರುತಿಸಿದ್ದ. ನೆರೆಯ ಗೋವಾ ರಾಜ್ಯದಲ್ಲಿ ಕುಣಬಿಗಳು ೨೦೦೨ರಿಂದ ಪ.ಪಂಗಡಕ್ಕೆ ಸೇರಿಸಲ್ಪಟ್ಟಿದ್ದಾರೆ. ಕೇರಳದಲ್ಲೂ ಅವರು ಪ. ಪಂಗಡಕ್ಕೆ ಸೇರಿದ್ದಾರೆ. ಮಹಾರಾಷ್ಟ್ರದಲ್ಲಿ ಬುಡಕಟ್ಟು ಲಕ್ಷಣಗಳನ್ನು ಕಳೆದುಕೊಂಡು ಅದು ಒಂದು ಪ್ರಭಾವಿ ಹಿಂದುಳಿದ ಜಾತಿಯಾಗಿದೆ. ಆದರೆ ಕರ್ನಾಟಕದಲ್ಲಿ ಮಾತ್ರ ಆಳುವವರ ನಿರಂತರ ಅವಗಣನೆಗೆ ಒಳಗಾಗಿ ಸಮುದಾಯವು ಪ.ಪಂಗಡದಲ್ಲೂ ಗುರುತಿಸಲ್ಪಡಲಿಲ್ಲ, ಸಿಗಬೇಕಾದ ಹಕ್ಕು-ಸವಲತ್ತುಗಳೂ ತಲುಪಲಿಲ್ಲ.

ಜೋಯ್ಡಾ ದೊಡ್ಡ ತಾಲೂಕು. ೧೫ ಗ್ರಾಮ ಪಂಚಾಯ್ತಿಗಳಿದ್ದು ಕಾಡು ಜಾಸ್ತಿ ಹಾಗೂ ಜನ ಕಡಿಮೆ ಇರುವ ಕಾರಣ ಪಂಚಾಯ್ತಿಗಳು ಭೌಗೋಳಿಕವಾಗಿ ಅತಿ ದೊಡ್ಡದಿವೆ. ಕಾಳಿ, ಕದ್ರಾ, ಕೊಡಸಳ್ಳಿ ಜಲವಿದ್ಯುತ್ ಯೋಜನೆಗಳು ಹಾಗೂ ಮುಳುಗಡೆಯ ಹಿನ್ನೀರು ಕೆಲವು ಪಂಚಾಯ್ತಿ ಕೇಂದ್ರ ತಲುಪಲು ಮೈಲುಗಟ್ಟಲೆ ಸುತ್ತಿಬಳಸುವಂತೆ ಮಾಡಿವೆ. ಕ್ಷೇತ್ರ ಪುನರ್‌ವಿಂಗಡಣೆ ಎಂದು ಶಾಸಕರ, ಸಂಸದರ ಕ್ಷೇತ್ರ ಪುನರ್ ವಿಂಗಡಣೆಯಾದಂತೆ ಗ್ರಾಮ ಪಂಚಾಯ್ತಿಗಳ ಕ್ಷೇತ್ರ ಪುನರ್‌ವಿಂಗಡಣೆ ಆಡಳಿತಾತ್ಮಕ ಅನುಕೂಲಕ್ಕಾಗಿ ಆಗಬೇಕು ಎನ್ನುವುದು ಅಲ್ಲಿನವರ ವಾದ.







ಜೊತೆಗೆ ಕೆಲವು ಅಭಿವೃದ್ಧಿ ಪರಿಕರಗಳು ಅಲ್ಲಿಯ ಯಾವ ಪ್ರದೇಶಕ್ಕೂ ಹೋಗಲು ಸಾಧ್ಯವಿಲ್ಲ. ಪರಿಸರ, ಪ್ರಾಣಿ, ಪಕ್ಷಿ, ಪ್ರಾದೇಶಿಕ ರಕ್ಷಣೆಗಾಗಿ ಇರುವ ಸರಿಸುಮಾರು ೧೭ ಕಾಯ್ದೆಗಳು ಸ್ಥಳೀಯರಿಗೆ ಮುಳುವಾಗಿವೆ. ಆನೆ ಯೋಜನೆ, ಹುಲಿ ಯೋಜನೆ, ಹಾರ‍್ನ್‌ಬಿಲ್ ಪಕ್ಷಿ ಯೋಜನೆ, ಪಶ್ಚಿಮ ಘಟ್ಟ ಉಳಿವಿಗಾಗಿ ಬಂದ ಯೋಜನೆ- ಕಾಯ್ದೆಗಳು, ಜಂಟಿ ಅರಣ್ಯ ಯೋಜನೆ, ವನ್ಯಜೀವಿ ಸಂರಕ್ಷಣಾ ಕಾಯ್ದೆ - ಇಂಥ ಹಲವು ಯೋಜನೆ/ಕಾಯ್ದೆಗಳು ಜನರನ್ನು ಒಕ್ಕಲೆಬ್ಬಿಸುತ್ತ, ಜೋಯ್ಡಾವನ್ನು ಕೆಲಕಾಲದಲ್ಲೇ ನಿರ್ವಸಿತ ಪ್ರದೇಶವನ್ನಾಗಿ ಮಾಡುತ್ತವೆ ಎನ್ನುವುದು ಕೆಲವರ ಅಭಿಪ್ರಾಯ.

ತಮ್ಮ ಸಮಸ್ಯೆ ಕುರಿತು ಮಾತನಾಡುವಾಗ ಎಲ್ಲರಿಂದ ತಮ್ಮನ್ನು ಪ.ಪಂಗಡಕ್ಕೆ ಸೇರಿಸಿಲ್ಲವೆಂಬ ಒಂದೇ ಕೊರಗು ಕೇಳಿಬರುತ್ತದೆ. ಪ.ಪಂಗಡಕ್ಕೆ ಸೇರಿದರೆ ಅವರಿಗೆ ಉದ್ಯೋಗ, ಶಿಕ್ಷಣದ ಮೀಸಲಾತಿ; ರಾಜಕೀಯ ಅಧಿಕಾರದಲ್ಲಿ ಮೀಸಲಾತಿ; ಅರಣ್ಯ ಉತ್ಪನ್ನ ಬಳಕೆಯ ಹಕ್ಕು ದೊರೆಯುತ್ತದೆ. ವಿದ್ಯಾರ್ಥಿ ವೇತನ ಸಿಕ್ಕು ಕೆಲ ಮಕ್ಕಳಾದರೂ ಕಲಿಯಲು ಸಾಧ್ಯವಾಗುತ್ತದೆ. ನಿಜ, ಎಲ್ಲ ಅರ್ಹತೆಯಿದ್ದೂ ಮೀಸಲಾತಿ ಮತ್ತಿತರ ಸವಲತ್ತು ಸಿಗದಿರುವುದು ಅನ್ಯಾಯವೇ.

ಈಗ ಕುಣಬಿಗಳು ತಮಗಾದ ಅನ್ಯಾಯವನ್ನು ಗ್ರಹಿಸಿದ್ದಾರೆ. ಕುಣಬಿ ಜನರ ಮತ್ತು ಮುಖಂಡರ ಹೋರಾಟ ಕುಣಬಿಗಳನ್ನು ಪ.ಪಂಗಡಕ್ಕೆ ಸೇರಿಸುವುದನ್ನೇ ಕೇಂದ್ರವಾಗಿರಿಸಿಕೊಂಡಿದೆ. ಆದರೆ ಪ.ಪಂಗಡ ಆಯಿತು ಎಂದ ಕೂಡಲೇ ಅವರ ಪಾಲಿನ ಸ್ವರ್ಗ ಮೇಲಿನಿಂದ ಇಳಿಯುವುದಿಲ್ಲ. ಈಗ ಭಾರತದ ೮.೬% ಜನ ಸಮುದಾಯ; ೭೪೪ ಆದಿವಾಸಿ ಕುಲಗಳು ಪರಿಶಿಷ್ಟ ಪಂಗಡ ಎಂದು ಗುರುತಿಸಲ್ಪಟ್ಟಿವೆ. ಆದರೆ ಬುಡಕಟ್ಟು ಸಮುದಾಯದ ಸಮಸ್ಯೆಗಳು ದಿನದಿಂದ ದಿನಕ್ಕೆ ಉಲ್ಬಣಿಸುತ್ತಿವೆ.


ಕರ್ನಾಟಕದ ೫೨ ಗಡಿ ತಾಲೂಕುಗಳಲ್ಲಿ ಅತ್ಯಂತ ಹಿಂದುಳಿದ ತಾಲೂಕು ಜೋಯ್ಡಾ. ಪ್ರಾದೇಶಿಕ ಅಸಮತೋಲನ ನಿವಾರಣೆಗೆ ನೇಮಕವಾದ ನಂಜುಂಡಪ್ಪ ಸಮಿತಿಯ ಸಲಹೆಯಂತೆ ಈ ತಾಲೂಕಿಗೆ ವಿಶೇಷ ಅನುದಾನ ಬರುತ್ತದೆ. ಜೊತೆಗೆ ಗಡಿನಾಡು ಅಭಿವೃದ್ಧಿ ಪ್ರಾಧಿಕಾರದ ಅನುದಾನ, ಜಿಲ್ಲಾ ಪಂಚಾಯ್ತಿಯ ವಾರ್ಷಿಕ ತಲಾನುದಾನವೂ ಬರುತ್ತದೆ. ೨೦೦೬ ಅಕ್ಟೋಬರಿನಲ್ಲಿ ಉತ್ತರ ಕನ್ನಡ ಜಿಲ್ಲಾ ಪಂಚಾಯ್ತಿ ಒಂದು ವಿಶೇಷ ಕ್ರಿಯಾಯೋಜನೆಯನ್ನು ಈ ತಾಲೂಕಿಗಾಗಿಯೇ ರೂಪಿಸಿತು. ಉಳಿದ ಜಿಲ್ಲಾ ಪಂಚಾಯ್ತಿ ಸದಸ್ಯರು ತಮ್ಮ ಅನುದಾನದಲ್ಲಿ ೫೦ ಸಾವಿರ ಮೊತ್ತವನ್ನು ಜೋಯ್ಡಾಗೆ ಕೊಟ್ಟರು. ವಾರ್ಷಿಕವಾಗಿ ಬಂದ ಇಷ್ಟೆಲ್ಲ ಹಣದಿಂದ ಯಾವ ಅಭಿವೃದ್ಧಿಯಾಯಿತು? ಎಂದು ನೋಡಿದರೆ ಕೆಲ ರಸ್ತೆಗಳಷ್ಟೇ ಕಣ್ಣಿಗೆ ಬೀಳುತ್ತವೆ.

ಜೋಯ್ಡಾದ ಕುಣಬಿಗಳು ಕೊಂಕಣ-ಗೋವಾದೊಂದಿಗೆ ನಿಕಟ ಸಂಬಂಧ ಹೊಂದಿದ್ದಾರೆ. ಭಾವನಾತ್ಮಕವಾಗಿ, ಭೌಗೋಳಿಕವಾಗಿ, ಭಾಷಿಕವಾಗಿ ಅವರಿಗೆ ಕರ್ನಾಟಕ-ಬೆಂಗಳೂರಿಗಿಂತ ಗೋವಾ-ಪಣಜಿ ತುಂಬ ಹತ್ತಿರ. ಜೋಯ್ಡಾದ ಕೆಲ ಊರುಗಳ ಹೆಸರು ನೋಡಿ: ದುಧಗಾಳಿ, ಕಾಟೋಳಿ, ಧೋಕ್ರಪಾ, ಲಾಂಡೆ, ಪಾಟ್ನಿ, ಬರಪಾಲಿ, ಬಾಡಪೋಲಿ, ಕಾಟೇಲಾ, ಗುಂಡಾಳಿ, ನಿಗುಂಡಿ.. ವಲಸೆ ಬಂದ ಸಮುದಾಯಗಳ ಕುಲದೇವತೆಗಳು ಗೋಮಾಂತಕದಲ್ಲಿದ್ದು ಜಾತ್ರೆ-ಮಹೋತ್ಸವಗಳ ಕಾಲದಲ್ಲಿ ಜನರನ್ನು ಸೆಳೆಯುತ್ತಾರೆ. ಆ ಸಮುದಾಯಗಳು ಇಂದಿಗೂ ಹಳೆಯ ಸರ್‌ನೇಮ್‌ಗಳನ್ನು ಹಾಗೇ ಉಳಿಸಿಕೊಂಡಿದ್ದಾರೆ.

ಕುಣಬಿ ಮುಖಂಡರಲ್ಲೊಬ್ಬರಾದ ದಯಾನಂದ ಗಾವುಡಾ ಜೊಯ್ಡಾ ಮತ್ತು ಕಾರವಾರವನ್ನು ಗೋವಾಗೆ ಸೇರಿಸಿ ಎಂಬ ಹೋರಾಟ ಕಟ್ಟುವುದಾಗಿ ಒಮ್ಮೆ ಧಮಕಿ ಹಾಕಿದ್ದರು. ಸ್ಥಳೀಯ ಜನಪ್ರತಿನಿಧಿಗಳಿಗೆ ಕುಣಬಿಗಳನ್ನು ಪ.ಪಂಗಡಕ್ಕೆ ಸೇರಿಸುವ ಬದ್ಧತೆ ಎಷ್ಟು ಕಡಿಮೆಯಿದೆ ಎಂಬ ಸತ್ಯ ಅರಿವಾಗಿ ಈ ಹೇಳಿಕೆ ಅವರಿಂದ ಬಂದಿತ್ತು. ಆದರೆ ಈಗಾಗಲೇ ಗೌಳಿ-ಸಿದ್ಧಿ ಜನಾಂಗದವರು ಪ.ಪಂಗಡವಾಗಿರುವ ಪ್ರದೇಶದಲ್ಲಿ ಕುಣಬಿಗಳೂ ಪ.ಪಂಗಡಕ್ಕೆ ಸೇರಿದರೆ ಆಗ ಅದು ಮೀಸಲು ಕ್ಷೇತ್ರವಾಗುತ್ತದೆ. ತಲೆತಲಾಂತರದಿಂದ ಅಧಿಕಾರ ಅನುಭವಿಸುತ್ತ ಬಂದವರು ಸ್ಥಾನ ಕಳೆದುಕೊಳ್ಳುತ್ತಾರೆ. ಉತ್ತರ ಕನ್ನಡದ ಇನ್ನೊಂದು ಬುಡಕಟ್ಟು ಹಾಲಕ್ಕಿ ಸಮುದಾಯವೂ ಸಹಾ ಎಷ್ಟೋ ಕಾಲದಿಂದ ಪ್ರಯತ್ನಿಸಿದರೂ ಪ.ಪಂಗಡಕ್ಕೆ ಸೇರಿಲ್ಲ. ಅವರೂ ಪ.ಪಂಗಡವೇ ಆದಲ್ಲಿ ಇಡೀ ಉ. ಕನ್ನಡ ಮೀಸಲು ಲೋಕಸಭಾ ಕ್ಷೇತ್ರವಾಗಬಹುದು. ಇದು ಜನನಾಯಕರಿಗೆ ಅಪಥ್ಯವಾದ ವಿಚಾರ. ರಾಜಕಾರಣದ ಇಂಥ ಲೆಕ್ಕಾಚಾರಗಳು ಕುಣಬಿ ಮತ್ತು ಹಾಲಕ್ಕಿಗಳಿಬ್ಬರಿಗೂ ಮುಳುವಾಗಿವೆ.

ಇಲ್ಲಿ ಇನ್ನೂ ಒಂದು ಸೂಕ್ಷ್ಮ ವಿಚಾರ ಕುರಿತು ಬರೆಯದಿದ್ದರೆ ಚರ್ಚೆ ಅಪೂರ್ಣವಾಗುತ್ತದೆ.

ಕುಣಬಿಗಳಂತೇ ಕೊಂಕಣಿ ಮಾತನಾಡುವ ಹಲವು ಸಮುದಾಯಗಳು ಉತ್ತರ ಕನ್ನಡಲ್ಲಿವೆ. ಅವರೆಲ್ಲ ಇಲ್ಲಿಗೆ ವಲಸೆ ಬಂದಿದ್ದು ಒಂದು ಚಾರಿತ್ರಿಕ ಅನಿವಾರ್ಯತೆಗಾಗಿ. ೧೫೧೦ರಲ್ಲಿ ಪೋರ್ಚುಗಲ್ ಜನರಲ್ ಆಲ್ಫಾನ್ಸೋ ಆಲ್ಬುಕರ್ಕ್ ಬಿಜಾಪುರದ ಆದಿಲ್‌ಶಾಹಿಗಳಿಂದ ಗೋವಾವನ್ನು ವಶಪಡಿಸಿಕೊಂಡ. ಆಗ ಪೋರ್ಚುಗಲ್‌ನ ಜಾನ್ - ೩ ಆಡಳಿತ ಶುರುವಾಯಿತು. ೧೫೪೫ರಲ್ಲಿ ಸಂತ ಫ್ರಾನ್ಸಿಸ್ ಝೇವಿಯರ್ ಪೋರ್ಚುಗಲ್ ದೊರೆಗೆ ಬರೆದ ಪತ್ರದಲ್ಲಿ ಗೋವಾದಲ್ಲಿ ಒಂದು ‘ತನಿಖೆ’ ನಡೆಸುವ ಅವಶ್ಯಕತೆ ಇದೆಯೆಂದು ತಿಳಿಸಿದಾಗ ಕುಖ್ಯಾತ ‘ಗೋವಾ ಇನ್‌ಕ್ವಿಸಿಷನ್’ ಜಾರಿಗೆ ಬಂತು. ಅದಾದನಂತರ ಮದುವೆ ಆಚರಣೆಯೂ ಸೇರಿದಂತೆ ೪೨ ಹಿಂದೂ ಆಚರಣೆಗಳು ನಿಷೇಧಿಸಲ್ಪಟ್ಟವು, ತಪ್ಪಿದಲ್ಲಿ ಮರಣದಂಡನೆಯವರೆಗೆ ವಿವಿಧ ಶಿಕ್ಷೆಗಳು ಜಾರಿಯಾದವು.

ಕೊಂಕಣಿ ಭಾಷೆ ಆಡುವಂತಿಲ್ಲ. ಕೊಂಕಣಿ ಅಥವಾ ಇನ್ನಾವುದೇ ಭಾಷೆಯಲ್ಲಿ ಹಿಂದೂ ಧಾರ್ಮಿಕ ಸಂಕೇತಗಳನ್ನು ವ್ಯಕ್ತಪಡಿಸುವಂತಿಲ್ಲ. ಪೋರ್ಚುಗಲ್ ಹೊರತು ಇತರ ಭಾಷೆಗಳ ಪುಸ್ತಕಗಳನ್ನು ಸುಡಲಾಯಿತು. ಮೊದಲ ೧೦೦ ವರ್ಷಗಳಲ್ಲಿ ಗೋವನ್ ಇನ್‌ಕ್ವಿಸಿಷನ್ ೫೭ ಜನರನ್ನು ಜೀವಂತ ಸುಟ್ಟಿತು. ೬೪ ಜನರನ್ನು ಸತ್ತಮೇಲೆ ಸುಡಲಾಯಿತು. ೪೦೪೬ ಜನರನ್ನು ವಿವಿಧ ಶಿಕ್ಷೆಗೆ ಗುರಿಪಡಿಸಲಾಯಿತು. ಈ ಕಾಲದಲ್ಲೇ ಕುಣಬಿಗಳು, ಗೌಡ ಸಾರಸ್ವತ ಬ್ರಾಹ್ಮಣರು, ಚಿನ್ನದ ಕೆಲಸ ಮಾಡುವ ದೈವಜ್ಞ ಬ್ರಾಹ್ಮಣರು, ವೈಶ್ಯವಾಣಿ ಹಾಗೂ ಇನ್ನೂ ಕೆಲ ಸಮುದಾಯಗಳು ತಮ್ಮ ಧಾರ್ಮಿಕ ಅಸ್ಮಿತೆಯನ್ನು ಬಿಟ್ಟುಕೊಡಲಾರದೇ ಸಮೂಹವಾಗಿ ಗೋವಾದಿಂದ ವಲಸೆ ಹೊರಟವು. ಅವು ಸಮುದ್ರ ಮಾರ್ಗವಾಗಿ ಚಲಿಸಿ ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳಿಗಲ್ಲದೆ ಕೇರಳಕ್ಕೂ ವಲಸೆ ಹೋದರು. ಕುಡುಂಬಿ ಸಮುದಾಯ ಕೇರಳದ ಹಿನ್ನೀರಿನ ತಗ್ಗು ಪ್ರದೇಶಗಳಲ್ಲಿ ವಿಶೇಷವಾಗಿ ನೆಲೆನಿಂತು ಭತ್ತ ಬೆಳೆವ ಸಮುದಾಯವಾಯಿತು. ಉಳಿದವರು ಮೂಲನೆಲೆಯಲ್ಲಿ ಕೈಗೊಂಡ ಉದ್ಯೋಗವನ್ನೇ ಕೈಗೊಂಡರು. ಹೀಗಾಗಿ ಕರಾವಳಿಯುದ್ದಕ್ಕೂ ಮೀನುಹಿಡಿವ, ಮರಗೆಲಸ ಮಾಡುವ, ವ್ಯಾಪಾರವಹಿವಾಟು ನಡೆಸುವ, ಚಿನ್ನದ ಕೆಲಸ ಮಾಡುವ, ಕೃಷಿಕರಾದ ಕೊಂಕಣಿ ಮಾತನಾಡುವ ಸಮುದಾಯಗಳು ಕಾಣಸಿಗುತ್ತವೆ. ವಲಸೆ ಬಂದು ನಾಲ್ಕೈದು ಶತಮಾನ ಕಳೆದಮೇಲೂ ಅವರ ಕುಲದೇವರುಗಳು, ಆಚರಣೆಗಳು ಮೂಲನೆಲೆಯ ಸೊಗಡನ್ನು ಉಳಿಸಿಕೊಂಡಿವೆ. ಜಾತ್ರೆ, ಹಬ್ಬಹರಕೆಗಳಿಗಾಗಿ ಅವರು ಗೋವಾಕ್ಕೆ ಹೋಗಿಬರುತ್ತ ಇರುತ್ತಾರೆ.

ಇನ್‌ಕ್ವಿಸಿಷನ್, ಮತಾಂತರ, ವಲಸೆ ಸೃಷ್ಟಿಸಿದ ಅಭದ್ರತೆಯನ್ನು ಈಗ ಕೋಮುವಾದಿ ರಾಜಕಾರಣ ತನ್ನ ದಾಳಕ್ಕೆ ಬಳಸಿಕೊಳ್ಳುವ ಪ್ರಯತ್ನದಲ್ಲಿರುವುದು ಕಂಡುಬರುತ್ತದೆ. ವಲಸೆ ಬಂದವರಲ್ಲಿ ಕೆಲವು ಸಮುದಾಯಗಳು ಪ್ರಭಾವಿಯಾಗಿದ್ದು ಹಳೆಯ ನೆನಪುಗಳನ್ನು ಕಾದಿಟ್ಟುಕೊಂಡಿವೆ. ಮತಾಂತರ ತಪ್ಪಿಸಿಕೊಳ್ಳುವ ಸಲುವಾಗಿ ನಡೆದ ವಲಸೆ ಹಾಗೂ ಕರಾವಳಿಯ ಅತಿ ಧಾರ್ಮಿಕತೆ ಇವೆರೆಡೂ ಸೇರಿ ಕರಾವಳಿಯನ್ನು ಕೋಮುವಾದದ ನೆಲೆಯಾಗಿಸುತ್ತಿರುವಾಗ ಅಂಚಿನ ಸಮುದಾಯಗಳು ಆಮಿಷಕ್ಕೊಳಗಾಗದೇ ಇರುವುದು ದೊಡ್ಡ ಸವಾಲಾಗಿದೆ. ಕುಣಬಿ ಮನೆಮನೆಗಳಲ್ಲಿ ಸಂಘಪರಿವಾರದ ವನವಾಸಿ ಸಂಘಟನೆಯು ಹಿಂದೂ ದೇವಾನುದೇವತೆಗಳ ಫೋಟೋ, ಭಾರತ ಮಾತೆಯ ಸ್ತುತಿಯ ಸಾಲುಗಳಿರುವಂತೆ ನೋಡಿಕೊಂಡಿದೆ. ತಾವು ಆ ಕೆಲಸ ಮಾಡದಿದ್ದರೆ ಕ್ರೈಸ್ತರು ಬೈಬಲ್ ತಂದಿಡುತ್ತಾರೆ ಎಂದು ಅವರು ನೇರಾನೇರ ಆರೋಪಿಸುತ್ತಾರೆ.

ಖಾಸಗೀಕರಣ-ಜಾಗತೀಕರಣದ ಸಂದರ್ಭದಲ್ಲಿ ಅತಿ ಹೆಚ್ಚು ಬಾಧಿತರಾದವರು ಆದಿವಾಸಿಗಳು. ಅವರ ಒಕ್ಕಲೆಬ್ಬಿಸುವುದು ದಿನನಿತ್ಯದ ಸಂಗತಿಯಾಗಿದೆ. ಪ್ರಪಂಚದ ಯಾವ್ಯಾವುದೋ ಮೂಲೆಯ ಮಾಲೀಕರ ಕಾರ್ಖಾನೆಗಳು ಅವರ ಕಾಡನ್ನೇ ಗುಡಿಸಿ, ಅಂಗಳವಾಗಿಸಿ, ಅಲ್ಲಿ ತಳವೂರುತ್ತಿವೆ. ಮಾದೇವ ವೇಳೀಪ ಎಂಬ ಹಗಲುರಾತ್ರಿಯೆನ್ನದೆ ಕುಳಿತು ರಾಮಾಯಣ ಮಹಾಭಾರತ ಹಾಡಬಲ್ಲ ಕುಣಬಿ ಹಿರಿಯರು, ‘ಬಂದಬಂದವರಿಗೆಲ್ಲ ಕೈ ಮುಗ್ದು ಕೇಳೀದೇವು, ಆದ್ರೂ ಏನೂ ಆಗಲಿಲ್ಲ’ ಎಂದರು. ಈಗ ಕೈಮುಗಿದು ಕೇಳುವ ಕಾಲ ಹೋಗಿದೆ.

ವಿವಿಧ ಪಕ್ಷ-ಸಂಘಟನೆ-ಎನ್‌ಜಿಒಗಳಲ್ಲಿ ಬುಡಕಟ್ಟು ಹಿತಾಸಕ್ತಿ ಮತ್ತು ಒಗ್ಗಟ್ಟು ಕಳೆದುಹೋಗದಂತೆ ನೋಡಿಕೊಳ್ಳಬೇಕು. ಅವರಿಗೆ ವಂಚಿಸಲಾದ ಅಧಿಕಾರ, ಸಂಪನ್ಮೂಲ, ಹಕ್ಕುಗಳನ್ನು ಪಡೆಯಬೇಕು. ಸ್ಥಳೀಯರಿಗೆ ಅವರ ಜನಸಂಖ್ಯೆಗನುಗುಣವಾಗಿ ಉದ್ಯೋಗ, ಶಿಕ್ಷಣದಲ್ಲಿ ಸೂಕ್ತ ಪ್ರಾತಿನಿಧ್ಯ ಸಿಗುವಂತೆ ಮಾಡಬೇಕು. ಕೃಷಿ ಮತ್ತು ಅರಣ್ಯ ಉತ್ಪನ್ನಗಳ ಹೊರತಾಗಿ ಅವರ ಆರ್ಥಿಕ ಚಟುವಟಿಕೆ ವಿಸ್ತರಿಸುವಂತೆ ಮಾಡಬೇಕು. ಉಳಿದ ಸಮಾಜಕ್ಕೂ ಅವರ ನಡುವೆಯೂ ಇರುವ ಸಾಮಾಜಿಕ, ಆರ್ಥಿಕ ಅಂತರ ಕಡಿಮೆಯಾಗುವಂತಹ ಕ್ರಮಗಳನ್ನು ತೆಗೆದುಕೊಳ್ಳಬೇಕು. ಕೊಂಕಣಿ ಅಸ್ಮಿತೆ ಉಳಿಸಿಕೊಳ್ಳುತ್ತಲೇ ಬದುಕಿಗೆ ತೊಡಕಾಗದಂತೆ ಮುಖ್ಯವಾಹಿನಿಯ ಭಾಷೆಯನ್ನು ಬಳಸಲು ಕಲಿಯಬೇಕು. ಏಕೆಂದರೆ ಫಾರಂ ತುಂಬಲು ಬರದೆ ಆಶ್ರಯ ಮನೆ, ಭೂಮಿಯ ಪಟ್ಟಾ, ಸೋಲಾರ್-ಪಂಪ್‌ಸೆಟ್ ಯಾವುದೂ ಬಾರದು. ಎಂದೇ ಉಳಿದ ಸಮಾಜದೊಂದಿಗೆ ಭಾಷೆಯ ಮೂಲಕ ಗುರುತಿಸಿಕೊಂಡು ಜೊತೆಜೊತೆ ನಡೆಯಲು ಸಾಧ್ಯವಾಗಬೇಕು.

ಹೀಗೆ ಸಮುದಾಯ ಕೇಂದ್ರಿತ ಯೋಜನೆಗಳನ್ನು ರೂಪಿಸಿ ಜಾರಿಮಾಡಲು ಇಡೀ ಸಮಾಜವು ಶ್ರಮಿಸಿದರೆ ಮಾತ್ರ ಸಮುದಾಯವೊಂದರ ನಿಜವಾದ ‘ಅಭಿವೃದ್ಧಿ’ ಸಾಧ್ಯವಾದೀತು.

(ಕುಣಬಿ ಸಮುದಾಯದೊಂದಿಗೆ ಜೋಯ್ಡಾದಲ್ಲಿ ‘ಕಾವ್ಯಬೋಧಿ’ಯ ಅಡಿಯಲ್ಲಿ ೨೭-೦೪-೨೦೧೪ರಂದು ಸಂವಾದ ಕಾರ್ಯಕ್ರಮ ನಡೆಯಿತು. ಅಲ್ಲಿ ಸಮುದಾಯದ ಮುಖ್ಯ ಸಮಸ್ಯೆಗಳು; ಕಾರಣಗಳು; ಉಳಿದವರ ಸಮಸ್ಯೆಗಳಿಗಿಂತ ಅವರ ಸಮಸ್ಯೆಗಳು ಹೇಗೆ ಭಿನ್ನ? ರಾಜಕಾರಣದೊಂದಿಗಿನ ಸಂಬಂಧ; ಸಮುದಾಯದ ಸಂಘಟನೆ ಮತ್ತು ಅದಕ್ಕಿರುವ ಜನ ಬೆಂಬಲ; ಅವರ ದೃಷ್ಟಿಯಲ್ಲಿ ಪರಿಹಾರದ ಸ್ವರೂಪಗಳು ಮುಂತಾದ ವಿಷಯಗಳ ಕುರಿತು ಕುಣಬಿ ಸಮುದಾಯದ ಮಾದೇವ ವೇಳೀಪ, ರತ್ನಾಯ ವೇಳೀಪ, ದಯಾನಂದ ಗಾವುಡಾ, ಪ್ರೇಮಾನಂದ ವೇಳಿಪ ಮುಂತಾದವರು ತಮ್ಮ ಅನಿಸಿಕೆ ಹಂಚಿಕೊಂಡರು. ಜೊತೆಗೆ ಸ್ಥಳೀಯ ಸಮಸ್ಯೆ-ವಿಚಾರಗಳನ್ನು ಬಲ್ಲ ಯಮುನಾ ಗಾಂವ್ಕರ್, ವಿಠ್ಠಲ ಭಂಡಾರಿ, ಬಿ. ಎನ್. ವಾಸರೆ, ವಿಷ್ಣು ನಾಯ್ಕ, ಖತೀಬ್ ಸರ್, ಬಸವರಾಜ ಹೂಗಾರ, ಕೃಷ್ಣ ನಾಯ್ಕ ಹಿಚ್ಕಡ ಅವರೂ ತಮ್ಮ ಅಭಿಪ್ರಾಯ ಹಂಚಿಕೊಂಡರು. ಅವನ್ನೆಲ್ಲ ಈ ಲೇಖನದಲ್ಲಿ ಬಳಸಿಕೊಳ್ಳಲಾಗಿದೆ.)



Tuesday, 1 July 2014

ನೆನೆವುದೆನ್ನ ಮನ - ವೈದ್ಯರ ದಿನಾಚರಣೆ



     ಡಾ. ಬಿಧಾನ್ ಚಂದ್ರ ರಾಯ್ (ಬಿ.ಸಿ.ರಾಯ್) ಅವರ ನೆನಪಿನಲ್ಲಿ ಪ್ರತಿ ವರ್ಷ ಜುಲೈ ಒಂದನ್ನು ವೈದ್ಯರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ. ಭಾರತದ ಕಂಡ ಮೇಧಾವಿ ವೈದ್ಯ, ರಾಜಕಾರಣಿ, ಸ್ವಾತಂತ್ರ ಹೋರಾಟಗಾರ, ಉತ್ತಮ ಆಡಳಿತಗಾರರಾದ ಬಿ.ಸಿ ರಾಯ್ ಅವರು ೧೮೮೨ರ ಜುಲೈ ಒಂದರಂದು ಬಿಹಾರದ ಪಾಟ್ನಾದಲ್ಲಿ ಹುಟ್ಟಿದರು. ನಂತರ ಪಾಟ್ನಾ ಹಾಗೂ ಕೋಲ್ಕತಾಗಳಲ್ಲಿ ವಿದ್ಯಾಭ್ಯಾಸ ಮುಂದುವರಿಸಿದ ಅವರು ಕೋಲ್ಕತಾ ಮೆಡಿಕಲ್ ಕಾಲೇಜಿನಲ್ಲಿ ವೈದ್ಯಕೀಯ ಪದವಿ ಪೂರೈಸಿ ಕೆಲಸ ಮಾಡತೊಡಗಿದರು. ನಂತರ ಉನ್ನತ ವಿದ್ಯಾಭ್ಯಾಸಕ್ಕಾಗಿ ಲಂಡನ್ನಿಗೆ ತೆರಳುವ ಅವರು, ಛಲ ಬಿಡದೇ ೩೦ ಬಾರಿ ಅರ್ಜಿ ಹಾಕಿದ ಮೇಲೇ ವಿದ್ಯಾಭ್ಯಾಸಕ್ಕಾಗಿ ಸೀಟು ದೊರಕಿಸಿಕೊಳ್ಳುತ್ತಾರೆ. ಅವಕಾಶ ಸಿಕ್ಕಿದ್ದೇ ಕಠಿಣ ತಪಸ್ಸಿನ ಹಾಗೆ ಓದಿ ಕೇವಲ ೨ ವರ್ಷ ಮೂರು ತಿಂಗಳಲ್ಲಿ ಈಖಅS ಹಾಗೂ  ಒಖಅP ಪದವಿಗಳನ್ನು ಪೂರೈಸುತ್ತಾರೆ. ಇಷ್ಟು ಕಡಿಮೆ ಅವಧಿಯಲ್ಲಿ, ಹಾಗೂ ಮೆಡಿಸಿನ್ ಹಾಗೂ ಸರ್ಜರಿಗಳೆಂಬ ಎರಡು ಭಿನ್ನ ಧೃವಗಳಾದ ವೈದ್ಯಕೀಯ ಸ್ನಾತಕೋತ್ತರ ಪದವಿಗಳನ್ನು ಪೂರೈಸಿದ ಮೊದಲಿಗರು ಅವರು. ನಂತರ ಕೋಲ್ಕತಾಗೆ ಹಿಂದಿರುಗಿ ಮೆಡಿಕಲ್ ಕಾಲೇಜಿನಲ್ಲಿ ಅಧ್ಯಾಪಕರಾಗಿ ಸೇರಿಕೊಳ್ಳುತ್ತಾರೆ.

     ಕೆಲವೇ ವರ್ಷಗಳಲ್ಲಿ ಉನ್ನತ ಹುದ್ದೆಗೇರಿ ಕೋಲ್ಕತಾ ವಿಶ್ವವಿದ್ಯಾಲಯದ ಉಪಕುಲಪತಿ ಆಗುವ ಅವರು ಹತ್ತಾರು ಆಧುನಿಕ ವೈದ್ಯಕೀಯ ಪದ್ಧತಿಯ ಆಸ್ಪತ್ರೆಗಳನ್ನೂ, ಮೆಡಿಕಲ್ ಕಾಲೇಜುಗಳನ್ನೂ ತೆರೆಯುತ್ತಾರೆ. ಬಂಗಾಳವೆಂದರೆ ಸಾಂಕ್ರಾಮಿಕ ಕಾಯಿಲೆಗಳ ತವರೆಂದೇ ಕುಖ್ಯಾತವಾಗಿ ಬ್ರಿಟಿಷ್ ಆಫೀಸರುಗಳು ಪೋಸ್ಟಿಂಗ್ ಮೇಲೆ ಕೋಲ್ಕತಾಗೆ ಹೋಗಲು ಹೆದರುತ್ತಿದ್ದ ಕಾಲವೊಂದಿತ್ತು. ಜನರ ಆರೋಗ್ಯ ಸುಧಾರಿಸದೇ ಮತ್ಯಾವ ಸುಧಾರಣೆಗೂ ಅರ್ಥವಿಲ್ಲವೆಂದು ಅರಿತ ಅವರು ಎಲ್ಲ ಜನರ ಕೈಗೆಟುಕುವ ಹಾಗೆ ಸಾರ್ವಜನಿಕ ಆಸ್ಪತ್ರೆಗಳನ್ನು ತೆರೆದು ವೈದ್ಯಕೀಯ ಸೌಲಭ್ಯ ಕಲ್ಪಿಸುತ್ತಾರೆ. ಲಕ್ನೋ ವಿಶ್ವವಿದ್ಯಾಲಯ ಶುರು ಮಾಡುತ್ತಾರೆ.

    ಸ್ವಾತಂತ್ರ ಚಳುವಳಿಯ ಕಾವು ಆಗ ಯಾರನ್ನೂ ಬಿಡದ ಕಾಲ. ಗಾಂಧೀಜಿಯ ಮಿತ್ರರೂ ಹಾಗೂ ವೈದ್ಯರೂ ಆಗಿದ್ದ ಬಿ.ಸಿ.ರಾಯ್ ಅವರ ನೆಚ್ಚಿನ ಸೇನಾಪತಿಗಳಲ್ಲೊಬ್ಬರು. ಪೂನಾದಲ್ಲಿ ಅಸ್ವಸ್ಥರಾಗಿ ಮಲಗಿದ್ದ ಗಾಂಧಿಯನ್ನು ನೋಡಹೋದಾಗ ‘ನೀವು ಭಾರತದ ೪೦ ಮಿಲಿಯ ಜನರಿಗೆ ಉಚಿತವಾಗಿ ಔಷಧಿ ಕೊಡುವಿರಾದರೆ ನಾನೂ ತೆಗೆದುಕೊಳ್ಳಬಯಸುವೆ’ ಎಂದು ಗಾಂಧಿ ಚಿಕಿತ್ಸೆ ನಿರಾಕರಿಸುತ್ತಾರೆ. ‘ಭಾರತದ ೪೦ ಮಿಲಿಯ ಜನರ ಬಳಿ ಹೋಗಬಲ್ಲೆನೋ ಇಲ್ಲವೋ , ಅವರ ಪ್ರತಿನಿಧಿಯಾದ ನಿಮಗೆ ಚಿಕಿತ್ಸೆ ನೀಡಬೇಕೆಂದೇ ಬಂದಿರುವೆ’ ಎಂದುತ್ತರಿಸಿದ ರಾಯ್ ಅವರ ನಿಕಟ ಸಹವರ್ತಿಯಾಗುತ್ತಾರೆ. ೧೯೨೫ರಲ್ಲಿ ರಾಜಕೀಯ ಪ್ರವೇಶಿಸಿದ ಅವರು ಬಂಗಾಳದ ಹಳೆಯ ಹುಲಿ ಸುರೇಂದ್ರನಾಥ ಬ್ಯಾನರ್ಜಿಯವರನ್ನು ಸೋಲಿಸಿದವರು. ಬಾರಕ್‌ಪೋರ್‌ನಿಂದ ಗೆದ್ದ ಬಳಿಕ ಹೂಗ್ಲಿ ನದಿಯ ನೀರು ಕಲುಷಿತಗೊಳ್ಳುತ್ತಿದ್ದು ಅದರ ಶುದ್ಧೀಕರಣ ಯೋಜನೆ ಕೈಗೊಳ್ಳಬೇಕೆಂದು ಒತ್ತಾಯ ತಂದರು. ದಂಡಿ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳ ಬಂದವರನ್ನು ತಡೆದು ನಿಲ್ಲಿಸುವ ಗಾಂಧಿ, ‘ನೀವೂ ನಮ್ಮ ಜೊತೆ ಜೈಲು ಸೇರುವುದು ಬೇಡ, ಜನಪರ ಕೆಲಸ ಮಾಡುತ್ತ ನಮ್ಮ ಬೆಂಬಲಕ್ಕಿರಿ’ ಎಂದು ಹಿಂದೆ ಕಳಿಸುತ್ತಾರೆ.

     ಸ್ವಾತಂತ್ರಾನಂತರ ೧೯೪೮ರಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗುವ ಅವರು ನಂತರ ೧೪ ವರ್ಷ ಕಾಲ ಕಾಂಗ್ರೆಸ್ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದರು. ಅವರು ಮುಖ್ಯಮಂತ್ರಿಯಾದ ಅವಧಿ ನಿರಾಶ್ರಿತರು, ಸಾಂಕ್ರಾಮಿಕ ರೋಗಗಳು, ಕೋಮುಗಲಭೆ, ನಿರುದ್ಯೋಗ ಇವೆಲ್ಲ ಬಂಗಾಳವನ್ನು ಕ್ಷೋಭೆಗೊಳಪಡಿಸಿದ್ದ ಕಾಲ. ಕೇವಲ ೩ ವರ್ಷಗಳಲ್ಲಿ ಕಟ್ಟುನಿಟ್ಟಾದ ಹಾಗೂ ಶಿಸ್ತಿನ ಆಡಳಿತದಿಂದ ಅವೆಲ್ಲವನ್ನು ತಹಬಂದಿಗೆ ತರುವ ಅವರನ್ನು ‘ಪಶ್ಚಿಮ ಬಂಗಾಳದ ಪಿತಾಮಹ’ ಎಂದೇ ಕರೆಯಲಾಗುತ್ತದೆ. ೧೯೬೧ರಲ್ಲಿ ಭಾರತ ರತ್ನ ನೀಡಲಾಗುತ್ತದೆ. ೧೯೬೨ರ ಜುಲೈ ಒಂದರ ಬೆಳಿಗ್ಗೆ ರೋಗಿಗಳನ್ನು ನೋಡಿ ಕೆಲಸ ಮಾಡುತ್ತಿದ್ದಾಗಲೇ ಕೊನೆಯುಸಿರೆಳೆದ ಕಾಯಕಜೀವಿ ಬಿ. ಸಿ. ರಾಯ್. ಅವರು ಹುಟ್ಟಿದ ಹಾಗೂ ಮರಣ ಹೊಂದಿದ ದಿನವಾದ ಜುಲೈ ಒಂದನ್ನು ವೈದ್ಯರ ದಿನವೆಂದೇ ಕರೆಯಲಾಗುತ್ತದೆ.

***

      ವಿಯನ್ನಾ ಆಸ್ಪತ್ರೆಯ ಸೆಮಲ್ ವೈಸ್, ಹೆರಿಗೆ ಮಾಡಿಸುವವರು ಶುದ್ಧವಾಗಿ ಕೈತೊಳೆದುಕೊಳ್ಳುವುದರಿಂದ ‘ಬಾಣಂತಿ ನಂಜ’ನ್ನು ತಪ್ಪಿಸಬಹುದು ಎಂದು ತೋರಿಸಿಕೊಟ್ಟ. ಕೈ ತೊಳೆಯುವಂತಹ ಸರಳ ಎಚ್ಚರಿಕೆಯಿಂದ ಬಹುಪಾಲು ಮಹಿಳೆಯರ ಹೆರಿಗೆಯ ನಂತರದ ಸಾವು ತಪ್ಪಿಸಬಹುದೆಂದು ಅವನಿಗೆ ಮನವರಿಕೆಯಾಗಿತ್ತು. ಆದರೆ ಅವನು ಈ ವಿಚಾರವನ್ನು ವೈಜ್ಞಾನಿಕವಾಗಿ ಸಾಬೀತುಪಡಿಸಲು ಹೊರಟ ಕೂಡಲೇ ಇದೊಂದು ಅಮಾನವೀಯ ಹಾಗೂ ಅಶಿಸ್ತಿನ ವರ್ತನೆಯೆಂದು ಪರಿಗಣಿಸಿ ಅವನನ್ನು ಆಸ್ಪತ್ರೆಯ ಕೆಲಸದಿಂದಲೇ ತೆಗೆದುಹಾಕಲಾಯಿತು! ಅದು ವೈದ್ಯರು ರೋಗಿಗಳನ್ನು ಮುಟ್ಟಿದಮೇಲೆ ಕೈತೊಳೆದುಕೊಂಡರೆ ಅದು ಮಹಾಪರಾಧವೆಂದು ಪರಿಗಣಿಸುತ್ತಿದ್ದ ಕಾಲ. ಕೇವಲ ಒಂದೂವರೆ ಶತಮಾನದ ಹಿಂದಿನ ತನಕವೂ ಶಸ್ತ್ರಚಿಕಿತ್ಸಕರ ಕೈ, ಬಟ್ಟೆಬರೆ ಕೊಳಕಾಗಿದ್ದಷ್ಟೂ ಅವರು ದಕ್ಷರೆಂದು ಪರಿಗಣಿತರಾಗುತ್ತಿದ್ದರು. ರೋಗಿಗಳ ಎದುರಿಗೆ ಕೈತೊಳೆದರೆ ಅವರಿಗೆ ಅವಮಾನ ಮಾಡಿದ ಹಾಗೆಂಬ ಭಾವನೆ ತುಂಬಿದ್ದ ಕಾಲವದು.

    ವಿಜ್ಞಾನ ತಂತ್ರಜ್ಞಾನಗಳು ಈಗಿನಷ್ಟು ಮುಂದುವರೆಯದಿದ್ದ ಕಾಲದಲ್ಲಿ ಬರಿಯ ರೋಗಿಗಳ ಪರೀಕ್ಷೆಯಿಂದಲೇ ರೋಗ ಪತ್ತೆ ಹಚ್ಚುತ್ತಿದ್ದ ವೈದ್ಯರಿದ್ದರು. ನಾಡಿಬಡಿತ ಹಿಡಿದು ಮದ್ದು ಕೊಡುವ ಹಕೀಮರಿದ್ದರು. ಹಣದ ಬಗೆಗೆ ಯಾವ ಆಸೆಯಿಟ್ಟುಕೊಳ್ಳದೇ ವೈದ್ಯವೃತ್ತಿ ಎಂದರೆ ಸೇವೆ ಎಂದೇ ತಿಳಿದುಕೊಂಡವರಿದ್ದರು. ಕಷ್ಟಗಳನ್ನೆದುರಿಸಿಯೂ ವೈದ್ಯರಾಗಿ ಜನಸೇವೆಯ ಜೊತೆಗೇ ಮನುಕುಲ ಉಳಿಸುವಂಥ ಸಂಶೋಧನೆಗಳನ್ನು ಮಾಡಿದ ನೂರಾರು ರತ್ನಗಳಲ್ಲಿ ಈ ಮೂರು:

    ಯಲ್ಲಪ್ರಗಡ ಸುಬ್ಬರಾವ್; (೧೮೯೫-೧೯೪೮)



     ನಮ್ಮ ದೇಶದವರೇ ಆಗಿದ್ದೂ ಬಹುಪಾಲು ಭಾರತೀಯರಿಗೆ ಅಪರಿಚಿತರಾಗಿರುವ, ವೈದ್ಯಕೀಯ ಕ್ಷೇತ್ರದಲ್ಲಿ ಹಲವಾರು ಸಂಶೋಧನೆ ಮಾಡಿದ, ಅಮೆರಿಕದಲ್ಲಿ ಗೌರವಾನ್ವಿತರಾಗಿರುವ ವ್ಯಕ್ತಿಯೆಂದರೆ ಡಾ. ಯಲ್ಲಪ್ರಗಡ ಸುಬ್ಬರಾವ್.

    ಆಂಧ್ರಪ್ರದೇಶದ ಭೀಮಾವರಂನ ಗುಮಾಸ್ತೆಯೊಬ್ಬರ ಮಗನಾಗಿ ಜನಿಸಿದ ಸುಬ್ಬರಾವ್ ಬಡತನದ ಬವಣೆಯಲ್ಲೇ ವೈದ್ಯರಾದರು. ಕೇವಲ ಮನೋಬಲ ಹಾಗೂ ತಮ್ಮ ತಾಯಿಯ ಎಡೆಬಿಡದ ಬೆಂಬಲದೊಂದಿಗೆ ಅಪಾರ ಕನಸು ಹೊತ್ತು ಮದ್ರಾಸ್ ಮೆಡಿಕಲ್ ಕಾಲೇಜು ಸೇರುವ ಅವರು ನಂತರ ಉಷ್ಣದೇಶಗಳ ಕಾಯಿಲೆಗಳಿಗೆ ಮದ್ದು ಕಂಡುಹಿಡಿಯುವ ಉದ್ದೇಶದಿಂದ ಉನ್ನತ ವಿದ್ಯಾಭ್ಯಾಸಕ್ಕೆ ಅಮೆರಿಕಕ್ಕೆ ತೆರಳಿದರು. ತೀವ್ರ ಆರ್ಥಿಕ ಸಂಕಷ್ಟದ ನಡುವೆಯೇ ಹಾರ್ವರ್ಡ್ ಮೆಡಿಕಲ್ ಸ್ಕೂಲಿನಲ್ಲಿ ವಿದ್ಯಾಭ್ಯಾಸ ಮುಂದುವರೆಸಿದರು. ನಂತರ ಸಂಶೋಧನೆಗಳತ್ತ ಗಮನ ಹರಿಸಿದ ಅವರು, ಅದಕ್ಕೆ ಅನುಕೂಲಕರವೆಂದು ಅಮೆರಿಕದಲ್ಲೇ ನೆಲೆಸುತ್ತಾರೆ. ಲೆಡರ್ಲೆ ಪ್ರಯೋಗಾಲಯದಲ್ಲಿ ಕೆಲಸ ಮಾಡತೊಡಗುತ್ತಾರೆ. ವಿದ್ಯಾರ್ಥಿಯಾಗಿ ಆ ದೇಶ ಪ್ರವೇಶಿಸಿದ್ದರಿಂದ, ಮುಂದೆ ಕೆಲಸ ಮಾಡುವಾಗಲೆಲ್ಲ ವೀಸಾ ಉಳಿಸಿಕೊಳ್ಳುವುದಕ್ಕೆ ಹರಸಾಹಸ ಪಡಬೇಕಾಗುತ್ತದೆ. ಅಮೆರಿಕದ ಸುಪ್ರೀಂಕೋರ್ಟು ಭಾರತೀಯರನ್ನು ‘ಬಿಳಿಯರು’ ಅಲ್ಲವೆಂದು (ಕಲರ‍್ಡ್ ಎಂದು) ಘೋಷಿಸಿದಾಗ ಬಹಳ ಅಭದ್ರತೆ ಅನುಭವಿಸುತ್ತಾರೆ. ೨೫ ವರ್ಷ ಕಾಲ ಅಮೆರಿಕದಲ್ಲಿ ನೆಲೆಸಿದ ನಂತರವೂ ಅವರನ್ನು ‘ಪರಕೀಯ’ (ಅಲಿಯನ್) ಎಂದೇ ಪರಿಗಣಿಸಲಾಗಿರುತ್ತದೆ!

   ಹೀಗೆ ತನ್ನದಲ್ಲದ ನೆಲದಲ್ಲಿ ವ್ಯಕ್ತಿಗತ ಕಷ್ಟಗಳ ನಡುವೆಯೂ ಏಕಚಿತ್ತದಿಂದ ಸಂಶೋಧನೆ ಮುಂದುವರಿಸಿದ ಈ ಮೇಧಾವಿ, ಫಿಸ್ಕ್ ಎಂಬವರ ಜೊತೆ ಸ್ನಾಯುಸಂಕುಚನದ ಕಗ್ಗಂಟೊಂದನ್ನು ಬಿಡಿಸುತ್ತಾರೆ. ನಂತರ ಜೀವಿರೋಧಕಗಳ (ಆಂಟಿಬಯಾಟಿಕ್ಸ್) ಸಂಶೋಧನೆ ಹಾಗೂ ತಯಾರಿಯಲ್ಲಿ ವಿಶೇಷ ಆಸಕ್ತಿ ವಹಿಸುತ್ತಾರೆ. ಪಾಲಿಮಿಕ್ಸಿನ್, ಆರಿಯೋಮೈಸಿನ್, ಟೆಟ್ರಾಸೈಕ್ಲಿನ್ ಎಂಬ ಜೀವಿರೋಧಕಗಳನ್ನು ಶೋಧಿಸುತ್ತಾರೆ. ಅದರಲ್ಲೂ ಟೆಟ್ರಾಸೈಕ್ಲಿನ್ ಎಂಬುದು ಆಗ ವಿಶ್ವವನ್ನು ಕಾಡುತ್ತಿದ್ದ ಪ್ಲೇಗ್ ಮಾರಿಗೆ ರಾಮಬಾಣವೆಂದು ಸಿದ್ಧವಾಗಿ ಲಕ್ಷಾಂತರ ಜನರ ಜೀವ ಉಳಿಸಿದ ಕೀರ್ತಿ ಸುಬ್ಬರಾವ್ ಅವರಿಗೆ ಸಲ್ಲುತ್ತದೆ. ಟೆಟ್ರಾಸೈಕ್ಲಿನ್‌ನ ರೂಪಾಂತರವಾದ ಡಾಕ್ಸಿಸೈಕ್ಲಿನ್‌ನನ್ನು ಈಗ ಮಲೇರಿಯಾಕ್ಕೆ ಬಳಸಬಹುದೆಂದು ಘೋಷಿಸಲಾಗಿದೆ. ನಂತರ ಉಷ್ಣವಲಯದ ಭೇದಿ (ಟ್ರಾಪಿಕಲ್ ಸ್ಪ್ರೂ) ಹಾಗೂ ರಕ್ತಹೀನತೆಗೆ ಪರಿಹಾರವಾಗಿ ಫೋಲಿಕ್ ಆಸಿಡ್ ಎಂಬ ವಿಟಮಿನ್, ಹಾಗೂ ‘ಬಿ’ ಗುಂಪಿನ ಬಹುಪಾಲು ವಿಟಮಿನ್‌ಗಳನ್ನು ಬೆಳಕಿಗೆ ತಂದವರು ಅವರೇ. ಈಗಲೂ ಫೈಲೇರಿಯಾ (ಆನೆಕಾಲು ರೋಗ)ಕ್ಕೆ ಬಳಸಲಾಗುತ್ತಿರುವ ಡಿಇಸಿ (‘ಹೆಟ್ರಝಾನ್’)  ಮಾತ್ರೆಯನ್ನು ಸಂಶೋಧಿಸಿದ್ದು ಅವರೇ. ಒಂದು ತೆರನ ರಕ್ತದ ಕ್ಯಾನ್ಸರಿನಲ್ಲಿ ಬಳಸುವ ‘ಮೀಥೋಟ್ರೆಕ್ಸೇಟ್’ನ್ನು ಕಂಡುಹಿಡಿದು, ಕ್ಯಾನ್ಸರಿನ ಪರಿಹಾರಕ್ಕೆ ಔಷಧಿ ತಯಾರಿಸುವ ಯೋಜನೆಯಲ್ಲಿದ್ದಾಗಲೇ, ದಣಿವರಿಯದೇ ಕೆಲಸ ಮಾಡಿದ ಈ ಶ್ರಮಜೀವಿ ತಮ್ಮ ೫೩ನೇ ವಯಸ್ಸಿನಲ್ಲಿ ನಿಧನ ಹೊಂದಿದರು.

      ಹಲವು ಹೊಸಪೀಳಿಗೆಯ ವಿಜ್ಞಾನಿಗಳಿಗೆ ಮಾರ್ಗದರ್ಶನ ಮಾಡಿದ್ದ ಅವರಿಗೆ ಸಂದಬೇಕಾದ ಪ್ರಶಸ್ತಿ ಗೌರವಗಳು ಅಂದಿಗೆ ಸಿಗಲಿಲ್ಲವಾದರೂ,  ಅಮೆರಿಕಾದಲ್ಲಿ ಅವರನ್ನು ಈ ಶತಮಾನದ ಶ್ರೇಷ್ಠ ವಿಜ್ಞಾನಿಯೆಂದು ಪರಿಗಣಿಸಲಾಯಿತು. ಇತ್ತೀಚೆಗೆ ಭಾರತದಲ್ಲಿ ಮತ್ತೊಮ್ಮೆ ಪ್ಲೇಗ್ ಕಾಣಿಸಿಕೊಂಡು ಟೆಟ್ರಾಸೈಕ್ಲಿನ್ ಬಳಕೆಯಾದಾಗಲೇ ಭಾರತೀಯರಿಗೆ ಯಲ್ಲಪ್ರಗಡ ಅವರ ಬಗ್ಗೆ ತಿಳಿದಿದ್ದು! ಇಂತಹ ನಮ್ಮ ವೃತ್ತಿಬಾಂಧವನ ಬಗೆಗೆ ವೈದ್ಯಲೋಕದಲ್ಲಿಯೂ ತಿಳಿಯದವರೇ ಹೆಚ್ಚಿದ್ದಾರೆ.

    ವ್ಲದಿಮಿರ್ ಹಾಫ್ಕಿನ್; (೧೮೬೦-೧೯೩೦)



     ಪ್ರಪಂಚವನ್ನೇ ತಲ್ಲಣಗೊಳಿಸುತ್ತಿದ್ದ ಕಾಲರಾ ಹಾಗೂ ಪ್ಲೇಗ್‌ಗಳೆಂಬ ಮಹಾಮಾರಿಗಳಿಗೆ ಲಸಿಕೆ ಕಂಡುಹಿಡಿದ ಕೀರ್ತಿ ವ್ಲದಿಮಿರ್ ಹಾಫ್ಕಿನ್ ಅವರಿಗೆ ಸಲ್ಲುತ್ತದೆ. ಜೋಸೆಫ್ ಲಿಸ್ಟರ್ ಎಂಬ ವೈದ್ಯವಿಜ್ಞಾನಿ ಅವರನ್ನು ‘ಮನುಕುಲದ ರಕ್ಷಕ’ ಎಂದು ಕರೆದಿದ್ದು ಅರ್ಥಪೂರ್ಣವಾಗಿಯೇ ಇದೆ.

      ಪೋಲೆಂಡಿನಲ್ಲಿ (ರಶಿಯಾ) ಜನಿಸಿದ ಅವರು, ನಂತರ ಫ್ರಾನ್ಸಿನ ಲೂಯಿ ಪಾಶ್ಚರ್ ಪ್ರಯೋಗಾಲಯದಲ್ಲಿ ವೈದ್ಯಸಂಶೋಧಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ೧೮೯೨ರಲ್ಲಿ ಯೂರೋಪಿನಾದ್ಯಂತ ಕಾಲರಾ ಪಿಡುಗು ಹರಡಿತ್ತು. ಆಗ ಹಾಫ್ಕಿನ್ ಅದಕ್ಕೆ ತಾನು ಸಂಶೋಧಿಸಿದ ಲಸಿಕೆಯ ಬಗ್ಗೆ ಹೇಳಿದಾಗ ಅವರನ್ನು ಯಾರೂ ಗಂಭೀರವಾಗಿ ಪರಿಗಣಿಸಲೇ ಇಲ್ಲ. ಲೂಯಿ ಪಾಶ್ಚರನೂ ಸೇರಿದಂತೆ ಯಾರೂ ಆ ಲಸಿಕೆ ಬಗ್ಗೆ ಪ್ರೋತ್ಸಾಹದಾಯಕವಾಗಿ ಪ್ರತಿಕ್ರಿಯೆ ನೀಡದಿದ್ದಾಗ, ಭಾರತದಲ್ಲಿ ಅದೇ ವೇಳೆಗೆ ಕಾಲರಾ ಹರಡುತ್ತಿದ್ದು, ಅದರ ನಿಯಂತ್ರಣಕ್ಕಾಗಿ ಇಲ್ಲಿಗೆ ಕರೆಸಲಾಗುತ್ತದೆ. ಬಂದ ವರ್ಷವೇ ಅವರ ಮೇಲೆ ಮೂಲಭೂತವಾದಿಗಳಿಂದ ಹಲ್ಲೆ ಯತ್ನ ಕೂಡ ನಡೆಯುತ್ತದೆ. ಆದರೂ ಧೈರ್ಯಗೆಡದೆ ಇಲ್ಲೇ ನಿಂತ ಅವರು ಜನರು ಲಸಿಕೆ ತೆಗೆದುಕೊಳ್ಳಲು ಹೆದರಿದಾಗ ಮೊದಲು ತಾವೇ ತೆಗೆದುಕೊಳ್ಳುತ್ತಾರೆ.  ನಂತರ ೨೫೦೦೦ ಜನ ಸ್ವಯಂ ಇಚ್ಚೆಯಿಂದ ಬಂದವರಿಗೆ ಲಸಿಕೆ ನೀಡುತ್ತಾರೆ. ಕಾಲರಾ ಪಿಡುಗು ಲಸಿಕೆ ತೆಗೆದುಕೊಂಡವರಿಗೆ ಗಮನಾರ್ಹವಾಗಿ ಕಡಿಮೆಯಾಗುತ್ತದೆ.

     ಅದೇ ಸಮಯಕ್ಕೆ ಭಾರತದ ಮಲೇರಿಯಾ ಹಾಫ್ಕಿನ್ನರನ್ನು ಬಾಧಿಸತೊಡಗುತ್ತದೆ. ಚಿಕಿತ್ಸೆ ಹಾಗೂ ವಿಶ್ರಾಂತಿಗಾಗಿ ಯೂರೋಪಿಗೆ ಮರಳಿದ ಅವರು ೧೮೯೬ರಲ್ಲಿ ವೈದ್ಯರ ಸಲಹೆಗೆ ವಿರುದ್ಧವಾಗಿ ಮತ್ತೆ ಭಾರತಕ್ಕೆ ವಾಪಸಾಗುತ್ತಾರೆ. ಅವರು ಇಲ್ಲಿ ಬರುವ ಹೊತ್ತಿಗೆ ಮುಂಬಯಿಯಲ್ಲಿ ಪ್ಲೇಗ್ ಹಾವಳಿ ಶುರುವಾಗಿರುತ್ತದೆ. ಸರ್ಕಾರದ ಕೋರಿಕೆಯ ಮೇರೆಗೆ ಮುಂಬಯಿಯ ಗ್ರಾಂಟ್ಸ್ ಮೆಡಿಕಲ್ ಕಾಲೇಜಿನಲ್ಲಿ ತಾತ್ಕಾಲಿಕ ಪ್ಲೇಗ್ ಪ್ರಯೋಗಾಲಯ ತೆರೆಯಲಾಗುತ್ತದೆ.  ೧೮೯೭ರ ವೇಳೆಗೆ ಪ್ಲೇಗ್ ಲಸಿಕೆ ತಯಾರಾಗಿ ಅದನ್ನು ಮೊದಲು ಬೈಕುಲಾ ಜೈಲಿನ ಖೈದಿಗಳಿಗೆ ನೀಡಲಾಗುತ್ತದೆ. ನಂತರ ಪ್ಲೇಗ್ ಲಸಿಕಾ ಕಾರ್ಯಕ್ರಮ ಭಾರತದಾದ್ಯಂತ ನಡೆದು ಆ ಮಾರಣಾಂತಿಕ ಕಾಯಿಲೆಯನ್ನು ತಡೆಗಟ್ಟಲು ಯಶಸ್ವಿಯಾಗುತ್ತಾರೆ. ನಂತರ ಅದೇ ಪ್ಲೇಗ್ ಪ್ರಯೋಗಾಲಯದ ಸ್ಥಾಪಕ ನಿರ್ದೇಶಕರಾಗಿ ಸೇವೆ ಮುಂದುವರೆಸುತ್ತಾರೆ.

     ಹಾಗಿದ್ದೂ ೧೯೦೨ರಲ್ಲಿ ಪಂಜಾಬಿನ ೧೯ ಜನ ಹಳ್ಳಿಗರಿಗೆ ಪ್ಲೇಗ್ ವ್ಯಾಕ್ಸೀನ್ ನೀಡಿದ್ದೇ ಅವರೆಲ್ಲ ಧನುರ್ವಾಯು ಬಂದು ಅಸುನೀಗುತ್ತಾರೆ. ಅವರೆಲ್ಲ ಒಂದೇ ಬಾಟಲಿಯ ವ್ಯಾಕ್ಸೀನುಗಳನ್ನು ಪಡೆದವರೇ ಆಗಿರುತ್ತಾರೆ. ಅದಕ್ಕೆ ವಿಚಾರಣೆ ನಡೆಸಿ ಇವರನ್ನೇ ತಪ್ಪಿತಸ್ಥರೆಂದು ಪರಿಗಣಿಸಿ ಶಿಕ್ಷಾರೂಪವಾಗಿ ಇಂಗ್ಲೆಂಡಿಗೆ ಕಳಿಸಲಾಗುತ್ತದೆ. ಆದರೆ ಅಂತರರಾಷ್ಟ್ರೀಯ ಮಟ್ಟದಲ್ಲಿ ವಿಜ್ಞಾನಿಗಳ ಒತ್ತಡಕ್ಕೆ ಮಣಿದು ೧೯೦೭ರಲ್ಲಿ ಮತ್ತೆ ವಿಚಾರಣೆ ನಡೆಸಿದಾಗ, ಸಹಾಯಕ ಕೆಲಸಗಾರನು ಶುಚಿಯಿಲ್ಲದ ಬಿರಡೆ ಬಳಸಿದ್ದರಿಂದ ಆ ಬಾಟಲಿನ ವ್ಯಾಕ್ಸೀನ್ ತೆಗೆದುಕೊಂಡವರೆಲ್ಲ ಧನುರ್ವಾಯುವಿಗೆ ಒಳಗಾದರೆಂದು ತೀರ್ಪಿತ್ತು ಇವರನ್ನು ದೋಷಮುಕ್ತ ಎಂದು ಪರಿಗಣಿಸಲಾಗುತ್ತದೆ. ಕೂಡಲೇ ಭಾರತಕ್ಕೆ ಬಂದು ಕೋಲ್ಕತಾದಲ್ಲಿ ೧೯೧೪ರಲ್ಲಿ ನಿವೃತ್ತಿಯಾಗುವ ತನಕ ಸೇವೆ ಮುಂದುವರೆಸುವ ಪ್ರೊ. ಹಾಫ್ಕಿನ್ ನಂತರ ಯೂರೋಪಿಗೆ ತೆರಳುತ್ತಾರೆ.

    ಅವರ ನಿಸ್ವಾರ್ಥ ಸೇವೆಯ ದ್ಯೋತಕವಾಗಿ ಮುಂಬಯಿಯ ‘ಹಾಫ್ಕಿನ್ಸ್ ಇನ್ಸ್ಟಿಟ್ಯೂಟ್’ (ಮುಂಚಿನ ಪ್ಲೇಗ್ ಪ್ರಯೋಗಾಲಯ) ಇಂದಿಗೂ ವೈದ್ಯಕೀಯ ಸಂಶೋಧನಾ ಕ್ಷೇತ್ರದಲ್ಲಿ ಕಾರ್ಯನಿರತವಾಗಿದೆ. ಈಗ ಹಂದಿಜ್ವರದ ವೈರಸ್ ಪರೀಕ್ಷೆ ನಡೆಸುವ ಕೆಲವೇ ಕೆಲವು ಕೇಂದ್ರಗಳಲ್ಲಿ ಅದೂ ಒಂದಾಗಿದೆ.

   ಆಲ್ಬರ್ಟ್ ಬ್ರೂಸ್ ಸ್ಯಾಬಿನ್; (೧೯೦೬-೧೯೯೩) 



   ಈ ರಶಿಯನ್ ಸಂಜಾತ ಅಮೆರಿಕನ್ ವೈದ್ಯ ಎಳವೆಯಲ್ಲೇ ಅಮೆರಿಕಕ್ಕೆ ವಲಸೆ ಬಂದು ನೆಲೆಸಿದವರು. ಅಲ್ಲಿಯೇ ವೈದ್ಯಕೀಯ ವಿದ್ಯಾಭ್ಯಾಸ ಪಡೆದು ಸಾಂಕ್ರಾಮಿಕ ರೋಗಗಳ ತಡೆ ಮತ್ತು ನಿರ್ವಹಣೆಯ ಕುರಿತಾಗಿ  ಕೆಲಸ ಮಾಡುತ್ತಿದ್ದರು. ಆಗೆಲ್ಲ ಅಮೆರಿಕದಲ್ಲಿ ಎಳೆಯ ಮಕ್ಕಳನ್ನೇ ಹೆಚ್ಚಾಗಿ ಬಾಧಿಸುವ ಹಾಗೂ ಕೆಲವರನ್ನು ಖಾಯಂ ಅಂಗವಿಕಲರನ್ನಾಗಿ ಕಾಡುವ ಪೋಲಿಯೋ ಒಂದು ಪಿಡುಗಾಗಿತ್ತು. ಪೋಲಿಯೋಗೆ ಲಸಿಕೆ ಕಂಡುಹಿಡಿಯಲು ಪ್ರಯೋಗಗಳು ನಡೆಯುತ್ತಿದ್ದವು. ಅಂಥ ಸಮಯದಲ್ಲೇ ಸಾಕ್ ಎಂಬ ವೈದ್ಯವಿಜ್ಞಾನಿ, ಕೊಲ್ಲಲ್ಪಟ್ಟ ಪೋಲಿಯೋ ವೈರಸ್ಸಿನಿಂದ ತಯಾರಿಸಲಾದ ಲಸಿಕೆಯೊಂದನ್ನು ಕಂಡುಹಿಡಿದರು. ಅದನ್ನು ಚುಚ್ಚುಮದ್ದಿನ ರೂಪದಲ್ಲಿ ಕೊಡಬೇಕಾಗಿತ್ತು. ಏಕೋ ಆ ಲಸಿಕೆಯ ಬಗ್ಗೆ ಮೊದಲಿನಿಂದ ಭಿನ್ನಾಭಿಪ್ರಾಯ ಹೊಂದಿದ್ದ ಸ್ಯಾಬಿನ್ ಬಾಯಿಯ ಮುಖಾಂತರ ನೀಡಬಲ್ಲಂತಹ, ಜೀವವಿರುವ ವೈರಸ್ಸುಗಳನ್ನೇ ಹೊಂದಿರುವ ಲಸಿಕೆಯೊಂದನ್ನು ಸಂಶೋಧಿಸಿದರು. ಲಸಿಕೆಯಲ್ಲಿ ವೈರಸ್ಸುಗಳು ಜೀವಂತ ಇದ್ದರೂ ಅವುಗಳ ಕಾಯಿಲೆ ಉಂಟುಮಾಡುವ ಶಕ್ತಿಯನ್ನು ಕ್ಷೀಣಗೊಳಿಸಿ, ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಮಾತ್ರ  ಬೆಳೆಸುವ ಹಾಗೆ ತಯಾರುಮಾಡಲಾಗಿತ್ತು. ಮೊದಲು ತಮ್ಮ ಎಳೆಯ ಮಕ್ಕಳಿಗೇ ಅದನ್ನು ಪ್ರಯೋಗಿಸಿದ ಸ್ಯಾಬಿನ್, ೧೯೫೫ರಿಂದ ೬೦ರವರೆಗೆ ರಶಿಯಾ, ಸಿಂಗಪುರ, ಮೆಕ್ಸಿಕೋ, ಯೂರೋಪು ಮುಂತಾದ ಕಡೆ ಲಸಿಕೆಯನ್ನು ಪರೀಕ್ಷಿಸಿದರು. ಅಂತೂ ಕೊನೆಗೆ ೧೯೬೨ರಲ್ಲಿ ಅದು ಸುರಕ್ಷಿತವೆಂದು ಅಮೆರಿಕದಲ್ಲಿ ಬಿಡುಗಡೆಯಾಗುತ್ತದೆ. ನಂತರ ವಿಶ್ವ ಆರೋಗ್ಯ ಸಂಸ್ಥೆಯೂ ಅದನ್ನು ಮಾನ್ಯಮಾಡುತ್ತದೆ.

     ಈಗ ಪ್ರಪಂಚದ ಬಹುತೇಕ ದೇಶಗಳಲ್ಲಿ ಈ ಬಾಯಿಲಸಿಕೆ ನೀಡಿ ಪೋಲಿಯೋ ಬೇನೆ ನಿರ್ಮೂಲನೆ ಮಾಡಲಾಗಿದೆ. ವಿಶ್ವಾದ್ಯಂತ ಕೇವಲ ನಾಲ್ಕು ದೇಶಗಳಲ್ಲಿ ಪೋಲಿಯೋ ಉಳಿದಿದೆ. ಅವೆಂದರೆ ನೈಜೀರಿಯಾ, ಭಾರತ, ಪಾಕಿಸ್ತಾನ, ಹಾಗೂ ಆಫ್ಘನಿಸ್ತಾನ. ಕ್ರಿ.ಶ ೨೦೦೦ನೇ ಇಸವಿಗೇ ಪೋಲಿಯೋ ನಿರ್ಮೂಲನೆ ಮಾಡುವ ಗುರಿ ಹೊತ್ತು ವಿಶ್ವಾದ್ಯಂತ ಸರ್ಕಾರಗಳು ಹಾಗೂ ಸರ್ಕಾರೇತರ ಸಂಸ್ಥೆಗಳು ಬಹುವಾಗಿ ಪ್ರಯತ್ನಿಸಿದ ಫಲವಾಗಿ ಪೋಲಿಯೋ ಸಂಪೂರ್ಣವಾಗಿ ನಿರ್ಮೂಲನೆಯಾಗದಿದ್ದರೂ ಇಂದು ಕೈಬೆರಳೆಣಿಕೆಯಷ್ಟು ಪೋಲಿಯೋ ಕೇಸುಗಳು ಸಿಗುತ್ತಿವೆ. ಮುಂದೊಮ್ಮೆ ಪೋಲಿಯೋ ನಿರ್ಮೂಲನೆಯಾದರೆ ಅದರ ಸಿಂಹಪಾಲು ಯಶಸ್ಸು ಸ್ಯಾಬಿನ್ನರಿಗೇ ಸಲ್ಲುತ್ತದೆ.

   ವಿಪರ್ಯಾಸವೆಂದರೆ ೧೯೮೩ರಲ್ಲಿ ಸ್ಯಾಬಿನ್ನರಿಗೇ ಪೋಲಿಯೋ ತಗುಲಿ ಅಂಗವಿಕಲರಾದರು. ದಣಿವರಿಯದ ಈ ವಿಜ್ಞಾನಿ ೧೯೯೩ರಲ್ಲಿ, ತಮ್ಮ ೮೭ನೇ ವಯಸ್ಸಿನಲ್ಲಿ ತೀರಿಕೊಂಡರು.

       



Sunday, 29 June 2014

ಕವಿತೆಯೇ ಎಚ್ಚರ, ಇದು ಅತ್ಯಾಚಾರಿಗಳ ಕಾಲ..





(ಚಿತ್ರ: ಪ್ಯಾಬ್ಲೋ ಪಿಕಾಸೋ)


ಓ ಕವಿತೆಯೇ,
ಕೊಡಗೆಂದರೆ ಕಿತ್ತಳೆ, ಕಾಫಿ
ಕರ್ನಾಟಕದ ಕಾಶ್ಮೀರ
ಕಾವೇರಿಯ ತವರು
ಕೊಡವರ ನಾಡು ದೇವರ ಕಾಡು
ಮಡಿಕೇರಿ ಮಂಜು ರಾಜಾ ಸೀಟು
ಕದನ ಕಲಿಗಳ ದಂಡು
ಎಂದೆಲ್ಲ ವರ್ಣಿಸಿದೆಯಲ್ಲವೇ?
ನಿಜ, ಆದರೆ
ಗೋಚರ ಅಗೋಚರ ಪಲ್ಲಕ್ಕಿಗಳನೇರಿ
ಮೈಮರೆಯಬೇಡ ಕವಿತೆಯೇ
ಪರಾಂಬರಿಸು,
ಕೊಡಗಿನ ಬಯೋಡೇಟಾ ಬದಲಾಗಿದೆ..

ಕೊಡಗೆಂದರೆ
ಕಾಪಿಶೀಮಿಗೆ ಗುಳೆ ಬಂದ
ಬಯಲನಾಡಿನ ಕಂದು ತುಟಿಗಳು;
ಲೈನುಮನೆಯ ಜೀತಕ್ಕೆ ಹರಾಜಾದ
ಜೇನು ಕುರುಬರ ಕನಸುಗಳು;
ಬೈಲುಕುಪ್ಪೆ ಬೊನ್ಸಾಯ್‌ನಲ್ಲರಳಿದ
ಟಿಬೆಟ್ ಹೂಗಳ ಬೊಕೆ;
ಹುಲಿ ಹಾವಳಿ, ಆನೆ ಹಾವಳಿ,
ದಂತಕಳ್ಳರ ಹಾವಳಿ,
ಕನ್ನಡ, ಮಲೆಯಾಳಿ ಚಳಿ..

ಕೊಡವತಿಯೆಂದರೆ
ಹಿಮ್ಮುಖ ಸೀರೆ ನಿರಿಗೆ ಚಿಮ್ಮುವ ಸೊಬಗಿಯಷ್ಟೇ ಅಲ್ಲ
ಗಡಿಯಲಿರುವ ಮಡಿಕೇರಿ ಸಿಪಾಯಿಗಾಗಿ
‘ಸುಯ್ಯುತ್ತ ಮರುಗುತ್ತ ಬಸುರಂ ಹೊಸೆದು
ಕೊನೆವೆರಳ ಮುರಿದುಕೊಳುವ’
ಅಮ್ಮ, ಮಗಳು, ಹೆಂಡತಿ..
ಕಾಫಿಬೊಡ್ಡೆಗಳ ಗುಡ್ಡದಲ್ಲಿ
ತೊಡೆ ನಡುವೆ ರಕ್ತ ಹರಿಸಿದ ಪೋರಿ
ತಲಕಾವೇರಿಯಲಿ ಹುಟ್ಟಿ
ಭಾಗಮಂಡಲದಲ್ಲಿ ನೆರೆದು
ಹೊಗೆವ ಕಲ್ಲುಗಳ ನಡುವೆ ಮಡುವಾದ ಕನ್ನಿಕೆ  
ಗಗನದಿಂದ ಭರಚುಕ್ಕಿಯಾಗಿ ಧುಮುಕಿದರೂ
ಮತ್ತೆ ಕನ್ನಂಬಾಡಿಯಲ್ಲಿ
ಮತ್ತೆ ಮೆಟ್ಟೂರಿನಲ್ಲಿ
ಮತ್ತೆಮತ್ತೆ ಎಲ್ಲೆಲ್ಲೋ ಬಂದಿಯಾದ ಕಾವೇರಿ

ಸಿರಿಸಂಭ್ರಮಗಳ ಹಂಗಿನರಮನೆಯಲ್ಲಿ
ಗುಂಡು ತುಪಾಕಿಗಳ ಕಿವಿಗಡಚಿಕ್ಕುವ ಸದ್ದಿನಲ್ಲಿ
ದಿಕ್ಕೆಡದಿರು ಕವಿತೆಯೇ
ಎಚ್ಚರ, ಇದು ಅತ್ಯಾಚಾರಿಗಳ ಕಾಲ.
ಧರ್ಮಾಧಿಕಾರಿ ರಾಜರ್ಷಿಗಳು
ಪಟ್ಟದ್ದೇವರುಗಳು
ಪುಂಡ ಫುಡಾರಿ ತ್ರಿಮೂರ್ತಿಗಳ
ಮಾರುವೇಷಕ್ಕೆ ಮರುಳಾಗಬೇಡ.  
ದಾಕ್ಷಿಣ್ಯಕ್ಕೆ ಬಸುರಾದರೆ ಹೆರಲು ಜಾಗ ಸಿಗುವುದಿಲ್ಲ
ಅವಸರಕ್ಕೆ ಹೆತ್ತ ಮಕ್ಕಳು ಉಸಿರಾಡುವುದಿಲ್ಲ

ನೋಡು,
ಮರುಭೂಮಿಯ ಮುಳ್ಳುಕಂಟಿ ಚಿಗುರಿ ಹೂವರಳಿಸುತ್ತದೆ
ಮುಸುಕಿದ ಮಂಜು ಹನಿಗೆ ಉಸುಕೂ ಸಂಭ್ರಮಪಡುತ್ತದೆ
ದೊಂಬಿಯ ಮರುದಿನ ನಿರ್ಜನ ಶಹರದ
ರಸ್ತೆಗಳ ಇಕ್ಕೆಲದಲೂ ಮರ ಹೂವರಳಿಸಿ ನಗುತ್ತದೆ
ಅರಳೆ ಸಿಗದ ಕಾಲಕ್ಕೆ ಹಕ್ಕಿ, ನಾರು ಹೆಕ್ಕಿ ಗೂಡು ಕಟ್ಟುತ್ತದೆ

ಯಾವ ತಾಲಿಬಾನಿಗೂ ಅವು ಅಂಜುವುದಿಲ್ಲ ಗೆಳತೀ,
ನಮೋಸುರನ ಬೆದರಿಕೆಗೆ ಗಿರ್‌ನ ಕೇಸರಗಳು ದಿಗಿಲುಗೊಳ್ಳುವುದಿಲ್ಲ
ಇರುಳಲ್ಲಿ ಗೂಬೆ ಸುಮ್ಮನೆ ಕೂರುವುದಿಲ್ಲ

ಸುರನೋ ಅಸುರನೋ
ಗಡ್ಡ ನೆರೆಯದೆ ಉಳಿಯುವುದಿಲ್ಲ
ಬದಲಾಗುತ್ತವೆ ಋತು ಋತಗಳು,
ಕುಡಿದ ಮೊಲೆ ಜೋತುಬೀಳದೇ ಇರುವುದಿಲ್ಲ.

ತಾಯೇ
ಎದೆಗೆ ತಟ್ಟಿದ ನೋವ
ತುದಿಬೆರಳಿಗಂಟಿಸಿಕೊಂಡು ಬದುಕಿ ಬಿಡು
ನಿಜದ ಕೆಂಡವ ಉಡಿಯೊಳಗಲ್ಲಲ್ಲ
ಅಂಗೈಯೊಳಗಿಟ್ಟುಕೊಂಡು ಉಸಿರಾಡು
ಅವರ ಖಡ್ಗ ಕೋವಿ ತ್ರಿಶೂಲಗಳ ಕಿತ್ತೆಸೆದು ಬೆತ್ತಲಾಗಿಸಿ
ಹೊಟ್ಟೆಯೊಳಗವಿಸಿಟ್ಟುಕೋ,
ದಿವ್ಯ ಶಬುದಗಳಾಗಿಸಿ ಹೆರು
ಜೀವಕಾರುಣ್ಯದ ಮೊಲೆಹಾಲನೂಡಿಸೇ,
ಏಕೆಲಗವ್ವಾ,
ಬೆಂಕಿಯ ಮಗಳೇ,
ಬೆಳಕಾಗಿ ಉರಿ
ಬೂದಿ ಉಳಿಸದ ಹಣತೆಯಾಗಿ ಬೆಳಗಿಬಿಡು..



(ಮಡಿಕೇರಿಯಲ್ಲಿ ನಡೆದ ೮೦ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಓದಿದ ಕವಿತೆ.)


 

Saturday, 28 June 2014

ದೇವರ ಸ್ವಂತ ರಾಜ್ಯದೊಳಗೊಂದು ಸುತ್ತು..



ಮತ್ಸ್ಯಗಂಧಿಯರ ಪಾಡು 



ಕೇರಳ. ಆಹಾ! ಇದು ದೇವರ ರಾಜ್ಯವೇ ಇರಬೇಕು..

ಪ್ರತಿ ಸಾವಿರ ಗಂಡಿಗೆ ಸಾವಿರದ ಇಪ್ಪತ್ತು ಹೆಣ್ಣುಗಳಿರುವ ಅಪರೂಪದ ರಾಜ್ಯ. ಅರ್ಧ ಜನಸಂಖ್ಯೆಗಿಂತ ಹೆಚ್ಚು ಹೆಣ್ಣುಮಕ್ಕಳಿರುವುದರಿಂದ ಎಲ್ಲ ಕಡೆ ಎಲ್ಲ ವಯಸ್ಸಿನ ದುಡಿಯುವ ಮಹಿಳೆಯರು ಕಾಣುತ್ತಾರೆ. ಪೆಟ್ರೋಲ್ ಬಂಕ್‌ಗಳಲ್ಲಿ; ರಿಕ್ಷಾ-ಬಸ್-ದೋಣಿ ನಡೆಸುವವರಾಗಿ; ಸ್ಟೇಷನ್ ಮಾಸ್ತರಾಗಿ; ಮೀನು-ಹೂವು-ತರಕಾರಿ ಮಾರ್ಕೆಟ್ಟಿನ ಸಿಂಹಿಣಿಯರಾಗಿ; ಹೋಟೆಲ್-ಮಸಾಜ್ ಪಾರ್ಲರ್-ಅಂಗಡಿಗಳ ಮೆಲುಮಾತ ಲಲನೆಯರಾಗಿ; ಏರ್‌ಪೋರ್ಟ್-ರೈಲ್ವೆ ಸ್ಟೇಷನ್‌ಗಳ ಸ್ವಚ್ಛತಾ ಕೆಲಸಗಾರರಾಗಿ; ರಬ್ಬರ್, ಚಹಾ, ಏಲಕ್ಕಿ ತೋಟಗಳ ಕೂಲಿಗಳಾಗಿ - ಹೀಗೆ ಎಲ್ಲ ಕಡೆ ಮಹಿಳೆಯರ ದುಡಿಮೆ ಕಂಡುಬರುತ್ತದೆ. ಚಹಾ ಎಲೆ ಕೀಳುವ ಕೆಲಸದಲ್ಲಿ ಹೆಚ್ಚುಕಡಿಮೆ ಎಲ್ಲರೂ ಮಹಿಳೆಯರೇ.

ತೇಕ್ಕಡಿಯ ಆನೆ ಮಾವುತ ಹೇಳುತ್ತಿದ್ದ, ಆ ಕ್ಯಾಂಪಿನಲ್ಲಿರುವ ಎಲ್ಲ ಎಂದರೆ ಎಲ್ಲ ಆನೆಗಳೂ ಹೆಣ್ಣೇ ಅಂತೆ. ಗಂಡಾನೆಗೆ ಬೆದೆ ಬರುವುದರಿಂದ ಆರು ತಿಂಗಳು ಕೆಲಸ ಮಾಡಿದರೆ ಆರು ತಿಂಗಳು ವಿಶ್ರಾಂತಿ ಕೊಡಬೇಕಾಗುವುದೆಂದೂ, ಹೆಣ್ಣಾನೆಯಾದರೆ ಹೆಂಗಸರಂತೇ ಎಲ್ಲ ದುಡಿಮೆಗೂ ಎಲ್ಲ ಕಾಲಕ್ಕೂ ಒದಗುವುದೆಂದೂ; ಆನೆಯನ್ನೂ, ತಮ್ಮೂರ ಹೆಣ್ಣುಮಕ್ಕಳನ್ನೂ ಒಂದೇ ಉಸಿರಿನಲ್ಲಿ ಹೊಗಳಿದ. ನಿಜ, ದುಡಿಮೆ ಮಲಬಾರಿನ ಮಹಿಳೆಯರಿಗೆ ಹೊಸದಲ್ಲ. ಪ್ರತಿ ಮನೆಯ ಒಲೆಯನ್ನೂ ಬೆಚ್ಚಗಿಟ್ಟಿರುವ ಜೀವಗಳವು. ಇವತ್ತಿಗೂ ಮೀನು, ಹೂ, ತರಕಾರಿ ಮಾರುಕಟ್ಟೆಗಳಲ್ಲಿ ಹೆಣ್ಮಕ್ಕಳದೇ ರಾಜ್ಯಭಾರ. ಕೊಚ್ಚಿಯ ಜ್ಯೂ ಸಮುದಾಯದ ಮ್ಯೂಸಿಯಂನಲ್ಲಿ ಮೂರ್ನಾಲ್ಕು ಶತಮಾನ ಹಿಂದಿನ ಚಿತ್ರಗಳಿದ್ದವು. ಕೇರಳದ ಮಾರುಕಟ್ಟೆಗಳಲ್ಲಿ ನವಿಲು, ಮೀನು, ಅಕ್ಕಿರಾಶಿ, ಸಾಂಬಾರ ಪದಾರ್ಥವಿಟ್ಟುಕೊಂಡು ಕುಳಿತ ಮಹಿಳೆಯರ ಚಿತ್ರಣ ಅದರಲ್ಲಿದೆ. ಒಂದು ವಿಶೇಷ: ಚಿತ್ರಗಳಲ್ಲಿರುವವರು ತೆರೆದೆದೆಯ ಮಹಿಳೆಯರು. ಎದೆ ಮುಚ್ಚಿಕೊಳ್ಳದೇ ಬಿಡುಬೀಸಾಗಿ ಓಡಾಡುವ ಧೈರ್ಯವೇ ಅವರಿಗೆ ಎದೆಗಾರಿಕೆಯನ್ನೂ ಕೊಟ್ಟಿತೆ? ಕೊಚ್ಚಿ ಅರಮನೆಯ ಚಿತ್ರಗಳಲ್ಲಿ ರಾಜಮನೆತನದ ಹೆಣ್ಣುಮಕ್ಕಳೂ ಸೆರಗು ಹೊದೆಯದೆ ಸೀರೆಯುಟ್ಟಿದ್ದರು. ಈಗಲೂ ಒಂದು ಲುಂಗಿ ಮೇಲೊಂದು ಬ್ಲೌಸು ಧರಿಸಿದ ನಡುವಯಸ್ಸು ದಾಟಿದ ಮಹಿಳೆಯರು ಕಾಣಸಿಗುತ್ತಾರೆ.

ವಿದೇಶೀಯರಿಗೂ ಮಲಬಾರಿನ ಮಹಿಳೆಯರ ಮೇಲೆ ಆಕರ್ಷಣೆ. ಆದರೆ ಅದು ಅವರ ಶ್ರಮ ಸಾಮರ್ಥ್ಯದ ಕುರಿತಷ್ಟೇ ಅಲ್ಲ. ದಾಖಲೆಗಳ ಪ್ರಕಾರ ೧೪೯೮ರಲ್ಲಿ ವಾಸ್ಕೋಡಗಾಮ ಭಾರತಕ್ಕೆ ಮೊದಲ ಸಮುದ್ರ ಮಾರ್ಗವನ್ನು ಕಂಡುಹಿಡಿದು ಮಲಬಾರಿಗೆ ಬಂದಾಗ ಅವನ ಜೊತೆ ಬಂದ ನಾವಿಕರನೇಕರು ವಾಪಸಾಗಲು ನಿರಾಕರಿಸಿದರು. ಸ್ಥಳೀಯ ರಾಜನ ಆಸ್ಥಾನದಲ್ಲಿ ನಿಯಮಿತ ಸಂಬಳ, ಗೌರವಾನ್ವಿತ ಕೆಲಸ, ಧಾರ್ಮಿಕ ಸ್ವಾತಂತ್ರಗಳಲ್ಲದೇ ಹಲವು ಆಮಿಷಗಳು ಅವರ ನಿರ್ಧಾರಕ್ಕೆ ಕಾರಣವಾಗಿದ್ದವು. ಇಲ್ಲಿ ಬಹುಪತ್ನಿತ್ವಕ್ಕೆ ಅವಕಾಶವಿತ್ತು. ‘ಇಟ್ಟುಕೊಳ್ಳುವುದು’ ಹಾಗೂ ಗುಲಾಮೀ ಪದ್ಧತಿ ನಿಷೇಧಗೊಂಡಿರಲಿಲ್ಲ. ಬೇಕಾದಷ್ಟು ಹೆಣ್ಣುಗಳನ್ನು ಅನುಭವಿಸುತ್ತ, ದಿನಗಟ್ಟಲೇ ಹಾಡುತ್ತ ಕುಣಿಯಲು, ಕುಡಿದು ಮತ್ತಿನಲ್ಲಿರಲು ಅವಕಾಶವಿರುವ ಭಾರತದ ತೀರಗಳು ತಪ್ಪು ಕಾರಣಗಳಿಗಾಗಿ ಮೊದಮೊದಲು ಅವರನ್ನು ಆಕರ್ಷಿಸಿರಬಹುದು. ಆದರೆ ಕ್ರಮೇಣ ಇಲ್ಲಿಯ ರೀತಿ ರಿವಾಜುಗಳನ್ನೇ ಕಲಿತು, ಇಲ್ಲಿನ ಹಿಂದೂ ಅಥವಾ ಮುಸ್ಲಿಮ್ ಹೆಣ್ಣುಗಳನ್ನೇ ಮದುವೆಯಾಗಿ, ಭಾರತೀಯರೇ ಆಗಿಹೋದವರ ಸಂಖ್ಯೆಯೂ ಕಡಿಮೆಯಲ್ಲ. ೧೫೧೦ರಲ್ಲಿ ಮಲಬಾರಿಗೆ ಬಂದಿಳಿದ ಆಲ್ಬುಕರ್ಕ್ ತನ್ನ ಸೇನೆಯನ್ನೆದುರಿಸಿ ಹತರಾದ ಮುಸಲ್ಮಾನ ಸೇನೆಯ ಯೋಧಪತ್ನಿಯರನ್ನು ಮದುವೆಯಾಗುವಂತೆ ತನ್ನ ಸೈನಿಕರನ್ನು ಹುರಿದುಂಬಿಸಿದ್ದ. ‘ಲಕ್ಷಣವಾಗಿದ್ದ ಬಿಳಿಯ ದೇವತೆ’ಯರನ್ನು ವಧುದಕ್ಷಿಣೆ ನೀಡಿ, ಕ್ರ್ರಿಶ್ಚಿಯನ್ನರಾಗಿ ಮತಾಂತರಗೊಳಿಸಿ, ಮದುವೆ ಮಾಡಿಕೊಳ್ಳಲಾಗಿತ್ತು. ಆದರೆ ಬಲವಂತದ ಈ ಕ್ರಿಯೆಯಿಂದ ಪೋರ್ಚುಗೀಸರಿಗೆ ಅವರು ಬಯಸಿದ ದೀರ್ಘಕಾಲೀನ ಲಾಭಗಳು ದೊರಕದೇ ಇದ್ದಿದ್ದು ಬೇರೆಯೇ ವಿಷಯ.

ಹೀಗೆ ‘ಫರಂಗಿ’ ಜನರನ್ನು ಆಕರ್ಷಿಸಿದ ತೆರೆದೆದೆಯವರು ರವಿಕೆ ತೊಟ್ಟಿದ್ದು ಯಾವಾಗ? ಏಕೆ? ಆಗಿದ್ದಿದ್ದು ಈಗಿನ ನೈತಿಕ ಪೊಲೀಸ್‌ಗಿರಿಯ ಉಲ್ಟಾ ಪರಿಸ್ಥಿತಿ. ರವಿಕೆಯಿಲ್ಲದ ಅಂದಿನ ಶ್ರಮಿಕ ತಳಸಮುದಾಯಗಳ ಹೆಣ್ಣುಮಕ್ಕಳು ರವಿಕೆ ಪಡೆದಿದ್ದೊಂದು ಹೋರಾಟ. ಅದು ಒಂದು ಶತಮಾನ ನಂತರದ ಅಬ್ರಾಹ್ಮಣ ಚಳುವಳಿಯ ಮೂಲವೂ ಆಗಿರಬಹುದು. ಆ ಮಹಿಳೆಯರು ರವಿಕೆ ಧರಿಸುವುದನ್ನು ಮೇಲ್ಜಾತಿ ಪುರುಷರು ಒಪ್ಪುತ್ತಿರಲಿಲ್ಲ. ಅವರು ಚಿನ್ನ, ಚಪ್ಪಲಿ ಹಾಕಿಕೊಳ್ಳುವಂತಿರಲಿಲ್ಲ. ಛತ್ರಿ ಬಳಸುವಂತಿರಲಿಲ್ಲ. ಹಾಲು ಕರೆಯುವಂತಿರಲಿಲ್ಲ, ಸೊಂಟದ ಮೇಲೆ ಕೊಡ ಹೊರುವಂತಿರಲಿಲ್ಲ. ಮೊಣಕಾಲತನಕವಷ್ಟೇ ತುಂಡು ಬಟ್ಟೆ ಉಡಬೇಕು. ಇದನ್ನೆಲ್ಲ ವಿರೋಧಿಸಿದ ಕೇರಳದ ಶಾಣಾರ್ (ನಾಡಾರ್) ಸಮುದಾಯವನ್ನು ಉದಾಹರಣೆಗೆ ನೋಡಬಹುದು. ಆ ಸಮುದಾಯದ ಹೆಣ್ಣುಮಕ್ಕಳು ತೆರೆದೆದೆಯವರಾಗಿದ್ದರು. ಮಿಷನರಿಗಳ ಪ್ರಭಾವದಿಂದ ಮೇಲ್ವಸ್ತ್ರ ಧರಿಸತೊಡಗಿದರು. ೧೮೨೨ರಲ್ಲಿ ಬದಲಾದ ಮಹಿಳೆಯರ ದಿರಿಸಿನ ಬಗೆಗೆ ನಾಯರ್ ಸಮುದಾಯದವರು ತಕರಾರೆತ್ತಿ ಅವರ ದಟ್ಟಿಗಳನ್ನು ಕಿತ್ತೆಳೆದು ಹರಿದುಹಾಕಿದರು. ಕೋರ್ಟಿನಲ್ಲಿ ಕೇಸು ನಡೆಯಿತು. ೧೮೨೯ರಲ್ಲಿ ತಿರುವಾಂಕೂರು ಆಡಳಿತವು ಆ ಮಹಿಳೆಯರು ಮೇಲುಡುಪು ಧರಿಸುವುದನ್ನು ನಿರ್ಬಂಧಿಸಿದರೂ ಹಿಂದೂ ಮತ್ತು ಕ್ರಿಶ್ಚಿಯನ್ ಶಾಣಾರ್ ಮಹಿಳೆಯರು ಮೇಲುಡುಪು ಧರಿಸಿತೊಡಗಿದರು. ಜೊತೆಗೆ ಮೇಲ್ಜಾತಿಯವರ ಮನೆಯಲ್ಲಿ ಪುಕ್ಕಟೆ ಕೆಲಸ ಮಾಡಲು ನಿರಾಕರಿಸಿದರು. ೧೮೫೯ರಲ್ಲಿ ಮಾರುಕಟ್ಟೆಯಲ್ಲಿ ಆ ಮಹಿಳೆಯರ ಮೇಲುವಸ್ತ್ರ ಕಿತ್ತು ಹರಿದು ಮತ್ತೆ ಗಲಭೆಯಾಯಿತು. ಕೊನೆಗೆ ಸರ್ಕಾರ ಅವರು ಮೇಲುಡುಪು ಹೊದ್ದುಕೊಳ್ಳಲು ಅನುಮತಿ ಕೊಟ್ಟರೂ ಮೇಲ್ಜಾತಿ ಮಹಿಳೆಯರಂತೆ ರವಿಕೆ ಧರಿಸುವುದನ್ನು ನಿರ್ಬಂಧಿಸಿತು.

ತಿರುವಾಂಕೂರು ಪ್ರಾಂತ್ಯದ ಶಾಣಾರ್ ಹೆಂಗಸರು ಕುಟುಂಬ ಸಮೇತ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡ ಮೇಲೆ ಮಿಷನರಿಗಳು ಅವರಿಗೆಂದೇ ವಿಶೇಷ ಶೈಲಿಯ ಬ್ಲೌಸುಗಳನ್ನು ಹೊಲೆಸಿಕೊಟ್ಟರು. ಬೇರೆಯೇ ಆದ ಶೈಲಿ ಅವರಿಗೆ ಬೇರೆ ಐಡೆಂಟಿಟಿಯನ್ನು ಕೊಡಬಹುದೆಂದು ಮಿಷನರಿಗಳು ಭಾವಿಸಿದ್ದರು. ಆದರೆ ಅದನ್ನು ತಿರಸ್ಕರಿಸಿದ ಶಾಣಾರ್ ಹೆಂಗಸರು ಮೇಲ್ವರ್ಗದ ಮೋಪ್ಳಾ ಸ್ತ್ರೀಯರು ಹಾಗೂ ಸಿರಿಯನ್ ಕ್ರಿಶ್ಚಿಯನ್ನರು ಧರಿಸುವ ರೀತಿಯ ರವಿಕೆಯೇ ತಮಗೆ ಬೇಕೆಂದು ಪಟ್ಟುಹಿಡಿದು ಕುಳಿತರು. ತಮ್ಮ ‘ಮಾನ’ ಮುಚ್ಚಿಕೊಳ್ಳುವ ಅವಕಾಶ ಸಿಗುವುದು ಒತ್ತಟ್ಟಿಗಾದರೆ, ಮೇಲ್ಜಾತಿಗಳಿಗಿರುವ ‘ಅವಕಾಶ’ವೇ ತಮಗೂ ದೊರೆಯಲಿ ಎಂದು ಬಯಸಿದ್ದರು. ಶಾಣಾರ್ ಹೆಂಗಸರ ರವಿಕೆಯ ಬೇಡಿಕೆ ಮತಾಂತರದ ಉದ್ದೇಶಗಳಾಚೆಗೆ ವಿಸ್ತರಿಸಿಕೊಂಡಿತ್ತು.

ತನ್ನ ಎದೆಮುಚ್ಚಿಕೊಳ್ಳುವ ಬಟ್ಟೆ ತೊಟ್ಟುಕೊಳ್ಳಲೂ ಕಾನೂನಿನ ಅಪ್ಪಣೆಗೆ ಕಾಯಬೇಕೆ?! ಎದೆ, ಎದೆಗಾರಿಕೆ, ಅಕ್ಕಮಹಾದೇವಿ, ಮುಚ್ಚಿಟ್ಟುಕೊಳ್ಳುವುದು-ಬಯಲಾಗುವುದು ಏನಿದೆಲ್ಲ ಎಂದುಕೊಳ್ಳುತ್ತ ರವಿಕೆ ತೊಡದ ನಮ್ಮೂರ ಹಾಲಕ್ಕಿ ಹೆಣ್ಣುಮಕ್ಕಳ ವ್ಯಾಪಾರ ಕೌಶಲ್ಯ ಕಣ್ಣೆದುರು ಸುಳಿದು ಹೋಗುವಾಗ ಅಲಪ್ಪುರದ ಹಿನ್ನೀರಿನಲ್ಲಿ ದೋಣಿ ಲಂಗರು ಹಾಕಿ ನಿಂತಿತು. ಕೆಳಗಿಳಿದು ದಂಡೆಯ ಕಿರಿದಾದ ಏರಿಯ ಮೇಲೆ ನಡೆಯತೊಡಗಿದೆವು. ಬಲಶಾಲಿ ಗಂಡಸರು ಬಲೆಹಾಕುವ ಸಿದ್ಧತೆಯಲ್ಲಿದ್ದರೆ ಮಹಿಳೆಯರು ಕಪ್ಪೆಚಿಪ್ಪಿನ ಸಣ್ಣಗುಪ್ಪೆಯನ್ನು ಪಕ್ಕದಲ್ಲಿಟ್ಟುಕೊಂಡು ಗಾಳ ಇಳಿಬಿಟ್ಟು ಧ್ಯಾನಸ್ಥರಾಗಿ ಕುಳಿತಿದ್ದರು. ಲೈಸೆನ್ಸ್ ಸಂಖ್ಯೆ ಬರೆಯಲಾದ ನೀರಾ (ಟಾಡಿ) ಅಂಗಡಿ, ದೋಣಿಕಟ್ಟೆಯ ಬಳಿ ಗುಂಪಾಗಿ ಸೇರಿದ ಗಂಡಸರನ್ನು ಬಿಟ್ಟರೆ ಗಮನ ಸೆಳೆದವರೆಲ್ಲ ಮತ್ಸ್ಯಗಂಧಿಯರೇ. ಒಬ್ಬಾಕೆ ಕಲ್ಲಮೇಲೆ ಮೀನು ತಿಕ್ಕಿ ಚೊಕ್ಕ ಮಾಡುತ್ತಿದ್ದರೆ; ವಯಸ್ಸಾದ ಆ ಮಹಿಳೆ ತನ್ನ ಬಿಳಿಕೂದಲ ರಾಶಿಯನ್ನು ಮುಂದೆ ಇಳಿಬಿಟ್ಟು ತೊಳೆಯುತ್ತಿದ್ದರು. ಒಂದು ದೊಡ್ಡ ದೋಣಿಯನ್ನು ಇಬ್ಬರು ಹೆಣ್ಣುಮಕ್ಕಳು ಹುಟ್ಟುಹಾಕುತ್ತ ವೇಗವಾಗಿ ಎಲ್ಲಿಗೋ ಒಯ್ದರು. ಮತ್ತೊಂದು ಹುಲ್ಲುಹಸಿ ತುಂಬಿದ ಪಾತಿ ದೋಣಿಯನ್ನು ಇಳಿವಯಸ್ಸಿನ ಅಮ್ಮ ನಡೆಸಿ ತಂದು, ದೋಣಿಯನ್ನು ದಡದ ಮರಕ್ಕೆ ಕಟ್ಟಿ ಹುಲ್ಲನ್ನು ಒಳಸಾಗಿಸತೊಡಗಿದರು. ಕೆಲ ಹುಡುಗಿಯರು ಬಿಡಿಸಿದ ಮ್ಯಾಗಜೀನ್ ಕೈಲಿ ಹಿಡಿದು ನಡೆಯುತ್ತಲೇ ಓದುತ್ತ ಸಾಗಿದ್ದರು. ಎಲ್ಲರ ತಲೆಗೂದಲೂ ಇಳಿಬಿಸಿಲಿಗೆ ಮಿರಮಿರ ಮಿಂಚುತ್ತ ಈಗ ಎಣ್ಣೆಹನಿ ತೊಟ್ಟಿಕ್ಕುವುದೋ ಎಂಬ ಭಾಸ ಮೂಡಿಸುತ್ತಿತ್ತು.

ಈ ದೇವರ ರಾಜ್ಯದಲ್ಲಿ ಇನ್ನೂ ಒಂದು ವಿಶೇಷವಿದೆ: ಮಹಿಳಾ ಸಂಘ-ಸಂಸ್ಥೆ, ಫ್ಯಾಕ್ಟರಿಗಳಲ್ಲಿ ಬೆಳಿಗ್ಗೆ ಎಲ್ಲರೂ ಸೇರಿದ ಕೂಡಲೇ ಪಾಳಿಯ ಮೇಲೆ ದಿನಕ್ಕೊಬ್ಬರು ಅವತ್ತಿನ ನ್ಯೂಸ್ ಪೇಪರ್ ಓದುತ್ತಾರಂತೆ! ಎಲಎಲಾ ಮಲಬಾರಿನ ಮಹಿಳೆಯರೇ!!

ಆದರೆ,

ನಿತ್ಯ ಪೇಪರು ಓದಿದರೇನು? ಅರ್ಧಕ್ಕಿಂತ ಹೆಚ್ಚು ಜನಸಂಖ್ಯೆ ಮಹಿಳೆಯರಿದ್ದರೇನು? ದುಡಿಯುವ ವರ್ಗಗಳ ಸರ್ಕಾರವಿದ್ದರೇನು? ಕೇರಳ ಇನ್ನೂ ಮಹಿಳಾ ಮುಖ್ಯಮಂತ್ರಿಯನ್ನು ಕಂಡಿಲ್ಲ. ಈಗಿನ ವಿಧಾನಸಭೆಯಲ್ಲೂ ಮಹಿಳಾ ಪ್ರಾತಿನಿಧ್ಯ ೫% ದಾಟಿಲ್ಲ. ವರ್ಷದಿಂದ ವರ್ಷಕ್ಕೆ ರಾಜಕಾರಣದಲ್ಲಿ ಮಹಿಳೆಯರ ಸಂಖ್ಯೆ ಕುಸಿಯುತ್ತಿದೆ. ದಾರಿಯ ಎರಡೂ ಬದಿ ಹೆಜ್ಜೆಹೆಜ್ಜೆಗೆ ಸಂಘಟನೆಗಳ ಪೋಸ್ಟರುಗಳು ಕಂಡರೂ ಅದರಲ್ಲಿ ಬೆರಳೆಣಿಕೆಯಷ್ಟೂ ಮಹಿಳೆಯರಿರಲಿಲ್ಲ. ಶಬರಿಮಲೈಯಂಥ ದೇವಸ್ಥಾನದಲ್ಲಿ ಮುಟ್ಟಾಗುವ ವಯಸ್ಸಿನ ಮಹಿಳೆಯರಿಗೆ ಪ್ರವೇಶವಿಲ್ಲ. ಕೇರಳದ ನಾರಿಯರಿಗೆ ಸಾಂಪ್ರದಾಯಿಕ ಕಲಾಪ್ರಕಾರಗಳನ್ನು ಪ್ರವೇಶಿಸಲು ಇನ್ನೂ ಸಾಧ್ಯವಾಗಿಲ್ಲ. ಕಥಕ್ಕಳಿ, ಕಲರಿಪಯಟ್ಟು ಎಂಬ ಸ್ಥಳೀಯ, ಅನನ್ಯ ಕಲಾ ಪ್ರಕಾರಗಳು ಇಂದಿಗೂ ಕೇವಲ ಪುರುಷಪಾರಮ್ಯದ ಕ್ಷೇತ್ರಗಳು. ಮೋಹಿನಿ ಅಟ್ಟಂ ಎಂಬ ಶೃಂಗಾರ ಪ್ರಧಾನ ನೃತ್ಯ ಪ್ರಕಾರವಷ್ಟೇ ಮಹಿಳೆಯರದು! ಮಣಗಟ್ಟಲೆ ಚಿನ್ನ ಹೇರಿಕೊಂಡ ಅಥವಾ ದುಬಾರಿ ಉಡುಪಿನ ರೂಪದರ್ಶಿಗಳಾಗಿ ದೊಡ್ಡ ಫ್ಲೆಕ್ಸಿ ಬೋರ್ಡುಗಳ ತುಂಬ ಎಲ್ಲೆಲ್ಲೂ ಚಂದದ ಮಹಿಳೆಯರು!! ಕೌಟುಂಬಿಕವಾಗಿ ಮಾತೃಪ್ರಧಾನ ಸಂಸ್ಕೃತಿಯ ನಾಡಿನಲ್ಲೂ ಸಾಮಾಜಿಕ ಸ್ತರಗಳಲ್ಲಿ ಪಿತೃಪ್ರಧಾನ ವ್ಯವಸ್ಥೆಯೇ ಅಂತರ್ಗತವಾಗಿರುವುದು, ಅಧಿಕಾರದಿಂದ ಮಹಿಳೆಯನ್ನು ದೂರವೇ ಇಟ್ಟಿರುವುದು ಗಮನಾರ್ಹ.

ದೇವರ ರಾಜ್ಯದಲ್ಲಿ ಲಿಂಗ ತಾರತಮ್ಯ..

***

ನಮ್ಮ ಕಾರಿನ ಮುಂದೆ ಒಂದು ಜೀಪು ಸಾಗುತ್ತಿತ್ತು. ಇಳಿಬಿಸಿಲಿನಲ್ಲಿ ಮೂವರು ಮಹಿಳೆಯರು ಬುಟ್ಟಿ ಕವುಚಿ ಹಾಕಿ ಕುಳಿತು ಮಾತುಕತೆಯಾಡುತ್ತಿದ್ದರು. ಕುಳಿತಿದ್ದು ಬಲೆಯ ರಾಶಿಯ ಮೇಲೆ, ಕವುಚಿದ್ದು ಮೀನು ಬುಟ್ಟಿಯೇ ಇರಬೇಕು. ಬಹುಶಃ ಒಳ್ಳೆಯ ವ್ಯಾಪಾರವಾಗಿರಬೇಕು. ಏಕೆಂದರೆ ಅವರ ಭಂಗಿಯ ನಿರಾಳತೆಯಲ್ಲಿ ಕೆಲಸ ಮುಗಿಸಿದ ನೆಮ್ಮದಿಯ ಸೂಚನೆಯಿತ್ತು. ಒಬ್ಬಾಕೆ ತುಂಬ ಗಂಭೀರವಾಗಿ ತನ್ನ ಬಾರೀಕು ಕೈಕಾಲುಗಳನ್ನು ನೆಲಮುಗಿಲುಗಳತ್ತ ತಿರುಗಿಸಿ, ತುಟಿ ಉದ್ದ ಮಾಡಿ ಏನೋ ಹೇಳುತ್ತಿದ್ದಳು. ಅವಳ ಹಾವಭಾವ, ಮಾತುಗಳನ್ನು ಉಳಿದಿಬ್ಬರು ತದೇಕವಾಗಿ ಗಮನಿಸುತ್ತಿದ್ದರು.

ಡ್ರೈವರನಿಗೆ ನಿಧಾನ ಅವರ ಹಿಂದೇ ಸಾಗಲು ಹೇಳಿದೆ.

ಏನು ಮಾತನಾಡುತ್ತಿದ್ದಿರಬಹುದು ಅವರು? ವ್ಯಾಪಾರದ ಕಷ್ಟನಷ್ಟಗಳ ಕುರಿತೇ? ದಾರಿಯ ಎರಡೂ ಬದಿ ಹರಡಿಕೊಂಡ ಚಹ ತೋಟಗಳ ಕುರಿತೇ? ನಮ್ಮನ್ನೇ ಬೆಂಬಲಿಸಿ ಎಂದು ಹೆಜ್ಜೆಗೊಂದರಂತೆ ಪೋಸ್ಟರ್‌ಗಳ ಮೂಲಕ ಕೇಳುವ ವಿವಿಧ ಕಾರ್ಮಿಕ ಯೂನಿಯನ್‌ಗಳ ಕುರಿತೇ? ತಮ್ಮ ಗಂಡಮಕ್ಕಳ ಕುರಿತೇ? ಮತ್ಸ್ಯಕ್ಷಾಮದ ಕುರಿತೇ? ಬೆನ್ನ ಮೇಲಿನ ಭಾರದ ಕುರಿತೆ?

ನನ್ನೆದುರಿಗೆ ಡ್ಯಾಶ್ ಬೋರ್ಡಿನಲ್ಲಿ ಮಡಚಿಕೊಂಡ ಮಲಯಾಳ ಮನೋರಮಾ ಪೇಪರ್ ಕುಳಿತಿತ್ತು. ತೆಗೆದು ಹರಡಿದರೆ ಅಂಕಿಸಂಖ್ಯೆ ಮತ್ತು ಇಂಗ್ಲಿಷ್ ಪದಗಳನ್ನು ಹೊರತುಪಡಿಸಿ ಏನೇನೂ ತಿಳಿಯಲಿಲ್ಲ. ಜಿಲೇಬಿಯಂತೆ, ಚಕ್ಕುಲಿಯಂತೆ ಸುರುಳಿಸುರುಳಿಯಾಗಿ ಅಚ್ಚಾದ ಸಾವಿರಾರು ಅಕ್ಷರಗಳಿದ್ದರೂ ಒಂದೇ ಒಂದು ಅಕ್ಷರ ಅರ್ಥವಾಗಲಿಲ್ಲ.

ಬೋಟ್ ಹೌಸಿನಲ್ಲಿ ಹೀಗೇ ಆಗಿತ್ತು. ಚುಕ್ಕಾಣಿ ಹಿಡಿದು ಕುಳಿತ ಹಿರಿಯನಿಗೆ ಏನನ್ನಾದರೂ ಹೇಳುವ ಉಮೇದು. ಆದರೆ ಅವರಿಗೆ ಮಲಯಾಳ ಬಿಟ್ಟರೆ ಕೊಂಚ ತಮಿಳು ಬರುತ್ತಿತ್ತು ಅಷ್ಟೆ. ನಮಗೆ ಅವೆರೆಡನ್ನು ಬಿಟ್ಟು ಉಳಿದ ದಕ್ಷಿಣದ ಭಾಷೆಗಳು ಅರ್ಥವಾಗುತ್ತವೆ. ಸುತ್ತಲೂ ಏಳುವ ನೀರಿನ ಅಲೆಗಳ ಸದ್ದಿನಂತೇ ಕೊಳಪಳ ಕೊಳಪಳ ಎಂದು ಶೃತಿಬದ್ಧವಾಗಿ ಏನನ್ನೋ ಹೇಳುತ್ತಿದ್ದರು. ಆದರೆ ದ್ರಾವಿಡ ಭಾಷೆಗಳಲ್ಲಿ ಅತಿ ಕಿರಿಯದಾದ ಹಾಗೂ ಹೇರಳವಾಗಿ ಸಂಸ್ಕೃತ ಪದಗಳನ್ನೊಳಗೊಂಡ ಮಲೆಯಾಳಂ ಯಾವ ಭಾವವನ್ನೂ ಹುಟ್ಟಿಸಲಿಲ್ಲ. ಹಿನ್ನೀರು ಕುರಿತು ಬೆಳೆಯುತ್ತಲೇ ಹೋದ ಸಂದೇಹಗಳಿಗೆ ಕೊನೆಗೆ ಗೂಗಲ್‌ನಲ್ಲಿ ಉತ್ತರ ಹುಡುಕುವಂತಾಯಿತು. ಸಾವಿರಾರು ವರ್ಷಗಳಿಂದ ದಾಟದ ದ್ವೀಪಗಳಾಗಿ ಉಳಿದ ಅಕ್ಕತಂಗಿಯರ ನಡುವೆ ಈಗ ಇಂಗ್ಲಿಷ್ ಸೇತುವೆ ನಿರ್ಮಾಣಗೊಂಡಿದ್ದು ಅದನ್ನು ನೆಚ್ಚುವುದು ಅನಿವಾರ್ಯವಾಯಿತು.

ಭಾಷೆ, ಎಷ್ಟು ವಿಚಿತ್ರ! ಈ ನೆಲದಲ್ಲಿ ಹುಟ್ಟಿದ ಕಾರಣಕ್ಕೇ ಇಂಥ ಬದುಕು ಬದುಕಬೇಕಾದ, ಈ ಭಾಷೆಯನಾಡಬೇಕಾದ ಇವರು. ಆ ನೆಲದಲ್ಲಿ ಹುಟ್ಟಿ ಆ ಭಾಷೆ ಆಡುವ ಕಾರಣಕ್ಕೇ ನಾನೆಂಬ ನಾನಾಗಿರುವ ನಾನು. ಭಾಷೆ ಹೇಗೆ ಬೆಸೆಯಬಲ್ಲದೋ ಹಾಗೇ ದಾಟಲಾಗದ ಕಂದಕವೂ ಆಗಬಹುದಲ್ಲವೆ?

ಅದೇನೋ ಸರಿ, ಈ ಪುಟ್ಟ ಕಿವಿ, ಮಿದುಳಿಗೆ ಏಕಾದರೂ ಅವರಾಡುವ ಮಾತೆಲ್ಲ ವಿವರವಾಗಿ ಅರ್ಥವಾಗಬೇಕು? ಮುಖಚಹರೆ, ಹಾವಭಾವ, ಪ್ರಯಾಣದ ಅನುಭವಗಳಿಂದ ಅಷ್ಟಿಷ್ಟು ಅರ್ಥವಾದರೆ ಸಾಲದೆ? ಅವರ ಮಾತು ಅರ್ಥವಾದರೂ ನಾನೇನು ಮಾಡಬಲ್ಲೆ?


ದೇವರೇ, ನಿನ್ನ ಮಕ್ಕಳ ರಕ್ಷಿಸಿಕೋ..


ಪ್ರವಾಸೋದ್ಯಮ ಕೇರಳ ಸರ್ಕಾರದ ಮುಖ್ಯ ಆದಾಯ ಮೂಲ. ದೇಶೀ-ವಿದೇಶೀ ಪ್ರವಾಸಿಗಳೆಲ್ಲ ದಂಡುದಂಡಾಗಿ ಕೇರಳಕ್ಕೆ ಬಂದಿಳಿಯುತ್ತಾರೆ. ದಂಡೆಗುಂಟ ಇರುವ ಮನೆಗಳೆದುರು ದೋಣಿಯಲ್ಲಿ, ಕಾಲ್ನಡಿಗೆಯಲ್ಲಿ ಸಾಗುತ್ತಾರೆ. ಮನೆಯೆದುರು ಪಾತ್ರೆ ತಿಕ್ಕುತ್ತ, ದೇವರ ಸಾಮಾನುಗಳಿಗೆ ಹುಳಿ ಹಚ್ಚುತ್ತ, ಮೀನು ಕತ್ತರಿಸುತ್ತ, ಮತ್ಯಾರದೋ ಜೊತೆ ಏರು ದನಿಯಲ್ಲಿ ಜಗಳಾಡುತ್ತ, ಹೇನು ಹೆಕ್ಕುತ್ತ ಕುಳಿತಿರುವಾಗ ಅಪರಿಚಿತ ನಾಡಿನ, ಭಾಷೆಯ ಜನ ಸುಳಿದಾಡಿದರೆ ಮುಜುಗರವಾಗುವುದು ಸಹಜ. ಆದರೆ ಕೇರಳೀಯರದು ಘನತೆಯ ನಡವಳಿಕೆ. ಭಾಷೆಯೊಂದು ತೊಡಕಾದರೂ ಅವರು ತಮ್ಮ ಊರುಕೇರಿಯೊಳಗೆ ಪರವೂರಿನವರ ಇರುವಿಕೆ ಬಗೆಗೆ ದುಷ್ಟ ಕುತೂಹಲ ತೋರದೇ ತಮ್ಮಷ್ಟಕ್ಕೆ ತಾವಿದ್ದು ಬಿಡುತ್ತಾರೆ. ಕಣ್ಣು ಕೂಡಿದರಷ್ಟೇ ಒಂದು ಕಿರುನಗೆ. ಹಾಗೆಂದು ಸ್ನೇಹಪರರಲ್ಲ ಎನ್ನುವಂತಿಲ್ಲ, ಅತಿ ಸಲುಗೆಯ ವ್ಯಾಪಾರೀ ಹಿತಾಸಕ್ತಿಯೂ ಇಲ್ಲ.

ಪುಟ್ಟ ದೋಣಿಮೇಲೆ ಹತ್ತಿಪ್ಪತ್ತು ಜನ ಒಟ್ಟಿಗೇ ಕೂತು ಸಾಗುತ್ತಿದ್ದೆವು. ಎರಡೂ ಕಡೆ ಪುಟ್ಟಪುಟ್ಟ ಮನೆಗಳು. ಎಲ್ಲ ಮನೆಗಳೆದುರೂ ಕಾಯಿಗಳಿಂದ ತೊನೆಯುವ ತೆಂಗು, ಮಾವಿನ ಮರಗಳು. ಹಿಂದೆ ಸುಗ್ಗಿಯ ಗದ್ದೆ ಬಯಲು. ನಮ್ಮ ದೋಣಿಯಲ್ಲಿದ್ದ ವಯಸ್ಸಾದ ವಿದೇಶೀ ಮಹಿಳೆಯೊಬ್ಬರು ತಮ್ಮ ಕೈಲಿ ನಾಣ್ಯ ಹಿಡಿದು ದಡದಲ್ಲಿದ್ದ ಮಕ್ಕಳನ್ನು ಕರೆಯತೊಡಗಿದರು. ಆಡುತ್ತ, ಮೀನು ಹಿಡಿಯುತ್ತ ತಮ್ಮ ಪಾಡಿಗೆ ತಾವಿದ್ದ ಮಕ್ಕಳು ಇವರು ಕರೆದದ್ದೇ ತಡ ದೋಣಿಯ ಹಿಂದೆ ಓಡೋಡಿ ಬರತೊಡಗಿದವು. ದೋಣಿಯಲ್ಲಿದ್ದ ನಮಗೆ ದಿಗಿಲು. ಆ ಮಕ್ಕಳಿಗೆ ಹಾಗೆ ದುಡ್ಡು ಕೊಡಬಾರದೆಂದು ಕೇಳಿಕೊಂಡೆವು. ಆಕೆ ಪೆನ್ಸಿಲ್, ಬುಕ್ ಎಂದೆಲ್ಲ ಹೇಳತೊಡಗಿದರು. ಕೊನೆಗೆ ಅವರು ಕಡುಬಡವ ಮಕ್ಕಳಲ್ಲವೆಂದೂ, ಉಂಡುಡಲು ತಕ್ಕ ಮಟ್ಟಿಗೆ ಇರುವವರೆಂದೂ, ಅರೆನಗ್ನತೆ ಅವರ ವೇಷವೆಂದೂ, ಹೀಗೆ ಕೊಡುವುದು ಮಕ್ಕಳಿಗೆ ಕೆಟ್ಟ ಅಭ್ಯಾಸವೊಂದನ್ನು ರೂಢಿಸುವುದರಿಂದ ಖಂಡಿತಾ ಕೊಡಬಾರದೆಂದು ಒತ್ತಾಯಿಸಿದೆವು. ಪಡೆಯುವವನ ಪಡೆಯಬೇಕಾದ ಅನಿವಾರ್ಯತೆಯನ್ನು ಕೊಡುವಿಕೆ ತಪ್ಪಿಸಬಲ್ಲುದಾದರೆ ಮಾತ್ರ ಅಂಥ ಕೊಡುವಿಕೆಗೆ ಅರ್ಥವಿದೆ. ಇಲ್ಲದಿದ್ದರೆ ಅದು ಅವರ ಆತ್ಮಘನತೆ ನಾಶ ಮಾಡುವ ಅಪಾಯಕಾರಿ ಕ್ರಿಯೆಯಾಗುತ್ತದೆ. ದೋಣಿಯಲ್ಲಿದ್ದ ಇತರರಿಗೆ ನಮ್ಮ ಅಪೀಲು ಅರ್ಥವಾಗಿ ಕೊಡಬಾರದೆಂದು ಆಕೆಯ ಬಳಿ ಹೇಳಿದರು.

ಈಜಿಪ್ಟ್‌ನ ನೈಲ್‌ಕ್ರೂಸ್ ದೃಶ್ಯ ಮೂಡಿಸಿದ ಗಾಯ ನಮ್ಮ ಕಣ್ಣಲ್ಲಿನ್ನೂ ಹಸಿಯಾಗಿತ್ತು. ನೈಲ್ ನದೀದಂಡೆಯಲ್ಲಿ ಆಡುವ ನುಬಿಯನ್ ಮಕ್ಕಳು ದೋಣಿ, ಹಡಗು ಕಂಡರೆ ಸಾಕು, ಹಿಂದೆಹಿಂದೆ ಓಡಿ ಬರುತ್ತಿದ್ದರು. ‘ಆಪಲ್, ಡಾಲರ್, ಪೌಂಡ್’ ಎಂದು ಕೂಗುತ್ತಾ ಹಡಗಿನಿಂದ ಬಿಸಾಡಬಹುದಾದ ಸಾಮಾನುಗಳಿಗಾಗಿ ಕೈಚಾಚುತ್ತ, ಬಿಸಾಡಿದ ವಸ್ತುಗಳಿಗೆ ಮುತ್ತಿಕೊಂಡು ಕಿತ್ತಾಡುತ್ತಿದ್ದವು. ಪ್ರವಾಸೋದ್ಯಮದಿಂದಾಗುವ ಅತಿಯಾದ ಎಕ್ಸ್‌ಪೋಷರ್ ಜನಸಾಮಾನ್ಯರನ್ನು ವ್ಯಾಪಾರಿಗಳಾಗಿಸಿ ಹಪಾಹಪಿಗೆ ದೂಡಬಹುದಾದ; ಅವರ ಖಾಸಗಿತನವನ್ನು ಅಪಹರಿಸಿ ಘನತೆ ನಾಶವಾಗಬಹುದಾದ ಅಪಾಯವಿರುತ್ತದೆ. ಇದಕ್ಕೆ ಉದಾಹರಣೆಯಾಗಿ ನಮ್ಮ ಸುತ್ತಲ ಹಲವಾರು ಪ್ರವಾಸಿ ಸ್ಥಳಗಳ ಜನರ ನಡವಳಿಕೆಗಳಿವೆ. ಅಂಥಲ್ಲಿ ವಾಸಿಸುತ್ತಿರುವ ಕಾರಣಕ್ಕೆ ಅಲ್ಲಿನ ಎಳೆಯ ಮಕ್ಕಳು ಆತ್ಮಗೌರವವನ್ನು ರೂಪುಗೊಳ್ಳುವುದರಲ್ಲೇ ಕಳೆದುಕೊಳ್ಳುವಂತಾದರೆ?

ದೇವರೇ, ಹಾಗಾಗದಂತೆ ನಿನ್ನ ರಾಜ್ಯದ ಮಕ್ಕಳನ್ನು ರಕ್ಷಿಸು..

ದೇವರ ಕಾಡು!

ಅದು ದೇವರ ರಾಜ್ಯವೇ ಇರಬೇಕು. ಓಹೋ! ಅದೆಷ್ಟು ದೇವದೇವತೆ ಸಂತ ಮಹಾನುಭಾವರು ಪೋಸ್ಟರುಗಳಾಗಿ, ಮೂರ್ತಿಗಳಾಗಿ, ಭಕ್ತಿಯ ಘೋಷಣೆಗಳಾಗಿ, ಭಜನೆಯ ಸಾಲುಗಳಾಗಿ, ಪ್ರಾರ್ಥನೆಯ ಕೂಗಾಗಿ ವಾತಾವರಣದಲ್ಲೆಲ್ಲ ಹರಡಿಕೊಂಡಿದ್ದಾರೆ!

ಹಿನ್ನೀರಿನಲ್ಲಿ ತೇಲುವಾಗ ಒಂದು ದಂಡೆಯಿಂದ ಶಿವನ ಭಜನೆಯೂ, ಮತ್ತೊಂದು ಕಡೆಯಿಂದ ಮಾತಾ ಅಮೃತಾನಂದಮಯಿ ಪ್ರಾರ್ಥನೆಯೂ, ಮೂರ್ನಾಲ್ಕು ದಿಕ್ಕುಗಳಿಂದ ಮಸೀದಿಯ ಪ್ರಾರ್ಥನಾ ಕರೆಯೂ ಒಮ್ಮೆಲೇ ಕೇಳತೊಡಗಿತು. ಗಂಟೆ, ಜಾಗಟೆ, ತಾರಕದ ಧ್ವನಿಗಳಲ್ಲಿ ಧರ್ಮಸಮನ್ವಯ ಮಾಡುವುದು ತ್ರಾಸದಾಯಕವೇ. ಅಂತೂ ಎಲ್ಲವೂ ಒಮ್ಮೆಲೇ ಸ್ಥಬ್ದವಾಗುವ ಹೊತ್ತಿಗೆ ದೂರದ ದೇವಾಲಯದೆದುರು ಕುದುರೆ ಮೇಲೆ ಕುಳಿತು ದುಷ್ಟನನ್ನು ಸಂಹರಿಸುತ್ತಿರುವ ಸಂತನ ಮೂರ್ತಿ(ಸೇಂಟ್ ಮೈಕೆಲ್?) ಅಸ್ಪಷ್ಟವಾಗಿ ಕಾಣಿಸಿತು. ರಸ್ತೆ ಪಕ್ಕದ ಪೋಸ್ಟರುಗಳಲ್ಲಿ ಚೆಗೆವಾರ, ಹ್ಯೂಗೋ ಚಾವೆಜ್, ಕ್ಯಾಸ್ಟ್ರೋ, ಸದ್ದಾಂ, ಅರಾಫತ್, ವಿವೇಕಾನಂದ, ಭಗತ್ ಸಿಂಗ್, ಮಾರ್ಕ್ಸ್, ಏಂಗೆಲ್ಸ್ .. .. ಬಹಳ ಜನ ರಾರಾಜಿಸುತ್ತಿದ್ದರು. ಒಂದು ಮದುವೆ ಪೋಸ್ಟರಿನಲ್ಲಿ ಹುಡುಗಹುಡುಗಿಯರ ಹಿನ್ನೆಲೆಯಲ್ಲಿ ದೊಡ್ಡದಾದ ಚೆಗೆವಾರನ ಚಿತ್ರ!

ಎಷ್ಟೊಂದು ದೇವರು ಗುದ್ದಾಡದೆ ಇಲ್ಲಿ ಪ್ರೀತಿಯಿಂದ ಬದುಕುತ್ತಿದ್ದಾರೆ! ಅವರು ಎಲ್ಲ ಕಡೆಯೂ ಏಕೆ ಹೀಗೇ ಇರಲಾರರು?

ಹಿನ್ನೀರೆಂಬ ವಿಸ್ಮಯ  



ಕೇರಳದ ಅರಬ್ಬಿ ಸಮುದ್ರ ತೀರಕ್ಕೆ ೧೫ ಕಿಲೋಮೀಟರಿನಷ್ಟು ಒಳಗೆ ಸಮಾನಾಂತರವಾಗಿ ಹರಡಿಕೊಂಡ ಹಿನ್ನೀರು ಕಾಲುವೆಗಳ ಜಾಲವಿದೆ. ಅದರಲ್ಲಿ ಐದು ದೊಡ್ಡ ಸರೋವರಗಳು ನಿರ್ಮಾಣವಾಗಿವೆ. ಈ ಸರೋವರಗಳನ್ನು ಮಾನವ ನಿರ್ಮಿತ ಹಾಗೂ ನೈಸರ್ಗಿಕ ಕಾಲುವೆಗಳು ಒಟ್ಟುಗೂಡಿಸಿವೆ. ಒಂಭೈನೂರು ಕಿಲೋಮೀಟರುಗಳಷ್ಟು ಉದ್ದದ ಹಿನ್ನೀರು ಕಾಲುವೆಗಳ ಈ ಜಾಲ ಕೇರಳದ ಒಳನಾಡು ಸಾರಿಗೆಗೆ, ಪ್ರವಾಸೋದ್ಯಮಕ್ಕೆ, ಇಕಾಲಜಿಯ ಉಳಿವಿಗೆ ದೊಡ್ಡ ಪಾಲು ಸಲ್ಲಿಸಿದೆ. ಮೂವತ್ತೆಂಟು ನದಿಗಳು ಸಮುದ್ರ ಸೇರುವ ಮುಖಜ ಭೂಮಿಯ ಸ್ಥಳದಲ್ಲಿ ನದಿ ಮತ್ತು ಸಮುದ್ರದ ಅಲೆಗಳು ಸೃಷ್ಟಿಸಿದ ನೂರಾರು ಸಣ್ಣಪುಟ್ಟ ದ್ವೀಪಗಳಿವೆ. ಅವು ಈ ಕಾಲುವೆಗಳಿಂದ ಸುತ್ತುವರೆದಿದ್ದರೆ ಮತ್ತೊಂದು ಕಡೆ ಒಳಗೆ ಫಲವತ್ತಾದ ಕಪ್ಪು ಭೂಮಿಯಿದೆ. ಎಷ್ಟೋ ಕಡೆ ಕೃಷಿಭೂಮಿ ಕಾಲುವೆಗಿಂತ ತಗ್ಗುಪ್ರದೇಶದಲ್ಲಿವೆ. ಮಳೆಗಾಲ ಗದ್ದೆಯಲ್ಲಿ ನೀರು ತುಂಬಿ, ಮನೆಗಳಿಗೂ ನೀರು ನುಗ್ಗಿ ಸರ್ಕಾರದ ಪುನರ್ವಸತಿ ಕೇಂದ್ರಗಳಿಗೆ ಜನ ಸ್ಥಳಾಂತರಗೊಳ್ಳುತ್ತಾರೆ ಎಂದು ತಿಳಿಯಿತು.

ಈ ನೀರ ಕಾಲುವೆಯ ಎರಡೂ ದಡಗಳಲ್ಲಿ ದಂಡೆಗುಂಟ ಸಾಲುಮನೆ. ಸಾಲು ಮನೆಗಳ ಉದ್ದುದ್ದದ ಬೀದಿಗಳೇ ಊರುಗಳು. ಪ್ರತಿ ಮನೆಯೆದುರಿನ ಮೆಟ್ಟಿಲು ನೀರಿನಲ್ಲಿ ಕೊನೆಯಾಗುತ್ತದೆ. ಆ ಮೆಟ್ಟಿಲ ಕಟ್ಟೆ ಮೇಲೆ ಸೋಪು, ಕಲ್ಲು, ಪಾತ್ರೆ ತಿಕ್ಕುವ ಗುಂಜು, ನೆನೆಸಿಟ್ಟ ಬಟ್ಟೆ ಇತ್ಯಾದಿ. ಪ್ರತಿ ಮನೆಯ ಎದುರು ಅವರವರ ಮನೆಯ ಪಾತಿ ದೋಣಿ.

ಅಲಪ್ಪುರಂ. ಅರುಂಧತಿ ರಾಯ್, ತಕಳಿ ಶಿವಶಂಕರ್ ಪಿಳ್ಳೈ ಅವರನ್ನು ಕೊಟ್ಟ ಹಿನ್ನೀರ ನಾಡು. ಎಂದೋ ನೋಡಿದ್ದ ಚೆಮ್ಮೀನ್ ಸಿನಿಮಾ, ಕರುತ್ತಮ್ಮ ನೆನಪಾದರು. ನೀರು ನೆಚ್ಚಿದ ಜನ, ನೀರ ಮೇಲಿನ ಬದುಕು. ದೊಡ್ಡ, ಸಣ್ಣ ಬೋಟು ಬಾರ್ಜುಗಳಲ್ಲಿ ಜನ ಓಡಾಡುತ್ತಲೇ ಇದ್ದರು. ಕಾಲು ಗಂಟೆಗೊಂದರಂತೆ ಬೋಟುಗಳು ಜನರನ್ನು ಹೊತ್ತು ಬರುತ್ತಿದ್ದವು. ನಾವಿಲ್ಲಿ ಬಸ್ಸು, ರಸ್ತೆಯನ್ನು ಬಳಸಿದಂತೆ ಅವರು ಜಲದಾರಿಯ ದೋಣಿ ಬಳಸುತ್ತಾರೆ. ೨೫೦ ಕಿಲೋಮೀಟರ್ ದೂರದ ನ್ಯಾಷನಲ್ ವಾಟರ್ ವೇ ನಂ. ೩ ಕೊಲ್ಲಂ (ಕ್ವಿಲಾನ್) - ಕೊಟ್ಟಪುರಂ ನಡುವೆ ಇದೆ. ಅಲಪ್ಪುರಂ-ಕೊಟ್ಟಾಯಂ-ಎರ್ನಾಕುಲಂ ನಡುವೆ ವೆಂಬನಾಡ್ ಸರೋವರವಿದೆ. ಇದು ಭಾರತದ ಅತಿ ಉದ್ದದ ಸರೋವರ. ಈ ಸರೋವರ ಸಮುದ್ರ ಸೇರುವಲ್ಲಿ ಕೊಚ್ಚಿ ನಗರವಿದೆ.

ಸಂಜೆಯಾಗುತ್ತಿತ್ತು. ನೀರಮೇಲಿನ ದೋಣಿಮನೆಯಲ್ಲಿ ತೇಲುತ್ತಿದ್ದೆವು. ದಂಡೆಯ ಮೀನು ಅಂಗಡಿಯಲ್ಲಿ ಇನ್ನೂ ಜೀವವಿದ್ದು ಕೈಕಾಲಾಡಿಸುವ ಏಡಿ ನನ್ನ ಉಳಿಸಿ ಎಂದು ಕೇಳಿಕೊಂಡಂತೆ ಭಾಸವಾಗಿ ಕಿಂಗ್ ಪ್ರಾನ್ ಮಾತ್ರ ಖರೀದಿಸಿ ತಂದಿದ್ದೆವು. ಕರಿಮೀನು ಫ್ರೈ ಮಸಾಲೆಯ ಗಮ ಗಾಳಿಯಲ್ಲಿ ತುಂಬಿತ್ತು. ನೀರ ನಡುವೆ ತೇಲುತ್ತ ಗಾಳಿಗೆ ಮುಖವೊಡ್ಡಿ ನಿಂತಿದ್ದರೂ ರೋಮರೋಮದಿಂದ ಬಸಿಯಲು ಬೆವರು ಹೊಂಚುಹಾಕುತ್ತಿತ್ತು. ದೋಣಿಮನೆಯ ಉಪ್ಪುಪ್ಪು ನೀರಿಗೆ ಮುಖ ತೊಳೆಯುವ ಮನಸ್ಸೂ ಆಗಲಿಲ್ಲ. ಕೈಲಿ ಬೆಂಡು ಹಿಡಿದು ಈಜು ಕಲಿಯುತ್ತಿದ್ದ ಎಳೆಪೋರನೊಬ್ಬ ತಕರಾರಿನ ದನಿಯಲ್ಲಿ ಅಪ್ಪನ ಕೋಲಿಗೆ ಉತ್ತರ ಕೊಡುತ್ತಿದ್ದ. ದೋಣಿಪಕ್ಕ ದಂಡೆಯ ಮೇಲಿನ ಬಾತುಗಳು ವಟ್ಟಗಂಟಲಿನಲ್ಲಿ ಕುಂಯ್ಞೋಮರ್ರೋ ಎಂದು ಕಿರುಚಿಕೊಳ್ಳುತ್ತಿದ್ದವು. ಅದರಾಚೆ ಮನೆಯವರು ಕೀರಲು ದನಿಯ ಆಕ್ರಂದನದ ಹೊರತಾಗಿಯೂ ಕೋಲಿನಲ್ಲಿ ತಿರುಗಿಸಿ ಮುರುಗಿಸಿ ಕಪ್ಪು ಜೀವಿಯೊಂದನ್ನು ಹೊಡೆಯುತ್ತಿದ್ದರು. ಕ್ಯಾಮೆರಾ ಝೂಮ್ ಹಾಕಿ ನೋಡಿದರೆ ಬಾವಲಿ!

ಮುಂದಿನ ಹುಟ್ಟುಹಬ್ಬಕ್ಕೆ ಸ್ಕೂಟಿ ಕೊಡಿಸಿರೆಂದು ಕೇಳುತ್ತಿರುವ ಮಗಳ ಪ್ರಕಾರ ಅಲ್ಲಿನ ಹುಡುಗರು ಹುಟ್ಟುಹಬ್ಬಕ್ಕೆ ‘ಸ್ಪೀಡ್ ಬೋಟ್’ ಡಿಮ್ಯಾಂಡ್ ಮಾಡುತ್ತಾರೆ. ಶಾಲೆ, ಆಸ್ಪತ್ರೆ ಎಲ್ಲಿಗೇ ಹೋಗಬೇಕಾದರೂ ರಾತ್ರಿ, ಹಗಲೆನ್ನದೇ, ಚಳಿಮಳೆಯೆನ್ನದೇ ಅವರು ದೋಣಿಯನ್ನವಲಂಬಿಸಿದ್ದಾರೆ. ಕಾಯಿಲೆ, ಹೆರಿಗೆ, ಇನ್ನಿತರ ಎಮರ್ಜೆನ್ಸಿಗಳ ಸಮಯದಲ್ಲಿ ಎಷ್ಟು ಅನಾನುಕೂಲವಲ್ಲವೆ? ಆದರೆ ಅವರಿಗಿದು ಅನಾನುಕೂಲವೆನಿಸಿರಲಿಕ್ಕಿಲ್ಲ. ಹಾಗಾಗಿದ್ದಲ್ಲಿ ಇಷ್ಟು ಜನ ಇಲ್ಲಿರುತ್ತಿರಲಿಲ್ಲ. ನಾವು ರಸ್ತೆಯನ್ನವಲಂಬಿಸಿದಂತೆಯೇ ಅವರು ಕಾಲುವೆಗಳನ್ನು ಅವಲಂಬಿಸಿರಬಹುದು. ಹಿನ್ನೀರ ದಡದಲ್ಲಿ ಹುಟ್ಟಿದ ಕಾರಣಕ್ಕೆ ಇಲ್ಲಿನ ಜನರ ಬದುಕಿನ ಲಯವೇ ಬೇರೆಯಾಗಿದೆ.  

ದಕ್ಷಿಣ ಭಾರತದ ರಾಜ್ಯಗಳು ಪಕ್ಕಪಕ್ಕವೇ ಇದ್ದರೂ ಅವುಗಳ ಭಾಷೆ, ಉಡುಪು, ಊಟೋಪಚಾರ, ಆದ್ಯತೆ, ಆಚರಣೆಗಳಲ್ಲಿ ಎಷ್ಟೊಂದು ವಿಭಿನ್ನತೆ, ಅನನ್ಯತೆ? ಈ ದೇವರ ರಾಜ್ಯದಲ್ಲಿರುವ ಪ್ರತಿಯೊಂದೂ - ಅಡವಿ, ಬೆಟ್ಟ, ಬಯಲು, ಚಹಾ ತೋಟ, ಮೀನು, ಸಮುದ್ರ ತೀರ, ಜಲಾಶಯ, ಪರಂಪರೆ, ಚಾರಿತ್ರಿಕ ಸ್ಥಳ, ಮಾನವ ಸಂಪನ್ಮೂಲ - ಇವೆಲ್ಲವೂ ನಮ್ಮಲ್ಲಿವೆ. ಆದರೂ ಪ್ರವಾಸೋದ್ಯಮಕ್ಕೆ ಏಕೆ ಪ್ರಾಮುಖ್ಯತೆಯಿಲ್ಲ? ಭೂಮಿಯ ಒಳಹೊರಗಿರುವ ಸಂಪತ್ತನ್ನೆಲ್ಲ ಎರಡೂ ಕೈಗಳಲ್ಲಿ ಬಾಚಿಬಾಚಿ ಕಬಳಿಸಿದ ಬಳಿಕವೇ ಪ್ರವಾಸೋದ್ಯಮಕ್ಕೆ ಗಮನ ಕೊಡುವವರೇ ನಾವು?

ಅಮಾವಾಸ್ಯೆಯ ಇರುಳು. ಮೋಡ ತುಂಬಿದ ಚಂದ್ರ ಚಿಕ್ಕೆಗಳಿಲ್ಲದ ಆಕಾಶ. ಆದರೂ ನೀರಿನಲ್ಲಿ ಇರುಳು ಪ್ರತಿಫಲಿಸುತ್ತಿತ್ತು. ರಾತ್ರಿ ಹತ್ತಾದರೂ ಜನರನ್ನು ಸಾಗಿಸುವ ಬೋಟು ಮಾರಿಗೊಂದರಂತೆ ಎರಡೂ ದಂಡೆಗಳ ದೋಣಿ ಸ್ಟಾಪುಗಳಲ್ಲಿ ನಿಂತು ಜನರನ್ನು ಹತ್ತಿ, ಇಳಿಸಿ ಓಡಾಡುತ್ತಿತ್ತು. ಪ್ರತಿ ಬೋಟು ಎಬ್ಬಿಸಿದ ಅಲೆಯೂ ನಮ್ಮ ದೋಣಿಮನೆಯನ್ನು ಎಷ್ಟೋ ಹೊತ್ತಿನವರೆಗೆ ತೂಗುತ್ತಿತ್ತು. ಹಾಗೆಯೇ ತುಯ್ದಾಡುವ ತಹಬಂದಿಗೆ ಬರದ ಮನಸೂ..