Monday, 20 March 2023

Transman Vihaan ವಿಹಾನ್: ಲಿಂಗಾಂತರಿ ಸಮುದಾಯದ ಹೊಸ ಬೆಳಗು

 

ಭಾರತದ ಸಾಮಾಜಿಕ ವ್ಯವಸ್ಥೆಯಲ್ಲಿ ಗಂಡೆಂದು ಗುರುತಿಸಲ್ಪಟ್ಟ ಜೀವಕ್ಕೆ ತಂತಾನೇ ಒಂದಷ್ಟು ಸ್ವಾತಂತ್ರ್ಯ, ಆಯ್ಕೆ, ಅವಕಾಶಗಳು ಸಿಗುತ್ತವೆ. ಎಂದೇ ಗಂಡಾಗಿ ಹುಟ್ಟಿ ತಾನು ಹೆಣ್ಣೆಂದು ಗುರುತಿಸಿಕೊಂಡ ಲಿಂಗಾಂತರಿ ಹೆಣ್ಣುಗಳು ಕೊಂಡ ಹಾಯ್ದು ಬದುಕು ಕಟ್ಟಿಕೊಂಡರೂ ವಿಪುಲ ಸಂಖ್ಯೆಯಲ್ಲಿ ಕಾಣಸಿಗುತ್ತಾರೆ. ಪುರಾಣದಲ್ಲೂ ಶಿಖಂಡಿಯಂತಹ ಪಾತ್ರಗಳು ಕಂಡುಬರುತ್ತವೆ. ಆದರೆ ಹುಟ್ಟಿನಿಂದ ಹೆಣ್ಣೆಂದು ಗುರುತಿಸಲ್ಪಟ್ಟ ಜೀವಕ್ಕೆ ಮೊದಲು ಸಿಗುವ ಅನುಭವಗಳು ತಾರತಮ್ಯ, ದಮನ, ಸ್ವಾತಂತ್ರ್ಯದ ನಿರ್ಬಂಧ. ಹಾಗಾಗಿ ಹೆಣ್ಣು ಎಂದು ಕರೆದ ಜೀವಕ್ಕೆ ತಾನು ಗಂಡು ಎಂದೆನಿಸಿದರೂ ಹೇಳುವುದು ಸುಲಭವಿಲ್ಲ. ಹೇಳಿದರೂ ಬದುಕುವುದು ಸುಲಭವಿಲ್ಲ. ಎಂದೇ ಪುರಾಣ-ಕತೆಗಳಲ್ಲಿ ಹೇಗೋ ಹಾಗೆ ನಿಜಜೀವನದಲ್ಲೂ ಹೆಣ್ಣಾಗಿ ಗಂಡಾದ ಲಿಂಗಾಂತರಿ ಪುರುಷರು ಅದೃಶ್ಯರಾಗಿಯೇ ಇರುವಂತಾಗಿದೆ. ಮೊದಲೇ ಅಂಚಿಗೆ ದೂಡಲ್ಪಟ್ಟ ಹೆಣ್ಣುಲೋಕದಲ್ಲೂ ಅದರ ಅಂಚಿಗೆ ತಳ್ಳಲ್ಪಟ್ಟ ಟ್ರಾನ್ಸ್‌ಮ್ಯಾನ್‌ಗಳ ನೋವಿಗೂ ಹೆಣ್ಣು ಕಿವಿಯಾಗಬೇಕಿದೆ. 

ಮಹಾರಾಷ್ಟ್ರದ ಪುಣೆಯ ಬಳಿಯ ಮರಾಠಿ ಮನೆಮಾತಿನ 26 ವರ್ಷದ ವಿಹಾನ್, ‘ಬಹುಜನ ಲಿಂಗಾಂತರಿ ಸ್ತ್ರೀವಾದಿ ಪುರುಷ’ ಎಂದು ತಮ್ಮನ್ನು ಗುರುತಿಸಿಕೊಳ್ಳುತ್ತಾರೆ. ವಿಹಾನ್ ಎಂಬ ಪದದ ಅರ್ಥ ‘ಮುಂಬೆಳಗು’. ತನ್ನ ದೇಹ, ಬದುಕಿನ ಹೊಸದಾರಿ ದಿಕ್ಕನ್ನು ತಾನೇ ರೂಪಿಸಿಕೊಂಡ ವಿಹಾನ್, ವಿರಳ ಸಂಖ್ಯೆಯ ಲಿಂಗಾಂತರಿ ಪುರುಷ ಸಮುದಾಯದ ಹೊಸ ದನಿಯಾಗಿ ಹೊರಹೊಮ್ಮುತ್ತಿದ್ದಾರೆ. ತನ್ನ ಆಯ್ಕೆಯ ಅವಕಾಶಕ್ಕೆ ನಿರಂತರ ಹೋರಾಡುತ್ತಲೇ ಇರಬೇಕಾದ ಮಹಿಳಾ ಸಮುದಾಯಕ್ಕೆ ಇದುವರೆಗೆ ವಿಹಾನ್ ನಡೆದುಬಂದ ದಾರಿಯನ್ನೊಮ್ಮೆ ಅವಲೋಕಿಸುವುದು ಸೂಕ್ತವಾಗಿದೆ.

‘ನೀನು ಹೆಣ್ಣು, ಅದಕ್ಕೇ..’

ಹುಟ್ಟುವಾಗ ಹೆಣ್ಣೆಂದು ಗುರುತಿಸಲ್ಪಟ್ಟು ಅದರಂತೆ ಬೆಳೆಯಬೇಕೆಂಬ ಸಾಮಾಜೀಕರಣಕ್ಕೆ ವಿಹಾನ್ ಒಳಗಾದರು. ಕುಟುಂಬ, ಶಾಲೆ, ಬೀದಿ, ಸಂಘಸಂಸ್ಥೆಗಳೆಲ್ಲ ಅವರನ್ನು ಹೆಣ್ಣೆಂದೇ ಗುರುತಿಸಿ ಗೆರೆಯೆಳೆಯುತ್ತ ಹೋದವು. ಎಳೆಯ ವಯಸ್ಸಿನಲ್ಲಿಯೇ ತನ್ನ ಹುಡುಗಿತನ ಎಲ್ಲರಂತಿಲ್ಲ ಎಂದು ತಿಳಿಯಿತು. ಆದರೆ ಕುಟುಂಬ ವಹಿಸುತ್ತಿದ್ದ ಹೆಣ್ಣು ಪಾತ್ರಕ್ಕೆ ತಕ್ಕಂತೆ ಅಭಿನಯಿಸಲೇಬೇಕಾಗುತ್ತಿತ್ತು. ಹೆಣ್ಣುಮಕ್ಕಳು ಕಲಿಯಬೇಕಾದ ಕೆಲಸ ಮಾಡಬೇಕಿತ್ತು. ತನಗದು ಬರುವುದಿಲ್ಲ, ಮಾಡಲು ಇಷ್ಟವಿಲ್ಲ, ಸೋದರರೂ ಮಾಡಲಿ ಎಂದರೆ, ‘ಸೋಂಬೇರಿ, ಕೆಲ್ಸಾ ಮಾಡಕ್ಕಾಗದೆ ಅವರಿವರು ಮಾಡ್ಲಿ ಅಂತಿಯಾ? ನೀನು ಹೆಣ್ಣು, ಮೊದ್ಲು ಅಚ್ಚುಕಟ್ಟಾಗಿ ಕೆಲ್ಸ ಮಾಡದ್ ಕಲಿ’ ಎಂದು ಮನೆಯವರು ಜೋರು ಮಾಡುತ್ತಿದ್ದರು.

ಬೆಳೆಯುತ್ತ ಹೋದಂತೆ ಬಳೆ, ಟಿಕ್ಲಿ, ಮೆಹೆಂದಿ, ಗೆಜ್ಜೆ, ಜಡೆ, ಹೂವು, ಸರ, ಓಲೆ, ಒಡವೆಗಳಲ್ಲಿ ಮನೆಯ ಹೆಂಗಸರು, ಸಹಪಾಠಿ ಗೆಳತಿಯರು ಮುಳುಗಿಹೋದರೆ, ವಿಹಾನ್‌ಗೆ ಅದ್ಯಾವುದೂ ಇಷ್ಟವಾಗುತ್ತಿರಲಿಲ್ಲ. ಬೋಳು ಕೈ, ಬೋಳು ಹಣೆ, ಬೋಳುಕಿವಿಯಲ್ಲಿರುವುದೇ ಇಷ್ಟ. ಹುಡುಗರ ಜೊತೆಗೇ ಆಟ, ಗುದ್ದಾಟ. ಆತ್ಮೀಯ ಸ್ನೇಹಬಳಗವೆಲ್ಲ ಹುಡುಗರದೇ. ಶಾಲೆಯ ಪ್ರವಾಸವಿರಲಿ, ನೆಂಟರ ಮನೆಯ ಜಾತ್ರೆಯಿರಲಿ, ಅಂಬೇಡ್ಕರ್ ಜಯಂತಿಯ ಕುಣಿತ, ಸಂಭ್ರಮಗಳಿರಲಿ, ಸದಾ ಹುಡುಗರ ತಂಡದಲ್ಲೇ ಇರುವುದು. ಹುಡುಗರ ಜೊತೆಗೆ ತನ್ನ ಅಸ್ಮಿತೆಯಿದೆ; ಅವರೊಡನೆ ತಾನು ಸಲೀಸಾಗಿರಬಲ್ಲೆ, ತಾನು ಹೆಣ್ಣಲ್ಲ ಎಂಬ ಅರಿವು ಬೆಳೆಯತೊಡಗಿತು. ಗಂಡಿನೊಡನೆ ಹೆಚ್ಚೆಚ್ಚು ಸ್ನೇಹ ಬೆಳೆಸಿದ್ದಕ್ಕೆ ಬಜಾರಿ, ಗಂಡುಬೀರಿ, ದಿಂಡೆ, ಮುಂತಾದ ಕುಹಕದ ವಿಶೇಷಣಗಳನ್ನು ಕೇಳಬೇಕಾಯಿತು.

ಪ್ರಾಯ ಬರುವಾಗ ಮೊಲೆ ಮೂಡತೊಡಗಿದವು. ಕತ್ತರಿಸಿ ಬಿಸಾಡುವಷ್ಟು ತನ್ನ ದೇಹದ ಮೇಲೆ ಕೋಪ ಬರುತ್ತಿತ್ತು. ಅದನ್ನು ಮುಚ್ಚಲು ಎರಡೆರೆಡು ಬಿಗಿಯಾದ ಅಂಗಿ ತೊಟ್ಟು ಚಪ್ಪಟೆ ಮಾಡಲೆತ್ನಿಸಿದರು. ಮುಟ್ಟು ಆರಂಭವಾದಾಗ ವಿಪರೀತ ಹಿಂಸೆ ಅನುಭವಿಸಿದರು. ತಾನು ಹುಡುಗ; ಈ ಮೊಲೆ, ಗರ್ಭಕೋಶಗಳನ್ನು ಕತ್ತರಿಸಿ ತೆಗೆಸಿಬಿಡಬೇಕು ಎಂದು ಪದೇಪದೇ ಅನಿಸುತ್ತಿತ್ತು. ಅದೇ ವೇಳೆ ಮನೆಯ, ಕೇರಿ-ಊರಿನ ಗಂಡಸರ ಕುಡಿತ, ಜಗಳ, ಹಿಂಸಾವತಾರಗಳು ಎಳ್ಳಷ್ಟೂ ಇಷ್ಟವಾಗುತ್ತಿರಲಿಲ್ಲ. ಥೋ, ತಾನು ಇಂತಹ ಗಂಡಸಲ್ಲ ಎಂದೂ ಬಲವಾಗಿ ಅನಿಸುತ್ತಿತ್ತು. ‘ತಾನು ಯಾರು? ಅಂತಹ ಗಂಡಸೇ? ಇಂತಹ ಹೆಂಗಸೇ?’ ಎಂಬ ದ್ವಂದ್ವ ಬೆಳೆಯುತ್ತ ಹೋಯಿತು. ಅಂತೂ ವಯಸ್ಕ ಗಂಡಸರಿಗಿಂತ ಸಮವಯಸ್ಕ ಹುಡುಗರ ಒಡನಾಟ ಹೆಚ್ಚುತ್ತ ಹೋಯಿತು.

ಆದರೆ ಹೆಣ್ಣೆಂದು ಗುರುತಿಸಲ್ಪಟ್ಟ ವ್ಯಕ್ತಿಯು ತನ್ನ ಲಿಂಗತ್ವವನ್ನು ಭಿನ್ನವೆಂದು ನಿರೂಪಿಸುವುದು ಸುಲಭವಲ್ಲ. ಅವರ ಬಿಡುಗಡೆಯ ಹಾದಿ ದುರ್ಗಮವೂ, ಮೌನಕಣಿವೆಯೊಳಗಿಂದ ಸ್ಫೋಟಿಸಬೇಕಾದ ಜ್ವಾಲಾಮುಖಿಯಂತಹುದೂ ಆಗಿದೆ. ವಿಹಾನ್‌ಗೆ ಆದದ್ದು ಅದೇ. ಬೇಲಿಗಳು ಬಿಗಿಯಾದವು. ಗಡಿ ಮೀರುವ ಹಂಬಲ ಹೆಚ್ಚಾದಷ್ಟೂ ಹಿಂಸೆಯೂ ಹೆಚ್ಚುತ್ತ ಹೋಯಿತು. ತನ್ನನ್ನು ಗುರುತಿಸಿಕೊಳ್ಳಬಹುದು ಎನಿಸುವಂತಹ ಸಮಾನ ಸಮುದಾಯ ಸಿಗಲಿಲ್ಲ. ಕಣ್ಣೆದುರು ಹುಡುಗನಾಗಿ ಹುಟ್ಟಿ ಹುಡುಗಿಯಾದವರು ಕಾಣುತ್ತಿದ್ದರೇ ಹೊರತು ಹುಡುಗಿಯಾಗಿ ಹುಟ್ಟಿ ಹುಡುಗನಾದ ವ್ಯಕ್ತಿಗಳು ಕಾಣಲಿಲ್ಲ. ಗಂಡಾಗಿ ಹುಟ್ಟಿ ಹೆಣ್ಣೆಂದುಕೊಂಡ ಜೀವಗಳನ್ನು ಹೆಣ್ಣುಕುಲವು ಸ್ವೀಕರಿಸಿದ ಹಾಗೆ ಹೆಣ್ಣೆನಿಸಿಕೊಂಡು ಹುಟ್ಟಿ ಗಂಡಾದವರನ್ನು ಪುರುಷ-ಸಮಾಜ ಸ್ವೀಕರಿಸುವುದಿಲ್ಲ ಎಂಬ ಅರಿವಾಯಿತು. ಇಲ್ಲೂ ಅಲ್ಲೂ ಎಲ್ಲೂ ಸಲ್ಲದಂತಾಗುವ ನಿರಂತರ ಭಯ, ಅಭದ್ರತೆಯಲ್ಲಿ ಬೆಳೆದರು. 

ಲಿಂಗತ್ವ ಕುರಿತ ಗೊಂದಲ, ತಾರತಮ್ಯದ ಅನುಭವಗಳು ಒಂದುಕಡೆಯಾದರೆ, ಬಹುಜನ ಸಮುದಾಯದ ವಿಹಾನ್ ಜಾತಿ ತಾರತಮ್ಯ, ಬಡತನದ ಅವಮಾನಗಳನ್ನೂ ಜೊತೆಗೇ ಅನುಭವಿಸತೊಡಗಿದರು. ಜಾತಿ, ವರ್ಗ, ಲಿಂಗತ್ವವೆಂಬ ಮೂರಲಗಿನ ಕೂರಂಬು ಎತ್ತೆತ್ತಲಿಂದಲೂ ಚುಚ್ಚಿ ಚುಚ್ಚಿ ತಿವಿಯತೊಡಗಿತು. 

ಈ ವೇಳೆಗೆ ಪುಣೆಯ ಬಿ. ಜಿ. ಢೇರೆ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಪ್ರೌಢ ಶಿಕ್ಷಣವನ್ನೂ, ಸಾವಿತ್ರಿಬಾಯಿ ಫುಲೆ ವಿಶ್ವವಿದ್ಯಾಲಯದ ಫರ್ಗ್ಯೂಸನ್ ಕಾಲೇಜಿನಲ್ಲಿ ರಾಜ್ಯಶಾಸ್ತ್ರ ಪದವಿಯನ್ನೂ ಪಡೆದರು. ಕುಟುಂಬ ಮುಂಬಯಿಗೆ ಸ್ಥಳಾಂತರಗೊಂಡಿತು. ಮುಂಬಯಿಯ ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸ್ (ಟಿಸ್)ನಿಂದ ಸಮಾಜಸೇವೆಯ ಬಗೆಗೆ ಸ್ನಾತಕೋತ್ತರ ಪದವಿ ಪಡೆದರು. ಮನೆಯ ವಾತಾವರಣ ಉಸಿರುಗಟ್ಟಿಸತೊಡಗಿದ್ದರೂ ಗಂಭೀರ ಓದಿಗೆ ತೆತ್ತುಕೊಂಡು ಜಾತಿ ಮತ್ತು ಲಿಂಗತ್ವ ಕುರಿತು ಆಳ ಅಧ್ಯಯನ ನಡೆಸಿದರು. ‘ಮಹಿಳಾ ಕೇಂದ್ರಿತ ಆಚರಣೆ’ಗಳ ಬಗೆಗೆ ಪ್ರಬಂಧ ಮಂಡಿಸಿದರು. ಹಾರ್ವರ್ಡ್‌ನ ಕೆನೆಡಿ ಸ್ಕೂಲಿನಲ್ಲಿ ಐದು ತಿಂಗಳ ಲೀಡರ್‌ಶಿಪ್ ಆರ್ಗನೈಸಿಂಗ್ ಆಕ್ಷನ್ ವಿಷಯದಲ್ಲಿ ತರಬೇತಿ ಪಡೆದರು. ಆಳದ ಓದು, ಶಿಕ್ಷಣ ನೀಡಿದ ಧೈರ್ಯ, ಭರವಸೆಗಳು ವಿಹಾನ್‌ಗೆ ತನ್ನನ್ನು ತಾನು ‘ಅಂಬೇಡ್ಕರೈಟ್ ಕ್ವೀರ್ ಫೆಮಿನಿಸ್ಟ್’ ಎಂದು ಸ್ನೇಹಬಳಗದಲ್ಲಿ ಗುರುತಿಸಿಕೊಳ್ಳುವಂತೆ ಮಾಡಿತು. ಉನ್ನತ ಶಿಕ್ಷಣವು ಸ್ವಾಯತ್ತತೆಯ ಬದುಕಿನ ಕಡೆಗೆ ಚಲಿಸಲು ರಹದಾರಿಯಾಯಿತು.

ಮದುವೆಯ ಒತ್ತಡ

ಮದುವೆ ಮಾಡಿದರೆ ‘ದಾರಿ ತಪ್ಪಿದ ಮಗಳು’ ಸರಿ ಹೋದಾಳು ಎಂದು ಮನೆಯವರು  ಗಂಡು ಹುಡುಕತೊಡಗಿದರು. ಈಗ ನಿಜವಾದ ಪರೀಕ್ಷೆ ಎದುರಾಯಿತು. ಸ್ನೇಹಬಳಗಕ್ಕಷ್ಟೇ ಅಲ್ಲ, ಮನೆಯವರಿಗೂ ತನ್ನ ಲಿಂಗತ್ವ ಅಸ್ಮಿತೆ ಬೇರೆ ಎಂದು ತಿಳಿಸಬೇಕಿತ್ತು. ಅದು ತಿಳಿಸಿದ ಬಳಿಕ ಮನೆಯಲ್ಲುಂಟಾದ ಕ್ಷೋಭೆ, ಗಲಾಟೆ, ಹಿಂಸೆಯ ವಾತಾವರಣದಲ್ಲಿ ಮನೆಯಲ್ಲಿರಲು ಸಾಧ್ಯವಿರಲಿಲ್ಲ. ಮನೆಬಿಟ್ಟು ಹೋಗಿಬಿಡಬೇಕು ಎಂಬ ಹಂಬಲ ಬಲವಾಯಿತು. ಆದರೆ ಎಲ್ಲಿ ಹೋಗುವುದು? ಏನು ಮಾಡುವುದು? ಮನೆ ಎಂದರೆ ಬರಿಯ ನಾಲ್ಕು ಗೋಡೆಯೊಳಗಿನ ಅವಕಾಶ ಮಾತ್ರವೇ? ಗೋಡೆಯೊಳಗಿನ ಜನರೂ ಮುಖ್ಯ ಎಂದಾದರೆ ಇದು ನನ್ನ ಮನೆಯೇ? ಇವರಲ್ಲ ಎಂದಾದರೆ ನನ್ನವರಾರು? ಈ ನಂಟುಗಳನ್ನು ಬಿಡುವುದು ಹೇಗೆ? ಆಮೇಲಿನ ಬದುಕು ಸುರಕ್ಷಿತವೇ? ತನ್ನ ಪತ್ತೆ ಹಚ್ಚಿ ಮತ್ತಷ್ಟು ಹಿಂಸೆ ಎದುರಾದರೆ? ಇವರನ್ನೆಲ್ಲ ಬಿಟ್ಟು ಬದುಕಲು ಸಾಧ್ಯವೇ? ಮುಂತಾದ ನೂರೆಂಟು ಪ್ರಶ್ನೆಗಳು ಮನದಲ್ಲಿ ಭೋರ್ಗರೆಯತೊಡಗಿದವು. 

ಒಂದು ಅಂಬೇಡ್ಕರ್ ಜಯಂತಿಯ ದಿನ. ಸಭೆ, ಸಮಾರಂಭಗಳ ಬಳಿಕ ತನ್ನ ವಿಷಯ ತಿಳಿದಿದ್ದ ಅಂಬೇಡ್ಕರೈಟ್ ಗೆಳೆಯನೊಟ್ಟಿಗೆ ಮನದ ಗೊಂದಲ ಚರ್ಚಿಸಿದರು. ಅವನು ವಿಹಾನ್‌ನ ಎಲ್ಲ ಹಂತಗಳ ಬೆಳವಣಿಗೆ ಕಂಡಿದ್ದವನು. ವಿಹಾನ್‌ಗೆ ದೆಹಲಿಯಲ್ಲಿ ‘ಮಾ’ ಸಿಕ್ಕಿರುವುದು, ಒಬ್ಬಳು ಪ್ರೇಮಿಯೂ ಇರುವುದು, ಅವಳೀಗ ದೆಹಲಿಗೇ ಹೋಗಿರುವುದು ಗೊತ್ತಿತ್ತು. ಹೇಗಿದ್ದರೂ ಉನ್ನತ ಶಿಕ್ಷಣದ ಬೆಂಬಲವಿರುವುದರಿಂದ ಉದ್ಯೋಗವೂ ದೊರೆತೀತು ಎಂಬ ಭರವಸೆಯಿತ್ತು, ‘ಹೊರಟು ಹೋಗು’ ಎಂದು ಧೈರ್ಯ ತುಂಬಿ ಕೆಲವು ಲಗೇಜುಗಳೊಡನೆ ರೈಲ್ವೇ ಸ್ಟೇಶನ್ನಿಗೆ ಕರೆತಂದು ಬಿಟ್ಟ. ರೈಲು ಬರಲು 15 ನಿಮಿಷ ಇದೆ ಎನ್ನುವಾಗಲೂ ದ್ವಂದ್ವ, ದುಃಖ. 

ಬಹುಜನ ಕುಟುಂಬಗಳಲ್ಲಿ ಶಿಕ್ಷಣ ಕೊಡಿಸಿದ ಮಕ್ಕಳ ಮೇಲೆ ಇಡಿಯ ಕುಟುಂಬವೇ ನಿರೀಕ್ಷೆಗಳನ್ನಿಟ್ಟುಕೊಂಡಿರುತ್ತದೆ. ಮಕ್ಕಳ ಕಾಲದಲ್ಲಾದರೂ ತಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸೀತು ಎಂಬ ಆಶಾಭಾವನೆಯಿರುತ್ತದೆ. ಹಾಗಿರುವಾಗ ಅವರ ಬೆವರ ಫಲದಲ್ಲಿ ಶಿಕ್ಷಣ ಪಡೆದು, ‘ನಾನು ಗಂಡು’ ಎಂದು ಘೋಷಿಸಿಕೊಂಡು ಮನೆಯವರಿಗೆ ಊರುಗೋಲಾಗಬೇಕಾದ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುತ್ತಿರುವೆನೇ ಎಂಬ ಪಾಪಪ್ರಜ್ಞೆ ಕಾಡತೊಡಗಿತು. ಗೊತ್ತಿಲ್ಲದ ಊರಿಗೆ, ಹೊಸದಾಗಿ ಏರ್ಪಟ್ಟ ನಂಟು ನೆಚ್ಚಿ ಹೋಗುವುದು ಸರಿಯೇ? ಸಂಕಟಕಾಲದಲ್ಲೂ ಅವರು ನನ್ನ ಕೈಬಿಡಲಾರರೇ? ಮುಂತಾದ ಅಭದ್ರತೆಯ ಭಯ ಒತ್ತರಿಸಿ ಬಂತು. 

ಅಂತೂ ರೈಲು ಬಂದೇ ಬಿಟ್ಟಾಗ ಮನೆಯ ದೃಶ್ಯ, ಅದೃಶ್ಯ, ದೈಹಿಕ-ಮಾನಸಿಕ ಹಿಂಸೆಗಳ ಚಿತ್ರಣ ಕಣ್ಣೆದುರು ತಂದುಕೊಂಡು, ಉಸಿರುಗಟ್ಟಿಸುವ ಅಲ್ಲಿರಲು ಸಾಧ್ಯವೇ ಇಲ್ಲ ಎನಿಸಿ ದೆಹಲಿಯ ರೈಲು ಹತ್ತೇಬಿಟ್ಟರು. 

ಅಷ್ಟೇ. ಅಲ್ಲಿಂದೀಚಿನದು ‘ವಿಹಾನ್’, ಅಂದರೆ ಹೊಸಬೆಳಗು.

ರೈಲು ಮುಂಬಯಿಯ ಗಡಿ ದಾಟುವಾಗ, ಗುಜರಾತಿನಲ್ಲಿ ಸಿಕ್ಕ ಕೆಲಸವನ್ನೂ ಬಿಟ್ಟು ಹೊಸಬದುಕಿಗಾಗಿ ತನ್ನ ಸಮುದಾಯವನ್ನು ಸೇರಿಕೊಳ್ಳಲು ಹೋಗುವಾಗ ಎಲ್ಲ ಕಳಚಿಕೊಂಡ ಅನುಭವ. ‘ಕೋಶ ಕಟ್ಟಿಕೊಂಡ ಮರಿಹುಳ ತನ್ನ ಸುತ್ತಣ ಬಲೆಯ ತಾನೇ ಹರಿದು ಹೊರಬರುವಂತೆ ಎಲ್ಲವನ್ನು ಕಳಚಿಕೊಳ್ಳಲೇಬೇಕು. ಇಲ್ಲದಿದ್ದರೆ ಚಿಟ್ಟೆ ಹೊರಬರಲಾರದು. ಮರಿಹುಳ ಉಸಿರುಗಟ್ಟಿ ಒಳಗೇ ಸಾಯಬೇಕಾದೀತು. ಹಳೆಯ ಹೆಸರು, ಕುಟುಂಬ, ಹಳೆಯ ಸಹಪಾಠಿಗಳು, ಗೆಳೆತನದ ಬಳಗ, ಗುರುಗಳು, ನೆಂಟರು, ಉದ್ಯೋಗ, ನೆರೆಹೊರೆ ಎಲ್ಲ ಅಂದರೆ ಎಲ್ಲವನ್ನು ಕಳಚಿಕೊಳ್ಳಬೇಕು. ತನ್ನ ನಿಜಗುರುತು ತಿಳಿಯದ, ನಿಜಗುರುತನ್ನೊಪ್ಪದ ಎಲ್ಲರಿಂದ ಬಿಡಿಸಿಕೊಳ್ಳಬೇಕು. ನನ್ನ ಹೊಸ ಹುಟ್ಟನ್ನು ನಾನೇ ರೂಪಿಸಿಕೊಳ್ಳಬೇಕು.’ 

ಇದರ ಮೊದಲ ಮೆಟ್ಟಿಲಾಗಿ ಜನ್ಮನಾಮವನ್ನು ಮೃತನಾಮ ಎಂದು ಘೋಷಿಸಿಕೊಂಡು ಹಳೆಯ ಹೆಸರು ಅಳಿಸಿಕೊಂಡರು. ವಿಹಾನ್ ಆದರು. ಕಲಿತು ಬಂದ ಕಾಲೇಜಿಗೆ ಪದವಿಪ್ರದಾನ ಮಾಡುವಾಗ ತಾಯ್ತಂದೆಯರಿಗೆ ಹಳೆಯ ಹೆಸರಿನ ಡಿಗ್ರಿ ಸರ್ಟಿಫಿಕೇಟ್ ಕಳಿಸಬೇಡಿ ಎಂದು ಪತ್ರ ಬರೆದರು. ಮನೆಯವರಿಗೆ ಗುರುತು ಹತ್ತದಿರಲೆಂದು ಹಳೆಯ ಅಕೌಂಟ್, ಫೋನ್, ಸಂಪರ್ಕ, ಹೆಸರು ಎಲ್ಲವನ್ನೂ ಅಳಿಸಿ ಹಾಕಿದರು.

ದೆಹಲಿ ತಲುಪಿ ಸಾಕುಅಮ್ಮನ ಮಡಿಲು ಸೇರಿದ್ದಾಯ್ತು. ಒಂದು ಉದ್ಯೋಗವೂ ದೊರೆಯಿತು. ಒಂದು ಬಾಡಿಗೆ ಮನೆಯೂ ಸಿಕ್ಕೇಬಿಟ್ಟಿತು. ಪ್ರೇಮಿಯ ಸಖ್ಯ ಬೆಚ್ಚನೆಯ ಅನುಭವ ನೀಡಿತು. ಇನ್ನು ತನಗೆ ತಾನೇ ಆಗಿ ಬದುಕುವ ದಿನಗಳು ಬಂದವು ಎಂದುಕೊಳ್ಳುವಾಗ ಒಂದು ಬ್ಯಾಂಕ್ ಖಾತೆ ತೆರೆಯಬೇಕಾದ ಅನಿವಾರ್ಯತೆ ಎದುರಾಯಿತು. ಅದೊಂದು ತಿಂಗಳುಗಟ್ಟಲೆಯ ಹೋರಾಟ. ಹೊಸಹೆಸರು ಮಾತ್ರ ಸಾಕೆಂದರೆ ಹಳೆಯ ದಾಖಲೆ ಪತ್ರಗಳೆಲ್ಲ ನಿರುಪಯೋಗಿಯಾಗುತ್ತಿದ್ದವು. ಮತ್ತೊಂದೆಡೆ ದಾಖಲೆಗಳಿಲ್ಲದೆ ಅಸ್ತಿತ್ವವೇ ಇಲ್ಲ ಎಂಬಂತಹ ಸಾಮಾಜಿಕ ಪರಿಸ್ಥಿತಿ. ಹಳೆಯದು ಇರಲಿ ಎಂದರೆ ಮತ್ತದಕ್ಕೇ ಮರಳುವ ಅನಿವಾರ್ಯತೆ ಸೃಷ್ಟಿಯಾಗುತ್ತಿತ್ತು. ತನ್ನ ಲಿಂಗತ್ವವನ್ನೂ, ಅದಕ್ಕೊಪ್ಪುವ ಹೆಸರನ್ನೂ ತಾನೇ ಇಟ್ಟುಕೊಂಡ ಜೀವಂತ ವ್ಯಕ್ತಿಯ ಬಗೆಗೆ ಸಮಾಜ ತೋರಿಸುವ ಅಸಡ್ಡೆ, ಕೋಪ, ಸಾಮಾಜಿಕ ರಚನೆಯಲ್ಲೇ ಹುದುಗಿಹೋಗಿರುವ ರಾಚನಿಕ ಹಿಂಸೆಗಳು ತುದಿಬೆರಳಿನ ಅನುಭವವೆಂಬಂತೆ ನಿಲುಕಿದವು.


ಓಹ್! ಒಂದೇ, ಎರಡೇ. ನೂರೆಂಟು ದ್ವಂದ್ವಗಳ, ಸವಾಲುಗಳ ಬದುಕು. ಏರುಪೇರಾಗುವ ಮಾನಸಿಕ ಸ್ವಾಸ್ಥ್ಯ, ನಿದ್ರಾಹೀನತೆ, ಅದಕ್ಕೆ ಚಿಕಿತ್ಸೆ. ಜೊತೆಗೆ ಬಿಟ್ಟುಬಂದದ್ದರ ಕಡೆಗೆ ಸೆಳೆತ. ಮನೆಗೆ ಹೋಗಿ, ನೋಡಿ, ಹೇಳಿ, ಅವರನ್ನೂ ಒಪ್ಪಿಸುವ ತುಡಿತ. ಬಂದ ಒಂದೇ ತಿಂಗಳಿಗೆ ಮತ್ತೆ ಮುಂಬಯಿಗೆ ಹೋದರು. ಕೊಂಚ ಸಮಾಧಾನ ಪಡೆದು ಮತ್ತೆ ಕೆಲಸದಲ್ಲಿ ತೊಡಗಿದರು. ವಿರಹ, ವಿರಸ, ಒಡಕುಗಳ ಫಲವಾಗಿ ದೆಹಲಿ ಬಿಟ್ಟು ಈಗ ಒಂದೂವರೆ ವರ್ಷದಿಂದ ಬೆಂಗಳೂರು ವಾಸಿಯಾಗಿದ್ದಾರೆ. ಲಿಂಗತ್ವ, ಜಾತಿ, ಅಭಿವೃದ್ಧಿ ಅಧ್ಯಯನ ಕೆಲಸದಲ್ಲಿ ತೊಡಗಿದ್ದಾರೆ. ಜಾಗತಿಕ ಹವಾಮಾನ ಬದಲಾವಣೆಯ ಬಗೆಗೆ ಅಪಾರ ಕಾಳಜಿಯಿರುವ ವಿಹಾನ್ ಅದನ್ನೂ ಸೇರಿಸಿದಂತೆ ಅಂತರ್‌ಶಿಸ್ತೀಯ ಅಧ್ಯಯನದಲ್ಲಿ ತೊಡಗಿಕೊಂಡಿದ್ದಾರೆ. ಲಿಂಗಾಂತರಿ ಪುರುಷ ಸಮುದಾಯದ ಕಷ್ಟಗಳ ಬಗೆಗೆ ಬರೆದು ಗಮನ ಸೆಳೆದಿದ್ದಾರೆ. ಕೋವಿಡ್ ಕಾಲದಲ್ಲಿ ಆ ಸಮುದಾಯ ಎದುರಿಸಿದ ಸಂಕಷ್ಟಗಳ ಬಗೆಗೆ ಸಂಶೋಧನೆ ನಡೆಸಿದ್ದಾರೆ. ಕ್ವೀರ್ ಗುಂಪಿನ ಆಪ್ತಸಹಾಯಕರಾಗಿ, ಮಹಿಳೆ-ಕ್ವೀರ್-ಯುವಜನತೆಯ ಬೆಂಬಲ ಗುಂಪು ‘ಹಂಸಫರ್’ನ ಭಾಗವಾಗಿ ಕೆಲಸ ಮಾಡಿದ್ದಾರೆ. ಪ್ರಸ್ತುತ ಯುವಜನತೆಯ ದನಿಯನ್ನು ಮುನ್ನೆಲೆಗೆ ತರುವ ‘ಹೈಯ್ಯಾ’ ಸಂಸ್ಥೆಯ ಪ್ರಚಾರ ಸಹಾಯಕರಾಗಿ ಕೆಲಸ ಮಾಡುತ್ತಿದ್ದಾರೆ. ಏಷಿಯಾ ಪೆಸಿಫಿಕ್ ಲಿಂಗಾಂತರಿ ಸಮುದಾಯದ ಸಂಪರ್ಕ ಜಾಲವಾಗಿ ಕೆಲಸ ಮಾಡುತ್ತಾರೆ. MasculiniTea: Kuch Mardani Gupshup ಎಂಬ ಪಾಡ್‌ಕಾಸ್ಟ್ ನಡೆಸುತ್ತ ಲಿಂಗಾಂತರಿ ಪುರುಷರ ಅನುಭವಗಳನ್ನು ದಾಖಲಿಸುತ್ತಿದ್ದಾರೆ. ಸೂಕ್ಷ್ಮ ಬರಹಗಾರರಾದ ವಿಹಾನ್, ಸರಳವಾದ ಆಪ್ತಶೈಲಿಯಲ್ಲಿ ಬದುಕಿನ ಅನುಭವಗಳನ್ನು ಹಲವು ಅಂತರ್ಜಾಲ ನಿಯತಕಾಲಿಕೆಗಳಿಗೆ ನಿಯಮಿತವಾಗಿ ಬರೆಯುತ್ತಿದ್ದಾರೆ.



ಹಲವು ಅಡೆತಡೆ, ಬೇಲಿ, ಕಂದಕ, ಕೊಂಡಗಳ ಹಾಯ್ದು ಬಂದ 26 ವರ್ಷದ ವಿಹಾನ್ ಈಗ ತನ್ನ ಅನ್ನ ತಾನೇ ಗಳಿಸಿಕೊಳ್ಳುತ್ತ, ತನ್ನಿಷ್ಟದಂತೆ ಬದುಕುವ ಮಾರ್ಗ ಕಂಡುಕೊಳ್ಳುತ್ತ ಬೆಂಗಳೂರಿನಲ್ಲಿದ್ದಾರೆ. ಅವರ ಸಮುದಾಯ ಬೆನ್ನಿಗಿದೆ. ಆದರೂ ತನಗೆ ಬೇಕಾದ, ತಾನು ಮಾಡಲೇಬೇಕಾದ ಇನ್ನೂ ಏನೋ ‘ಆ’ ಅದು ಇದೆಯೆಂದು ಹುಡುಕಾಟ ನಡೆಸುತ್ತಲೇ ಇದ್ದಾರೆ. ಅವರು ಒಲ್ಲೆನೆಂದು ಬಂದು ಈಗ ಪಡೆದಿರುವ ಹೊಸ ಪುರುಷ ಅಸ್ಮಿತೆಯು ಹಳೆಯ ಪಾರಂಪರಿಕ ಚೌಕಟ್ಟನ್ನು ಮೀರಿ ಮಾನವ ಅಸ್ಮಿತೆಯೆಡೆಗೆ ತಮ್ಮನ್ನು ಒಯ್ಯುತ್ತಿದೆಯೆ ಎಂದವರು ಪರಿಶೀಲಿಸಿಕೊಳ್ಳಬೇಕಿದೆ. ಕ್ರಮಿಸಬೇಕಾದ ದಾರಿ ದೂರವಿದೆ.

‘ನೊಂದೆ’ ಎಂದವರನ್ನೆಲ್ಲ ಮಹಿಳಾ ಚಳವಳಿ ಒಳಗೊಳ್ಳುತ್ತದೆ. ತಮ್ಮ ಲಿಂಗತ್ವ-ಹೆಸರು-ಬದುಕುಗಳನ್ನು ತಾವೇ ಕಟ್ಟಿಕೊಳ್ಳಲಿಚ್ಛಿಸಿ ನೋವು, ಅವಮಾನ, ಅಭದ್ರತೆ ಎದುರಿಸುವ ಎಲ್ಲ ಜೀವಗಳ ಜೊತೆಗೂ ಮಹಿಳಾ ಚಿಂತನೆ, ಮಹಿಳಾ ಚಳವಳಿ, ಸ್ತ್ರೀವಾದಗಳು ಹೆಜ್ಜೆಯಿಡುತ್ತವೆ. ನಮ್ಮ ಸುತ್ತಲ ಲೋಕದ ಬಿಡುಗಡೆಯೇ ನಮ್ಮ ಬಿಡುಗಡೆ. ಸಮಾನತೆ, ಸ್ವಾಯತ್ತತೆ, ಘನತೆಯ ಬದುಕುಗಳು ಒಬ್ಬೊಬ್ಬರಿಗಷ್ಟೇ ಸಿಗಲು ಸಾಧ್ಯವಿಲ್ಲ. ಪ್ರತಿಯೊಬ್ಬರಿಗೂ ಸಿಕ್ಕಾಗಲಷ್ಟೇ ಅವಕ್ಕೆ ಬೆಲೆ, ಅರ್ಥ ಸಿಗುವುದು. 

ಆಪ್ತ ಬೆಂಬಲ, ಒಪ್ಪಿಕೊಳ್ಳುವಿಕೆ, ಪ್ರೇಮ ಇಲ್ಲದೇ ಲೋಕವಿರುವುದೇ? ಇದನ್ನೆಲ್ಲ ತುಂತುಂಬಿ ಕೊಟ್ಟು ನಮ್ಮೊಳಗನ್ನು ತುಂಬಿಕೊಂಡರೆ ದುಃಖವೇ ಇರಲಾರದು, ಅಲ್ಲವೇ? ಅದಕ್ಕೇ ಎಲ್ಲ ಒಗ್ಗೂಡಿ ವಿಹಾನರುಗಳ ಕೈಕೈ ಹಿಡಿದು ಹೆಜ್ಜೆ ಹಾಕಬೇಕಿದೆ. 

ಡಾ. ಎಚ್. ಎಸ್. ಅನುಪಮಾ



Monday, 13 March 2023

K K Shailaja - ಕೆ. ಕೆ. ಶೈಲಜಾ ಟೀಚರ್: ಅಧಿಕಾರದೆಡೆಗೆ ಉದಾತ್ತ ನಿಸ್ಪೃಹತೆ

 

ಕೇರಳದ ಶಿವಪುರಂನ ಪ್ರೌಢಶಾಲೆ. ವಿದ್ಯಾರ್ಥಿಯೊಬ್ಬ ತಿಕ್ಕಲನಂತೆ ವರ್ತಿಸತೊಡಗಿದ್ದ. ಹೆಚ್ಚುಕಡಿಮೆ ಎಲ್ಲರೂ ಅವನ ಮೈಮೇಲೆ ದೆವ್ವ ಬಂದಿದೆಯೆಂದು ಯೋಚಿಸುತ್ತಿದ್ದರು. ದೆವ್ವ ಬಿಡಿಸುವ ವಿಧಾನಗಳನ್ನು ಪಾಲಕರಿಗೆ ಸೂಚಿಸಿದ್ದರು. ಆದರೆ ಪ್ರಯೋಜನವಾಗಿರಲಿಲ್ಲ. ಅವನನ್ನು ತಡೆದುಕೊಳ್ಳುವುದು ಮನೆಯವರಿಗೂ, ಶಾಲೆಯವರಿಗೂ ಬಲು ಕಷ್ಟವಾಗಿತ್ತು. ಹಿಂಸೆ, ಪ್ರತಿಹಿಂಸೆ ನಡೆಯುತ್ತಿತ್ತು. ಆಗ ಶಾಲೆಯ ವಿಜ್ಞಾನದ ಟೀಚರ್ ಅವನನ್ನು ಹಿಡಿದದ್ದು ದೆವ್ವವೂ ಅಲ್ಲ, ಭೂತವೂ ಅಲ್ಲ, ಅವನದು ಮಾನಸಿಕ ಅಸ್ವಸ್ಥತೆಯೆಂದು ಸ್ಪಷ್ಟವಾಗಿ ಗುರುತಿಸಿದರು. ಅವನ ಮನೆಗೆ ಹೋಗಿ, ತಾಯ್ತಂದೆಯರೊಡನೆ ಮಾತನಾಡಿ, ಮನೋರೋಗ ತಜ್ಞರ ಬಳಿಗೆ ತಾವೇ ಒಯ್ದರು. ಅವನು ಕ್ರಮೇಣ ಮೊದಲಿನಂತಾದದ್ದು ಎಲ್ಲರಲ್ಲೂ ಸಮಾಧಾನ ತಂದಿತ್ತು.  ರೋಗದ ವಿಷಯದಲ್ಲಿ ತರ್ಕಬದ್ಧವಾಗಿ ಯಾವಾಗ ಏನು ಮಾಡಬೇಕೋ ಆಗ ಅದನ್ನು ಮಾಡಿದರೆ ಮಾತ್ರ ನಿಯಂತ್ರಣ ಸಾಧ್ಯವೆಂದು ಆ ಟೀಚರ್ ಅರಿತಿದ್ದರು. ಅಂದಷ್ಟೇ ಅಲ್ಲ, ಮುಂದೆಯೂ ಅವರ ವೈಚಾರಿಕ ಮುಂದಾಳ್ತನ ಅವರದೇ ನೆಲವನ್ನು ರೋಗದ ಭಯಾನಕ ಹಿಡಿತದಿಂದ ಪಾರುಮಾಡಿತು.

ಅವರು ಶೈಲಜಾ ಟೀಚರ್.

ಅಂತಹ ಕೆಲವು ಹೆಣ್ಣು ಜೀವಗಳಿರುತ್ತವೆ: ಮಾಡುವ ಕೆಲಸದಿಂದ, ಆಯ್ದುಕೊಳ್ಳುವ ದಾರಿಯಿಂದ, ಶ್ರದ್ಧೆ-ಬದ್ಧತೆಯಿಂದ ಅವರ ಇರವನ್ನು ಲೋಕ ಗುರುತಿಸಬಲ್ಲದು. ಹೆಸರು, ಹಣದ ಹಪಾಹಪಿಯಿರದ ಅವರ ಗಮನವೆಲ್ಲ ಮಾಡುವ ಕೆಲಸವನ್ನು ಚೆಂದಗಾಣಿಸುವ ಕಡೆಗೇ ಇರುತ್ತದೆ. ಅವರ ಶ್ರಮದ ಚೆಲುವು ಎಂತಹುದೆಂದರೆ ಗಮನಿಸದಿರಲು ಲೋಕಕ್ಕೆ ಸಾಧ್ಯವೇ ಇಲ್ಲ. 

ಅಂಥವರಲ್ಲಿ ನಮ್ಮ ನೆರೆಯ ರಾಜ್ಯ ಕೇರಳದ ಮಾಜಿ ಆರೋಗ್ಯ ಸಚಿವರೂ, ಹಾಲಿ ಶಾಸಕರು ಮತ್ತು ವಿಧಾನಸಭೆಯಲ್ಲಿ ಪಕ್ಷದ ಮುಖ್ಯ ಸಚೇತಕರೂ ಆಗಿರುವ ಕೆ. ಕೆ. ಶೈಲಜಾ ಒಬ್ಬರು. ವಿಶ್ವವೇ ಹೊಸಹೊಸ ಸಾಂಕ್ರಾಮಿಕ ರೋಗಗಳಿಂದ ತತ್ತರಿಸುತ್ತಿರುವಾಗ ಧೃಢವಾಗಿ ನಿಂತು ನಿಫಾ ಮತ್ತು ಕೋವಿಡ್-೧೯ ಎಂಬ ಭಯಾನಕ ವೈರಸ್‌ಗಳು ಕಡಲತಡಿಯ ಕೇರಳವನ್ನು ಹೊಸೆದು ಹಾಕದಂತೆ ದಕ್ಷ ತಂಡವೊಂದನ್ನು ಕಟ್ಟಿಕೊಂಡವರು. ನಡುರಾತ್ರಿಯೋ ಹಗಲೋ, ತನ್ನ ಆರೋಗ್ಯ ಸರಿಯಿದೆಯೋ ಇಲ್ಲವೋ, ಉಂಡೆನೋ ಇಲ್ಲವೋ ಎಂದು ಲೆಕ್ಕಿಸದೇ ಪ್ರತಿಯೊಂದು ಹಂತದಲ್ಲೂ ವ್ಯವಸ್ಥೆಯನ್ನು ಖುದ್ದಾಗಿ ಪರಿಶೀಲಿಸಿದರು. ಪ್ರತಿದಿನ ರಾತ್ರಿ ೮ಕ್ಕೆ ಅವರು ನಡೆಸುತ್ತಿದ್ದ ಪತ್ರಿಕಾಗೋಷ್ಠಿಯ ಮಾಹಿತಿಗಳು ಜನರಲ್ಲಿ ಧೈರ್ಯ ತುಂಬುತ್ತಿದ್ದವು. ವಸ್ತುಸ್ಥಿತಿಯನ್ನು ಅರ್ಥ ಮಾಡಿಸುವಂತಿದ್ದವು. ವಿಶ್ವದ ಮಾಧ್ಯಮಗಳೂ ಆ ಪತ್ರಿಕಾಗೋಷ್ಠಿಯನ್ನು ಎದುರು ನೋಡುತ್ತಿದ್ದರು. ಕಾಯಿಲೆಯ ಬಗೆಗೆ, ಅದರ ಹರಡುವಿಕೆ-ನಿಯಂತ್ರಣ-ಚಿಕಿತ್ಸೆಯ ಬಗೆಗೆ ಖಚಿತ ಮಾಹಿತಿಗಳನ್ನು ನೀಡುತ್ತ, ಏನು ಮಾಡಬೇಕೆನ್ನುವುದನ್ನು ತಿಳಿಸುತ್ತ ಹೋದ ಶೈಲಜಾ ಸಮಗ್ರ ದೃಷ್ಟಿಕೋನದಿಂದ ವಿಸ್ತೃತ ಕಾರ್ಯಯೋಜನೆ ರೂಪಿಸಿ ಅಚ್ಚುಕಟ್ಟಾಗಿ ಜಾರಿಯಾಗುವಂತೆ ನೋಡಿಕೊಂಡರು. 

ಪ್ರೌಢಶಾಲೆಯ ಭೌತಶಾಸ್ತ್ರ ಶಿಕ್ಷಕಿಯಾಗಿ ಎರಡು ದಶಕ ಕೆಲಸ ಮಾಡಿದ್ದ ಶೈಲಜಾ ಟೀಚರ್, ಆರೋಗ್ಯಮಂತ್ರಿಯಾಗಿ ವಿಶ್ವವೇ ತಮ್ಮತ್ತ ಗಮನಿಸುವಂತೆ ಕೆಲಸ ನಿರ್ವಹಿಸಿದರು. ವಿಶ್ವಸಂಸ್ಥೆಯೂ ಅವರ ಕಾರ್ಯದಕ್ಷತೆ, ಬದ್ಧತೆ, ಪರಿಶ್ರಮಗಳನ್ನು ಗುರುತಿಸಿ ಗೌರವಿಸಿತು. 

***

ಕಣ್ಣೂರು ಜಿಲ್ಲೆಯ ಮಟ್ಟನೂರಿನ ಕೆ. ಕುಂದನ್ ಮತ್ತು ಕೆ. ಕೆ. ಶಾಂತಾ ಅವರ ಮಗಳಾಗಿ ನವೆಂಬರ್ ೨೦, ೧೯೫೬ರಲ್ಲಿ ಹುಟ್ಟಿದ ಶೈಲಜಾ ಅವರದು ಕಮ್ಯುನಿಸ್ಟ್ ಹೋರಾಟಗಾರರ ಮನೆತನ. ತಾಯಿಯ ತಾಯಿ ಎಂ. ಕೆ. ಕಲ್ಯಾಣಿಯಮ್ಮ, ಇರಿಟ್ಟಿ ಊರಿನ ಪ್ರಗತಿಪರ ಚಿಂತನೆಗಳ ಮೂಲಸೆಲೆಯಂತೆ ಇದ್ದವರು. ಬ್ರಿಟಿಷರ ಕಾಲದಲ್ಲಿ ಆರಂಭದ ಕಮ್ಯುನಿಸ್ಟರಿಗೆ ಅಡಗುದಾಣವಾಗಿ ತಮ್ಮ ಮನೆಯನ್ನು ಬಳಸಿದವರು. ಇಡಿಯ ರಾಜ್ಯವೇ ಮೈಲಿಬೇನೆಗೆ ತುತ್ತಾದ ಸಮಯದಲ್ಲಿ ಜನರ ನಡುವೆ ಮಿಂಚಿನಂತೆ ಸಂಚರಿಸಿ ಬಾಧಿತ ರೋಗಿಗಳನ್ನು ಬೇರೆಡೆಗೆ ಸ್ಥಳಾಂತರಿಸಿ ಧೈರ್ಯ ತುಂಬಿದವರು. ಕಲ್ಯಾಣಿಯಮ್ಮ ಎಂದರೆ ಊರಲ್ಲಿ ಎಲ್ಲರಿಗೂ ಗೌರವ. ಹೆಂಡಗುಡುಕರು, ಉಡಾಳರು ಅವರ ಎದುರು ಬರಲು ಅಂಜುತ್ತಿದ್ದರು. ಕುಡುಕರು ದಾರಿಯಲ್ಲಿ ಕಂಡರೆ ಅವರ ತಲೆಮೇಲೆ ನೀರು ಸುರಿದು ಬುದ್ಧಿ ಹೇಳಿ ಎಷ್ಟೋ ಜನರಿಗೆ ಕುಡಿತ ಬಿಡಿಸಿದ್ದರು. ಅಂತಹ ಅಜ್ಜಿಯನ್ನು ಅರಳುಗಂಗಳಿಂದ ನೋಡಿ ಬೆಳೆದ ಹುಡುಗಿ ಶೈಲಜಾ. ಕಲ್ಯಾಣಿಯಮ್ಮನ ತಮ್ಮ ಎಂ. ಕೆ. ರಾಮಉನ್ನಿ ಜಮೀನ್ದಾರೀ ಪದ್ಧತಿಯ ವಿರುದ್ಧ ಹೋರಾಡಿದ ‘ಕೆಂಪು ದಳ’ದ ಸದಸ್ಯರಾಗಿ ವಿಪರೀತ ಪೊಲೀಸ್ ಹಿಂಸೆಗೆ ಒಳಗಾಗಿದ್ದರು. ಒಮ್ಮೆ ಸೆರೆಮನೆಯಲ್ಲಿ ತೀವ್ರ ಹಿಂಸೆ ಅನುಭವಿಸಿ ಬಿಡುಗಡೆಯಾದ ಕೂಡಲೇ ತೀರಿಕೊಂಡರು. ಅಜ್ಜಿಯ ಮತ್ತೊಬ್ಬ ತಮ್ಮ ಎಂ. ಕೆ. ಕೃಷ್ಣನ್ ರೈತ ಹೋರಾಟದಲ್ಲಿ ಸೇಲಂ ಜೈಲು ಸೇರಿದರು. ೨೨ ಜನರನ್ನು ಗುಂಡು ಹೊಡೆದು ಪೊಲೀಸರು ಕೊಲ್ಲಲೆತ್ನಿಸಿದಾಗ ತಲೆ ಸವರಿ ಹೋದ ಗುಂಡಿನಿಂದ ಆಶ್ಚರ್ಯಕರವಾಗಿ ಅವರು ಪಾರಾಗಿದ್ದರು. ಇಂತಹ ಕತೆಗಳ ಕೇಳುತ್ತ ಹುಡುಗಿ ಬೆಳೆದಳು. 

ಮಡತ್ತಿಲ್ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡಿದ ದಿಟ್ಟ ಯುವತಿ ಶೈಲಜಾ ಕಾಲೇಜು ದಿನಗಳಲ್ಲೇ ಎಸ್‌ಎಫ್‌ಐ (ಸ್ಟೂಡೆಂಟ್ಸ್ ಫೆಡರೇಷನ್ ಆಫ್ ಇಂಡಿಯಾ) ಸೇರಿದರು. ಬಳಿಕ ಕೇರಳ ಸ್ಟೇಟ್ ಯುತ್ ಫೆಡರೇಷನ್ (ಅದೀಗ ಡಿವೈಎಫ್ಫೈ)ನ ಭಾಗವಾದರು. ತಮ್ಮ ಶ್ರದ್ಧೆ, ಬದ್ಧತೆ, ಹಿಡಿದ ಕೆಲಸವನ್ನು ಸದ್ದುಗದ್ದಲವಿಲ್ಲದೆ ಮುಗಿಸುವ ದಕ್ಷತೆಯಿಂದ ಸಂಘಟನೆಯ ಉನ್ನತ ಜವಾಬ್ದಾರಿಗಳನ್ನು ನಿರ್ವಹಿಸಿದರು. ಬಿಎಸ್ಸಿ, ಬಿಎಡ್ ಮುಗಿಸಿದ ಬಳಿಕ ಶಿವಪುರಂ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿ ಸೇರಿದರು. ಅವರ ವೈಜ್ಞಾನಿಕ ಮನೋಭಾವ, ಸಾಮಾಜಿಕ ಕಾಳಜಿ ಆಗಲೇ ವ್ಯಕ್ತವಾಗುತ್ತಿತ್ತು. ಯಾವ ವಿದ್ಯಾರ್ಥಿ/ನಿಯೂ ಶಾಲೆ ಬಿಡಲು ಸಾಧ್ಯವಿರಲಿಲ್ಲ. ಅದರಲ್ಲೂ ಹುಡುಗಿಯರು ಶಾಲೆ ಬಿಟ್ಟರೆ ಟೀಚರ್ ಅವರ ಮನೆಗೇ ಹೋಗುತ್ತಿದ್ದರು. ಅವರ ತಾಯ್ತಂದೆಯರನ್ನು ಒಪ್ಪಿಸಿ ವಿದ್ಯಾರ್ಥಿಗಳು ಶಾಲೆಗೆ ಬರುವಂತೆ ಮಾಡುತ್ತಿದ್ದರು. 



ಸಂಘಟನೆಯ ಕೆಲಸಗಳಲ್ಲಿ ಜೊತೆಜೊತೆಯಿದ್ದ ಶೈಲಜಾ ಮತ್ತು ಭಾಸ್ಕರನ್ ೧೯೮೧ರಲ್ಲಿ ಬಾಳಸಂಗಾತಿಗಳಾದರು. ಪಳಸ್ಸಿ ಶಾಲೆಯಲ್ಲಿ ಭಾಸ್ಕರನ್ ಮುಖ್ಯೋಪಾಧ್ಯಾಯರಾದರು. ಇಬ್ಬರೂ ಶಿಕ್ಷಕ ವೃತ್ತಿ ನಡೆಸುತ್ತಲೇ ಸಂಘಟನೆಯಲ್ಲೂ ಸಕ್ರಿಯರಾದರು. ಸ್ತ್ರೀ ಶಬ್ದಮ್ ಎಂಬ ಐದ್ವಾ ಮಹಿಳಾ ಸಂಘಟನೆಯ ಮುಖವಾಣಿ ಪತ್ರಿಕೆಗೆ ಶೈಲಜಾ ಸಂಪಾದಕಿಯಾದರು. ‘ಇಂಡಿಯನ್ ವರ್ತಮಾನವುಂ, ಸ್ತ್ರೀ ಸಮೂಹವುಂ’ ಮತ್ತು ‘ಚೀನಾ: ರಾಷ್ಟ್ರಂ, ರಾಷ್ಟ್ರೀಯಂ, ಕಷ್ಟಕಾಲ’ ಎಂಬ ಎರಡು ಪುಸ್ತಕಗಳನ್ನು ಬರೆದರು. ಅಂದಿನ ಮುಖ್ಯಮಂತ್ರಿ ಕರುಣಾಕರನ್ ಕಣ್ಣೂರಿಗೆ ಬಂದಾಗ ಶಾಲೆಗೆ ರಜೆ ಹಾಕಿ ಆ ಸಭೆಗೆ ಹೋದರು. ಯುವ ಸಮುದಾಯದೆಡೆಗಿನ ಸರ್ಕಾರದ ನಿರ್ಲಕ್ಷ್ಯ ವಿರೋಧಿಸಿ ಕಪ್ಪುಬಾವುಟ ತೋರಿಸಿ ಬಂಧನಕ್ಕೊಳಗಾದರು.

ಇದರ ನಡುವೆ ಕೂತ್ತುಪರಂಬದಲ್ಲಿ ಸಚಿವರೊಬ್ಬರು ಬಂದಾಗ ಪ್ರತಿಭಟನಾ ಪ್ರದರ್ಶನ ಏರ್ಪಡಿಸಿದ ಡಿವೈಎಫ್ಫೈನ ಐವರು ಕಾರ್ಯಕರ್ತರು ಗುಂಡೇಟಿಗೆ ಬಲಿಯಾದರು. ಈ ಘಟನೆ ಶೈಲಜಾರನ್ನು ರಾಜಕೀಯಕ್ಕೆಳೆದು ತಂದಿತು. ೧೯೯೬ರಲ್ಲಿ ಕೆಲಸಕ್ಕೆ ರಜೆ ಹಾಕಿ ಚುನಾವಣೆಗೆ ನಿಂತು ಶಾಸಕರಾದರು. ಆದರೆ ತನ್ನ ಸಾಮಾಜಿಕ ಚಟುವಟಿಕೆಯ ನಡುವೆ ಬೋಧನಾ ವೃತ್ತಿಗೆ ನ್ಯಾಯ ಒದಗಿಸಲು ಆಗುವುದಿಲ್ಲ ಎನಿಸಿದ್ದೇ ೨೩ ವರ್ಷ ಕೆಲಸ ಮಾಡಿದ ಬಳಿಕ ೨೦೦೪ರಲ್ಲಿ ರಾಜೀನಾಮೆ ಸಲ್ಲಿಸಿದರು. ಶಿಕ್ಷಕಿಯೊಬ್ಬರು ಜನಪ್ರಿಯ ಜನನಾಯಕಿಯಾಗಿ ಬೆಳೆಯಲು ಈ ನಿರ್ಧಾರ ಕಾರಣವಾಯಿತು. ಅವರ ಪಕ್ಷವು ಪೂರ್ಣಪ್ರಮಾಣದ ರಾಜಕಾರಣದಲ್ಲಿ ಅವರನ್ನು ಸಕ್ರಿಯಗೊಳಿಸಿತು. 

೨೦೦೬ರಲ್ಲಿ ಪೆರವೂರ್ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದ ಶೈಲಜಾ ಇದುವರೆಗೆ ಸೋಲಿನ ರುಚಿ ಕಂಡದ್ದು ಒಮ್ಮೆ ಮಾತ್ರ. ಅದು ೨೦೧೧ರಲ್ಲಿ ಕಾಂಗ್ರೆಸ್ಸಿನ ಸನ್ನಿ ಜೋಸೆಫ್ ಎದುರು ಸೋತಾಗ. ಮತ್ತೆ ೨೦೧೬ರಲ್ಲಿ ಕೂತ್ತುಪರಂಬದಲ್ಲಿ ಗೆದ್ದ ಬಳಿಕ ಪಿಣರಾಯಿ ವಿಜಯನ್ ಅವರ ಮೊದಲ ಮಂತ್ರಿಮಂಡಲದಲ್ಲಿ ಸಚಿವೆಯಾದರು. ಆರೋಗ್ಯ, ಮಹಿಳೆ ಮತ್ತು ಮಕ್ಕಳ ಕಲ್ಯಾಣ, ಸಮಾಜ ಕಲ್ಯಾಣ ಎಂಬ ಬಹುಮುಖ್ಯವಾದ ಮೂರು ಖಾತೆಗಳ ಜವಾಬ್ದಾರಿ ಅವರ ಹೆಗಲಿಗೆ ಬಂತು. ಸಚಿವರಾಗಿ ಕಾರ್ಯನಿರ್ವಹಿಸುತ್ತಿರುವಾಗ ೨೦೧೮ರಲ್ಲಿ ನಿಫಾ ವೈರಸ್ ಸೋಂಕು ಕೇರಳಕ್ಕೆ ಬಂತು. ಸದಾ ಪ್ರವಾಸಿಗರಿಂದ ತುಂಬಿಕೊಂಡ, ಪ್ರವಾಸೋದ್ಯಮವೇ ಆರ್ಥಿಕತೆಯ ಬೆನ್ನೆಲುಬಾದ ದೇವರ ನಾಡು ಆಗಷ್ಟೇ ಭೀಕರ ಪ್ರವಾಹದಿಂದ ಕಂಗೆಟ್ಟಿತ್ತು. ಅದರ ಮೇಲೆ ನಿಫಾ ಬಂತು. ಆ ಸಮಯದಲ್ಲಿ ಕಠಿಣ ನಿರ್ಧಾರಗಳನ್ನು ತೆಗೆದುಕೊಂಡು ಸೋಂಕನ್ನು ನಿಯಂತ್ರಣಕ್ಕೆ ತರುವಲ್ಲಿ ಶೈಲಜಾರ ಪಾತ್ರ ಹಿರಿದು. ಇನ್ನೇನು ನಿಫಾ ಶಂಕೆ ಮುಗಿಯಿತು ಎನ್ನುವಾಗ ಕೋವಿಡ್-೧೯ ಅಪ್ಪಳಿಸಿತು. ಭಾರತ ಸರ್ಕಾರ ಮತ್ತು ದೇಶದ ಉಳಿದ ರಾಜ್ಯಗಳು ಕೋವಿಡ್‌ಗೆ ಎಚ್ಚೆತ್ತುಕೊಳ್ಳುವ ಮೊದಲೇ ಕೇರಳ ಜಾಗೃತಗೊಂಡಿತು. ಡಿಸೆಂಬರ್ ೨೦೧೯ರಲ್ಲಿ ಚೀನಾದ ವುಹಾನ್ ಪ್ರಾಂತ್ಯದಲ್ಲಿ ವೈರಸ್ ಹಾವಳಿಯನ್ನು ಗಮನಿಸಿ ಜನಭರಿತ ಭಾರತಕ್ಕೆ ಬಂದರೇನು ಮಾಡುವುದೋ ಎಂದು ಪ್ರವಾಸಿಗರಿಂದ ತುಂಬಿದ್ದ ಕೇರಳ ರಾಜ್ಯವು ತಕ್ಷಣ ಕಾರ್ಯಪ್ರವೃತ್ತವಾಯಿತು. ೨೦೧೮ರ ಪ್ರವಾಹ, ನಿಫಾ ತುರ್ತು ಪರಿಸ್ಥಿತಿಗಳನ್ನು ನಿಭಾಯಿಸಿದ್ದ ರಾಜ್ಯವು ೨೦೨೦ ಜನವರಿ ೩೦ರಂದು ಮೊದಲ ಕೋವಿಡ್ ಸೋಂಕು ಪತ್ತೆಯಾದದ್ದೇ ತುರ್ತಾಗಿ ಕಾರ್ಯಪ್ರವೃತ್ತವಾಯಿತು. ಎರಡೇ ದಿನದಲ್ಲಿ ಮತ್ತೆರೆಡು ಪ್ರಕರಣಗಳು ದಾಖಲಾದಾಗ ತುರ್ತುಸಭೆ ಕರೆದು ಅವಘಡ ನಿರ್ವಹಣಾ ಸಮಿತಿ ರಚನೆಯಾಯಿತು. ಮುಖ್ಯಮಂತ್ರಿ, ಆರೋಗ್ಯ ಸಚಿವರು, ಮುಖ್ಯ ಕಾರ್ಯದರ್ಶಿಗಳು, ಇಲಾಖಾ ಕಾರ್ಯದರ್ಶಿಗಳ ತಂಡ ಹತ್ತು ಹಲವು ಕಾರ್ಯತಂತ್ರಗಳನ್ನು ಯೋಜಿಸಿತು. ಆರೋಗ್ಯ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆ, ತುರ್ತು ಕಾರ್ಯ ಪಡೆಗಳ ಅಧಿಕಾರಿಗಳ ಸಮನ್ವಯ ಸಮಿತಿ ರಚಿಸಿ ದಿನದಿನವೂ ಹೊಸಹೊಸ ಮಾರ್ಗದರ್ಶಿ ಸೂತ್ರ ಬಿಡುಗಡೆ ಮಾಡತೊಡಗಿತು.

ಕೋವಿಡ್-೧೯ ಕಾಯಿಲೆಯ ಬಗೆಗೆ, ವೈರಸ್ ಬಗೆಗೆ ನಮಗೀಗ ಅಷ್ಟಿಷ್ಟು ತಿಳಿದಿದೆ. ಅಂತಹ ಯಾವೊಂದೂ ಪೂರ್ವಜ್ಞಾನವಿಲ್ಲದ, ಲಸಿಕೆ ತಯಾರಾಗಿರದ, ಚಿಕಿತ್ಸೆ ಲಭ್ಯವಿರದಿದ್ದ ಆರಂಭದ ಸಮಯದಲ್ಲಿ ಶೈಲಜಾ ತೋರಿದ ವಿವೇಕ ಮತ್ತು ಪೊರೆವ ಹೆಣ್ಣು ಗುಣಗಳು ರಾಜ್ಯದ ಜನರನ್ನು ಕಂಗೆಡದೆ ಸೋಂಕನ್ನು ಎದುರಿಸಲು ಸಜ್ಜುಗೊಳಿಸಿದವು. ಈ ಹಂತದಲ್ಲಿ ಶೈಲಜಾ ತಮ್ಮನ್ನು ಸಂಪೂರ್ಣ ಜನಸಂಪರ್ಕಕ್ಕೆ ಒಡ್ಡಿಕೊಂಡರು. ಚುರುಕಾಗಿ ಓಡಾಡುತ್ತ ಜನರಲ್ಲಿ ವಿಶ್ವಾಸ ತುಂಬಿದರು. ಹೆಚ್ಚೆಚ್ಚು ಪರೀಕ್ಷೆ ನಡೆಸಿ, ಕೂಡಲೇ ಸೋಂಕು ಪತ್ತೆ ಮಾಡಿ, ಸೋಂಕಿತರನ್ನು ಪ್ರತ್ಯೇಕ ಇರಿಸಿ, ಸೂಕ್ತ ಚಿಕಿತ್ಸೆ ನೀಡಿ ಯಶಸ್ವಿ ನಿಯಂತ್ರಣ ಮಾರ್ಗ ಹುಡುಕಿದರು. ಸರ್ಕಾರವು ಕುಡುಂಬಶ್ರೀ ಕಾರ್ಯಕರ್ತರನ್ನು ಬಳಸಿಕೊಂಡು ರೇಶನ್ ಪೂರೈಸಿತು. ಸಾಮೂಹಿಕ ಭೋಜನ ವ್ಯವಸ್ಥೆ ಮಾಡಿತು. ಇದೇ ಸಂದರ್ಭ ಬಳಸಿಕೊಂಡು ರಾಜ್ಯದ ವೈದ್ಯಕೀಯ ಶಿಕ್ಷಣ, ಆರೋಗ್ಯ ವ್ಯವಸ್ಥೆಯನ್ನು ಮೇಲ್ದರ್ಜೆಗೇರಿಸಿ ಬಲಪಡಿಸಿತು. ಉಳಿದ ದೇಶ, ರಾಜ್ಯಗಳು ಅತಿ ಹೆಚ್ಚು ಸೋಂಕಿನಿಂದ ತತ್ತರಿಸುತ್ತ, ಕೆಲವು ಸರ್ಕಾರಗಳು ಪರೀಕ್ಷೆಯನ್ನೇ ಮಾಡದೇ ಹುಸಿ ನಿಯಂತ್ರಣದ ಗ್ರಾಫುಗಳನ್ನು ಕಾಗದದ ಮೇಲೆ ತೋರಿಸುತ್ತ, ಸುಡಲು ಸ್ಮಶಾನವೂ ಸಿಗದೆ ಶವಗಳು ಕ್ಯೂನಲ್ಲಿ ಕಾಯುತ್ತಾ ಇರುವಾಗ ಕೇರಳ ಪ್ರತಿದಿನ ಲಕ್ಷಗಟ್ಟಲೆ ಪರೀಕ್ಷೆ ನಡೆಸಿ ಪರಿಸ್ಥಿತಿಯನ್ನು ಹತೋಟಿಗೆ ತಂದುಕೊಂಡಿತು. 

ಹಗಲು ರಾತ್ರಿ ಎನ್ನದೆ ಕೆಲಸ ಮಾಡಿದ ಫಲ. ಐದು ತಿಂಗಳಲ್ಲಿ ಸೋಂಕು ನಿಯಂತ್ರಣಕ್ಕೆ ಬಂತು. ಇದು ಇಡಿಯ ಸರ್ಕಾರ, ಅಧಿಕಾರಿಗಳು, ಕಾರ್ಯಕರ್ತರು ಎಲ್ಲರ ಮಿಶ್ರ ಶ್ರಮದ ಫಲವೇ ಹೌದು. ಆದರೆ ಯೋಜನೆಯಲ್ಲಿ ಆರೋಗ್ಯ ಸಚಿವೆ ಶೈಲಜಾ ಪಾಲು ದೊಡ್ಡದು. 

ಒಂದಾದ ಮೇಲೊಂದು ಕೋವಿಡ್ ಅಲೆಗಳು ಬಂದಪ್ಪಳಿಸಿದರೂ ಕೇರಳ ರಾಜ್ಯವು ಸುಳ್ಳು ಅಂಕಿಅಂಶ ತೋರಿಸಿ ತನ್ನಲ್ಲಿ ಸೋಂಕು ಕಡಿಮೆಯಾಯಿತು ಎನ್ನಲಿಲ್ಲ. ಮಿಕ್ಕ ರಾಜ್ಯಗಳು ಸಾವಿರಗಟ್ಟಲೆ ಟೆಸ್ಟ್‌ಗಳನ್ನು ಮಾಡುವಾಗ ತಾನು ಲಕ್ಷಗಟ್ಟಲೆ ಟೆಸ್ಟುಗಳನ್ನು ಮಾಡಿ ಸೋಂಕಿತರನ್ನು ಶುಶ್ರೂಷೆಗೊಳಪಡಿಸಿತು. ಧೈರ್ಯ ಕಳೆದುಕೊಳ್ಳದೆ ಇರಲಿ ಎಂದು ಸ್ವತಃ ಆರೋಗ್ಯ ಸಚಿವರೇ ಮಿಂಚಿನಂತೆ ರಾಜ್ಯದಾದ್ಯಂತ ಸಂಚರಿಸಿದರು. ಎಷ್ಟೋ ಸಲ ಮನೆಗೆ ಹೋಗದೇ ದಿನಗಳುರುಳುತ್ತಿದ್ದವು. ಸೋಂಕನ್ನು ಮನೆಗೆ ತಲುಪಿಸದಂತೆ ಎಚ್ಚರ ವಹಿಸಬೇಕಾಗುತ್ತಿತ್ತು. ಆದರೂ ಮನೆಯವರೊಂದಿಗೆ ನಿತ್ಯ ಸಂಪರ್ಕ ಇರಿಸಿಕೊಂಡಿದ್ದರು. ಧೈರ್ಯಗೆಡದಂತೆ ಜನರಲ್ಲಿ ಹೇಗೆ ಭರವಸೆ ತುಂಬುತ್ತಿದ್ದರೋ ಅದನ್ನು ಕುಟುಂದವರಲ್ಲಿಯೂ ತುಂಬಿದರು. ಅವರಿಗೆ ಶೋಭಿತ್ ಮತ್ತು ಲಸಿತ್ ಎಂಬ ಇಬ್ಬರು ಗಂಡುಮಕ್ಕಳು. ಶೋಭಿತ್ ಅಬುಧಾಭಿಯಲ್ಲಿದ್ದರು. ಅಲ್ಲಿಯ ಕೋವಿಡ್ ಕಾಳಜಿ ಕೇಂದ್ರದ ಮೇಲ್ವಿಚಾರಣೆ ವಹಿಸಿಕೊಂಡಿದ್ದರು. ಮತ್ತೊಬ್ಬ ಮಗ ಲಸಿತ್ ಕಣ್ಣೂರು ವಿಮಾನ ನಿಲ್ದಾಣದಲ್ಲಿ ಎಲೆಕ್ಟ್ರಿಕ್ ಇಂಜಿನಿಯರ್ ಆಗಿರುವರು. ಮಕ್ಕಳನ್ನು, ಮನೆಯವರನ್ನು ಫೋನ್ ಮೂಲಕ ಸಂಪರ್ಕಿಸುತ್ತ ಧೈರ್ಯ ತುಂಬಿ, ಧೈರ್ಯ ಪಡೆದವರು ಶೈಲಜಾ. 

ನಿರುದ್ವಿಗ್ನವಾಗಿ ಆದರೆ ನಿರಂತರವಾಗಿ, ಖಚಿತವಾಗಿ ಯೋಜನೆ ರೂಪಿಸಿ ಕಾರ್ಯಪ್ರವೃತ್ತರಾದ ರೀತಿಗೆ ವಿಶ್ವವೇ ಅಚ್ಚರಿಗೊಂಡಿತು. ಅವರ ಕಾರ್ಯವೈಖರಿಯ ಬಗೆಗೆ ಚರ್ಚೆಗಳಾದವು. ಗಾರ್ಡಿಯನ್ ಪತ್ರಿಕೆ ಅವರನ್ನು ‘ಕೊರೊನಾ ಸಂಹಾರಕಿ’, ‘ರಾಕ್‌ಸ್ಟಾರ್ ಹೆಲ್ತ್ ಮಿನಿಸ್ಟರ್’ ಎಂದು ಹೆಸರಿಸಿತು. ಏಷಿಯಾದ ಶಕ್ತ ಕೊರೋನಾ ವಾರಿಯರ್‌ಗಳಲ್ಲಿ ಪ್ರಮುಖರೆಂದು ಬಿಬಿಸಿ ಹೇಳಿತು. ವೋಗ್ ಪತ್ರಿಕೆಯು ವೋಗ್ ವಾರಿಯರ್ ಎಂದಿತು. ಬ್ರಿಟಿಷ್ ಪತ್ರಿಕೆ ಪ್ರಾಸ್ಪೆಕ್ಟ್ ಅವರನ್ನು ೨೦೨೦ನೇ ಇಸವಿಯ ಅತ್ಯುನ್ನತ ಚಿಂತಕಿ ಎಂದಿತು. ಫೈನಾನ್ಶಿಯಲ್ ಟೈಮ್ಸ್ ಅಂತೂ ೨೦೨೦ನೇ ಇಸವಿಯ ವಿಶ್ವದ ಅತ್ಯಂತ ಪ್ರಭಾವಿ ಮಹಿಳೆ ಎಂದು ಗುರುತಿಸಿ ನ್ಯೂಜಿಲೆಂಡ್ ಪ್ರಧಾನಿ ಜೆಸಿಂಡಾಗೆ ನಂತರದ ಸ್ಥಾನ ನೀಡಿತು. ‘ಸಾಮಾಜಿಕ ಸೇವಾ ದಿನ’ದಂದು ಮಾತನಾಡಲು ವಿಶ್ವದ ಕೆಲವೇ ನಾಯಕರ ಜೊತೆಗೆ ವಿಶ್ವಸಂಸ್ಥೆಯಿಂದ ಆಹ್ವಾನ ಬಂತು. ಅವರ ಕಾರ್ಯ-ಸಾಧನೆ ಆಧರಿಸಿ ‘ವೈರಸ್’ ಎಂಬ ಸಿನಿಮಾವೂ ತಯಾರಾಯಿತು.

ಅವರನ್ನು ಪೂರಾ ಸಮಾಜಕ್ಕೆ ಬಿಟ್ಟುಕೊಟ್ಟ ಅವರ ಕುಟುಂಬ ಕೋವಿಡ್ ಕಷ್ಟದ ಕಾಲವನ್ನು ಹೇಗೆ ನಿಭಾಯಿಸಿತು ಎಂಬ ಪ್ರಶ್ನೆಗೆ, ‘ಪಕ್ಷ ಎಂದರೆ ನಮ್ಮ ದೇಹದ ಒಂದು ಭಾಗ ಇದ್ದ ಹಾಗೆ. ಅದರಿಂದ, ಅದಕ್ಕಾಗಿಯೇ ನಾವು ಬದುಕುವುದು. ಎಂದೇ ಜನರಿಗಾಗಿ ಪಕ್ಷದ ನಿರ್ದೇಶನದಂತೆ ಶೈಲಜಾ ಅವರು ಕೆಲಸ ಮಾಡುತ್ತಿರುವುದು ಎಂದು ಅರಿತುಕೊಳ್ಳುವುದು ನಮಗೆ ಸಾಧ್ಯವಾಯಿತು. ಹಾಗಾಗಿ ನಮ್ಮ ಕುಟುಂಬಕ್ಕೆ ಅವರು ಜೊತೆಯಿಲ್ಲದಿರುವುದನ್ನು ತಾಳಿಕೊಳ್ಳುವುದು ಅಷ್ಟೇನೂ ಕಷ್ಟವಾಗಲಿಲ್ಲ. ಕಮ್ಯುನಿಸ್ಟ್ ಕುಟುಂಬಗಳಿರುವುದೇ ಹೀಗೆ. ಮನೆಯವರಿಗೆಲ್ಲ ಶೈಲಜಾ ಟೀಚರ್ ಮಂತ್ರಿಯಾಗಿ, ಮತ್ತೊಂದಾಗಿ ಕೆಲಸ ಮಾಡುವಾಗ ಹೆಮ್ಮೆಯೇ ಆಯಿತು’ ಎಂದು ಕಮ್ಯುನಿಸ್ಟ್ ಪಕ್ಷದ ಸದಸ್ಯರಾದ, ನಿವೃತ್ತ ಪ್ರೌಢಶಾಲಾ ಮುಖ್ಯ ಶಿಕ್ಷಕರಾದ ಶೈಲಜಾರ ಬಾಳಸಂಗಾತಿ ಭಾಸ್ಕರನ್ ಮಾಸ್ಟರ್ ಹೇಳುತ್ತಾರೆ.


ಕೋವಿಡ್ ಅಲೆಯ ಬಳಿಕ ಕೇರಳ ವಿಧಾನಸಭೆಗೆ ಚುನಾವಣೆಗಳು ನಡೆದವು. ಈ ಬಾರಿ ತನ್ನ ಕ್ಷೇತ್ರ ಬದಲಿಸಿ ಮಟ್ಟನೂರಿನಿಂದ ಶೈಲಜಾ ಸ್ಪರ್ಧಿಸಿದರು. ನಿರೀಕ್ಷೆಯಂತೆ ೬೦,೯೬೩ ಮತಗಳ ಭಾರೀ ಅಂತರದಿಂದ ಗೆಲುವು ಸಾಧಿಸಿದರು. ಕೇರಳದ ಇತಿಹಾಸದಲ್ಲಿ ಅದೊಂದು ದಾಖಲೆ. ಇಷ್ಟು ಭಾರೀ ಅಂತರದಿಂದ ಅದುವರೆಗೆ ಯಾರೂ ಗೆಲುವು ಪಡೆದಿರಲಿಲ್ಲ. ಅವರನ್ನೇ ಕೇರಳದ ಮುಖ್ಯಮಂತ್ರಿಯನ್ನಾಗಿ ಮಾಡಬಹುದು ಎಂದು ಮಾಧ್ಯಮಗಳೂ, ಜನರೂ ಊಹಿಸಿದರು. ಆದರೆ ಅದಕ್ಕೆ ವ್ಯತಿರಿಕ್ತವಾಗಿ ಅವರನ್ನು ಸಂಪುಟದಿಂದ ಕೈ ಬಿಡಲಾಯಿತು. ಮುಖ್ಯಮಂತ್ರಿಯವರನ್ನು ಬಿಟ್ಟು ಎಲ್ಲ ಹೊಸಮುಖಗಳನ್ನೇ ಸಚಿವರನ್ನಾಗಿ ಮಾಡಲಾಯಿತು. ಮುಖ್ಯಮಂತ್ರಿಯಾಗುವುದಿರಲಿ, ಶೈಲಜಾ ಸಚಿವೆಯಾಗುವ ಪ್ರಶ್ನೆಯೇ ಏಳಲಿಲ್ಲ. ಅವರನ್ನು ಸಿಪಿಐ(ಎಂ) ಪಕ್ಷದ ಕೇಂದ್ರಸಮಿತಿಯ ಸದಸ್ಯೆಯಾಗಿ ನೇಮಿಸಿದರು. ಪಕ್ಷದ ಮಹಿಳಾ ಸಂಘಟನೆ ಐದ್ವಾದ ಕೇರಳ ರಾಜ್ಯ ಕಾರ್ಯದರ್ಶಿಯಾಗಿಸಿದರು. ವಿಧಾನಸಭೆಯಲ್ಲಿ ಪಕ್ಷದ ಮುಖ್ಯ ಸಚೇತಕರಾದರು. ಭಾರೀ ಅಂತರದಿಂದ ಗೆದ್ದಾಗಲೂ, ಯಶಸ್ವಿಯಾಗಿ ಕೆಲಸ ನಿರ್ವಹಿಸಿ ವಿಶ್ವದ ಗಮನ ಸೆಳೆದಾಗಲೂ ಮಂತ್ರಿಮಂಡಲದಿಂದ ಅವರನ್ನು ಕೈಬಿಟ್ಟ ಕುರಿತು ಹಲವೆಡೆಗಳಿಂದ ಆಕ್ರೋಶ, ಟೀಕೆಗಳು ಕೇಳಿಬಂದವು. ಆ ಕುರಿತು ಕೇಳಿದ ಪ್ರಶ್ನೆಗಳಿಗೆ ಉತ್ತರಿಸುತ್ತಾ, ‘ಒಮ್ಮೆ ಒಬ್ಬರಷ್ಟೇ ಮುಖ್ಯಮಂತ್ರಿಯಾಗಲು ಸಾಧ್ಯ. ಈಗ ಪಿಣರಾಯಿ ದಕ್ಷರಾಗಿದ್ದು ಮುಖ್ಯಮಂತ್ರಿಯಾಗಿದ್ದಾರೆ. ಹೊಸ ಮಂತ್ರಿಮಂಡಲ ಮತ್ತು ಸರ್ಕಾರ ಉತ್ತಮವಾಗಿ ಕಾರ್ಯ ನಿರ್ವಹಿಸಲಿವೆ. ನಾನು ಪಕ್ಷದ ನಿರ್ಧಾರಕ್ಕೆ ಬದ್ಧಳಾಗಿದ್ದೇನೆ’ ಎಂದು ಶೈಲಜಾ ತಣ್ಣಗೆ ಹೇಳಿದರು.

ನಿಫಾ ಮತ್ತು ಕೋವಿಡ್ ಸಾಂಕ್ರಾಮಿಕಗಳ ದಕ್ಷ ನಿಯಂತ್ರಣಕ್ಕಾಗಿ ರೇಮನ್ ಮ್ಯಾಗ್ಸೇಸೆ ಪ್ರಶಸ್ತಿ ಬಂದಾಗ ಶೈಲಜಾ ಅದನ್ನು ನಿರಾಕರಿಸಿದರು. ‘ನನ್ನ ಪಕ್ಷದವರೊಡನೆ ಚರ್ಚಿಸಿರುವೆ. ಪ್ರಶಸ್ತಿಯ ಕುರಿತು ಎಲ್ಲ ಗೌರವವನ್ನಿಟ್ಟುಕೊಂಡೇ ಹೇಳುತ್ತಿರುವೆ, ನಾನು ಒಬ್ಬಳೇ ಕೆಲಸ ಮಾಡಲಿಲ್ಲ. ಎಂದೇ ಕೆಲಸದ ಯಶಸ್ಸು ಸಾಮೂಹಿಕ ಪ್ರಯತ್ನಕ್ಕೆ ಸಲ್ಲಬೇಕೇ ಹೊರತು ಒಬ್ಬ ವ್ಯಕ್ತಿಗಲ್ಲ. ಆ ಪ್ರಶಸ್ತಿಯನ್ನು ಯಾವತ್ತೂ ವ್ಯಕ್ತಿಗಳಿಗೆ ಕೊಟ್ಟಿರುವರೇ ವಿನಹ ರಾಜಕಾರಣಿಗಳಿಗೆ ಕೊಟ್ಟಿಲ್ಲ. ಹಾಗಾಗಿ ಪ್ರಶಸ್ತಿ ಪಡೆಯದಿರಲು ನಿರ್ಧರಿಸಿರುವೆ’ ಎಂದು ತಿಳಿಸಿದರು.

ಇಂತಹ ನಮ್ಮಕ್ಕ ಶೈಲಜಾ ಮಂಜು ಸಾರಾ ರಾಜನ್ ಅವರ ಸಹಾಯದಿಂದ ತಮ್ಮ ಆತ್ಮಚರಿತ್ರೆ ‘ಮೈ ಲೈಫ್ ಅಸ್ ಎ ಕಾಮ್ರೇಡ್’ ಬರೆದು ಪ್ರಕಟಿಸಿದ್ದಾರೆ. ವಿಶ್ವವೇ ಗುರುತಿಸಿದ ಶೈಲಜಾ ಟೀಚರ್ ರೂಪುಗೊಂಡ ಪರಿಯನ್ನು ಅದರಲ್ಲಿ ತಿಳಿಯಬಹುದಾಗಿದೆ.


ಅಧಿಕಾರಕ್ಕಾಗಿ ಹಪಹಪಿಸದ, ಅಧಿಕಾರ ಅನುಭವಿಸಲಿಕ್ಕೆಂದೇ ರಾಜಕಾರಣ ನಡೆಸದ, ತನ್ನ ಪಾಲಿಗೆ ಬಂದದ್ದನ್ನು ದಕ್ಷವಾಗಿ ನಿಭಾಯಿಸಿ ಆಸೆಆಮಿಷಗಳಿಂದ ದೂರವೇ ಉಳಿಯುವ ನಿಸ್ಪೃಹತೆ ಒಂದು ಅಸಾಮಾನ್ಯ ಗುಣ. ಕಮ್ಯುನಿಸಂ ಇರಲಿ, ಸ್ತ್ರೀವಾದವೇ ಇರಲಿ, ಯಾವುದೇ ಮಾನವೀಯ ಸಿದ್ಧಾಂತವು ರಾಜಕೀಯ ಅಧಿಕಾರವನ್ನು ಹಂಚಿಕೊಳ್ಳುವ ಸಂಪನ್ಮೂಲವನ್ನಾಗಿ ನೋಡುತ್ತದೆ.  ಅಧಿಕಾರವನ್ನು ಲೋಕಹಿತದ ಕಾರಣಕ್ಕಾಗಿ ಬಳಸಬೇಕು, ಸಾಮೂಹಿಕವಾಗಿ ಅನುಭವಿಸಬೇಕೆಂದು ತಿಳಿಸುತ್ತದೆ. ಇದು ತಾತ್ತ್ವಿಕವಾಗಿ ನ್ಯಾಯವೇ ಆದರೂ ಇದನ್ನೊಪ್ಪಿಕೊಂಡ ಸಜೀವ ಮಾದರಿಗಳು ಇಲ್ಲವೆಂಬಷ್ಟು ವಿರಳವಾಗಿವೆ. ವರ್ತಮಾನದ ಸಂದರ್ಭದಲ್ಲಿ ಅಧಿಕಾರ ರಾಜಕಾರಣದ ಕಾರಿಡಾರುಗಳ ಕಂಬ, ಮೂಲೆಗಳೂ ಹೇಳುವ ಸ್ವಾರ್ಥ,  ಸ್ವಜನಪಕ್ಷಪಾತ, ದ್ರೋಹ, ಕುಟಿಲ ವ್ಯೂಹಗಳ ದುಷ್ಟ ಉದಾಹರಣೆಗಳ ನಡುವೆ ಶೈಲಜಾ ತರಹದ ಹೆಣ್ಣು ಜೀವವೊಂದು ನಮ್ಮ ನಡುವೆಯೇ ಇದೆ ಮತ್ತು ಹೆಣ್ಣುಮಾದರಿಯ ಮುಂದಾಳ್ತನಕ್ಕೆ ಸೂಕ್ತ ಉದಾಹರಣೆಯಾಗಿದೆ ಎನ್ನುವುದು ಭರವಸೆಯ ಸಂಗತಿಯಾಗಿದೆ. 

(ಇಂತಹ ನಮ್ಮಕ್ಕ ಶೈಲಜಾ ಅಂತಾರಾಷ್ಟ್ರೀಯ ಮಹಿಳಾ ದಿನದ ಮುನ್ನಾ ದಿನ ಮಾರ್ಚ್ ೭ರಂದು ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ಹಕ್ಕೊತ್ತಾಯ ಜಾಥಾ ಉದ್ಘಾಟಿಸಲಿಕ್ಕೆ ಕರ್ನಾಟಕಕ್ಕೆ, ತುಮಕೂರಿಗೆ ಬರಲಿದ್ದಾರೆ. ಬನ್ನಿ, ಅಕ್ಕ ಶೈಲಜಾರೊಂದಿಗೆ ಹೆಜ್ಜೆ ಹಾಕುವಾ. ಕೈಗೆ ಕೈ ಜೋಡಿಸುವಾ.)

                                                                                                                            ಡಾ. ಎಚ್. ಎಸ್. ಅನುಪಮಾ

Tuesday, 21 February 2023

Mirjan Fort ಮಿರ್ಜಾನ್ ಕೋಟೆ



ಕರಾವಳೀ ಭಾಗಕ್ಕೆ ಸಮುದ್ರವು ಒಂದು ಗಡಿ ಹಾಗೂ ಕೋಟೆಯ ಕೆಲಸ ಮಾಡುತ್ತಿದ್ದರೆ, ಮತ್ತೊಂದು ಕಡೆ ಸಾಲುಸಾಲು ಹಬ್ಬಿರುವ ಸಹ್ಯಾದ್ರಿ ಪರ್ವತಶ್ರೇಣಿ ಹಾಗೂ ಅದರ ದಟ್ಟಡವಿಯು ಕಾವಲು ಕೆಲಸ ಮಾಡುವಂತಿವೆ. ಹೀಗಾಗಿ ಕೋಟೆಕೊತ್ತಲಗಳು ಈ ಭಾಗದಲ್ಲಿ ಬಹಳವಾಗಿಲ್ಲ. ಅಲ್ಲದೇ ಕೋಟೆಯೆಂದ ಕೂಡಲೇ ಕಣ್ಣಿಗೆ ಕಟ್ಟುವ ಗಟ್ಟಿಶಿಲೆಯ ದುರ್ಗಮ ಕೋಟೆಗಳೂ ಇಲ್ಲಿಲ್ಲ. ಇದಕ್ಕೆ ಚಾರಿತ್ರಿಕ ಕಾರಣಗಳು ಬೇರೆಯೇ ಇರಬಹುದು. ಕರಾವಳಿಯ ಕೋಟೆಗಳಲ್ಲಿ ಮಂಗಳೂರು ಬಳಿಯ ಬೇಕಲ ಕೋಟೆ ಪ್ರಸಿದ್ಧವಾಗಿದ್ದು ಇತ್ತೀಚೆಗೆ ಉತ್ತರಕನ್ನಡ ಜಿಲ್ಲೆಯ ಮಿರ್ಜಾನ್ ಕೋಟೆಯೂ ಐತಿಹಾಸಿಕ ಸ್ಮಾರಕವಾಗಿ ಹೆಸರು ಗಳಿಸಿಕೊಳ್ಳುತ್ತಿದೆ. ಕೋಟೆಕೊತ್ತಲಗಳು ಒಂದುಕಾಲದಲ್ಲಿ ರಾಜನ ಹಿರಿಮೆ ಸಾರುವ ಸ್ಥಾವರ ಸಂಕೇತಗಳಾಗಿದ್ದರೆ, ಇಂದು ಅವು ನಿನ್ನೆಯ ಕಡೆಗೊಮ್ಮೆ ಗಮನ ಹರಿಸುವಂತೆ ನಮ್ಮನ್ನು ಪ್ರಚೋದಿಸುವ ತಾಣಗಳಾಗಿವೆ.

ಉತ್ತರಕನ್ನಡ ಜಿಲ್ಲೆಯ ಕುಮಟಾ ಪಟ್ಟಣದಿಂದ 8 ಕಿಮೀ ಉತ್ತರಕ್ಕೆ, ಅಘನಾಶಿನೀ ನದಿಯ ಆಸುಪಾಸಿನಲ್ಲಿರುವ ಊರು ಮಿರ್ಜಾನ್. ಮೊದಲು ಅದು ಮಿದಿಗೆ ಆಗಿತ್ತು. ಜನವಸತಿಭರಿತ ಪಟ್ಟಣವಾಗಿರದೆ ಸಾಗರ ವ್ಯವಹಾರ (ಮಾರಿಟೈಮ್ ಟ್ರೇಡ್) ನಡೆಸಿದ ಸ್ಥಳವಾಗಿತ್ತು. ಕ್ರಿಸ್ತಪೂರ್ವ ಕಾಲದಿಂದಲೂ ‘ಪ್ಲೈನಿ ದಿ ಎಲ್ಡರ್’, ಪುಟಿಂಗರ್, ಪೆರಿಪ್ಲಸ್ ಮೊದಲಾದವರು ಆ ಸ್ಥಳವನ್ನು ಮುಸ್ಸುರಿಸ್ ಎಂದು ಉಲ್ಲೇಖಿಸಿದ್ದಾರೆ. ಮಧ್ಯಯುಗದಲ್ಲಿ ಭಾರತಕ್ಕೆ ವಿದೇಶಿ ಪ್ರವಾಸಿಗಳಾಗಿ ಬಂದಿದ್ದ ಡೊಮಿಂಗೊ ಪೇಸ್ (1520), ಡಿ ಬ್ಯಾರೋಸ್ (1580), ಬಾರ್ಬೋಸಾ, ಹ್ಯಾಮಿಲ್ಟನ್ ಮತ್ತು ಬುಕಾನನ್ ತಮ್ಮ ಪ್ರವಾಸೀ ದಿನಚರಿಯಲ್ಲಿ ಈ ಸ್ಥಳವನ್ನು ಉಲ್ಲೇಖಿಸಿದ್ದಾರೆ. ಬುಕಾನನ್ ಈ ಪ್ರದೇಶವನ್ನು ಮಿದಿಜೋಯ್ ಎಂದು ಕರೆದರೆ ಮಿಕ್ಕವರು ಮೆರ್ಗಾನ್, ಮಿರ‍್ಗ್ಯೂ, ಮೆರ‍್ಗ್ಯೂ, ಮೆರ‍್ಗಿಯೊ ಮೊದಲಾಗಿ ಒಬ್ಬೊಬ್ಬರು ಒಂದೊಂದು ರೀತಿ ಹೆಸರಿಸಿದ್ದಾರೆ.


ಯಾರು ಕಟ್ಟಿಸಿದ ಕೋಟೆ?




ಮಿರ್ಜಾನಿನಲ್ಲಿ 16-17ನೇ ಶತಮಾನದ ಒಂದು ಕೋಟೆಯಿದೆ. ಕೋಟೆಯು 100 ಎಕರೆಗಿಂತ ಹೆಚ್ಚು ಪ್ರದೇಶದಲ್ಲಿ ಹರಡಿಕೊಂಡಿದೆ. ಮೊನ್ನೆ ಮೊನ್ನಿನವರೆಗೂ ಕುಡುಕರ, ಮಟ್ಕಾ ಜೂಜುಕೋರರ ಅಡಗುದಾಣವೆಂದು ಸಂಜೆ ಹೊತ್ತು ಪ್ರವೇಶಿಸಲು ಜನ ಹೆದರುತ್ತಿದ್ದ ಈ ಕೋಟೆಯು, 2000ನೇ ಇಸವಿಯಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಗೆ ಹಸ್ತಾಂತರಗೊಂಡಂದಿನಿಂದ ಮರುಜೀವ ಪಡೆದು ಕಂಗೊಳಿಸುತ್ತಿದೆ. ಇತ್ತೀಚೆಗೆ ಕನ್ನಡದ ದುನಿಯಾ ಮತ್ತು ಗಾಳಿಪಟದಂತಹ ಒಂದೆರೆಡು ಕನ್ನಡ ಚಿತ್ರಗಳೂ ಚಿತ್ರೀಕರಣಗೊಂಡ ನಂತರ ಜನಪ್ರಿಯ ಪ್ರವಾಸೀ ತಾಣವಾಗಿದೆ.   

ಕರಾವಳಿಯಲ್ಲಿ ಹೇರಳವಾಗಿ ಸಿಗುವ ಜಂಬಿಟ್ಟಿಗೆ ಕಲ್ಲಿನ (ಲ್ಯಾಟಿರೈಟ್) ಈ ಕೋಟೆಯನ್ನು ಯಾರು ಕಟ್ಟಿಸಿದರೆಂಬ ಬಗೆಗೆ ಭಿನ್ನಾಭಿಪ್ರಾಯಗಳಿದ್ದವು. 2000-2001ರಲ್ಲಿ ಭಾರತೀಯ ಪುರಾತತ್ತ್ವ ಸರ್ವೇಕ್ಷಣಾ ಇಲಾಖೆಯು ಇಲ್ಲಿ ಉತ್ಖನನ ನಡೆಸಿತು. ಏಳು ಭಾರಗುಂಡುಗಳೂ, ೫೦ ಕಬ್ಬಿಣದ ಬಂದೂಕು ಗುಂಡುಗಳೂ, ‘ಸರ್ಪಮಲ್ಲಿಕಾ ವಂಶ’ಕ್ಕೆ ಸೇರಿದ ಅಲಂಕರಿಸಲ್ಪಟ್ಟ ಬಿಂದಿಗೆ, ನಾಣ್ಯಗಳೂ ಸಿಕ್ಕವು. ಭಾರಗುಂಡುಗಳು ತಲಾ 20 ಕೆಜಿ ತೂಕದವಾಗಿದ್ದರೆ, ೫೦೦ ವರ್ಷ ಹಳೆಯ ಕಬ್ಬಿಣದ ಬಂದೂಕು ಗುಂಡುಗಳು ಪತ್ತೆಯಾಗಿವೆ. ಅದಲ್ಲದೆ ನೀಲಿ ಬಣ್ಣದ ನವಿಲು, ಹಾವುಗಳ ಚಿತ್ರವಿರುವ ಚೀನೀ ಪಿಂಗಾಣಿ ವಸ್ತುಗಳು, ಚಾಕು, ಕೊಡಲಿ, ಚಮಚ, ಕಾಯಿ ತುರಿವ ಹೆರೆಮಣೆ, ಮೊಳೆ ಮೊದಲಾದ ದಿನಬಳಕೆಯ ವಸ್ತುಗಳೂ ಸಿಕ್ಕಿವೆ. ಕೋಟೆಯ ದಕ್ಷಿಣ ಭಾಗದ ಪ್ರವೇಶದ ಬಳಿ ಅಗೆದರೆ ಈಗಲೂ ಸುಡುಮಣ್ಣು ದೊರಕುವುದೆಂದೂ, ಸುಟ್ಟ ಭತ್ತದ ಕಾಳು ಸಿಗುತ್ತದೆಂದೂ ಸ್ಥಳೀಯರು ಹೇಳುತ್ತಾರೆ.

ಪುರಾತತ್ತ್ವ ಇಲಾಖೆಯ ಉತ್ಖನನವು ಕೋಟೆಯ ಒಡೆತನದ ಬಗೆಗೆ ಇದ್ದ ಊಹಾಪೋಹಗಳಿಗೆ ತಾತ್ಕಾಲಿಕ ನಿಲುಗಡೆ ಹಾಕಿತು. ಮೊದಲು ಈ ಜಾಗವು ಅರಬ್ ನವಾಯತ ವ್ಯಾಪಾರಿಗಳ, ವಿಜಯನಗರ ಕಾಲದ ಸಾಗರ ವ್ಯವಹಾರ ನಡೆವ ಮಾರುಕಟ್ಟೆ ಸ್ಥಳವಾಗಿದ್ದು ಬಳಿಕ ಗೇರುಸೊಪ್ಪವನ್ನು ರಾಜಧಾನಿಯನ್ನಾಗಿ ಮಾಡಿಕೊಂಡಿದ್ದ ‘ಕಾಳುಮೆಣಸಿನ ರಾಣಿ’ ಚೆನ್ನಭೈರಾದೇವಿಯ ಒಡೆತನಕ್ಕೆ ಬಂತು. ಕೋಟೆಯ ಒಂದು ಪಕ್ಕದಲ್ಲಿರುವ ‘ಜೈನ’ ಕಂಬವು ಮಾನಸ್ತಂಭದಂತೆ ಕಾಣುತ್ತ ಜೈನರಾಣಿ ಚೆನ್ನಭೈರಾದೇವಿಗೆ ಈ ಕೋಟೆಯ ‘ಒಡತಿ’ ಸ್ಥಾನವನ್ನು ಕಲ್ಪಿಸುತ್ತದೆ. ಭಾರತ ದೇಶದ ಇತಿಹಾಸದಲ್ಲೇ ಅತಿ ದೀರ್ಘಾವಧಿ ೫೪ ವರ್ಷ ಕಾಲ ರಾಣಿಯಾಗಿ ಆಳಿದ (ಕ್ರಿ.ಶ.1552-1606) ಚೆನ್ನಭೈರಾದೇವಿ ಸಾಳುವ ವಂಶಕ್ಕೆ ಸೇರಿದವಳು. ವಿಜಯನಗರ ಪತನಗೊಳ್ಳುತ್ತಿರುವ ಕಾಲದಲ್ಲೂ ತನ್ನನ್ನು ಆ ಸಾಮ್ರಾಜ್ಯದ ‘ಮಹಾಮಂಡಲೇಶ್ವರ’ ಎಂದು ಕರೆದುಕೊಳ್ಳುತ್ತಿದ್ದಳು. ಅವಳಿದ್ದಷ್ಟು ಕಾಲವೂ ಕಾಳುಮೆಣಸು, ದಾಲ್ಚಿನ್ನಿ, ಜಾಯಿಕಾಯಿ ಹಾಗೂ ಕುಚ್ಚಿಗೆ ಅಕ್ಕಿ ವ್ಯಾಪಾರದ ಮೇಲೆ ಏಕಸ್ವಾಮ್ಯ ಹೊಂದಿ ಪೋರ್ಚುಗೀಸರನ್ನು ತಡೆದು ನಿಲ್ಲಿಸಿದ್ದಳು. ಎತ್ತರ ಪ್ರದೇಶದಲ್ಲಿರುವ, ಸಮುದ್ರ ನದಿಗಳಿಗೆ ಹತ್ತಿರದಲ್ಲಿರುವ, ಘಟ್ಟದ ಕಡೆಯ ಮೇಲೂ ಒಂದು ಕಣ್ಣಿಡಲು ಸಹಾಯವಾಗುವ ಈ ಆಯಕಟ್ಟಿನ ಜಾಗದಲ್ಲಿ ಕೋಟೆಯೊಂದು ಇದ್ದರೆ ವ್ಯಾಪಾರ ವ್ಯವಹಾರವಷ್ಟೇ ಅಲ್ಲ, ಸುರಕ್ಷತೆಯ ದೃಷ್ಟಿಯಿಂದಲೂ ಅನುಕೂಲ ಎಂದು ಉತ್ತಮ ಆಡಳಿತಗಾರಳಾಗಿದ್ದ ಅವಳು ಭಾವಿಸಿದ್ದಿರಬಹುದು. 

ಚೆನ್ನಭೈರಾದೇವಿಯ ಬಳಿಕ ಕೋಟೆ ಬಹಮನಿಗಳ ಕೈಗೆ ಹೋಯಿತು. ನಂತರ ಬಿಜಾಪುರ ಸುಲ್ತಾನನ ಗೋವಾ ರಾಜ್ಯಪಾಲ ಷರೀಫ್ - ಉಲ್ - ಮುಲ್ಕ್ ಸುಪರ್ದಿಗೆ ಬಂದಿತು. 1652ನೇ ಇಸವಿಯಲ್ಲಿ ಪೋರ್ಚುಗಲ್ ದೊರೆ ಜೋಆವೋ-4 ಆಡಳಿತದಡಿಯಲ್ಲಿ ಗೋವಾದ ರಾಜ್ಯಪಾಲನಾಗಿದ್ದ ಕಾಂಡ್-ಡಿ-ಸಾರ್ಜೆಡಾಸ್ ಹೊರಡಿಸಿದ ಬಂಗಾರದ ನಾಣ್ಯ, ಪಿಂಗಾಣಿ ಸಾಮಾನುಗಳು ಉತ್ಖನನದ ವೇಳೆ ಸಿಕ್ಕಿದ್ದು, ಅವು ನಂತರದ ಪೋರ್ಚುಗೀಸರ ಒಡೆತನವನ್ನು ತಿಳಿಸುತ್ತವೆ. ನಾಣ್ಯಗಳ ಒಂದು ಮುಖದಲ್ಲಿ ನೇಗಿಲಿನಂತಹ ರಚನೆಯನ್ನು ಎಡಗೈಲಿ ಹೊತ್ತ ಸಂತ ಥಾಮಸನ ಚಿತ್ರವಿದೆ. ಮೇಲೊಂದು ಕೊಂಡಿಯಿರುವ ಅದು ನಾಣ್ಯವಾಗಿಯೂ, ಅಧಿಕಾರಿಗಳ ಸ್ಥಾನ ನಿರ್ದೇಶಿಸುವ ಸರದ ಪದಕವಾಗಿಯೂ ಬಳಕೆಯಲ್ಲಿದ್ದಿರಬಹುದು. 

ಪೋರ್ಚುಗೀಸರ ಬಳಿಕ ಕೆಳದಿಯ ಚೆನ್ನಮ್ಮ, ಮರಾಠರ ಕೈಗೆ ಮಿರ್ಜಾನ್ ಕೋಟೆ ಹೋಯಿತು. ಕೆಲಕಾಲ ಅಂಕೋಲಾದ ಸರ್ಪಮಲ್ಲಿಕ ವಂಶದ ಸುಪರ್ದಿಯಲ್ಲಿತ್ತು. ಆ ವಂಶದ ಮೊಹರಿನ ಕೆಲವು ನಾಣ್ಯಗಳು ದೊರೆತಿವೆ. ನಂತರ ಹೈದರಾಲಿ ಮತ್ತು ಟಿಪ್ಪು ಸುಲ್ತಾನರ ವಶವಾಯಿತು. ಕೊನೆಯ ಮೈಸೂರು ಯುದ್ಧದ ಬಳಿಕ ಬ್ರಿಟಿಷರಿಗೆ ಹೋಯಿತು.

ಒಟ್ಟಾರೆಯಾಗಿ ಹೇಳುವುದಾದರೆ ವಿಜಯನಗರದ ಕೃಷ್ಣದೇವರಾಯ (1509-1526), ಚೆನ್ನಭೈರಾದೇವಿ (1552-1606), ಪೊಂಡಾದಿಂದ ಆಡಳಿತ ನಡೆಸಿದ ಬಿಜಾಪುರ ಆದಿಲ್‌ಶಾಹಿಗಳ ಸಾಮಂತ ಶರೀಫ್ ಉಲ್ ಮುಲ್ಕ್ (1606-1640), ಅಂಕೋಲಾದ ಸರ್ಪಮಲ್ಲಿಕ, ಪೋರ್ಚುಗೀಸರು, ಕೆಳದಿ ಚೆನ್ನಮ್ಮ, ಮರಾಠರು, ಬಿದನೂರಿನ ಅರಸರು, ಹೈದರ್ ಅಲಿ, ಟಿಪ್ಪು ಸುಲ್ತಾನ್, ಕೊನೆಗೆ ಬ್ರಿಟಿಷರ ಸುಪರ್ದಿಗೆ ಕೋಟೆ ಹಸ್ತಾಂತರವಾಯಿತು. 

ಇವರಲ್ಲಿ ಯಾರು ಯಾವುದನ್ನು ಕಟ್ಟಿಸಿದರು? ನೆಲೆಗಟ್ಟನ್ನು ಒಬ್ಬರು ಹಾಕಿದರೆ, ಹೊರಗಿನ ಕಂದಕ ಒಬ್ಬರು ತೋಡಿದರು. ಕಂಭ. ಕಮಾನು. ಬುರುಜು. ಕಾವಲು ಗೋಪುರ. ಬಾವಿ. ಕಾಲುವೆ. ಪ್ರಾರ್ಥನಾ ಸ್ಥಳ, ಮಿಹ್ರಾಬ್, ಮಾರುಕಟ್ಟೆ ಸಂಕೀರ್ಣ, ಲಾಯ ಮೊದಲಾದವು  ಹಲವು ದೇಶ-ಭಾಷೆ-ಮತಗಳ ಆಳ್ವಿಕರಿಂದ ರೂಪಿಸಲ್ಪಟ್ಟವು. 

ಯಾವುದೇ ಐತಿಹಾಸಿಕ ಸ್ಮಾರಕದಂತೆ ಯಾರೋ ‘ಒಬ್ಬರು’ ಇದನ್ನು ಕಟ್ಟಿಸಿರಲಾರರು ಎನ್ನುವ ಅಂಶ ಇವತ್ತು ನಾವು ಗಮನಿಸಬೇಕಾದ ಬಹುಮುಖ್ಯ ಸಂಗತಿಯಾಗಿದೆ. 


ಕೋಟೆಯೊಳಗಣ ಬಾವಿಗಳು 




ಕೋಟೆಯ ಸುತ್ತಲೂ ಅಗಲವಾದ ಕಾಲುವೆಯಿದೆ. ಅದರಲ್ಲಿ ನೀರು ತುಂಬಿ ಮೊಸಳೆಗಳನ್ನು ಬಿಡುತ್ತಿದ್ದರಂತೆ. ಕೋಟೆಯೊಳಗೆ ಒಂಭತ್ತು ಬಾವಿಗಳಿವೆ. ಇಷ್ಟೊಂದು ಬಾವಿಗಳನ್ನು ಇಷ್ಟು ಸಣ್ಣ ಜಾಗದಲ್ಲಿ ಏಕಾಗಿ ನಿರ್ಮಿಸಿರಬಹುದು ಎಂದು ಅಚ್ಚರಿಯಾಗುವಂತೆ ಅವು ಇವೆ. ಬಾವಿಗಳಿಗೆ ಇಳಿದುಹೋಗಲು ಗಟ್ಟಿಮುಟ್ಟಾದ ಮೆಟ್ಟಿಲುಗಳನ್ನುಳ್ಳ ಸುರಂಗದಂತಹ ವ್ಯವಸ್ಥೆ ಇದೆ. ಹೊರ ಆವರಣದ ಬಾವಿಗಳು ಕೋಟೆಯ ಹೊರಗಿನ ಕಾಲುವೆಯ ಜೊತೆ ಸಂಪರ್ಕ ಹೊಂದಿವೆ. ಕಾಲುವೆಯು ಅಲ್ಲೇ ಆಚೆ ಹರಿಯುವ ಹಳ್ಳವನ್ನು, ಆ ಮೂಲಕ ಅಘನಾಶಿನಿ ನದಿ-ಸಮುದ್ರವನ್ನು ಸಂಪರ್ಕಿಸುತ್ತದೆ. ವ್ಯಾಪಾರ ವಿನಿಮಯ ನಡೆಸಲು ಸಮುದ್ರದೊಡನೆ ಸಂಪರ್ಕ ಸಾಧಿಸುವುದು ಮುಖ್ಯವಾಗಿದ್ದರಿಂದ ಒಳಗಿನ ಬಾವಿಗಳು ಹೊರಸಂಪರ್ಕ ಹೊಂದಿರಬಹುದು. ಅಥವಾ ಸಮುದ್ರದಲ್ಲಿರುವ ನಾವೆಗಳ ಮೇಲೆ ಇದ್ದಕ್ಕಿದ್ದಂತೆ ಎರಗಿ ತಪ್ಪಿಸಿಕೊಳ್ಳಲು ಅಥವಾ ವೈರಿ ಆಕ್ರಮಣದ ವೇಳೆ ಬಾವಿ->ಕಾಲುವೆ->ನದಿ->ಸಮುದ್ರದ ಮೂಲಕ ತಪ್ಪಿಸಿಕೊಳ್ಳಲು ಮಾಡಿದ ಯೋಜಿತ ಸುರಕ್ಷತಾ ವ್ಯವಸ್ಥೆಯೂ ಇದಾಗಿರಬಹುದು. 

ಒಂಭತ್ತರಲ್ಲಿ ಮೂರು ಬಾವಿಗಳಲ್ಲಿ ಈಗಲೂ ನೀರಿದೆ. ಇಪ್ಪತ್ತು ಅಡಿ ವ್ಯಾಸದ ಒಂದು ದೊಟ್ಟ ಬಾವಿಯಂತೂ ತಳಕಾಣದಷ್ಟು ಆಳವಾಗಿದ್ದು ಶುದ್ಧ ತಿಳಿನೀರನ್ನು ಹೊಂದಿದೆ. ಇದು ಕೋಟೆಯ ಒಳ ಆವರಣದಲ್ಲಿದ್ದು ಕುಡಿಯಲು ಬಳಕೆಯಾಗುತ್ತಿದ್ದಿರಲೂಬಹುದು. ಈ ಬಾವಿಗೂ ಇಳಿದುಹೋಗಲು ಮೆಟ್ಟಿಲು ವ್ಯವಸ್ಥೆಯಿದೆ. ಒಟ್ಟಾರೆ ಕೋಟೆಯ ಒಳಗೆ ಹಾಗೂ ಹೊರಗೆ ಸಾಗಾಣಿಕೆಗೆ, ರಕ್ಷಣೆಗೆ, ದಿನ ಬಳಕೆಯ ನೀರಿಗೆ ಇವು ಬಳಕೆಯಾಗುತ್ತಿದ್ದಿರಬಹುದು. 

ಕೋಟೆಯ ಹೊರ ಆವರಣದಲ್ಲಿ ದಿಕ್ಕಿಗೊಂದು ಬತೇರಿ ಇದೆ. ಎಲ್ಲಕ್ಕಿಂತ ಎತ್ತರದಲ್ಲಿ ಕಾವಲು ಗೋಪುರದಂತಹ ರಚನೆಯೊಂದಿದ್ದು ಅದೀಗ ರಾಷ್ಟ್ರೀಯ ದಿನಾಚರಣೆಗಳಂದು ಧ್ವಜ ಹಾರಿಸುವ ಧ್ವಜಕಟ್ಟೆಯಾಗಿ ಪರಿವರ್ತನೆಯಾಗಿದೆ. ಕೋಟೆಯ ಒಳಗಿನ ವಿಶಾಲ ಮೈದಾನದಲ್ಲಿ ವ್ಯಾಪಾರ ವ್ಯವಹಾರ ನಡೆಸುತ್ತಿದ್ದ ಮಾರುಕಟ್ಟೆಯ ಅವಶೇಷಗಳಿವೆ. ವಾಸಸ್ಥಾನ, ದರ್ಬಾರು, ಲಾಯ, ದೊಡ್ಡ ಹಜಾರಗಳ ನೆಲಗಟ್ಟೂ ಕಾಣುತ್ತವೆ. ಪರ್ಷಿಯನ್ ಕುದುರೆಗಳು ವಿಜಯನಗರ ಸೇನೆಯ ಮುಖ್ಯ ಭಾಗವಾಗಿದ್ದವು. ಪರ್ಷಿಯನ್ (ಇವತ್ತಿನ ಇರಾನ್) ಕುದುರೆಗಳು ಈ ಅಂತಾರಾಷ್ಟ್ರೀಯ ಬಂದರಿನ ಮೂಲಕವೇ ಭಾರತ ತಲುಪಿ ನಂತರ ಒಳನಾಡು ಪ್ರವೇಶಿಸುತ್ತಿದ್ದವು. ಆ ಕಾರಣವಾಗಿ ಲಾಯದ ರಚನೆಯಿರಬಹುದು ಎಂದು ಊಹಿಸಬಹುದಾಗಿದೆ.


ಕೋಟೆಯೊಳಗೆ ದೊಡ್ಡ ಮರವೊಂದರ ಬುಡದಲ್ಲಿ ಶಿವ, ಚೌಡಿ, ಮಾಸ್ತಿಕಲ್ಲು, ನಾಗ, ದೈವದ ಕಲ್ಲುಗಳಿವೆ. ಪ್ರಾರ್ಥನಾಗೃಹ ಮತ್ತು ಮಿಹ್ರಾಬ್‌ಗಳೂ ಇವೆ. ಕೋಟೆಯ ಪಕ್ಕದಲ್ಲೇ ಅತಿ ಹಳೆಯ ಚರ್ಚ್ ಒಂದಿದೆ. ಕೋಟೆ ಕಾಯಲು ಮೊಸಳೆ, ಕಂದಕ, ನೀರು, ನದಿ, ಸೇನೆಯನ್ನಷ್ಟೇ ನಂಬದ ಆಳ್ವಿಕರು ಅನೇಕ ದೇವರುಗಳನ್ನು ಸ್ಥಾಪಿಸಿಕೊಂಡಿದ್ದ ಕುರುಹುಗಳಿವು. 

ಯಾವ ದೇವರ ಒಕ್ಕಲೇ ಇರಲಿ, ಎಷ್ಟು ಸೈನ್ಯ ಬಲವಿರಲಿ, ಮೆರೆದವರೆಲ್ಲ ಒಂದಲ್ಲ ಒಂದು ದಿನ ಮೈಚೆಲ್ಲಿ ಮಲಗಿದ್ದನ್ನು ಇತಿಹಾಸದಲ್ಲಿ ಕಾಣುತ್ತೇವೆ. ಇದು ಮನುಷ್ಯರಿಗೆ ಮಾತ್ರವಲ್ಲ, ಅವರು ಬಿಟ್ಟುಹೋದ ಸ್ಥಾವರಗಳಿಗೂ ಅನ್ವಯಿಸುತ್ತದೆ. ಕೋಟೆಯ ಹಿಂಭಾಗದ ಗೋಡೆ ಬುರುಜುಗಳಲ್ಲಿ ಅದೆಲ್ಲಿಂದಲೋ ಬಂದು ಬಿದ್ದ ಅಶ್ವತ್ಥವು ಬೇರು ಬಿಟ್ಟು, ಬಿಳಲು ಬಿಟ್ಟು ಎಷ್ಟು ಸೊಂಪಾಗಿ ಬೆಳೆಯುತ್ತಿದೆಯೆಂದರೆ ಕಟ್ಟಿರುವುದನ್ನು ಕೆಡವಿ ಹಾಕಲು ಪ್ರಕೃತಿಯೇ ಸಿದ್ಧತೆ ನಡೆಸಿದಂತೆ ಕಾಣುತ್ತದೆ. ಜೊಂಡುಹುಲ್ಲು, ಪಾಚಿ, ಹುಲ್ಲುಗರಿಕೆಗಳೆಲ್ಲ ನಿಧಾನವಾಗಿ ಗೋಡೆಗಳಿಗೆ ಮುದಿತನ ತಂದೊಡ್ಡುತ್ತಿದ್ದರೆ ಅರಳಿಯ ಬೇರುಗಳು ಇತಿಹಾಸಕ್ಕೆ ಸಾಕ್ಷಿಯಾಗಿರುವ ಕೋಟೆಗೆ ಚರಮಗೀತೆ ಬರೆಯುವಂತೆ ಕಾಣುತ್ತವೆ. 

ಮಸೀದಿಯ ಅಡಿ ಲಿಂಗವನ್ನೂ, ಅದರ ಅಡಿ ಮತ್ತೊಂದನ್ನೂ ಹುಡುಕುತ್ತ ಹೊರಟ ಆಳುವವರ ವಿಧ್ವಂಸಕ ಬುದ್ಧಿಯನ್ನು, ವಿಪರೀತ ಆಕಾಂಕ್ಷೆಗಳನ್ನೂ ಅರಿತುಕೊಳ್ಳಲು ಇಂತಹ ಐತಿಹಾಸಿಕ ತಾಣಗಳು ಕಣ್ಣೆದುರು ಇರಬೇಕಿದೆ. ಗತದ ಬಗೆಗಿನ ನಮ್ಮ ತಪ್ಪು ಕಲ್ಪನೆಗಳನ್ನು, ವಿಸ್ಮೃತಿಯನ್ನು ತೊಡೆದು ಹಾಕುವ ಸಲುವಾಗಿ ಮಿರ್ಜಾನ್ ಕೋಟೆಯಂತಹ ಸಂಕೇತಗಳು ಅಗತ್ಯವಾಗಿವೆ. ಅವನ್ನು ಉಳಿಸಿ, ಅರಿತುಕೊಳ್ಳುವ ಗಂಭೀರ ಪ್ರಯತ್ನಗಳನ್ನು ಶಾಲಾಕಾಲೇಜಿನಿಂದಲೇ ಆರಂಭಿಸಬೇಕಿದೆ.

ಡಾ. ಎಚ್. ಎಸ್. ಅನುಪಮಾ

Tuesday, 14 February 2023

VISL Bhadravathi - ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ (ವಿಐಎಸ್‌ಎಲ್), ಭದ್ರಾವತಿ - ತೂತು ಬಿದ್ದ ಹಡಗು

  


(ಇದು 2011ರಲ್ಲಿ ಗೌರಿ ಲಂಕೇಶ್ ಪತ್ರಿಕೆಯಲ್ಲಿ ಪ್ರಕಟವಾದ ಬರಹ. ಭದ್ರಾವತಿಯ ಹೆಮ್ಮೆಯಾಗಿದ್ದ, ಸಾವಿರಾರು ನೌಕರರ ಜೀವನಾಡಿಯಾಗಿದ್ದ, ತನ್ನ ನಿಯಮಿತ ಸೈರನ್ನಿನ ದನಿಯಿಂದಲೇ ಊರಿನವರಲ್ಲಿ ವಿಶಿಷ್ಟ ಕಂಪನ ಮೂಡಿಸುತ್ತಿದ್ದ ಬೃಹತ್ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ವಿಐಎಸ್‌ಎಲ್ ಅದು ಆರಂಭಗೊಂಡ 105ನೆಯ ವರ್ಷ, ಸಂಸ್ಥಾಪನಾ ದಿನಾಚರಣೆಯ ದಿನವೇ ಮುಚ್ಚಿ ಹೋಗುವ ಹಾದಿ ಹಿಡಿದಿದೆ. ಎಂಟು ವರ್ಷಗಳ ಕೆಳಗೆ ಭದ್ರಾವತಿಯ ಇಂಥದೇ ಇನ್ನೊಂದು ಕರ್ನಾಟಕದ ಸಾರ್ವಜನಿಕ ವಲಯದ ಬೃಹತ್ ಉದ್ದಿಮೆ ‘ಮೈಸೂರು ಕಾಗದ ಕಾರ್ಖಾನೆ (ಎಂಪಿಎಂ)’ ಮುಚ್ಚಿ ಹೋಯಿತು. ಈಗ ಇದರ ಸರದಿ. ಈ ವಿಷಾದದ ಗಳಿಗೆಯಲ್ಲಿ ೧೨ ವರ್ಷಗಳ ಕೆಳಗೆ ಬರೆದ ಲೇಖನವನ್ನು ಕೊಂಚ ಬದಲಾವಣೆಗಳೊಂದಿಗೆ ಹಂಚಿಕೊಳ್ಳುತ್ತಿರುವೆ.)

2011, ಜನವರಿ 11ರಂದು ಭದ್ರಾವತಿಯ ಪ್ರತಿಷ್ಠಿತ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ವಿಐಎಸ್‌ಎಲ್‌ನ ಪ್ರೈಮರಿ ಮಿಲ್ಸ್ ಸೆಕ್ಷನ್‌ನಲ್ಲಿ ಕೆಲಸ ಮಾಡುತ್ತಿದ್ದ ರಾಮಚಂದ್ರ ಎಂಬ ಯುವ ಕಾರ್ಮಿಕ ಅಪಘಾತಕ್ಕೀಡಾಗಿ ಮೃತಪಟ್ಟ. ಥೇಟ್ ಕಬ್ಬಿನ ಗಾಣದಂತಹ ಪ್ರೈಮರಿ ಮಿಲ್ಸ್‌ನಲ್ಲಿ ದಪ್ಪ ಕಬ್ಬಿಣದ ತೊಲೆಗಳು ಹೊಕ್ಕು ತಮ್ಮ ಆಕಾರ, ಸೈಜು ಬದಲಿಸಿಕೊಂಡು ಹೊರಬರುತ್ತವೆ. ಯಂತ್ರದ ಬಾಯಿಗೆ ಕಬ್ಬಿಣದ ತೊಲೆ ನೂಕುವಾಗ ಅಕಸ್ಮಾತ್ ಜಾರಿಬಿದ್ದ ರಾಮಚಂದ್ರನ ದೇಹ ಆಚೆಯಿಂದ ಈಚೆ ಬರುವುದರಲ್ಲಿ ಗಾಣಕ್ಕೆ ಸಿಕ್ಕ ಕಬ್ಬಿನಂತೆ ಅಕ್ಷರಶಃ ಪುಡಿಪುಡಿಯಾಗಿತ್ತು. ಭೀಭತ್ಸವೆಂದರೆ ಇದೇ. ಕ್ಷಣಾರ್ಧದ ಮೈಮರೆವಿಗೆ ಜೀವದಾನ. 

ಭದ್ರಾವತಿ ಕಾರ್ಖಾನೆಯ ಬಹುಪಾಲು ಕೆಲಸಗಳು ಮನುಷ್ಯರಿಂದಲೇ ನಡೆಯುವಂಥವು. ಯಂತ್ರಗಳನ್ನು ನಡೆಸುವ, ದಾರಿ ತೋರುವ ಕೆಲಸದಿಂದ ಹಿಡಿದು, ಹರಿವ ದ್ರವ ಕಬ್ಬಿಣಕ್ಕೆ ಕಾಲುವೆ ದಾರಿ ತೋಡುವುದೂ ಮನುಷ್ಯರೇ. ಕೆಲಸದ ಸಮಯದಲ್ಲಿ ಕೊಂಚ ಮೈ ಮರೆತರೂ ಸಾವು ಕಟ್ಟಿಟ್ಟದ್ದು. ಅಪಘಾತ, ಸಾವುನೋವುಗಳು ಸಾಮಾನ್ಯ. ಸೈರನ್ ಕೂಗಿ ಶಿಫ್ಟ್ ಮುಗಿಸಿ ಹೊರಬಿದ್ದ ಮೇಲೆಯೇ ಅಂದಿಗೆ ಬದುಕುಳಿದೆವೆಂಬ ಲೆಕ್ಕ. 

‘ನನ್ ಹೆಣ್ತಿ ಬೈತಾಳೆ, ನಿಮಗೇನ್ ಕೆಪ್ಪೇನ್ರಿ? ಎಷ್ಟು ಸಲ ಹೇಳಿದ್ರೂ ಆಂ, ಆಂ ಅಂತೀರ. ಮಾತಿನ ಮೇಲೆ ಗಮನನೇ ಇಲ್ಲ ಅಂತ. ಇಲ್ಲಿ ಇಡೀ ದಿನ ಭರೋ ಅನ್ನೊ ಶಬ್ದ ಕಿವೀಲಿ ಹ್ಯಾಗ್ ತುಂಬಿರುತ್ತೆ ಅಂದ್ರೆ ಸಣ್ಣ ಮಾತು ಕಿವಿ ಮೇಲೆ ಬಿದ್ರೂ ತಲೆಗೇ ಹೋಗಿರಲ್ಲ. ಕಿವಿ ಸೂಕ್ಷ್ಮನ ಕಳಕಂಡ್ ಬಿಟ್ಟವೆ.’

‘ನಮ್ಗೆ ರಾತ್ರಿ ಹಗಲ ಅಂತೇನಿಲ್ಲ ಬಿಡಮ್ಮ, ಎಷ್ಟೊತ್ಗೆ ಮಲಗಿದ್ರೂ ಎಲ್ ಮಲ್ಗಿದ್ರು ಗೊರ‍್ಕೆನೇ. ರಾತ್ರಿ ಶಿಫ್ಟ್ ಮುಗ್ಸಿ ಹೋದೋನು ಬೆಳಿಗ್ಗೆ ಊಟ ಹ್ವಡ್ದು ಮಲಗ್ಬಿಟ್ರೆ ಮತ್ತೆ ಸಂಜೆ ಎದ್ದೊಳದು. ಅಂಥಾ ನಿದ್ದೆ...’

‘ಹೆಣದ ವಾಸನೆ ಅಷ್ಟು ಭೀಕರವಾಗಿರುತ್ತೆ ಅಂತ ಅವತ್ತೇ ಗೊತ್ತಾಗಿದ್ದು. ಈಗೊಂದೈದಾರು ವರ್ಷದ ಕೆಳಗೆ ಒಂದು ರಾತ್ರಿ ಸ್ಟೀಲ್ ಮೆಲ್ಟಿಂಗ್ ಸೆಕ್ಷನ್‌ನಲ್ಲಿ ಬ್ಲಾಸ್ಟ್ ಆಗಿ ಏಳು ಜನ ಸತ್ತೋದ್ರು. ಒಬ್ಬ ಪೂರಾ ಬೆಂದೋಗಿದ್ದ. ನಾನೇ ಡ್ರೈವ್ ಮಾಡ್ತಿದ್ದೆ. ಆಂಬುಲೆನ್ಸ್‌ನಲ್ಲಿ ತಗೊಂಡು ಆಸ್ಪತ್ರೆಗೆ ಹೋಗದ್ರಲ್ಲಿ ಸತ್ತೋದ. ಅವನ ಮೈಯಿಂದ ಬರ್ತಿದ್ದ ಸುಟ್ಟ ವಾಸನೆ, ಅಬಾ, ಎಷ್ಟೋ ದಿನುದ್ ತಂಕ ಹೊಟ್ಟೆ ತೊಳೆಸೋದು. ಅಯ್ಯಯ್ಯ, ಭಾರೀ ಕೆಟ್ ಸಾವು.’ 

 ಇಂತಹ ದುರ್ಮರಣಗಳ ನೆನಪಿನಲ್ಲೇ ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ (ವಿಐಎಸ್‌ಎಲ್) ನೋಡಬೇಕೆಂದು ಅಲ್ಲಿ ನೌಕರರಾಗಿರುವ ಬಂಧುವಿನೊಡನೆ ಹೋದೆ. ಕಣ್ಣುಕುಕ್ಕುವ ಬೆಳಕು, ಕಿವಿಗಡಚಿಕ್ಕುವ ಸದ್ದು, ಅತಿ ಉಷ್ಣತೆ, ಹೊಗೆ, ಧೂಳಿನ ನಡುವೆ ಒಂದೇ ಸಮ ಆಚೀಚೆ ಓಡಾಡುತ್ತ ಬೆವರಿಳಿಸುವ ಮಾಸಿದ ನೀಲಿ ಸಮವಸ್ತ್ರದ ಜೀವಗಳು. ಅವರ ದುಡಿಮೆ ಎಷ್ಟು ಅಪಾಯಕಾರಿ ಎಂದು ಹೋದಮೇಲೆಯೇ ಗೊತ್ತಾದದ್ದು. 




ಕಬ್ಬಿಣದಂತಹ ಗಟ್ಟಿ ಲೋಹವನ್ನೂ ಕರಗಿ ನೀರಾಗಿಸಿ ಹರಿಸಿಬಿಡಬಲ್ಲ ‘ಬ್ಲಾಸ್ಟ್ ಫರ್ನೇಸ್’ ಎಂಬ ಭಯಂಕರ ಶಾಖದ ಕುಲುಮೆಯೆದುರು ಹೋದೆವು. ಸಾಧಾರಣವಾಗಿ ಮನುಷ್ಯರ ಮೈ ಶಾಖ 97 ಡಿಗ್ರಿ ಫ್ಯಾರನ್ ಹೀಟ್ ಇರುತ್ತದೆ. 101, 102 ಡಿಗ್ರಿ ಆದರೆ ಅತಿಜ್ವರ, ಹೌದೇ? ಇಲ್ಲಿ ಫರ್ನೇಸಿನ ಉಷ್ಣತೆ ಎರಡೂವರೆ ಸಾವಿರ ಡಿಗ್ರಿ ಫ್ಯಾರನ್ ಹೀಟ್! ಆ ಅತಿಶಾಖದಲ್ಲಿ ಕಬ್ಬಿಣದ ಅದಿರು ಲೋಹರಸವಾಗಿ ಹರಿಯುತ್ತಿತ್ತು. ಅಲ್ಲಿ ಹತ್ತು ನಿಮಿಷ ಇರುವುದೂ ಕಷ್ಟವಾಯಿತು. ಬರಿಗಣ್ಣಲ್ಲಿ ನೋಡಬೇಡಿ ಎಂದು ಕಾರ್ಮಿಕರೊಬ್ಬರು ತಮ್ಮ ರಕ್ಷಣಾ ಕನ್ನಡಕವನ್ನು ತೆಗೆದುಕೊಟ್ಟರು. ‘ಬೇಡ, ಇನ್ನೇನು ಹೊರಡ್ತೀನಿ, ಹೇಗೆ ಕೆಲ್ಸ ಮಾಡ್ತಿರೋ ಏನೋ’ ಎಂಬ ಸಹಾನುಭೂತಿಯ ಮಾತಿಗೆ, ‘ನಮಿಗೀ ಕೆಲ್ಸಾ ರೂಢಾ ಆಗದೆ. ನಂ ಬಾಡಿನೂ ಈ ಪಿಗೈರನ್ ತರ‍್ಕೆ ಆಗ್ಬಿಟ್ಟದೆ. ಏನ್ಮಾಡನ? ಎಷ್ಟ್ ಮಾಡಿದ್ರೂ ಇಲ್ಲಿ ಕೆಲ್ಸಾ ಮಾಡೋನಿಗೆ ಮೂರಾಣೆ, ಕೆಲ್ಸಾ ನೋಡೋನಿಗೆ ಹದಿನಾರಾಣೆ’ ಎಂದರು. 

ಅವರ ಮಾತಿನ ಒಳಾರ್ಥ ಬಡಿದು ಲೋಹರಸ ರಪ್ಪನೆ ಮುಖಕ್ಕೆರಚಿದಂತಾಯಿತು. 

ಕಣ್ಣು ಕೋರೈಸುವ ದ್ರವ ಕಬ್ಬಿಣ. ಕಪ್ಪು ಧೂಳು ಮೆತ್ತಿದ, ಸುಟ್ಟು ಹೋದಂತಿರುವ ಜೀವರು. ಅವರ ಜ್ವಾಜಲ್ಯಮಾನ ಕಣ್ಣುಗಳು ಕುಲುಮೆಯ ಬೆಂಕಿಯನ್ನು ಪ್ರತಿಫಲಿಸುತ್ತಿದ್ದವು. ಕಾರ್ಮಿಕರಿಗಿಂತ ಅತಿ ಹೆಚ್ಚು ಸಂಬಳ ಪಡೆವ ಮೇಲಧಿಕಾರಿಗಳನ್ನು ಸಾಕುವ ಭಾರ ಹೆಗಲುಗಳಲ್ಲಿ ಜಡ್ಡುಗಟ್ಟಿತ್ತು. ಭೋರ್ಗರೆಯುವ ಬಿಸಿಗಾಳಿಯ ಶಬ್ದದ ನಡುವೆ ಕಿವಿಯಲ್ಲಿ ಪಿಸುಗಟ್ಟಿದಂತೆ ಕೇಳಿದ ಅವರ ಮಾತು ಕೀಳುಗೊಳಿಸಲ್ಪಟ್ಟ ಮಾನವ ಶ್ರಮದ ಕತೆಯನ್ನು, ಕಾರ್ಖಾನೆಗೆ ಒದಗಿದ ದುಃಸ್ಥಿತಿಯ ಕಾರಣವನ್ನು ಹೇಳುವಂತಿದ್ದವು. 


 

ಮೈಸೂರಿನ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ದಿವಾನ್ ಸರ್. ಎಂ. ವಿಶ್ವೇಶ್ವರಯ್ಯ ಅವರ ಮಹತ್ವಾಕಾಂಕ್ಷೆಯ ಯೋಜನೆ ‘ಮೈಸೂರ್ ವುಡ್ ಡಿಸ್ಟಿಲೇಷನ್ ಅಂಡ್ ಐರನ್ ವರ್ಕ್ಸ್’ ಜನವರಿ 18, 1918ರಂದು ಭದ್ರಾವತಿಯಲ್ಲಿ ಆರಂಭವಾಯಿತು. ನಂತರ ದಿವಾನರಾದ ಸರ್ ಮಿರ್ಜಾ ಇಸ್ಮಾಯಿಲ್ ಸಹಾ ಯೋಜನೆಯಲ್ಲಿ ಆಸಕ್ತಿ ವಹಿಸಿದರು. ಬೀಡುಕಬ್ಬಿಣ ತಯಾರಿಕೆ ಆರಂಭವಾದಾಗ 1923ರಲ್ಲಿ ‘ಮೈಸೂರ್ ಐರನ್ ವರ್ಕ್ಸ್’ ಆಯಿತು. ಮೊದಲು ಶಿವಮೊಗ್ಗ ಹತ್ತಿರದ ಕುಂಸಿ, ಚಟ್ನಳ್ಳಿಯಿಂದ ಕಬ್ಬಿಣದ ಅದಿರು ಪೂರೈಕೆಯಾಗುತ್ತಿತ್ತು. ಅದಿರು ಕಾಯಿಸುವ ಇಂಧನವಾಗಿ ಇದ್ದಿಲು ಬಳಕೆಯಾಗುತ್ತಿತ್ತು. ಇದ್ದಿಲಿಗಾಗಿ ಮಲೆಕಾಡುಗಳ ಭಾರೀ ಮರಗಳನ್ನು ಕಡಿದು ಸಾಗಿಸಲು 1939ರಲ್ಲಿ ಶಿವಮೊಗ್ಗ-ತಾಳಗುಪ್ಪ ರೈಲು ಮಾರ್ಗ ಹಾಕಿದರು. 1952ರಲ್ಲಿ ವಿದ್ಯುಚ್ಚಾಲಿತ ಯಂತ್ರೋಪಕರಣಗಳು ಬಂದಾಗಿನಿಂದ ಕೋಕ್ ಅನ್ನು ಇಂಧನವನ್ನಾಗಿ ಬಳಸಲಾಗುತ್ತಿದೆ. ಕಲ್ಲಿದ್ದಲಿನ ಉಪಉತ್ಪನ್ನವಾದ ಕೋಕ್ ಅತಿಶಾಖ ಬಿಡುಗಡೆ ಮಾಡಿ ಆಕ್ಸಿಜನ್ ನೆರವಿನಿಂದ ಬೂದಿ ಉಳಿಸದೇ ಉರಿಯುತ್ತದೆ. 

ದಿನಕ್ಕೆ 650-700 ಟನ್ ಕಬ್ಬಿಣ ಉತ್ಪಾದಿಸಬಲ್ಲ, 50 ಅಡಿ ಎತ್ತರದ ಊದು ಕುಲುಮೆ (ಬ್ಲಾಸ್ಟ್ ಫರ್ನೇಸ್)ಗೆ ಮೇಲಿನಿಂದ ಕೋಕ್ ಮತ್ತು ಅದಿರನ್ನು ಸುರಿಯಲಾಗುತ್ತದೆ. ಕೆಳಭಾಗದಿಂದ 900 ಡಿಗ್ರಿ ಉಷ್ಣಾಂಶದ ಬಿಸಿಗಾಳಿಯನ್ನು ಆಕ್ಸಿಜನ್ ಜೊತೆ ಬೆರೆಸಿ ಹರಿಸುತ್ತಾರೆ. ಒಳಗಿನ ಅದಿರು ಕರಗಿ ಅದರಲ್ಲಿರುವ ಕಬ್ಬಿಣ ದ್ರವ ರೂಪಕ್ಕೆ ಬಂದ ಮೇಲೆ ಕುಲುಮೆಯ ಕೆಳಭಾಗದ ಕಿಂಡಿಯನ್ನು ತೆಗೆಯುತ್ತಾರೆ. ಆಗ ಹೊರಹರಿದು ಬರುವುದು ಚಿನ್ನದ ಬಣ್ಣದ ನಿಗಿನಿಗಿ ಹೊಳೆವ ದ್ರವ ಕಬ್ಬಿಣ. ಅದಾಗಲೇ ರೈಲ್ವೇ ವ್ಯಾಗನ್ನುಗಳಲ್ಲಿ ಬಂದು ಕೆಳಗೆ ಕುಳಿತ ದೊಡ್ಡ ‘ಪಾತ್ರೆ’ಗಳಿಗೆ ದ್ರವ ಕಬ್ಬಿಣವು ಹುಯ್ಯಲ್ಪಡುತ್ತದೆ. ಅದು ಗಟ್ಟಿಯಾಗುವ ಮೊದಲೇ ಬೇರೆಡೆ ಒಯ್ದು ವಿಭಿನ್ನ ಅಳತೆಯ ಅಚ್ಚುಗಳಿಗೆ ಹೊಯ್ಯುತ್ತಾರೆ. ಇದು ‘ಪಿಗ್ ಐರನ್’. ಇದರಲ್ಲಿ 3-4% ಇಂಗಾಲ ಇರುವುದರಿಂದ ಅದು ಪೆಡಸಾಗಿರುತ್ತದೆ. 



ಬೀಡು ಕಬ್ಬಿಣದ ಅಚ್ಚು ಬೇರೆಡೆ ಹೋಗುತ್ತದೆ. ಅದನ್ನು ಮತ್ತೆ ಕುಲುಮೆಗಳಲ್ಲಿ ಕಾಯಿಸಿ, ಬೇರೆ ವಸ್ತುಗಳನ್ನು ಸೇರಿಸಿ, ತಣ್ಣಗಾಗಿಸಿ, ಒತ್ತಿ, ಬಡಿದು ನಾನಾ ಆಕಾರದ, 750 ವಿವಿಧ ಗ್ರೇಡ್‌ಗಳ ಕಬ್ಬಿಣವನ್ನು ತಯಾರಿಸುತ್ತಾರೆ. ರೇಲ್ವೆ ಆಕ್ಸೆಲ್, ಫಿರಂಗಿಗಳಿಗೆ ಬಳಸುವ ಕ್ಯಾನನ್, ನಿರ್ಮಾಣ ಸಾಮಗ್ರಿಯ ಕಬ್ಬಿಣದ ತೊಲೆಗಳು, 20 ಎಂಎಂವರೆಗಿನ ಕಬ್ಬಿಣದ ಸರಳು, ಅಚ್ಚುಗಳು ಮುಂತಾಗಿ ಗ್ರಾಹಕರ ಬೇಡಿಕೆಗೆ ತಕ್ಕಂತೆ ಕಬ್ಬಿಣವನ್ನು ತಯಾರಿಸಿ ಕೊಡುತ್ತಾರೆ.


‘ಅಭಿವೃದ್ಧಿ’ಯ ಮೂಲ ಸರಕೇ ಕಬ್ಬಿಣ. ಅದಿಲ್ಲದೇ ಯಾವ ಅಭಿವೃದ್ಧಿಯನ್ನೂ ಊಹಿಸಲಾರೆವು. ಕಾರ್ಖಾನೆ, ಕಟ್ಟಡ, ಸೇತುವೆ, ವಿಮಾನ, ರೈಲು, ವಾಹನ, ಶಸ್ತ್ರಾಸ್ತ್ರ ಎಲ್ಲದಕ್ಕೂ ಕಬ್ಬಿಣ ಬೇಕೇಬೇಕು. ದೇಶ ‘ಅಭಿವೃದ್ಧಿ’ಯ ಕಡೆಗೆ ಹೋಗತೊಡಗಿದಂತೆ ಕಬ್ಬಿಣದ ಬೇಡಿಕೆಯೂ ಹೆಚ್ಚು. ಆ ದೃಷ್ಟಿಯಿಂದ ಭದ್ರಾವತಿಯ ಕಾರ್ಖಾನೆಗೆ ಈಗ ಕೈತುಂಬ ಕೆಲಸ, ಲಾಭ ಇರಬೇಕಿತ್ತು. ಕಂಪನಿಯು ತನ್ನ ನೌಕರರಿಗೆ ಉಳಿದ್ಯಾವ ರಾಜ್ಯ ಸರ್ಕಾರೀ ಉದ್ಯೋಗಸ್ಥರಿಗೆ ಇಲ್ಲದಷ್ಟು ಸವಲತ್ತುಗಳನ್ನು ನೀಡಿತ್ತು. ಅತಿ ಕಡಿಮೆ ಬಾಡಿಗೆಗೆ ಕಂಪನಿ ಮನೆ, ಉಚಿತ ವಿದ್ಯುತ್, ಯಥೇಚ್ಛ ನೀರು ಪೂರೈಕೆ, ಸುಸಜ್ಜಿತ ಆಸ್ಪತ್ರೆ, ರಜೆ ಸಹಿತ ಅತ್ಯುಚ್ಛ ಮಟ್ಟದ ಚಿಕಿತ್ಸೆ ಪಡೆಯುವ ಸೌಲಭ್ಯ ಒದಗಿಸಿತ್ತು. ಶಿಶುವಿಹಾರದಿಂದ ಪಾಲಿಟೆಕ್ನಿಕ್ ತನಕ ಹಲವಾರು ಶೈಕ್ಷಣಿಕ ಸಂಸ್ಥೆಗಳನ್ನು ತೆರೆದಿತ್ತು. ಸಾರ್ವಜನಿಕ ಆಸ್ಪತ್ರೆ, ಪಾರ್ಕ್, ಒಳಚರಂಡಿ, ಬಡಾವಣೆ, ದೇವಸ್ಥಾನ, ಸಂತೆಮಾಳ, ಸಮುದಾಯ ಭವನ ಮುಂತಾಗಿ ಹತ್ತಾರು ಜನಪರ ಯೋಜನೆಗಳನ್ನು ಹಾಕಿಕೊಂಡಿತ್ತು. 

ಆದರೂ ಅದಿರಿನ ಅಭಾವದಿಂದ ‘ವಿಐಎಸ್‌ಎಲ್’  ಮುಚ್ಚುವ ಹಂತ ತಲುಪಿ ಈಗಲೋ ಆಗಲೋ ಮುಳುಗುವ ಹಡಗಿನಂತೆ ಜೀವ ಹಿಡಿದುಕೊಂಡಿದೆ. ಒಂದಾನೊಂದು ಕಾಲದಲ್ಲಿ 13 ಸಾವಿರ ಕಾರ್ಮಿಕರಿಗೆ ಉದ್ಯೋಗ ನೀಡಿದ್ದ, ‘ಆಯುಧ ಪೂಜೆಗೆ ಲೋಡುಗಟ್ಟಲೇ ಲಾರಿಗಳಲ್ಲಿ ಮಂಡಕ್ಕಿ ತರಿಸುತ್ತಿದ್ದ,’ ಭದ್ರಾವತಿ ಎಂಬ ಊರನ್ನು ತನ್ನ ಕಪ್ಪು ಧೂಳಿನ ಸೆರಗಿನಲ್ಲಿ ಮುಚ್ಚಿಟ್ಟುಕೊಂಡ, ಊರಿನ ಬೀದಿಬೀದಿಗಳನ್ನು ಸೈಕಲ್ ತುಳಿದು, ನಡೆದು ಕಾರ್ಖಾನೆ ತಲುಪುವ ಕಾರ್ಮಿಕರಿಂದ ಜೀವಂತವಾಗಿಟ್ಟಿದ್ದ, ಸೈರನ್ ಕೂಗಿನಿಂದ ಜನರನ್ನು ಜಾಗೃತವಾಗಿಟ್ಟಿದ್ದ ವಿಐಎಸ್‌ಎಲ್ ಇಂದು ಮುಚ್ಚುವ ಸ್ಥಿತಿಗೆ ಬಂದಿದ್ದರೆ ಕಾರಣ ಏನು? ಕಬ್ಬಿಣದ ಅದಿರಿಗಾಗಿ ಬೆಟ್ಟಗುಡ್ಡಗಳನ್ನೆಲ್ಲ ಅಗೆದು, ಬರಿದು ಮಾಡಿ, ಊರುಕೇರಿಗಳನ್ನೆಲ್ಲ ಕೆಂಧೂಳಿನಲ್ಲಿ ಮುಳುಗಿಸಿ, ತಾವು ಹೆಲಿಕಾಪ್ಟರಿನಲ್ಲಿ ತಿರುಗುವ ಗಣಿಕುಳಗಳ ಬಗೆಗೆ, ಅವರ ಕುಟಿಲ ರಾಜಕೀಯದ ಬಗೆಗೆ ಎಷ್ಟೊಂದು ಬರೆದೆವು, ಹೋರಾಡಿದೆವು! ಜೈಲಿಗೂ ಕಳಿಸಿದೆವು. ಆದರೆ ಅವರಂಥ ಹತ್ತು ಜನ ಮತ್ತೆ ಹುಟ್ಟಿ ಬಂದರು. ವಿಪರೀತ ಕಬ್ಬಿಣದ ಬೇಡಿಕೆಯಿದ್ದೂ ವಿಐಎಸ್‌ಎಲ್ ನಷ್ಟದಿಂದ ಮುಚ್ಚುವ ಸ್ಥಿತಿಗೆ ಬಂತು. 

ಮೈಸೂರರಸರ ಕಾಲದಲ್ಲಿ 1936ರಲ್ಲಿ ಎಂಐಎಸ್‌ಎಲ್ (ಮೈಸೂರ್ ಐರನ್ ಅಂಡ್ ಸ್ಟೀಲ್ ವರ್ಕ್ಸ್) ಇದ್ದದ್ದು 1962ರಲ್ಲಿ ಸರ್ಕಾರೀ ಸ್ವಾಮ್ಯದ ಎಮ್‌ಐಎಸ್‌ಎಲ್ ಆಯಿತು. 1976ರಲ್ಲಿ ಅದರ ಸಂಸ್ಥಾಪಕರಾದ ವಿಶ್ವೇಶ್ವರಯ್ಯನವರ ಹೆಸರನ್ನಿಡಲಾಯಿತು (ವಿಐಎಸ್‌ಎಲ್). 1989ರಲ್ಲಿ ಉಕ್ಕು ಪ್ರಾಧಿಕಾರದ ಒಂದು ಘಟಕವಾಗಿದ್ದಿದ್ದು 1998ರಲ್ಲಿ ಉಕ್ಕು ಪ್ರಾಧಿಕಾರ (ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ)ದಲ್ಲಿ ವಿಲೀನವಾಯಿತು. ಬಳಿಕ ಅದಿರಿನ ಲಭ್ಯತೆಯೇ ದೊಡ್ಡ ಸಮಸ್ಯೆಯಾಯಿತು. ಕುಂಸಿ, ಕೆಮ್ಮಣ್ಣುಗುಂಡಿ, ಕುದುರೆಮುಖ ಗಣಿಗಳೆಲ್ಲ ಬರಿದಾಗಿ ಪರಿಸರ ಸಂರಕ್ಷಣೆಯ ಕಾರಣದಿಂದ ನಿಂತ ಮೇಲೆ ಸರ್ಕಾರಿ ಸ್ವಾಮ್ಯದ ಗಣಿಗಳ ಅದಿರು ದೂರದ ಛತ್ತೀಸ್‌ಗಡದಿಂದ ಬರಬೇಕಾಯಿತು. ಅಲ್ಲಿಂದಿಲ್ಲಿಗೆ ಬರುವುದು ತುಟ್ಟಿಯ ವಿಷಯ. ಇನ್ನು ಬಳ್ಳಾರಿಯ ಕಬ್ಬಿಣದ ಅದಿರು ಖಾಸಗಿ ಗಣಿ ಮಾಲೀಕರಿಗೆ ಹೋದದ್ದರಿಂದ ಅದನ್ನು ಕೊಂಡು ಕಬ್ಬಿಣ ತಯಾರಿಸುವುದೂ ದುಪ್ಪಟ್ಟು ನಷ್ಟ ತರುವ ಸಂಗತಿಯಾಗಿತ್ತು. ಎಂತಹ ವಿಪರ್ಯಾಸ! ಕವಡೆ ಕಿಮ್ಮತ್ತಿಗೆ ತನ್ನ ನೆಲದ ಗಣಿಗಳನ್ನು ಖಾಸಗಿ ಕಂಪನಿಗಳಿಗೆ ಹರಾಜು ಹಾಕಿ ಬಿಲಿಯನಾಧಿಪತಿಗಳನ್ನು ಸೃಷ್ಟಿಸುವ ಸರ್ಕಾರ, ತಾನೇ ಆ ಗಣಿಗಳನ್ನು ನಡೆಸಿದ್ದರೆ ಸಾರ್ವಜನಿಕ ವಲಯದ ಇಂತಹ ಕಾರ್ಖಾನೆಗಳನ್ನು, ಅದನ್ನು ನೆಚ್ಚಿದ ಸಾವಿರಾರು ಕಾರ್ಮಿಕ ಕುಟುಂಬಗಳನ್ನು ಬೀದಿಪಾಲು ಮಾಡುವುದು ತಪ್ಪುತ್ತಿತ್ತು! ಈ ಸೂಕ್ಷ್ಮಗಳು ಫೈಲುಗಳ ಅಂಕಿಸಂಖ್ಯೆಗಳಲ್ಲಿ ಕರಗಿಹೋದ, ಕಮಿಷನ್ನಿನ ಆಧಾರದ ಮೇಲೆ ಲಾಭನಷ್ಟದ ಲೆಕ್ಕಾಚಾರಕ್ಕೆ ಬೀಳುವ ಭ್ರಷ್ಟ ವ್ಯವಸ್ಥೆಗೆ ಹೊಳೆಯದೇ ಇದ್ದಿದ್ದರಿಂದ ೪೨೫೦ ಮನೆಗಳಿದ್ದ, 1660 ಎಕರೆ ಜಾಗವಿರುವ ಬೆಲೆ ಕಟ್ಟಲಾಗದ ಅಮೂಲ್ಯ ಆಸ್ತಿ ವಿಐಎಸ್‌ಎಲ್ ಹಾಳು ಸುರಿದು ಮುಚ್ಚುವಂತಾಗಿದೆ. 

ಸಾರ್ವಜನಿಕ ವಲಯದ ಉದ್ದಿಮೆಯೊಂದು ಹೀಗೆ ಕಣ್ಣುಚ್ಚುತ್ತಿರುವುದು ಅಪಾರ ವಿಷಾದ ಮೂಡಿಸುತ್ತದೆ. ಹಾಳುಬಿದ್ದ ಅವಶೇಷಗಳ ನಡುವೆ ಬಿಕೋ ಎನ್ನುತ್ತಿರುವ ವಿಐಎಸ್‌ಎಲ್‌ನ ಸಾವಿರಾರು ಎಕರೆ ಕ್ಯಾಂಪಸ್‌ನಲ್ಲಿ ಸುತ್ತಾಡಿದಾಗ ಎಲ್ಲರ ಮನಸ್ಸಿನಲ್ಲಿ ಏಕೆ ಹೀಗಾಯಿತು ಎಂಬ ಪ್ರಶ್ನೆ ಮೂಡುತ್ತದೆ. ಬಹುಶಃ ಒಬ್ಬ ನೌಕರ ಹೇಳಿದಂತೆ ಅದು ಒಡೆದ ಹಡಗು. ‘ಒಂದು ತೂತು ಗುರ್ತಿಸಿ ಮುಚ್ಚುವುದರಲ್ಲಿ ಮತ್ತೆ ನಾಕು ಪತ್ತೆಯಾಗ್ತಾವೆ. ಅದ್ನ ಮುಚ್ಚೋ ಕೆಲಸದಲ್ಲಿ ಹಡಗು ನಡೆಸಕ್ಕೇ ಪುರುಸೊತ್ತಿಲ್ಲದೆ ಮುಳುಗೋಗುತ್ತೆ ಅಷ್ಟೇ.’

ವಿಐಎಸ್‌ಎಲ್ ಮರುಹುಟ್ಟು ಪಡೆಯಲು ಏಕೆ ಸಾಧ್ಯವಾಗಲಿಲ್ಲ? ಕಾರ್ಮಿಕ ಮುಂದಾಳುವೊಬ್ಬರು ಹೇಳಿದ್ದು ಇದು: 

‘ಕರ್ನಾಟಕದ ರಾಜಕಾರಣಿಗಳಿಗೆ ಇಚ್ಛಾಶಕ್ತಿನೇ ಇಲ್ಲ. ಈಗ ಎಲ್ಲೂ ಇಲ್ಲಿಯ ತರ ಮನುಷ್ಯರೇ ಕೆಲಸ ಮಾಡೋ ಫರ್ನೇಸ್‌ಗಳಿಲ್ಲ. ಎಲ್ಲ ಮೆಕ್ಯಾನೈಸ್ಡ್. ಕಾಲಕಾಲಕ್ಕೆ ಹೊಸ ಟೆಕ್ನಾಲಜಿ ತರಬೇಕು. ಆಗ ವೆಚ್ಚ ಕಡಿಮೆ ಇರುತ್ತೆ, ಸುರಕ್ಷೆನೂ ಇರುತ್ತೆ. ಇಲ್ಲಿ ಅದಾಗ್ತಾ ಇಲ್ಲ. ಅದಕ್ಕೇ ಕಾರ್ಮಿಕರು ನಾಕು ಕಾಸಿಗೆ ದುಡೀತಿದಾರೆ, ಜೀವ ಬಿಡ್ತಿದಾರೆ. ಮೂರೂವರೆ ಸಾವಿರ ಕೋಟಿ ರೂಪಾಯಲ್ಲಿ ಇಡೀ ಪ್ಲಾಂಟ್ ರಿವೈವ್ ಮಾಡೋ ಅವಕಾಶ ಇತ್ತು, ಆಗಲಿಲ್ಲ. ಯಲಹಂಕದಲ್ಲಿ ರೈಲ್ವೆಯವರ ಅಚ್ಚುಗಾಲಿ ಕಾರ್ಖಾನೆ ಆದಾಗ ಅದಿಲ್ಲಿಗೆ ಬರುತ್ತೆ ಅಂದರು, ಅದೂ ಬರಲಿಲ್ಲ. ವಿಶ್ವೇಶ್ವರಯ್ನೋರ ಹೆಸರಿನ ಬಲದ ಮೇಲೆ ನಡಿತಿದೆ ಅಷ್ಟೇ. ಪಶ್ಚಿಮ ಬಂಗಾಳ, ಯುಪಿ, ಛತ್ತೀಸ್‌ಗಡ ನೋಡಿ. ಒಂದೊಂದು ಪ್ಲಾಂಟ್‌ಗೂ ಸಾವಿರಾರು ಕೋಟಿ ಸ್ಯಾಂಕ್ಷನ್ ಮಾಡಿಸಿಕೊಂಡು ಬರೋ ಎಂಪಿಗಳು ಕಾರ್ಖಾನೆಗಳು ಮುಚ್ಚದಂಗೆ, ಸಾಯದಂಗೆ ನೋಡಿಕೊಂಡಿದಾರೆ. ಆದರೆ ನಮ್ಮ ಎಂಪಿಗಳತ್ರ ಮಾತಾಡಿ ಮಾತಾಡಿ ನಮಗೆ ಸುಸ್ತಾದರೂ ಅವ್ರಿಗೆ ಕಾಳಜೀನೇ ಇಲ್ಲ. ಆಮೇಲೆ ಇಲ್ಲಿ ಕೆಲಸ ಮಾಡಿ ವಿಆರ್‌ಎಸ್ ತಗೊಂಡು ಹೋದ ಆಫೀಸರ್‌ಗುಳೇ ಕರ್ನಾಟಕದ ದೊಡ್ ದೊಡ್ಡ ಖಾಸಗಿ ಕಂಪನಿಗಳಿಗೆ ಅದಿರು ಪೂರೈಸೋ ವಹಿವಾಟು ನಡೆಸ್ತಾ ಇದ್ದಾರೆ! ಉಂಡ ಮನೆ ಗಳ ಎಣಿಸೋರು. ದೇವೇಗೌಡರು ಪ್ರಧಾನಮಂತ್ರಿ ಆದಾಗ ‘ಸೇಲ್’ಗೆ ವಹಿಸಿ ಜೀವ ಉಳಿಸಿದರು. ಆಮೇಲೆ ಕೆಲವ್ರು ಪ್ರಯತ್ನ ಮಾಡಿದ್ರು, ಇಲ್ಲ ಅಂತಲ್ಲ. ಆದ್ರೆ ನವೀಕರಣ ಯೋಜನೆಗಳಲ್ಲಿ ಬಹುಪಾಲು ಪೇಪರ್ ಮೇಲೇ ಉಳಿದ್ವು. ಈಗ ಒಂದು ಹೊಸ ಪ್ಲಾಂಟ್ ಹಾಕಿದಾರೆ. ಆ ಬ್ಲೂಮ್ಸ್ ಕ್ಯಾಸ್ಟಿಂಗ್ ಪ್ಲಾಂಟೇ ನಮಗೆ ಅನ್ನ ಕೊಡ್ತಿದೆ. ನಮ್ಮ ಕಾರ್ಖಾನೆ ಈಗ ಉಕ್ಕು ಪ್ರಾಧಿಕಾರದ ಕರುಣೆಯ ಹಂಗಲ್ಲಿ ಅವರು ಹೇಳಿದಷ್ಟು ಕೆಲಸ ಮಾಡಿ ಸಂಬ್ಳ ಕೊಡೊವಷ್ಟು ಪ್ರೊಡಕ್ಷನ್ ಮಾಡಕೊಂಡು ಬದುಕ್ತಿದೆ ಅಷ್ಟೇ.’



ಎಲ್ಲವನ್ನು ಖಾಸಗಿಯವರಿಗೆ ವಹಿಸಿ ಕೈ ತೊಳೆದುಕೊಳ್ಳುತ್ತಿರುವ ಪ್ರಭುತ್ವಗಳಿಗೆ ಸಾರ್ವಜನಿಕ ವಲಯದ ಉದ್ದಿಮೆಯನ್ನು ದಕ್ಷಗೊಳಿಸಿ ಉಳಿಸಿಕೊಳ್ಳುವ ಯೋಚನೆಗಳಿಲ್ಲದೇ ಇಂಥ ಬೃಹತ್ ಉದ್ದಿಮೆಗಳು ಮುಚ್ಚುತ್ತಿವೆ. ಭಾರತವಷ್ಟೇ ಅಲ್ಲ, ವಿಶ್ವದೆಲ್ಲೆಡೆ ಅತಿ ಬೃಹತ್ ಉದ್ದಿಮೆಗಳು; ಒಬ್ಬ ವ್ಯಕ್ತಿ-ಕುಟುಂಬ ನಡೆಸುವ ಖಾಸಗಿ ಉದ್ದಿಮೆಗಳು ಯಶಸ್ವಿಯಾಗಿವೆ. ಸಾರ್ವಜನಿಕ ವಲಯದ ಉದ್ದಿಮೆಗಳು ಒಂದೊಂದೇ ಮುಚ್ಚಿ ಹೋಗುತ್ತಿವೆ. ಕರ್ನಾಟಕದ ಮಟ್ಟಿಗೆ ವಿಐಎಸ್‌ಎಲ್, ಎಚ್‌ಎಂಟಿ, ಐಟಿಐ, ಸೋಪ್ ಕಾರ್ಖಾನೆ ಮೊದಲಾದವೆಲ್ಲ ನಷ್ಟ ಅನುಭವಿಸುತ್ತಿರುವಾಗ, ವಿಶ್ವದ ಮೂಲೆಮೂಲೆಯ ಉತ್ಪನ್ನಗಳು ಹಳ್ಳಿಗಳ ಬೀಡಾ ಅಂಗಡಿಯನ್ನೂ ತಲುಪಿವೆ. ಮಾರಲಾಗದಷ್ಟು ಭಾರೀ ಪ್ರಮಾಣದಲ್ಲಿ ಉತ್ಪಾದಿಸಿ, ತಯಾರಿಕಾ ವೆಚ್ಚ ಅತಿ ಕಡಿಮೆಗೊಳಿಸಿ, ಅತಿ ಕಡಿಮೆ ವೇತನದಲ್ಲಿ ಅಮಾನುಷ ವಾತಾವರಣದಲ್ಲಿ ಕಾರ್ಮಿಕರನ್ನು ದುಡಿಸಿ ಲಾಭ ಕೊಳ್ಳೆ ಹೊಡೆಯುತ್ತಿವೆ. ಆದರೆ ಹಂಚಿನ ಕಾರ್ಖಾನೆ, ಐಸ್ ಪ್ಲಾಂಟ್‌ಗಳು, ಸಣ್ಣ ಔಷಧ ತಯಾರಿಕಾ ಘಟಕಗಳು, ನೂಲಿನ ಗಿರಣಿಗಳು, ಕೈಮಗ್ಗದಂತಹ ನೂರಾರು ಕಸುಬುಗಳು ಭರಿಸಲಾಗದ ನಷ್ಟದಲ್ಲಿ ಮುಳುಗಿವೆ. ಭಾರೀ ಯಂತ್ರಗಳಿಂದ ರಾಶಿಗಟ್ಟಲೆ ತಯಾರಿಸಿದರಷ್ಟೇ ಉಳಿವು; ಬ್ರಾಂಡೆಡ್ ಆದರಷ್ಟೇ ಲಾಭ; ಖಾಸಗಿಯಾದರಷ್ಟೇ ಗುಣಮಟ್ಟ ಮುಂತಾದ ನುಡಿಗಟ್ಟುಗಳು ಯಶಸ್ಸಿನ ಸೂತ್ರಗಳಾಗಿವೆ. 

ಅಮಾನವೀಯ ಶ್ರಮದ ಮೇಲೆ ನಿಂತ ಈ ಯಶಸ್ಸು ನ್ಯಾಯವೇ? ಇದು ದುಡಿಯುವವರಿಗೆ ದುಡಿಮೆಯ ನ್ಯಾಯದ ಪಾಲನ್ನು ನೀಡಿದೆಯೇ? ಅತಿ ಉತ್ಪಾದನೆಯಲ್ಲಿ ತೊಡಗಿ ಸಂಪನ್ಮೂಲಗಳನ್ನೆಲ್ಲ ಬರಿದು ಮಾಡುತ್ತಿರುವ ನಾವು ಬರಲಿರುವ ಪೀಳಿಗೆಗೆ ಉಳಿಸಿ ಹೋಗುತ್ತಿರುವ ನೆಲ, ನೀರು, ಗಾಳಿ ಎಂಥದು? ಹೀಗೆ ನಿಡುಸುಯ್ಯುವ ನಮ್ಮ ನಡುವೆ, ಏದುಸಿರು ಬಿಡುವ ಭೂಮಿಯ ಮೇಲೆ ಹೊಸ ತಲೆಮಾರು ಹೇಗೆ ಬದುಕು ಕಟ್ಟಿಕೊಳ್ಳಲಿದೆ?

ಈ ಹೊತ್ತು ಚಣ ನಿಂತು ನಡೆದು ಬಂದ ದಾರಿಯನ್ನೊಮ್ಮೆ ಅವಲೋಕಿಸಬೇಕಿದೆ. ‘ಮಿಕ್ಕುವುದೆಲ್ಲವೂ ವಿಷ’ ಎಂಬ ಬುದ್ಧನನ್ನೂ, ಶ್ರಮವನ್ನು ಮೌಲ್ಯವಾಗಿಸಿದ ಬಸವಣ್ಣ-ಮಾರ್ಕ್ಸ್‌ನನ್ನೂ, ಸರಳತೆಯನ್ನು ಮೌಲ್ಯವಾಗಿಸಿದ ಗಾಂಧಿಯನ್ನೂ, ಘನತೆ-ಆತ್ಮಗೌರವದ ಬದುಕುಗಳನ್ನು ಮತ್ತೊಂದು ಜೀವದ ಬೆಲೆ ತೆತ್ತು ಪಡೆಯಲಾಗದು ಎಂಬ ನ್ಯಾಯಪ್ರಜ್ಞೆಯ ಅಂಬೇಡ್ಕರರನ್ನೂ, ಯಾವುದನ್ನೂ ಹಾಳುಗೆಡವಲೊಪ್ಪದ ಸುಸ್ಥಿರ ಹೆಣ್ಣುಜ್ಞಾನವನ್ನೂ ಮನನ ಮಾಡಿಕೊಳ್ಳುವುದು, ಒಳಗಿಳಿಸಿಕೊಂಡು ಮಾದರಿಯೇ ನಾವಾಗುವುದು ಅಗತ್ಯವಾಗಿದೆ. 

(Re-Published in `Nyayapatha', Feb 2nd week, 2023)

ಡಾ. ಎಚ್. ಎಸ್. ಅನುಪಮಾ

Monday, 16 January 2023

HaaduvaLLi ಹಾಡುವಳ್ಳಿ : ಹಾಡುತ್ತ ಕರೆವ ಊರು




 ಉತ್ತರಕನ್ನಡ ಜಿಲ್ಲೆ ಹೊನ್ನಾವರದ ತರುಣ ಬರಹಗಾರ ಜಿ. ಎಸ್. ಶಾಸ್ತ್ರಿ 1944ರಲ್ಲಿ ವಿಷಮಶೀತ ಜ್ವರದಿಂದ ಆಕಸ್ಮಿಕವಾಗಿ ಮರಣ ಹೊಂದಿದರು. ದುಃಖಾರ್ತ ಗೆಳೆಯರ ಬಳಗದ ಲಿಂಗೇಶ ಶರ್ಮ ಎನ್ನುವವರು ಅವರ ಪ್ರಬಂಧಗಳನ್ನು ‘ಬೀಸಣಿಕೆ’ ಹೆಸರಿನಿಂದ ಸಂಪಾದಿಸಿದರು. ಅದರಲ್ಲಿದ್ದ ಒಂದು ಪ್ರಬಂಧ ಇಂದಿನ ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಬಸದಿಗಳ ಊರು ಹಾಡುವಳ್ಳಿಗೆ ಶಾಸ್ತ್ರಿ ಮತ್ತವರ ಗೆಳೆಯರು ಪ್ರವಾಸ ಹೋದದ್ದರ ಬಗೆಗೆ ಇದೆ. ‘ನಾಗರಿಕ’ ಪತ್ರಿಕೆಯಲ್ಲಿ ಓದಲು ಸಿಕ್ಕಿದ ಬರಹ ೧೯೪೪ರ ಕಾಲಕ್ಕೆ ನಮ್ಮನ್ನು ಒಯ್ಯುವಂತಿದೆ.

ಅದು ಘಟ್ಟದ ರಸ್ತೆ, ರಾಷ್ಟ್ರೀಯ ಹೆದ್ದಾರಿಗಳಿರದ ಕಾಲ. ಮುಂಬೈ ಪ್ರಾಂತ್ಯದಲ್ಲಿದ್ದ ಉತ್ತರ ಕನ್ನಡವು ಮದರಾಸು ಪ್ರೆಸಿಡೆನ್ಸಿ, ಮೈಸೂರು ರಾಜ್ಯ, ಮುಂಬೈ ಪ್ರೆಸಿಡೆನ್ಸಿಯ ಗಡಿಗಳ ನಡುವೆ ಸಿಕ್ಕಿಕೊಂಡಿತ್ತು. ಎಲ್ಲಿ ಹೋಗಬೇಕೆಂದರೂ ಗಡಿ ದಾಟಲೇಬೇಕು. ನದಿಗಳೇ ಗಡಿ ಗುರುತುಗಳಾಗಿದ್ದವು. ಮುಂಬೈ ಪ್ರಾಂತ್ಯದ ಮೋಟಾರಿನಲ್ಲಿ ಪ್ರಯಾಣಿಸಿ, ಹೊಳೆ ದಾಟಿ ಮೈಸೂರು ಅಥವಾ ಮದರಾಸು ಗಡಿಯ ಮೋಟಾರು ಹತ್ತಿ ತಮಗೆ ಬೇಕಾದಲ್ಲಿ ಹೋಗಬೇಕು. ಆಗ ಭಟ್ಕಳದಿಂದ ಬೆಳಿಗ್ಗೆ 9ಕ್ಕೆ ಒಂದು ಮೋಟಾರು ಸಾಗರ-ಶಿವಮೊಗ್ಗಗಳಿಗೆ ಹೋಗುವ ಘಟ್ಟದ ಕಡೆ ಹೋಗುತ್ತಿತ್ತು. ನದಿ ಬಂದದ್ದೇ ಇಳಿದು ಅತ್ತ ಮೈಸೂರಿನ ಮೋಟರು ಹತ್ತಿ ಮುಂದುವರಿಯಬೇಕು. ಆಚೆಯಿಂದ ಬಂದವರನ್ನು ಹತ್ತಿಸಿಕೊಂಡು ಕೂಡಲೇ ಮೋಟರು ಹಿಂದಿರುಗುತ್ತಿತ್ತು. ಮತ್ತೆ ಮೋಟರು ಬರುವುದು ಮರುಬೆಳಿಗ್ಗೆ 9 ಗಂಟೆಗೇ. 

ಹೀಗಿರುತ್ತ ಒಂದುದಿನ ಶಾಸ್ತ್ರಿ ಮತ್ತವರ ಗೆಳೆಯರ ತಂಡ ಪಾತ್ರೆ, ಸ್ಟವ್, ಚಪಾತಿ, ನೀರು, ಹಣ್ಣುಹಂಪಲುಗಳೊಡನೆ ಭಟ್ಕಳದಿಂದ ಬೆಳಗಿನ ಮೋಟರಿಗೆ ಹೊರಟರು. ಹನ್ನೆರೆಡು ಮೈಲಿ ಪಯಣಿಸಿ ಹಾಡುವಳ್ಳಿ ತಿರುವಿನಲ್ಲಿ ಇಳಿದರು. ರಸ್ತೆಬದಿಯ ನಿರ್ಜನ ಕಾಡಿನಲ್ಲಿ ಪ್ರವಾಸಿಗಳಿಗೆ ಮತ್ತು ಅಧಿಕಾರಿಗಳಿಗೆ ಎಂದು ಎರಡು ಬಂಗಲೆಗಳಿದ್ದವು. ಪ್ರವಾಸಿಗಳ ಬಂಗಲೆಯಲ್ಲಿ ವಸ್ತುಗಳನ್ನಿಟ್ಟು, ಊರ ಪಟೇಲರ ಬಳಿ ಮಾಹಿತಿ ಪಡೆದು ಬಸದಿಗಳ ನೋಡಲು ಹೊರಟರು. ದಾರಿಯ ಎರಡೂ ಪಕ್ಕದಲ್ಲಿ ಕುಸಿದು ಬಿದ್ದ ಅವಶೇಷಗಳ ಕುರುಹು ಕಂಡರು. ಹದಿನೈದು ಮಾರಿಗೊಂದರಂತೆ ಊರ ತುಂಬ ಬಾವಿಯಿರುವುದೆಂದೂ, ಅದರಲ್ಲಿ ಬಹುತೇಕ ಮುಚ್ಚಿ ಹೋಗುತ್ತಿವೆಯೆಂದೂ ಗಮನಿಸಿದರು. ಒಂದು ಬಸದಿಯ ಒಳಹೊಕ್ಕು ಕೈಕಾಲು ತುಂಡಾಗಿ ಬಿದ್ದ ವಿಗ್ರಹಗಳ ನಡುವೆ ಕಗ್ಗತ್ತಲಲ್ಲಿ ಬಾವಲಿಗಳ ನಡುವೆ ಸೆಣಸಾಡಿ ಕೊನೆಗೆ ಅರ್ಚಕರೊಬ್ಬರು ಚಿಮಣಿ ದೀಪ ಹಿಡಿದು ಬಂದು ಒಳಗನ್ನು ತೋರಿಸಿದ ಪ್ರಸಂಗವೂ ನಡೆಯಿತು. 24 ತೀರ್ಥಂಕರರ ಗುಡಿ, ಬಾಗಿಲಿಲ್ಲದ ಬಸದಿ, ಕೈ ತುಂಡಾದ ಸುಂದರ ಕರಿಕಲ್ಲಿನ ಮೂರ್ತಿ, ಹೊರಬದಿಯಿರುವ ಅಶೋಕ ಮರದ ಹೂವಿನ ಗೊಂಚಲುಗಳು ಅವರಲ್ಲಿ ಮಿಶ್ರಭಾವನೆಗಳನ್ನು ಹೊಮ್ಮಿಸುತ್ತವೆ. ಬಳಿಕ ಪಟೇಲರ ಮನೆ ಹೊಕ್ಕು, ಕತ್ತಿ ಪಡೆದು, ಹಳು, ಗಿಡಗಂಟಿ ಕಡಿದು ದಾರಿ ಮಾಡಿಕೊಳ್ಳುತ್ತ ಚಂದ್ರಗಿರಿ ಎಂಬ ಚಿಕ್ಕ ಬೆಟ್ಟ ಏರತೊಡಗುತ್ತಾರೆ. ಬೆಟ್ಟದ ತಲೆ ಮುಟ್ಟುವಷ್ಟರಲ್ಲಿ ಮೈಯೆಲ್ಲ ಒದ್ದೆಯಾಗುತ್ತದೆ. ನೆಲ ಅಗೆದ, ಸೂರು ಕುಸಿದು ಶಿಥಿಲಾವಸ್ಥೆ ತಲುಪಿರುವ ಸುಂದರ ಕಂಬಗಳ ಮೂರ್ತಿಯಿಲ್ಲದ ಬಸದಿ ಕಂಡು ಮರುಗಿ ಕೆಳಗಿಳಿಯುತ್ತಾರೆ. 

ಪಟೇಲರ ಮನೆಯಲ್ಲಿ ನೀರು ಸೇದುವಾಗ, ‘ಹಳ್ಳಿಯ ದನಕರುಗಳು ನಗರದವಕ್ಕಿಂತ ಚೆನ್ನಾಗಿವೆ. ಇಲ್ಲಿನ ಹವೆ ಏನೂ ಚೆನ್ನಾಗಿಲ್ಲ; ಮಲೇರಿಯಾದಿಂದ ಎಲ್ಲರ ಹೊಟ್ಟೆ ಉಬ್ಬುಬ್ಬಿ ಮುಂದೆ ಬಂದಿದೆ. ಪಟೇಲರಿಗಂತೂ ತುಂಬ ಹೆಚ್ಚಾಗಿ ಉಬ್ಬಿದೆ. ಪಟೇಲರ ಮನೆ ಜಗುಲಿಯಲ್ಲಿ ‘ಮಲೇರಿಯಾ ನಿವಾರಣೆಗೆ ಕ್ವಿನೈನು ಬಳಸಿ’ ಎಂಬ ಜಾಹೀರಾತು ಫಲಕ ಇದೆ’ ಎಂದು ಗಮನಿಸುತ್ತಾರೆ. ಪ್ರವಾಸಿ ಬಂಗಲೆ ತಲುಪಿ ಚಹ ಮಾಡಿ ಕುಡಿದು, ತಂದ ಬುತ್ತಿ ತಿನ್ನುತ್ತಾರೆ. ಮರುಬೆಳಿಗ್ಗೆಯ ತನಕ ಮೋಟರಿಲ್ಲ. ಏನು ಮಾಡುವುದು? ಸಾಮಾನುಗಳನ್ನು ಗಂಟು ಕಟ್ಟಿ ನಾಳಿನ ಮೋಟರಿಗೆ ಹಾಕಲು ಕಾವಲುಗಾರನಲ್ಲಿ ವಿನಂತಿಸಿ ಹನ್ನೆರೆಡು ಮೈಲಿಯ ಭಟಕಳಕ್ಕೆ ನಡೆದು ಹೋಗುತ್ತಾರೆ.

ಈ ಪ್ರವಾಸದನುಭವ ಓದಿದ ಮೇಲೆ ಇಷ್ಟು ಹತ್ತಿರವಿದ್ದೂ, ವಾಹನ ಸೌಲಭ್ಯವಿದ್ದೂ ನೋಡದ ಹಾಡುವಳ್ಳಿಯನ್ನು ನಾವೂ ನೋಡಬೇಕೆಂಬ ಹಂಬಲ ತೀವ್ರವಾಯಿತು. ದೀಪಾವಳಿ ಪಾಡ್ಯದ ದಿನ ಹೊರಟೆವು. ಹಿಂದಿನ ದಿನ ದೀಪಾವಳಿ ಅಮಾವಾಸ್ಯೆಯಂದು ಸೂರ್ಯಗ್ರಹಣ. ಮೊದಲೇ ಕೋವಿಡ್ ಕಾರಣದಿಂದ ಲಕ್ಷ್ಮಿಗೆ, ಲಕ್ಷ್ಮಿಪೂಜೆಗೆ ಗ್ರಹಣ ಬಡಿದಿತ್ತು. ಆದರೂ ಲೋಕ ದುಃಖದ ನಡುವೆಯೂ ದೀಪ ಹೊತ್ತಿಸುವ ತಯಾರಿಯಲ್ಲಿತ್ತು. ಆಗ, ಓ ಅಲ್ಲಿ, ಸಹ್ಯಾದ್ರಿಯ ಸೆರಗಿನ ಎರಡು ಪುಟ್ಟ ಬೆಟ್ಟಗಳಲ್ಲಿ ಲೋಕ ಜಂಜಾಟವನೊಲ್ಲೆನೆಂದು ದಿಗಂತ ದಿಟ್ಟಿಸುತ್ತ ಅಕಳಂಕರಾಗಿ ನಿಂತ ಚೇತನರ ನೋಡಬೇಕೆಂದು ಹೊರಟೆವು.


 ಭಟ್ಕಳ ತಾಲೂಕು ಕೇಂದ್ರದಿಂದ ಸಾಗರದ ಕಡೆಗೆ ಹೋಗುವ ಕೋಗಾರು ಘಟ್ಟದ ರಸ್ತೆಯಲ್ಲಿ 18 ಕಿಲೋಮೀಟರ್ ಕ್ರಮಿಸಿ ಬಲಕ್ಕೆ ತಿರುಗಿದರೆ ಹಾಡುವಳ್ಳಿ ಸಿಗುತ್ತದೆ. ಹಾಡುವೊಳಲ್, ಸಂಗೀತಪುರವೆಂದೂ ಇದನ್ನು ಕರೆಯುತ್ತಿದ್ದರು. ಹಾಡುವಳ್ಳಿಯು ಜೈನ ಧಾರ್ಮಿಕ, ಸಾಂಸ್ಕೃತಿಕ ಕೇಂದ್ರವಾಗಿತ್ತು. ಅಲ್ಲಿ ದಿಗಂಬರ ಜೈನ ಪರಂಪರೆಯ ಅಕಳಂಕ ಮಠವಿತ್ತು. ಅಧ್ಯಯನ, ಬರಹ, ಏಕಾಂತ, ಧ್ಯಾನ, ವ್ರತ, ಅಧ್ಯಾತ್ಮಿಕ ಸಾಧನೆಗೆ ಪ್ರಶಾಂತವಾಗಿರುವ ಆ ತಾಣ ಸೂಕ್ತವಾಗಿದೆಯೆಂದು ಹತ್ತಾರು ಮಠ, ಗುಡಿ, ಬಸದಿಗಳು ನಿರ್ಮಾಣವಾದವು. ಭಜನೆ, ಸ್ತೋತ್ರ, ಪಠಣಗಳು ನಿರಂತರ ನಡೆಯುತ್ತಿದ್ದವು. ಎಂದೇ ಊರು ‘ಹಾಡುವಳ್ಳಿ’ಯಾಯಿತು. ಸಂಸ್ಕೃತ ಭಾಷೆಯ ಪ್ರಭಾವದಿಂದ ‘ಸಂಗೀತಪುರ’ವಾಯಿತು.

ಕನ್ನಡ, ಸಂಸ್ಕೃತ, ಪ್ರಾಕೃತ, ಮಾಗಧಿಯೇ ಮೊದಲಾಗಿ ೮ ಭಾಷೆಗಳಲ್ಲಿ ಮಹಾಪಂಡಿತನಾಗಿದ್ದ ಜೈನಮುನಿ, ವೈಯಾಕರಣಿ ಭಟ್ಟಾಕಳಂಕ ಹಾಡುವಳ್ಳಿಯ ಜೈನಮಠದಲ್ಲಿದ್ದವ. ಅವನು ಅಕಳಂಕದೇವನ ಶಿಷ್ಯನೆಂದು ಹೇಳಿಕೊಂಡಿದ್ದಾನೆ. ಎರಡನೆಯ ನಾಗವರ್ಮ 12ನೆಯ ಶತಮಾನದಲ್ಲಿ ರಚಿಸಿದ ‘ಕರ್ನಾಟಕ ಭಾಷಾಭೂಷಣ’ ಮತ್ತು 13ನೆಯ ಶತಮಾನದಲ್ಲಿ ಕೇಶಿರಾಜ ರಚಿಸಿದ ‘ಶಬ್ದಮಣಿದರ್ಪಣ’ ಬಿಟ್ಟರೆ ಭಟ್ಟಾಕಳಂಕ ರಚಿಸಿದ ‘ಶಬ್ದಾನುಶಾಸನ’ವು ಸಂಪೂರ್ಣ ಕನ್ನಡ ವ್ಯಾಕರಣ ಗ್ರಂಥ. 562 ಸೂತ್ರಗಳಿರುವ ಆ ಹೊತ್ತಗೆ 1604ರ ವೇಳೆಗೆ ಹಾಡುವಳ್ಳಿಯಲ್ಲಿ ರಚನೆಯಾಯಿತು.   

ಆಗ ಗೇರುಸೊಪ್ಪೆ ಕೇಂದ್ರವಾಗಿದ್ದ ನಗಿರೆ ರಾಜ್ಯವೂ, ಹಾಡುವಳ್ಳಿ ಕೇಂದ್ರವಾಗಿದ್ದ ಮತ್ತೊಂದು ರಾಜ್ಯವೂ ಸಾಳುವರ ಎರಡು ಪುಟ್ಟ ರಾಜ್ಯಗಳಾಗಿದ್ದವು. ಹಾಡುವಳ್ಳಿಯು ‘ಕಾಳುಮೆಣಸಿನ ರಾಣಿ ಚೆನ್ನಭೈರಾದೇವಿ’ ಹುಟ್ಟಿದ, ಆಳ್ವಿಕೆ ನಡೆಸಿದ ಊರೂ ಹೌದು. ಅವಳು ಮುಂದೆ ಗೇರುಸೊಪ್ಪೆಯನ್ನೂ ತನ್ನ ಆಳ್ವಿಕೆಯ ಸುಪರ್ದಿಗೆ ಪಡೆಯುತ್ತಾಳೆ. 1554-1606 ರ ನಡುವಿನ ಅವಧಿಯಲ್ಲಿ ರಾಣಿಯಾಗಿದ್ದ ಅವಳು ಭಾರತದ ಇತಿಹಾಸದಲ್ಲಿ ಅತಿ ದೀರ್ಘಕಾಲ ಆಡಳಿತ ನಡೆಸಿದಾಕೆ. ಶಾಸನಗಳು ಅವಳನ್ನು ಹೈವ-ತುಳುವ-ಕೊಂಕಣ ಪ್ರದೇಶಗಳ ರಾಣಿಯೆಂದು ಉಲ್ಲೇಖಿಸುತ್ತವೆ. ಮಿರ್ಜಾನ್, ಅಂಕೋಲ, ಬೈಂದೂರು ರೇವುಪಟ್ಟಣಗಳಿಗಾಗಿ ಸತತ ಇರಿಸು ಮುರುಸು ನಡೆದೇ ಇತ್ತು. ನೆರೆಯ ಕೆಳದಿ ಮತ್ತು ಬೀಳಗಿಯ ರಾಜರು ನಿರಂತರ ಯುದ್ಧ ಸಾರುತ್ತಿದ್ದರು. ಆಗ ಆ ಪ್ರದೇಶಗಳಲ್ಲಿ ನೈಸರ್ಗಿಕವಾಗಿ ಹೇರಳವಾಗಿ ಬೆಳೆಯಲ್ಪಡುತ್ತಿದ್ದ ಕಾಳುಮೆಣಸಿಗೆ ಯೂರೋಪಿನಲ್ಲಿ ಬಹುಬೇಡಿಕೆಯಿತ್ತು. ಅದರ ವ್ಯಾಪಾರ ವಹಿವಾಟಿನಿಂದಲೇ ಅವಳಿಗೆ ‘ಕಾಳುಮೆಣಸಿನ ರಾಣಿ’ (ಪೆಪ್ಪರ್ ಕ್ವೀನ್) ಎಂಬ ಹೆಸರು ಬಂದಿದ್ದು. ‘ಆಕೆಯ ಜೊತೆಗೆ ಅತ್ಯಂತ ಜಾಗರೂಕತೆಯಿಂದ, ಮುತ್ಸದ್ದಿತನದಿಂದ ವರ್ತಿಸಬೇಕು. ಸ್ನೇಹಸೌಹಾರ್ದಗಳಿಂದಲ್ಲದೇ ಅವಳನ್ನು ನಮ್ಮ ಪರವಾಗಿ ಮಾಡಿಕೊಳ್ಳಲು ಸಾಧ್ಯವಿಲ್ಲ..’ ಎಂದು 1591ರ ಪೋರ್ಚುಗೀಸ್ ದಾಖಲೆಗಳಲ್ಲಿ ಉಲ್ಲೇಖವಿದೆ. ವಿಜಯನಗರ ರಾಜ್ಯ ಪತನಗೊಳ್ಳುತ್ತ ಸಾಗಿದ್ದರೂ ತನ್ನನ್ನು ತಾನು ವಿಜಯನಗರದ ‘ಮಹಾಮಂಡಲೇಶ್ವರ’ ಎಂದೇ ಕರೆದುಕೊಂಡಿದ್ದಳು. ಪೋರ್ಚುಗೀಸರನ್ನು ತಹಬಂದಿಯಲ್ಲಿಡಲು ಒಮ್ಮೆ ಬಿಜಾಪುರದ ಆದಿಲ್‌ಶಾಹಿ ನೆರವನ್ನೂ ಕೋರಿದ್ದಳು. ಆದರೆ ಅಲ್ಲಿಯ ಸೈನ್ಯ ಬರುವುದರೊಳಗೆ ಪೋರ್ಚುಗೀಸರನ್ನು ಹಿಮ್ಮೆಟ್ಟಿಸಿ ಒಪ್ಪಂದ ಮಾಡಿಕೊಂಡಿದ್ದಳು. 1559 ಮತ್ತು 1570ರಲ್ಲಿ ಪೋರ್ಚುಗೀಸರ ವಿರುದ್ಧ ಯುದ್ಧಗಳನ್ನು ಗೆದ್ದಳು. 1571ರಲ್ಲಿ ಗುಜರಾತಿನ ಸುಲ್ತಾನರು, ಬೀದರ್‌ನ ಸುಲ್ತಾನರು, ಬಿಜಾಪುರದ ಆದಿಲ್‌ಶಾಹಿಗಳು ಹಾಗು ಕೇರಳದ ಜಾಮೋರಿನ್ ದೊರೆಯನ್ನೊಳಗೊಂಡ ಸಂಯುಕ್ತ ಸೇನೆಯ ನಾಯಕತ್ವ ವಹಿಸಿದ್ದಳು. ಜೈನ ಧರ್ಮೀಯಳಾಗಿ ಶೈವ, ವೈಷ್ಣವ ದೇವಸ್ಥಾನಗಳಿಗೆ ಉದಾರ ದೇಣಿಗೆ ನೀಡಿದ್ದಳು. ಪೋರ್ಚುಗೀಸ್ ಇನ್ಕ್ವಿಸಿಷನ್ ಕಾಲದಲ್ಲಿ ಗೋಮಾಂತಕದಿಂದ ನೆಲೆಯರಸಿ ಬಂದ ಕುಟುಂಬಗಳಿಗೆ ಆಶ್ರಯ ನೀಡಿದ್ದಳು.

ಇಂತಹ ರಾಣಿಯ, ಅವಳ ಕಾಲದ ಚರಿತ್ರೆಯನ್ನು ಹಾಡುವಳ್ಳಿಯ ಬಸದಿ, ಗುಡಿ, ಶಾಸನ, ಕಲ್ಲುಗಳೆಲ್ಲ ಹಾಡುತ್ತಿವೆ. ಬಹುತೇಕ ಶಾಸನಗಳು ‘ಮಹಾಮಂಡಲೇಶ್ವರ ಭೈರಾದೇವಿ ಅಮ್ಮನವರ ವರಕುಮಾರಿ ಮಹಾಮಂಡಲೇಶ್ವರ ಚೆನ್ನಭೈರಾದೇವಿ ಅಮ್ಮನವರು ಸಂಗೀತಪುರದಲ್ಲಿದ್ದುಕೊಂಟು ಭಟಿಕಳ ಮುಂತಾದ ಸಮಸ್ತ ರಾಜ್ಯವನ್ನಾಳುತ್ತಿರಲು’ ಬರೆಸಿದವುಗಳೇ ಆಗಿವೆ. ಕೆಲವು ಶಾಸನಗಳು ಭಟ್ಟಿಕಳ ಪ್ರದೇಶವನ್ನು ವಿಸ್ತಾರವಾಗಿ ವಿವರಿಸುತ್ತವೆ. 


ಚಂದ್ರನಾಥ ಬಸದಿ

ಹಾಡುವಳ್ಳಿಯಲ್ಲಿ ಇಂದ್ರಗಿರಿ ಮತ್ತು ಚಂದ್ರಗಿರಿ ಎಂಬ ಎರಡು ಪುಟ್ಟ ಬೆಟ್ಟಗಳಿವೆ. ನಿರ್ಜನ ಚಂದ್ರಗಿರಿ ಬೆಟ್ಟದ ತುದಿಯಲ್ಲೊಂದು ಚಂದ್ರನಾಥನ ಬಸದಿಯಿದೆ. ಅದರ ಅವಳಿಬೆಟ್ಟ ಇಂದ್ರಗಿರಿಯು ಮೈ ತುಂಬ ಬಸದಿ, ಬಾವಿ, ಗುಡಿ, ಮನೆ, ತೋಟಗಳನ್ನು ಹೊದ್ದು ಬೆಟ್ಟದ ಆಕಾರ ಕಳೆದುಕೊಂಡು ಅತಿ ವಿರಳ ಜನಸಂಖ್ಯೆಯ ಇಳಿಜಾರು ದಿಬ್ಬದ ಊರಾಗಿ ಪರಿವರ್ತನೆಯಾಗಿದೆ. ಮುಖ್ಯರಸ್ತೆಯಿಂದ ಬಲಕ್ಕೆ ತಿರುಗಿ ಅರ್ಧ ಕಿಮೀ ಬಂದಿದ್ದೇ ಪ್ರಾಚ್ಯವಸ್ತು ಇಲಾಖೆಯ ಫಲಕ ಸ್ವಾಗತಿಸಿತು. ಎತ್ತರದ ಪೌಳಿಗೋಡೆ, ಅದರ ಮೇಲಿನಿಂದ ಕರಿ ಪದರುಕಲ್ಲಿನ (ಶಿಸ್ಟ್) ತೆಳು ಹಲಗೆಗಳನ್ನು ಜೋಡಿಸಿಟ್ಟ ವಿಶಿಷ್ಟ ಮೇಲ್ಛಾವಣಿ ದೂರದಿಂದ ಕಂಡಿತು. ಅದು ೨೪ ಸುಂದರ ಕೆತ್ತನೆಯ ಕಂಬಗಳ ಚಂದ್ರನಾಥ ಬಸದಿ. ಅಲ್ಲಿ ಕಾವಲುಗಾರರಾಗಲೀ, ಗೈಡುಗಳಾಗಲೀ ಇಲ್ಲ. ಬಾವಲಿಗಳದೇ ದರಬಾರು. ಜೀರ್ಣೋದ್ಧಾರವೆಂದು ಪ್ರಾಚೀನ ಶಿಲ್ಪಕಲೆಯ ಜೊತೆಗೆ ಸ್ವಲ್ಪವೂ ಹೊಂದದ ಜಂಬಿಟ್ಟಿಗೆ, ಸಿಮೆಂಟು, ಕಾಂಕ್ರೀಟುಗಳ ಪ್ರಯೋಗಕ್ಕೊಳಗಾಗಿ ಭೂತ-ವರ್ತಮಾನಗಳ ತಿಕ್ಕಾಟಕ್ಕೆ ಅದು ಸಾಕ್ಷಿಯಾಗಿದೆ. ಬಸದಿಯ ಹೊರಪಕ್ಕ ಒಂದು ಗೂಡಿನಲ್ಲಿ ತೀರ್ಥಂಕರರ ವಿಗ್ರಹ ಕಂಡಿತು. ಮತ್ತೊಂದು ಕಡೆ ಕತ್ತಿ ಹಿರಿದ ಬ್ರಹ್ಮಕ್ಷೇತ್ರಪಾಲನೊಡನೆ ಇರುವ ನಿರಾಯುಧ ನಗ್ನ ಭಗ್ನ ತೀರ್ಥಂಕರ ಮೂರ್ತಿ. ಯೋಧನೊಡನೆ ನಗ್ನ ಮುನಿ! ಅವಳಿ ವೈರುಧ್ಯಗಳ ಸಾರುತ್ತ ಪಕ್ಕಪಕ್ಕ ನಿಂತ ತೀರ್ಥಂಕರ-ಯಕ್ಷರು ಅವರವರ ಭಾವಗಳಲ್ಲಿ, ಕಾಯಕದಲ್ಲಿ ಮಗ್ನರಾಗಿದ್ದರು.

ಮಾರುದೂರ ನಡೆದದ್ದೇ ಐದಾರು ವೀರಗಲ್ಲುಗಳು ಕಂಡವು. ಯುದ್ಧ ಸಂದರ್ಭವನ್ನು ತಿಳಿಸುವ ಕೆತ್ತನೆಯಿರುವ ಎರಡು ವೀರಗಲ್ಲುಗಳು ಭಗ್ನವಾಗಿವೆ. ಮತ್ತೆರೆಡರ ಮೇಲೆ ಗ್ವಾಸರು ಬೆಳೆಯತೊಡಗಿದೆ. ಒಂದನ್ನು ಕುಟ್ಟಿ ನೋಡಿರುವ ಕುರುಹುಗಳಿವೆ. ಒಂದು ಆಳೆತ್ತರದ ವೀರಗಲ್ಲಿನಲ್ಲಿ ಸುಂದರ ಕೆತ್ತನೆಯಿದೆ. 



ವೀರಗಲ್ಲುಗಳು

ಅನತಿ ದೂರದಲ್ಲಿ ಶಿಸ್ಟ್ ಶಿಲಾಚಪ್ಪಡಿಗಳ ಬದಲು ಕಾಂಕ್ರೀಟ್ ಹೊದ್ದು ಜೀರ್ಣೋದ್ಧಾರವಾಗತೊಡಗಿದ್ದ ಬಸದಿ ಕಾಣಿಸಿತು. ಅದು ಪಾರ್ಶ್ವನಾಥ ಬಸದಿ. ಸ್ವಲ್ಪ ಆಚೆ ನೇಮಿನಾಥ ಬಸದಿಯಿದೆ. ಬಳಿಯೇ ಪದ್ಮಾವತಿ-ಶಾರದಾ ವಿಗ್ರಹಗಳೊಂದಿಗೆ ಪೂಜೆಗೊಳಗಾಗುವ ಚವ್ವೀಸ ತೀರ್ಥಂಕರರ ಗುಡಿಯಿದೆ. ೨೪ ತೀರ್ಥಂಕರರು ಮೌನವನ್ನೇ ಹಾಸಿ ಹೊದ್ದು ಸ್ಫೂರ್ತಿಯ ಬಿಂಬವಾಗಿ ನಿಂತಿದ್ದಾರೆ. ಯಕ್ಷಿ ಪದ್ಮಾವತಿ, ಜೈನ ಸರಸ್ವತಿಯೆನ್ನುವ ಶ್ರುತಸ್ಕಂದ ಫಲಕವಲ್ಲದೆ ಅನಂತನಾಥ ತೀರ್ಥಂಕರರ ಕಂಚಿನ ವಿಗ್ರಹವೂ ಅಲ್ಲಿದೆ. ಬ್ರಹ್ಮ, ಕ್ಷೇತ್ರಪಾಲರೂ ಇದ್ದಾರೆ. ಸಾಕಷ್ಟು ಕಚೇರಿ ಅಲೆದಾಟ, ಹೋರಾಟದ ಬಳಿಕ ಈಗ ಈ ಗುಡಿಯು ವ್ಯಕ್ತಿಯೊಬ್ಬರ ಸುಪರ್ದಿಗೆ ಹೋಗಿದೆ. ಇವೆಲ್ಲವನ್ನು ಪದ್ಮಾವತಿ ಜ್ವಾಲಾಮಾಲಿನಿ ಮತ್ತು ಚಂದ್ರನಾಥ ಬಸದಿ ಟ್ರಸ್ಟ್ ನಿರ್ವಹಿಸುತ್ತಿದೆ. 


ಚವ್ವೀಶ ತೀರ್ಥಂಕರರ ಬಸದಿ

ಚವ್ವೀಶ ಚೇತನರನ್ನು ನೋಡಿ ಹೊರಬಂದರೆ ಮರಗಿಡಗಳ ನಡುವೆ ಕಂಬ, ಕಲ್ಲು, ಫಲಕ, ಭಿನ್ನ ಮೂರ್ತಿಗಳ ಬಿಡಿಭಾಗಗಳು ಚದುರಿದ್ದವು. ಗುಪ್ಪೆಗುಪ್ಪೆ ಕಲ್ಲು, ಮಣ್ಣಿನ ಗುಡ್ಡೆ ಕಂಡರೆ ಅದರಡಿ ಏನೋ ಅವಶೇಷ ಇರಬೇಕೆಂದು ಅನಿಸುತ್ತದೆ. ಅದರಾಚೆ ಎರಡು ಮುಖಗಳಲ್ಲಿ ಶಾಸನವಿರುವ ನಾಲ್ಕು ಮುಖದ ಮಾನಸ್ತಂಭ ಹಳುವಿನ ನಡುವೆ ನಿಂತುಕೊಂಡಿತ್ತು. ಸಾಮಾನ್ಯವಾಗಿ ಮಾನಸ್ತಂಭಗಳಲ್ಲಿರುವಂತೆ ಅದರ ತುದಿಯಲ್ಲಿ ಯಾವ ಜಿನಬಿಂಬವೂ ಇರಲಿಲ್ಲ. ನಮ್ಮ ಬಡ ಸೌಂದರ್ಯ ಪ್ರಜ್ಞೆ, ಬಡ ಇತಿಹಾಸ ಪ್ರಜ್ಞೆ, ನಿನ್ನೆಗಳ ಸತ್ಯವನ್ನು ನಾಳೆಗಾಗಿ ಕಾಪಿಡುವ ಇಚ್ಛಾಶಕ್ತಿಯಿರದ ಬೌದ್ಧಿಕ ಬಡತನವನ್ನು ನೆಲಕಚ್ಚಿದ ಅವಶೇಷಗಳ ರಾಶಿ ಸಾರುತ್ತಿರುವಂತೆ ಅನಿಸಿತು. 


ಮಾನಸ್ತಂಭ

ನಾವು ಏರುತ್ತಿರುವುದು ದಿಬ್ಬವಲ್ಲ, ಅದೇ ಇಂದ್ರಗಿರಿ ಎಂದು ತಿಳಿವ ಹೊತ್ತಿಗೆ ಒಂದು ಬಸದಿ ಎದುರು ಹಾಯಿತು. ಅದು ಚಂದ್ರಪ್ರಭ ತೀರ್ಥಂಕರರ ಬಸದಿ. ಜನಬಳಕೆಯಿರದ, ಆರಾಧನೆಯಾಗದ ಅದರ ಬಾಗಿಲುಗಳು ಮುಚ್ಚಿದ್ದವು. ಒಳಹೊರಗೆಲ್ಲ ಬಾವಲಿಗಳೇ ತುಂಬಿಕೊಂಡಿದ್ದವು. ಇಣುಕಿ ನೋಡಿದರೆ ಕಗ್ಗತ್ತಲ ಹೊರತು ಏನೂ ಕಾಣಲಿಲ್ಲ. ಹೊರ ಬಂದರೆ ಅರೆರೆ, ಅಗೋ ಅಲ್ಲಿ ಚಂದ್ರಗಿರಿ ಬೆಟ್ಟದ ತಲೆ ಕಾಣಿಸುತ್ತಿದೆ. ಅದರ ತುದಿಯಲ್ಲಿ ಮರಗಿಡಬಳ್ಳಿಗಳ ನಡುವೆ ಇಣಿಕಿಣಿಕಿ ಕಲ್ಲಿನ ಸೂರೊಂದು ಕಣ್ಣಾಮುಚ್ಚಾಲೆಯಾಡುತ್ತಿದೆ! ಇಲ್ಲೊಂದು ಚಂದ್ರನಾಥ, ಅಲ್ಲೂ ಚಂದ್ರನಾಥ. ತೀರ್ಥಂಕರರು ಮುಕ್ತಿ ಮಾರ್ಗದರ್ಶಕರಾದರೆ ಯಕ್ಷ, ಯಕ್ಷಿಯರು ಇಹಲೋಕ ಸೌಖ್ಯ ನೀಡುವವರು. ಚಂದ್ರನಾಥ ಮತ್ತು ಪಾರ್ಶ್ವನಾಥ ತೀರ್ಥಂಕರರ ಯಕ್ಷಿಯರಾದ ಜ್ವಾಲಾಮಾಲಿನಿ ಮತ್ತು ಪದ್ಮಾವತಿಯರ ಪೂಜೆಯು ಲೌಕಿಕ ಸುಖಸಂತೋಷಗಳನ್ನು ಅನುಗ್ರಹಿಸುವುದರಿಂದ ಅವರ ಬಸದಿಗಳು ಹೆಚ್ಚಿವೆ. ಇಲ್ಲಿಯೂ ಚಂದ್ರನಾಥ, ಪಾರ್ಶ್ವನಾಥರ ಬಸದಿಗಳೇ ಹೆಚ್ಚಿವೆ.  



 ಚಂದ್ರಪ್ರಭ ತೀರ್ಥಂಕರರ ಬಸದಿ

ಚದುರಿದ ಮನೆಗಳಿರುವ ಕರಾವಳಿ ಮಲೆನಾಡು ಊರು ಹಾಡುವಳ್ಳಿಯಲ್ಲಿ ಜೈನ ಸಮುದಾಯದ ಆರೆಂಟು ಮನೆಗಳಿವೆ. ಇಡೀ ಮಜರೆಯ ಜನಸಂಖ್ಯೆ ಸಾವಿರದಷ್ಟಿರಬಹುದು. ಕಾಳುಮೆಣಸಿನ ಸಂಗ್ರಹಕ್ಕೆಂದು ಚೆನ್ನಭೈರಾದೇವಿ ತೋಡಿಸಿದ 900 ಬಾವಿಗಳು ಜೈನಕೇರಿಯಲ್ಲಿದ್ದವಂತೆ. ಅದರಲ್ಲಿ ಈಗ ಬಹುತೇಕ ಬಾವಿಗಳು ಮುಚ್ಚಿ ಗುಂಡಿಗಳಂತಾಗಿವೆ; ಶಾಸನಗಲ್ಲುಗಳನ್ನು ಕೆಲವರು ಹೊತ್ತೊಯ್ದಿದ್ದಾರೆ; ಯಾರಿಗೂ ಜಿನಪಾದಗಳಿರುವ ಚಂದ್ರಗಿರಿ ಬೆಟ್ಟದ ಬಸದಿಯ ಜೀರ್ಣೋದ್ಧಾರದ ಬಗೆಗೆ ಚಿಂತೆಯೇ ಇಲ್ಲ ಎಂದು ನಮ್ಮನ್ನು ಭೇಟಿಯಾದ ಸ್ಥಳೀಯ ವ್ಯಕ್ತಿ ಜಿನರಾಜ ಜೈನ್ ವಿಷಾದದಿಂದ ಹೇಳಿದರು. ಫಲಕಗಳಾಗಲೀ, ಗೈಡ್ ಆಗಲೀ ಸಿಗದ ಆ ಸ್ಥಳದಲ್ಲಿ ಅವರೇ ಎಲ್ಲೆಡೆ ಕರೆದೊಯ್ದು ತೋರಿಸಿದರು. ಭವ್ಯ ಇತಿಹಾಸವನ್ನೂ, ಪರಂಪರೆಯನ್ನೂ ಹೊಂದಿದ ತಾಣವಾದ ಹಾಡುವಳ್ಳಿಯಲ್ಲಿ ನಿಂತು ಮೊದಲ ವೈಭವವನ್ನು ಕಷ್ಟದಿಂದ ಊಹಿಸಿಕೊಂಡೆವು.

ಇಲ್ಲಿನ ಬಹುಪಾಲು ಜೈನದಾನ ಶಾಸನ, ಸಮಾಧಿಮರಣದ ಸ್ಮರಣೆಗೆ ನಿಲ್ಲಿಸಿದ ನಿಷಿದಿಗಲ್ಲು, ವೀರಗಲ್ಲು, ಮಹಾಸತಿಗಲ್ಲುಗಳನ್ನು ಓದಿ ದಾಖಲಿಸಲಾಗಿದೆ. ಕೆಲವು ಧರ್ಮಸ್ಥಳದ ಮಂಜೂಷಾ ಸಂಗ್ರಹಾಲಯದಲ್ಲಿ, ಮತ್ತೆ ಕೆಲವು ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದ ಕನ್ನಡ ಸಂಶೋಧನಾ ಸಂಸ್ಥೆಯ ವಸ್ತುಸಂಗ್ರಹಾಲಯದಲ್ಲಿವೆ. ಉಳಿದವು ಇಲ್ಲಿ ಪಂಚಭೂತಗಳಿಗೊಡ್ಡಿಕೊಂಡು ಸವೆಯುತ್ತಿವೆ. ಇವಲ್ಲದೆ ಲೋಹಶಾಸನ, ಸ್ಮಾರಕ ಶಿಲ್ಪಗಳೂ ಸಾಕಷ್ಟು ದೊರೆತಿವೆ. ಇದುವರೆಗೆ ದೊರೆತ 31 ಶಾಸನಗಳಲ್ಲಿ 4 ನಿಷಿಧಿ ಶಾಸನಗಳು, 9 ವೀರಗಲ್ಲುಗಳು, ಹದಿನೈದು ದಾನ ಶಾಸನಗಳು, 3 ಇತರ ಶಾಸನಗಳಾಗಿವೆ. ಅಂದಿನ ರಾಜಕೀಯ ಇತಿಹಾಸ, ಜನಜೀವನ, ಬದುಕಿನ ಶೈಲಿ, ಭಾಷೆ, ಸಾಂಸ್ಕೃತಿಕ ಪರಿಸರ ಇವೆಲ್ಲವನ್ನು ಈ ಶಾಸನಗಳಿಂದ ತಿಳಿಯಬಹುದಾಗಿದೆ. ಶಾಸನ ಬರೆಸಿದ ಒಡೆಯ/ಒಡತಿಯರಲ್ಲದೆ ಅದನ್ನು ಬರೆದವರು, ಕೆತ್ತಿದವರ ಹೆಸರುಗಳೂ ಇವೆ. ದಾನಶಾಸನಗಳು ಗದ್ದೆಯ ಹೆಸರುಗಳನ್ನು ತಿಳಿಸುತ್ತವೆ: ಕುಳಿಯನ ಗದ್ದೆ, ಕೇದಿಗೆಯ ಗದ್ದೆ, ಕಂಡುಕದ ಗದ್ದೆ, ನಾಗರಹೊಳೆಯ ಗದ್ದೆ, ಒಸರೆ ಗದ್ದೆ, ಒದಕೆ ಗದ್ದೆ, ಚವಲನ ಗದ್ದೆ ಇತ್ಯಾದಿ. ಮದುವಳಿಗೆ ಬಿಟ್ಟ ಗದ್ದೆಯ ಉಲ್ಲೇಖವೂ ಇರುವುದು ಪಿತ್ರಾರ್ಜಿತ ಆಸ್ತಿಯಲ್ಲಿ ಹೆಣ್ಣುಮಕ್ಕಳಿಗೂ ಪಾಲಿದ್ದ ಮಾತೃಸಂಸ್ಕೃತಿಯ ಸಾಕ್ಷ್ಯವಾಗಿದೆ ಎಂದು ಸಂಶೋಧಕರು ಅಭಿಪ್ರಾಯಪಡುತ್ತಾರೆ. ಪುರಾತತ್ತ್ವ ಇಲಾಖೆಯಡಿ ಬರುವ ಕೆಲವು ಬಿಟ್ಟರೆ ಉಳಿದವಕ್ಕೆ ಯಾವ ರಕ್ಷಣೆಯೂ ಇಲ್ಲವಾಗಿದೆ.


ದಾನಶಾಸನ

ಹಾಡುವಳ್ಳಿಯಷ್ಟೇ ಅಲ್ಲ. ನಮ್ಮ ದೇಶದ ಎಲ್ಲ ಕಡೆಯೂ ಇಂತಹ ಸಾವಿರಾರು ಐತಿಹಾಸಿಕ ಸಾಕ್ಷ್ಯಗಳಾದ ತಾಣಗಳು ಆಳುವವರ ದಿವ್ಯ ನಿರ್ಲಕ್ಷ್ಯಕ್ಕೆ ಒಳಗಾಗಿ ಎಲ್ಲೆಂದರಲ್ಲಿ ಬಿದ್ದಿವೆ. ಗೇರುಸೊಪ್ಪೆಯ ಸೀಮೆಯ ಶಾಸನಗಳನ್ನು ಬ್ರಿಟಿಷ್ ಅಧಿಕಾರಿ ಕರ್ನಲ್ ಮೆಕೆಂಜಿ ಸಂಗ್ರಹಿಸಿದ್ದ. 1867ರಲ್ಲಿ ಅಜಂತಾ ಕೇವ್ ಟೆಂಪಲ್ ಕಮಿಷನ್ ಎಂದು ಆರಂಭವಾಗಿ ಕೊನೆಗೆ ಆರ್ಕಿಯಾಲಜಿಕಲ್ ಸರ್ವೇ ಆಫ್ ಇಂಡಿಯಾ ಆದ ನಮ್ಮ ಹೆಮ್ಮೆಯ ಪುರಾತತ್ತ್ವ ಇಲಾಖೆಯು ಪ್ರತಿವರ್ಷ ‘ಆನ್ಯುವಲ್ ರಿಪೋರ್ಟ್ ಆಫ್ ಇಂಡಿಯನ್ ಎಪಿಗ್ರಫಿ’ ಪ್ರಕಟಿಸುತ್ತಿತ್ತು. ಹಾಗೆ ಇಲ್ಲಿನ ಶಾಸನಗಳನ್ನು 1920-30ರ ವೇಳೆಗೇ ಓದಿ ಪ್ರಕಟಿಸಲಾಗಿತ್ತು. ಸ್ವಾತಂತ್ರ್ಯಾನಂತರವೂ ಎಂ. ಚಿದಾನಂದಮೂರ್ತಿ 1966ರಲ್ಲಿಯೇ ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ ನಡೆಸುವಾಗ ಈ ಶಾಸನಗಳ ಹಲವಂಶಗಳ ಮೇಲೆ ಬೆಳಕು ಚೆಲ್ಲಿದ್ದರು. ಅಲ್ಲದೇ ಪಿ.ಬಿ.ದೇಸಾಯಿ, ಆರ್. ನರಸಿಂಹಾಚಾರ್, ಹಂಪನಾ, ಸೂರ್ಯನಾಥ ಕಾಮತ್, ಕೆ. ಜಿ. ಭಟ್ ಸೂರಿ, ಕೆ. ಜಿ. ವಸಂತ ಮಾಧವ ಮೊದಲಾದವರು ಸಾಕಷ್ಟು ಅಧ್ಯಯನ ನಡೆಸಿ ಕರಾವಳಿ ಕರ್ನಾಟಕದ ಇತಿಹಾಸ ಅರಿತುಕೊಳ್ಳಲು ಕಾರಣರಾಗಿದ್ದಾರೆ. ಇತಿಹಾಸವೆಂದರೆ ಮುಳುಗಿದ ಹಡಗಿನ ತೇಲುವ ಹಲಗೆಗಳು. ಅದನ್ನು ನಾವು ಎಚ್ಚರಿಕೆಯಿಂದ ನಾಳೆಗೂ ಕಾಪಿಟ್ಟು ನಿನ್ನೆಯ ಸತ್ಯಗಳನ್ನು ಅರಿಯಬೇಕು. ಆದರೆ ಇವೆಲ್ಲ ಮಾತುಗಳನ್ನು ತಲೆಯಲ್ಲಿಟ್ಟುಕೊಂಡು ಬೀದರ್-ಬಸವ ಕಲ್ಯಾಣದ ಕೋಟೆಯನ್ನಾಗಲೀ; ಕರಾವಳಿಯ ಹಾಡುವಳ್ಳಿಯನ್ನಾಗಲೀ; ಕೋಲಾರದ ಹಳ್ಳಿಯ ಗುಡಿಯೊಂದನ್ನಾಗಲೀ ಹೊಕ್ಕರೆ ಅಲ್ಲಿನ ದುಃಸ್ಥಿತಿಗೆ ದಂಗುಬಡಿಯುವಂತಾಗುತ್ತದೆ. ಇದಕ್ಕೆ ಪ್ರಾಚ್ಯವಸ್ತು ಇಲಾಖೆಯ ಸಿಬ್ಬಂದಿ ಕೊರತೆ ಒಂದು ಕಾರಣವಾದರೆ, ನಮ್ಮ ಪರಂಪರೆಯನ್ನು ರಕ್ಷಿಸುವ ಪ್ರಜ್ಞೆಯೇ ಇಲ್ಲದ ನಾಗರಿಕರ ಅಜ್ಞಾನ, ಅವಿವೇಕ ಇನ್ನೊಂದು ಕಾರಣವಾಗಿದೆ. 

ಗತವನ್ನು ಅದಿರುವ ಹಾಗೆ ಅರಿಯುವ ಹಂಬಲವೇ ಇಲ್ಲದ ಕಾಲಮಾನದಲ್ಲಿ ಸುಳ್ಳೇ ದೇವರಾಗುವುದು ಸುಲಭವಾಗುತ್ತದೆ. ಇಂದಿನ ಆಳ್ವಿಕರಿಗೆ ಬೇಕಾಗಿರುವುದು ಅದೇ ಆಗಿದೆ. 

ವಿಸ್ಮೃತಿಯ ಕಾರ್ಮೋಡ ಸರಿಸುವ ಜಾಗೃತಿಯ ಬೆಳಗು ಆಗಲೆಂದು ಹರಸಿ ಅರಹಂತರೇ.

ಡಾ. ಎಚ್. ಎಸ್. ಅನುಪಮಾ

Saturday, 16 July 2022

ಒಂದು ನೆರೆ ಅಧ್ಯಯನ ಪ್ರವಾಸ (ಕಥೆ)

 








ಈ ಸಲದ್ದು ಸಾಧಾರಣ ಮಳೆಗಾಲ ಅಲ್ಲ. ಮೃಗಶಿರಾ ಮಳೆಯಿಂದ ಶುರುವಾದ ಮಳೆ, ಮಗೆ ಮಳೆಗೂ ಮುಗಿಯದ ಹಾಗೆ ಬಿಟ್ಟೂ ಬಿಡದೇ ಹುಯ್ಯುತ್ತಿದೆ. ಬೇಸಿಗೆಯಲ್ಲಿ ನೀರಿಲ್ಲದೇ ತೋಟ ಒಣಗಿದಾಗ, ‘ಸ್ವಾಮೀ, ಮಾಗಣಪತೀ, ಬೇಗ ಮಳೆ ಬರೋ ಹಂಗೆ ಮಾಡಪ್ಪ’ ಅಂದವರೆಲ್ಲ, ಈಗ ‘ಮಾಗಣಪತಿ, ಈ ಹುಯ್ಯೋ ಮಳೆನ ಒಂದ್ಸಲ ನಿಲ್ಸು ಮಾರಾಯನೆ’ ಎಂದು ಬೇಡುವ ಹಂತಕ್ಕೆ ಬಂದಿದ್ದಾರೆಂದರೆ ಈ ಮಳೆ ಎಂತದಿರಬಹುದೆಂದು ನೀವೂ ಊಹಿಸಬಹುದು. ಸೂರ್ಯನ ಮುಖವನ್ನೇ ನೋಡದೇ ಹಲವು ದಿನಗಳಾಗಿ ಒದ್ದೆ ಬಟ್ಟೆಗಳು ಬಿಸಿಲನ್ನು ಕನಸುತ್ತಿವೆ. ಛತ್ರಿ, ಕಂಬಳಿಕೊಪ್ಪೆಗಳೆಲ್ಲ ಕೆಳಮಾಡಿನ ಜಂತಿಗೆ ಹೊಸದಾಗಿ ಸೇರ್ಪಡೆಯಾಗಿವೆ. ಸಂಗ್ರಹಿಸಿದ ಒಣ ಕಟ್ಟಿಗೆ ಮುಗಿದರೂ ಈ ಮಳೆ ಬಿಡದಿದ್ದರೆ ಏನು ಮಾಡುವುದೆಂಬ ಚಿಂತೆ ಹೆಂಗಸರಿಗೆ. ಅತಿ ಮಳೆಯ ಜೊತೆ ನೆರೆಯೂ ಸೇರಿ ಸಮಸ್ಯೆಗಳು ಇನ್ನಷ್ಟು ಉಲ್ಬಣಗೊಂಡಿವೆ.

ಮಳೆಗಾಲದಲ್ಲಿ ಘಟ್ಟ ಪ್ರದೇಶದಿಂದ ಇಳಿದು ಬಂದು ಶರಾವತಿಯನ್ನು ಸೇರುವ ಹಲವಾರು ಹಳ್ಳ ಹೊಳೆಗಳಲ್ಲಿ ಗುಡ್ಡೇಕಾನು ಹೊಳೆಯೂ ಒಂದು. ಭರಪೂರ ಮಳೆಯಿಂದ ತುಂಬಿ ಹರಿದು, ಹಲವು ಕೇರಿ - ಹಳ್ಳಿಗಳನ್ನು ಮುಳುಗಿಸಿ ದ್ವೀಪಗಳನ್ನಾಗಿ ಮಾಡುವ ಹೊಳೆ ಅದು. ಪ್ರತಿವರ್ಷ ಮೈದುಂಬುವ ಅದರ ಅಬ್ಬರಕ್ಕೆ ಆಚೀಚೆ ತೀರದ ಜನ ಜೀವ ಕೈಲಿ ಹಿಡಿದು ಮಳೆಗಾಲ ಕಳೆಯುತ್ತಾರೆ. ಈ ವರ್ಷವಂತೂ ಜೋರು ಮಳೆಗೆ ಹಿಗ್ಗಿಹಿಗ್ಗಿ ಅದು ಶರಾವತಿ ಹೊಳೆಯೇನೋ ಎಂಬಂತೆ ಕಾಣುತ್ತಿದೆ. ಎರಡೂ ಬದಿ ತೋಟಗಳಿಂದ ಮುಚ್ಚಿದ ಅದರ ದಡ ಹಚ್ಚಹಸಿರಾಗಿ ಕಂಗೊಳಿಸುತ್ತಿದ್ದರೂ, ತೋಟದೊಳಗೆಲ್ಲ ನೀರುನುಗ್ಗಿ, ಕೇರಿಮನೆಗಳು ನೀರುಪಾಲಾಗಿ, ಜನರ ತಿರುಗಾಟವೆಲ್ಲ ಪಾತಿದೋಣಿಯ ಮೇಲೇ ಆಗಿದೆ. ಎಲ್ಲೆಲ್ಲಿ ನೋಡಿದರೂ ಮಳೆಯದೇ ಮಾತು, ನೆರೆಯದೇ ಚಿಂತೆ.

ಇಂತಹ ಭಯಂಕರ ಮಳೆಯ ದಿನದಲ್ಲೇ ನಮ್ಮ ಹೊನ್ನಮ್ಮಜ್ಜಿ ಕಾಯಿಲೆ ಬಿತ್ತು. ಥಂಡಿ ಏರಿ, ಜ್ವರವಾಗಿ, ಕೆಮ್ಮಾಗಿ, ದಮ್ಮು ಹೆಚ್ಚಾಗಿ, ಹೊಟ್ಟೆನೋವಾಗಿ, ಕೊನೆಗೆ ವಾಂತಿ-ಭೇದಿಗೆ ಬಂದು ನಿಂತಿತು. ಅಜ್ಜಿಯ ಮಕ್ಕಳು, ಮೊಮ್ಮಕ್ಕಳು ಬಂದು ಬಂದು ಔಷಧ ತೆಗೆದುಕೊಂಡು ಹೋದರು. ಅಜ್ಜಿಯ ಮನೆ ನೆರೆಯಲ್ಲಿ ಅರ್ಧ ಮುಳುಗಿದ್ದರಿಂದ ಅಜ್ಜಿಯನ್ನು ಆಸ್ಪತ್ರೆಗೆ ಕರೆತರುವ ಮಾತೇ ಇರಲಿಲ್ಲ. ವಾಂತಿ ಹೆಚ್ಚಾಗಿ, ಬಾಯಲ್ಲೆಲ್ಲ ಜಂತು ಹುಳ ಬಂದು, ಮಲಗಿದಲ್ಲೇ ಎಲ್ಲ ಆಗಲಿಕ್ಕೆ ಶುರುವಾಯ್ತು. ಅಜ್ಜಿ ಒಂದೇ ಸಮನೆ ‘ಅಮ್ಮೋರ‍್ನ ಕರ‍್ಕಬನ್ರೋ, ಇಲ್ದಿರೆ ನಾ ಸತ್ತೋಯ್ತೆ.’ ಎಂದು ಹಲುಬಲು ಶುರು ಮಾಡಿತು. ಅಜ್ಜಿಯ - ನನ್ನ ಹಳೇ ದೋಸ್ತಿ, ಹಾಗೂ ಅದರ ಬಂಧುಗಳ ಒತ್ತಾಯಕ್ಕೆ ಮಣಿದು, ನೆರೆ ನೀರಲ್ಲಿ ನಡೆದಾದರೂ ಸೈ, ಅದರ ಮನೆಗೇ ಹೋಗಿ ಔಷಧ ಕೊಟ್ಟು ಬರಲು ನಿರ್ಧರಿಸಿದೆ.

ಈ ಹೊನ್ನಮ್ಮಜ್ಜಿಯ ಬಗ್ಗೆ ಮೊದಲೇ ಹೇಳಿಬಿಡುತ್ತೇನೆ. ಅದು ನನಗೆ ತುಂಬಾ ಬೇಕಾದ ‘ಮನಸ್ತಿ’. ನಮ್ಮ ಆಸ್ಪತ್ರೆ  ಉದ್ಘಾಟನೆಯಾದ ದಿನ ಸೇರಿದ ಮೊಟ್ಟಮೊದಲ ಒಳರೋಗಿ. ಈ ಹದಿನೈದು ವರ್ಷಗಳಲ್ಲಿ, ಹೊನ್ನಮ್ಮನೂ ಅವಳ ಆರು ಗಂಡು ನಾಕು ಹೆಣ್ಣು ಮಕ್ಕಳೂ, ಮೊಮ್ಮಕ್ಕಳೂ ನನ್ನ ಬಳಿ ನಾನಾ ಕಾರಣಗಳಿಗಾಗಿ ಬರುತ್ತಿರುವುದರಿಂದ, ಅವರ ಇಡೀ ಕುಟುಂಬವನ್ನು ಅವರವರ ಕಾಯಿಲೆ ಸಮೇತ ಬಲ್ಲೆ. ‘ಮುಂಚೆ ಗೇಯ್ದುಂದು. ಕೈಕಾಲೆಲ್ಲ ಹೆಬನೋವು. ಅಶಕ್ತಿಯಾಗಿ ನರ ಎಲ್ಲ ಬಿದ್ದೋಗಿದಾವೆ’ ಎಂದೋ; ‘ವಾಯುಗಸ ಕಾಲ್ನಾಗೇ ಹಿಡ್ದುಬಿಟ್ಟದೆ, ಕಾಲೊತ್ತಿದರೆ ಗರ್ರ್ ಅಂಬೋ ತೇಗು ಬತ್ತದೆ, ಚಲೋ ಜೀರ್ಣಾಗೋ ಔಸ್ತಿ ಕೊಡಿ’ ಎಂದೋ; ‘ರಗತ ಕೆಟ್ಟಿರಬೇಕು. ಮೈಯೆಲ್ಲ ತುರಿಕೆ. ಗನಾ ಮಾಡಿ ಒಂದು ನಂಜಿನ ಇಂಜೆಕ್ಷನ್ ಹಾಕ್ಬಿಡಿ’ ಎನ್ನುತ್ತಲೋ ಒಂದೆರೆಡು ತಿಂಗಳಿಗೊಮ್ಮೆ ಬಂದು, ಹದಿನಾರು ಮೊಳ ಸೀರೆಯನ್ನೂ ಸುತ್ತಿ ಸುತ್ತಿ ಭದ್ರ ಮಾಡಿದ ತನ್ನ ಸೊಂಟಕ್ಕೆ ಒಂದು ಇಂಜೆಕ್ಷನ್ ತಗೊಂಡು ಹೋಗದಿದ್ದರೆ ಹೊನ್ನಮ್ಮಜ್ಜಿಗೆ ಸಮಾಧಾನವೇ ಇಲ್ಲ. ಒಂದೆರೆಡು ದಿನಗಳ ರಜೆ ಮಾಡಿ ನಾನು ಊರಿಗೆ ಹೊರಟಿದ್ದು ಯಾರ ಬಾಯಿಂದಲಾದರೂ ತಿಳಿದರೆ ಸಾಕು, ‘ನನ್ನೊಂದು ಪರುಕ್ಸೆ ಮಾಡಿ ಹೋಗ್ರೋ ಅಮ, ಊರಿಗೆ ಹೋಗ್ತ್ರಂತೆ, ನೀವು ಇರುದಿಲ್ಲಂಬೊ ಸುದ್ದಿ ಸಿಗತು,’ ಎಂದು ನಾನೇನು ಮರಳಿಬಾರದ ಊರಿಗೆ ಹೊರಟಿದ್ದೇನೋ ಎಂಬಂತೆ ಆತಂಕಗೊಂಡು ಬಂದದ್ದಿದೆ ಆ ಅಜ್ಜಿ.

ಮದ್ದು ತಗೊಂಡು ಮುಗಿದರೂ ಸಾವಕಾಶವಾಗಿ ಕವಳದ ಚೀಲ ಬಿಚ್ಚಿ, ಎಲೆ - ಸುಣ್ಣ - ಸೊಪ್ಪು ತಿಕ್ಕಿ, ಅಡಿಕೆ ಹೋಳನ್ನು ಕಟುಮ್ಮನೆ ಕಡಿದು, ಕವಳ ಜಗಿಯುತ್ತಾ ಕೂತಿರುತ್ತಿತ್ತು. ನಂತರ ಒಳಬಂದ ಪೇಶೆಂಟುಗಳ ಮನೆಮಾರು ವಿಚಾರಿಸುತ್ತಾ, ಉಚಿತ ಸಲಹೆ ಕೊಡುತ್ತಾ, ಒಂದರ್ಧ ಘಂಟೆಯಾದರೂ ಆಸ್ಪತ್ರೆಯಲ್ಲಿ ಕೂತು ಕವಳದ ಜಂಬರ ಮುಗಿಸಿಕೊಂಡೇ ಮನೆಗೆ ಹೊರಡುವುದು. ತನ್ನ ಮಕ್ಕಳು ಮೊಮ್ಮಕ್ಕಳ ಹೆರಿಗೆ ಬಾಣಂತನ ಮಾಡಿಸಿದ ಅದರ ಹಳೇಕಾಲದ ಕತೆಗಳನ್ನು ಕೇಳುವುದೆಂದರೆ ನನಗೆ ತುಂಬಾ ಇಷ್ಟ. ‘ನಮ್ಕಾಲದಾಗೆ ಹಿಂಗೆಲ್ಲ ದವಾಖಾನಿ ಇರ‍್ಲಿಲ್ಲರಾ ಅಮ. ನನ್ನ ಹಿರೇ ಹುಡುಗ ಹುಟ್ಟುವಾಗೆ ಮೂರು ದಿನ ಮುಕ್ಕಿಮುಕ್ಕಿ ಅಂತೂ ಹೆರಿಗೆ ಆದಾಗ ಬಾಲೆ ಬಾಳಂತಿ ಇಬ್ರಿಗೂ ಉಸಿರೇ ಇರ್ಲಿಲ್ಲ. ಒಳಗಿದ್ದುಂದೆಲ್ಲ ಹೊರಬಂದು, ರಗತ ಹೋಗಿ, ಎಂಟು ದಿನ ತನಾ ನಂಗೆ ಎಚ್ರೇ ಇರ್ಲಿಲ್ಲಂತೆ. ಎಲ್ಲಾ ಅವ್ನ ಆಟ, ಇಬ್ರೂ ಹೆಂಗೆಂಗೋ ಬಚಾವಾದ್ವಿ. ಇನ್ನೂ ಏನೇನು ನೋಡ್ಬೇಕು ಅಂತ ಬದುಕ್ಸಿಟ್ಟಾನೋ,’ ಎಂದು ನಾವು ಊಹಿಸಲೂ ಕಷ್ಟವಾದ ತನ್ನ ಕಾಲದ ಕತೆಗಳನ್ನು ಬಿಚ್ಚಿಡುತ್ತಿತ್ತು. ವಯಸ್ಸಾದಂತೆ ಕಣ್ಣು, ಕಿವಿ ಎರಡೂ ದೂರವಾಗುತ್ತಾ ಬಂದ ಹೊನ್ನಮ್ಮಜ್ಜಿಯ ಮಾತು ಹೆಚ್ಚಾಗುತ್ತಿದೆ. ನನ್ನ ಕಟ್ಟಾ ಅಭಿಮಾನಿಯಾದ ಅದು ‘ಒಂದಪ ನಮ್ಮೂರಿಗೂ ಬನ್ರ ಅಮ, ತ್ವಾಟದಾಗೆ ಚಲೋ ಮಿಟಗನ ಕೊನಿ ಆದಾಗ ಹೇಳಿ ಕಳಸ್ತೆ’ ಎಂದು ಯಾವಾಗಲೂ ಕರೆಯುತ್ತಿತ್ತು. ಮುಂಚೆ ಕರೆದಾಗೆಲ್ಲ ಹೋಗದೇ, ಈಗ ಅಜ್ಜಿ ಹುಶಾರು ತಪ್ಪಿ ಮಲಗಿರುವಾಗ ಹೋಗುವಂತಾಯ್ತಲ್ಲ ಎಂದುಕೊಳ್ಳುತ್ತಾ, ಮಳೆ ನಿಲ್ಲಲಿ ಎಂತ ಕಾಯತೊಡಗಿದೆ. 

ಒಳ್ಳೇ ಕೊಡ ಮಗುಚಿಟ್ಟಂತೆ ಮಳೆ ಹೊಯ್ಯುತ್ತಿತ್ತು. ಸದ್ಯ ನಿಲ್ಲುವ ಯಾವ ಸೂಚನೆಗಳೂ ಕಾಣುತ್ತಿಲ್ಲ. ಕಿಟಕಿಯಿಂದ ಹೊರಗೆ ಕಾಣುತ್ತಿದ್ದ ರಥದಂತಹ ತೇಗದ ಹೂ ಗೊಂಚಲಿನಲ್ಲಿ ಮಳೆಯನ್ನು ಲೆಕ್ಕಿಸದೆ ದುಂಬಿಗಳು ಹಾರಾಡುತ್ತಿವೆ! ದೂರದ ನೇರಿಳೆ ಮರದ ಕೊಂಬೆಯ ಮೇಲೆ ಮಂಗವೊಂದು ನಿಶ್ಚಲವಾಗಿ ಕುಳಿತು ತಲೆಯ ಮೇಲೆ ಹುಯ್ಯುತ್ತಿರುವ ಮಳೆಯ ಸುಖವನ್ನು ಅನುಭವಿಸುತ್ತಿದೆ. ಕಾಗೆಗಳ ಜೋಡಿಯೊಂದು ಬೆಪ್ಪರಂತೆ ಅವನತ ಮುಖರಾಗಿ ಕುಳಿತು ನೆನೆಯುತ್ತ ಎತ್ತಲೋ ನೋಡುತ್ತಿವೆ. ಇವರಾರೂ ಈ ಹುಯ್ಯುವ ಮಳೆಗೆ ವಿಚಲಿತರಾಗದೇ ಇರುವಾಗ ನಾನೇಕೆ ಹೆದರಲಿ ಎಂದು ಕ್ಲಿನಿಕ್ ಬಾಗಿಲು ಎಳೆದದ್ದೇ ಅಜ್ಜಿ ಮೊಮ್ಮಗನ ಸಂಗಡ ಹೊರಟು ಬಿಟ್ಟೆ.

                                    ***

ಗುಡ್ಡೇಕಾನು ಹೊಳೆಸಾಲಿನಲ್ಲೇ ಅಜ್ಜಿಯ ಮನೆ. ಅಲ್ಲಿಗೆ ಹೋಗುವ ದಾರಿಯಾದರೂ ಎಂತಹುದು? ನಾಲ್ಕು ಮೈಲಿ ಸುತ್ತಿಸುತ್ತಿ, ಕೆನ್ನೀರು ಹಾರಿಸುತ್ತಾ, ಕುಲುಕುತ್ತಾ ಅಂತೂ ಒಂದು ಗುಡ್ಡದ ತಲೆಯಲ್ಲಿ ಗಾಡಿ ನಿಲ್ಲಿಸಿದೆವು. ಅಜ್ಜಿ ಮೊಮ್ಮಗ ತೋಯುತ್ತ ಕೆಳಗಿಳಿದು ಓಡಿಹೋದ. ಧೋ ಎಂದು ಸುರಿಯುವ ಮಳೆಯ ಅಬ್ಬರ ಕಿವಿ ತುಂಬಿದ್ದರೆ, ದಟ್ಟ ಮೋಡಗಳಿಂದ ಮಧ್ಯಾಹ್ನವೇ ಆವರಿಸಿದ್ದ ಮಳೆಗತ್ತಲು ಮತ್ತು ಮಂಜು ದಾರಿತುದಿ ಮಸುಕಾಗುವ ಹಾಗೆ ಮಾಡಿತ್ತು. ಸುರಿಯುತ್ತಿರುವ ಮಳೆಯಿಂದ ಸುತ್ತೆಲ್ಲ ಅಸ್ಪಷ್ಟ. ಮರಗಳೆಲ್ಲ ಮಳೆಯ ರಭಸಕ್ಕೆ ತಲೆದೂಗುತ್ತಾ ನಿಂತಿದ್ದವು. ಮಳೆಹಾಡನ್ನೂ ಭೇಧಿಸಿ ಮಂಗಟ್ಟೆ ಹಕ್ಕಿಗಳ ಅಪಸ್ವರದ ಕೇಕೆ ಕೇಳುವಾಗ ‘ಕಾರ್ಗಾಲದ ವೈಭವ’ ಕವಿತೆ ಕಿವಿಯಲ್ಲಿ ಗುಂಯ್ಗುಡುತ್ತಿತ್ತು. 

ಆ ಗುಡ್ಡದ ಮೇಲಿಂದ ಕೆಳಗೆ ಕೆನ್ನೀರಲ್ಲಿ ನಿಂತ ತೋಟಗಳೂ, ಮಧ್ಯೆ ಮನೆಗಳೂ, ವಾರೆನಿಂತ ಕರೆಂಟು ಕಂಬಗಳೂ, ಪಾತಾಳದಲ್ಲಿರುವಂತೆ ತೋರುತ್ತಿದ್ದವು. ಮಳೆಯ ಆನಂದ ಅನುಭವಿಸುತ್ತಾ ಗುಡ್ಡ ಇಳಿಯುತ್ತಿರುವಾಗ ದೊಡ್ಡ ಸಭಾಂಗಣದಂತಹ ಕಾಂಕ್ರೀಟು ಕಟ್ಟಡ ಎದುರು ಬಂತು. ಅದರ ತುಂಬಾ ಒತ್ತೊತ್ತಾಗಿ ನಿಂತ ದನ-ಕರು-ಎಮ್ಮೆಗಳು! ಕಟ್ಟಿಗೆ ರಾಶಿ, ಸಗಣಿ, ಮೇವು ಎಲ್ಲ ಒಂದು ಮೂಲೆಯಲ್ಲಿ ಒಟ್ಟಾಗಿ ಕೊಟ್ಟಿಗೆಯ ತರಹ ಕಾಣುತ್ತಿತ್ತು. ಯಾವುದೋ ಮಠದ ಗೋಶಾಲೆ ಇರಬಹುದೆಂದು ಕತ್ತೆತ್ತಿ ನೋಡಿದರೆ ಆ ಊರಿನ ಯುವಕಸಂಘದ ಕಟ್ಟಡ ಅದು! ಅಲ್ಲೇ ಆಚೆ ಮಕ್ಕಳಿಂದ ಗಿಜಿಗುಡುತ್ತಿರುವ ಶಾಲೆ. ಅದರ ಮುಂದೆ ಹಾದು ಹೋಗುವಾಗ ಹಲವು ಪರಿಚಿತ ಎಳೆಮುಖಗಳು ಕಂಡಂತಾಗಿ, ‘ಮೇಡಂ, ನಮಾ..ಸ್ತೇ..’ ಅಂತ ರಾಗವಾಗಿ ಕೂಗಿದವು. ‘ಈ ತರ ಮಳೇಲೂ ಇಷ್ಟು ಮಕ್ಳು ಶಾಲೆಗೆ ಬಂದಿದಾವಲ್ಲ, ಸಾಲೆಗೆ ಮಳೆ ರಜೆಯಾದ್ರೂ ಕೊಡಬೇಕಿತ್ತು’ ಎಂದೆ. ‘ನೆರೆ ನೀರು ಮನೆಗೆ ನುಗ್ಗಿದಾಗ ಮಕ್ಳು ಶಾಲೇಲಿರೋದೇ ಸುಖ. ಅವರ ಕರಕರೆಯೂ ಇರಲ್ಲ, ಕಾಯೂದೂ ಬೇಡ. ಅದ್ಕೇ ಮನೆಜನ ಮೊದ್ಲು ಮಕ್ಳನ್ನ ಶಾಲೇಗೆ, ಗಂಟೀನ ಯುವಕ ಸಂಘಕ್ಕೆ ಅಟ್ತಾರೆ’ ಎಂದು ನಗಾಡಿದ ಡ್ರೈವರ್ ಸುಬ್ರಾಯ.

ಅಷ್ಟೊತ್ತಿಗೆ ಮೇಲೆ ಹತ್ತಿಬಂದ ಅಜ್ಜಿಯ ಮಗ, ಮೊಮ್ಮಗ ಎದುರಿಗೆ ಸಿಕ್ಕರು. ‘ನಮ್ಮೂರಿನ್ಕತಿ ಏನ್ಕೇಳ್ತ್ರಿ ಅಮ? ನಾಳಿಂದ ಈ ಕನ್ನಡ ಶಾಲೇಲಿ ಗಂಜಿ ಕೇಂದ್ರ ಮಾಡ್ತಾರಂತೆ. ಮನೆಯಾಗೆಲ್ಲ ನೀರು ತುಂಬಿ ಒಳಗೆ ಕೂರೂ ಆಟವಿಲ್ಲ. ಏನೋ ಜೀವ ಒಂದು ಉಳುಸ್ಕಂಡಿದ್ದಿವಿ’ ಎಂದು ಸೋತ ದನಿಯಲ್ಲಿ ಹೇಳುತ್ತಾ, ದಾರಿ ತೋರುತ್ತಾ ಗುಡ್ಡ ಇಳಿಯತೊಡಗಿದರು. ಸುಮಾರು ಗುಡ್ಡ ಇಳಿದಾದ ಮೇಲೆ ಕೇರಿ ಶುರುವಾಯಿತು. ಕೇರಿಯೆಂದರೆ ಒತ್ತೊತ್ತಾಗಿ ಒಮ್ಮುಖವಾಗಿ ಮನೆಗಳಿರುವ ಬಯಲುಸೀಮೆಯ ಕೇರಿಗಳಂತಲ್ಲ ಅದು. ಗುಡ್ಡದ ಇಳಿಜಾರಿನಿಂದ ನದೀದಡದ ತನಕ ಬೇಲಿ ಚೌಕಟ್ಟಿನೊಳಗೆ ಉದ್ದುದ್ದ ಹಾಳೆಯಂತೆ ತೋರುವ ತೋಟಗಳು; ಅವರವರ ತೋಟದೊಳಗೆ, ಅವರವರ ಮನೆ. ಒಂದೊಂದು ದಿಕ್ಕಿಗೆ ಒಂದೊಂದು ಮನೆ ಇದ್ದರೂ ಅಸ್ತವ್ಯಸ್ತ ಎನಿಸದ ಕೇರಿ. ಒಂದಾದಮೇಲೊಂದು ಮನೆ ದಾಟುತ್ತಾ, ತೋಟ ದಾಟುತ್ತಾ, ಇಳಿಯತೊಡಗಿದೆವು. 

ಕಾಲಡಿಯ ನೀರಿನಲ್ಲಿ ಪಾದ ಮುಳುಗುತ್ತಿತ್ತು. ‘ಹ್ವಾಯ್ ಅಮ, ಸಾವಕಾಶ ಬನ್ರೋ.’ ಎಂಬ ದನಿ ಬಂದಲ್ಲಿಗೆ ಇಳಿಯುವುದು ಮುಗಿದು ನೆರೆನೀರು ನಿಂತ ಸಪಾಟು ನೆಲ ಬಂತು. ಓ ಮಾದೇವಿ! ಜಗಲಿಯಲ್ಲಿ ಕುಳಿತು ನೆರೆ ನೀರಲ್ಲಿ ಪಾತ್ರೆ ತೊಳೆಯುತ್ತಿದ್ದಾಳೆ. ‘ಯಂತದ್ರಾ ಈ ಬದಿ? ನೆರಿ ನೋಡುಕ್ ಬಂದ್ರಾ ಹೆಂಗೆ?’ ಎನ್ನುತ್ತಾ ಕೈ ಒರೆಸಿಕೊಳ್ಳುತ್ತಾ ಎದ್ದು ನಿಂತಳು. ‘ಎಲ್ಲಿ ಹನ್ಮಂತ?’ ಎಂದೆ. ‘ಮರ ಹಿಡುಕೋಗಾರೆ ಅಮಾ. ನಿನ್ನೆ ರಾತ್ರಿಡೀ ಸುರಿದ ಮಳೆಗೆ ಬೆಟ್ಟದ ಕಡಿಂದ ಒಂದು ಭಾರೀ ಮರ ಬಂದದಂತೆ. ಹಿಡುಕ್ ಹೋಗಾರೆ’ ಎಂದಳು. ಅಜ್ಜಿಯ ಮಗ ‘ಹಿಡ್ದ ಆ ಮರ ಚಲೋ ಹಲಸಿನ ಮರ ಅಂತೆ. ನಾಕು ಸಾವ್ರಕ್ಕೆ ಮಾರಾಟ ಆಯ್ತಂತೆ’ ಎಂದು ಸಣ್ಣಗೆ ಹೇಳಿದ. ನೆರೆ ನೀರಲ್ಲೂ ಈಜಿ, ಆದಾಯಮೂಲ ಹುಡುಕುವವರ ಧೈರ್ಯಕ್ಕೆ ಅಚ್ಚರಿಗೊಳ್ಳುತ್ತಾ ಮುನ್ನಡೆದೆ. 

ಮುಳುಗಿದ ದಣಪೆ ಒಂದನ್ನು ದಾಟಿದ್ದೇ ಹಬೀಬ ಶೇಕರ ಮನೆ ಬಂತು. ನಮ್ಮ ಪೇಟೆಯಲ್ಲೆ ಅವರ ಹಣ್ಣಿನಂಗಡಿ ಇದೆ. ಹಿತ್ತಿಲಲ್ಲೇ ನಿಂತಿದ್ದ ಶೇಕರು ‘ನಮ್ದು ಎಲ್ಲ ಮುಳುಗೋಗದೆ ಮೇಡಂ, ನೀವು ಬಂದಿರಂತ ಕರುದ್ರೆ ಚಾ ಮಾಡುದ್ ಸೈತ ಕಷ್ಟ. ಚಿಕ್ಕು ಹಣ್ಣು ಕೊಡ್ತೆ ಬರ್ರಿ’ ಎಂದರು. ಮತ್ತೊಮ್ಮೆ ಬರುವುದಾಗಿ ಹೇಳುತ್ತಾ ಮುಂದೆ ಸರಿಯುತ್ತಿದ್ದಂತೆ, ಅವರ ಹಿತ್ತಿಲ ಮಾಡಿನ ಕೆಳಗೆ ಅಗಲಿಸಿದ ತನ್ನ ರೆಕ್ಕೆಯಡಿ ಐದಾರು ಹೂಮರಿಗಳನ್ನು ಬಚ್ಚಿಟ್ಟುಕೊಂಡಂತೆ ನಿಂತ ಹೇಟೆ ಕಾಣಿಸಿತು. ನಾನದನ್ನು ನೋಡುತ್ತ ನಿಂತದ್ದನ್ನು ಗಮನಿಸಿ, ‘ನಾವು ಮಕ್ಳು ಮರೀನೆಲ್ಲ ಸಾಲಿಗೆ ಕಳ್ಸಿ ಬಿಡ್ತಾರೆ. ಈ ಕೋಳಿ ನೋಡಿ ಹ್ಯಾಗೆ ಕಾದ್ಕಂಡು ನಿತ್ತದೆ ಮಕ್ಳನ್ನ, ಅದ್ರ ಪ್ರೀತಿನೇ ದೊಡ್ದು’ ಎನ್ನುತ್ತಾ ನವಾಯ್ತಿ ಭಾಷೆಯಲ್ಲಿ ಅದಕ್ಕೆ ಪ್ರೀತಿಯಿಂದ ಏನೋ ಬೈದರು. 

ನಾಲ್ಕು ಮಾರು ಮುಂದೆ ಹೋಗುವುದರಲ್ಲಿ ಅರ್ಧ ಮುಳುಗಿದ್ದ ಕುರೋಸು ಕಟ್ಟೆಯೂ, ನಗಾಡುತ್ತಾ ನಿಂತಿದ್ದ ಪಾಸ್ಕೋಲೂ ಕಾಣಿಸಿದರು. ಅವನ ಹೆಂಡತಿ - ಕನ್ನಡ ಬಾರದ ಮೆಲೋಬಿನ, ಅವಳಿಂದಲೇ ಅವಳಿಗಾಗೇ ನಾನು ಹರಕು ಕೊಂಕಣಿ ಕಲಿತದ್ದು ಎನ್ನಬಹುದು - ಅಲ್ಲೇ ನಿಂತಿದ್ದವಳು, ‘ಮೇಡಂ, ತುಮ್ಹಿ ಅಮ್ಗೇಲ್ ಘಾರಾ ಯೇವ್‌ಕಾಂಚ್. ಚಾ ಪೀವ್ನ ವೋಸಾ’ ಎನ್ನುತ್ತ ಒತ್ತಾಯದ ದನಿಯಲ್ಲಿ ಕರೆಯುತ್ತಾ ಬಳಿ ಬಂದೇಬಿಟ್ಟಳು. ಅಜ್ಜಿ ಮಗನೂ ‘ಒಂದೈದ್ ಮಿನಿಟು ಹೋಗ್ಬನ್ರಾ ಅಮ, ನೀವಂದ್ರೆ ಬಾಳಾ ಅಬಿಮಾನ ಅದ್ಕೆ’ ಎಂದ. ಅದಾಗಲೇ ಮೊಳಕಾಲು ತನಕ ನೀರಲ್ಲಿ ನಡೆಯುತ್ತಿದ್ದ ನನಗೆ, ಬಿಸಿ ಚಹ ಸಿಗುತ್ತದೆಂದರೆ ನಂಬಲೇ ಕಷ್ಟವಾಯಿತು. ಅವಳ ಮನೆಯೊಳಗೆ ಹೋದದ್ದೇ ಸಂಭ್ರಮದಿಂದ ಎಲ್ಲೋ ಮೇಲಡರಿ ಕುಳಿತಿದ್ದ ಕುರ್ಚಿ ತಂದು ಹಾಕಿದರು. ಪೂರ್ತಿ ನೆಂದು ಒದ್ದೆಯಾದ ಮಂಗಳೂರು ಹೆಂಚಿನ ಮಾಡಿನಿಂದ ಪಟಪಟ ನೀರ ಹನಿಗಳು ಮನೆಯೊಳಗೆ ಬೀಳುತ್ತಿದ್ದವು. ದೇವರ ಗೂಡಿನ ಮುಂದೆ ಉರಿಯುತ್ತಿದ್ದ ಮೋಂಬತ್ತಿ ಮನೆಯೊಳಗೆ ಮಂದ ಬೆಳಕನ್ನು ಪಸರಿಸುತ್ತಿತ್ತು. ಅವಳ ಮಗ ಫಾರಿನ್ನಿಂದ ಕಳಿಸಿದ್ದ, ಹನಿಹನಿ ರಕ್ತ ಎದೆಯಿಂದ ಬಿದ್ದು ಬಟ್ಟಲಲ್ಲಿ ತುಂಬುತ್ತಿರುವಂತೆ ಭಾಸವಾಗುವ ಯೇಸುವಿನ ಬ್ಯಾಟರಿ ಚಾಲಿತ ಬೊಂಬೆ ಅಲೌಕಿಕವಾಗಿ ತೋರಿತು. ಈ ಗ್ಯಾಸ್ ಒಂದಿಲ್ಲದಿದ್ದರೆ ಕಟ್ಟಿಗೆ ಒಲೆಯಲ್ಲಿ ಅಡಿಗೆ ಮಾಡುವುದು ಎಷ್ಟು ಕಷ್ಟವಿತ್ತು ಎಂದು ರಾಗವಾಗಿ ಕೊಂಕಣಿಯಲ್ಲಿ ವಿವರಿಸುತ್ತಾ ಬಿಸಿಬಿಸಿ ಚಹ ಕೊಟ್ಟಳು ಮೆಲೋಬಿನ. ನೆರೆ ನಿಂತಾಗಲೂ ಕರೆಯುತ್ತಾರಲ್ಲ ಎಂದು ಅವರ ಅತಿಥಿ ಸತ್ಕಾರದ ಹುಕಿಗೆ ಅಚ್ಚರಿಯಾಯ್ತು.

ಅಡುಗೆ-ಪಾತ್ರೆ-ಬಟ್ಟೆ ಮುಂತಾದ ದಿನನಿತ್ಯದ ಸಣ್ಣಪುಟ್ಟ ಕೆಲಸಗಳೂ ನೆರೆ ನೀರು ನಿಂತರೆ ಎಷ್ಟು ಕಷ್ಟ ಎಂದು ಯೋಚಿಸುತ್ತಾ ಮನೆಯಿಂದ ಹೊರಬಿದ್ದೆ. ‘ಇದೇ ನಮ್ಮನಿ, ಬನ್ರಾ ಅಮ’ ಎನ್ನುತ್ತಾ ಅಜ್ಜಿಯ ಮಗ ಮೊಳಕಾಲ ತನಕ ನಿಂತ ನೀರಿನಲ್ಲಿದ್ದ ಬೇಲಿಯೊಂದನ್ನು ದಾಟಿದ. ನಿಂತ ನೀರಿನ ಮೇಲ್ಮೈ ಸಮತಟ್ಟಾಗಿದ್ದರೂ, ಮುಳುಗಿದ್ದ ನೆಲ ಹಾಗಿಲ್ಲವೆಂದು ಬೇಲಿ ದಾಟುತ್ತಾ ಎಡವಿದಾಗ ತಿಳಿಯಿತು. ಮನೆಯ ಅಂಗಳದಲ್ಲೇ ಬಾವಿ. ಸುತ್ತ ಕೆಸರು ಮಣ್ಣು ಬೆರೆತ ನೆರೆ ನೀರು ನಿಂತಿರುವಾಗ ಬಾವಿಯೊಳಗೆ ಸ್ಫಟಿಕ ಶುಭ್ರ ನೀರು! ಸರಬರ ಕಾಲೆಳೆದುಕೊಳ್ಳುತ್ತಾ ಅಜ್ಜಿ ಮನೆ ಮೆಟ್ಟಿಲು ಏರಿದೆ.

***

 ಸಾಮಾನೆಲ್ಲ ಅಟ್ಟ ಏರಿ ಕುಳಿತದ್ದಕ್ಕೋ ಏನೋ ಮನೆ ಖಾಲಿಖಾಲಿ ಎನಿಸುತ್ತಿತ್ತು. ‘ಅಮ್ಮನೇ, ಬನ್ರಾ ಅಂತಿ ನಾನೆಷ್ಟು ಸಲ ಕರ‍್ದಿದ್ದೆ. ಹಿಂತಾ ಪರುಸ್ತಿತೀಲಿ ನಿಮ್ಮನ್ನು ನಡ್ಸಿಕೊಂಡು ಬರಂಗಾತು. ರೂಡಿಲ್ದ ನಿಮ್ಗೆ ತ್ರಾಸಾತೋ ಏನೋ’ ಎಂಬ ಕ್ಷೀಣ ದನಿಯೊಂದು ದೊಡ್ಡಜಗಲಿ ಮೂಲೆಯಿಂದ ಬಂತು. ಒಂದಾದ ಮೇಲೊಂದು ಖಾಯಿಲೆಯಿಂದ ಸುಸ್ತಾಗಿ ನನ್ನ ಪ್ರೀತಿಯ ಹೊನ್ನಮ್ಮಜ್ಜಿ ಮುದುಡಿ ಮಲಗಿತ್ತು. ‘ಹೊಟ್ಯಾಗ್ ಒಂದ್ ಕೂಳ್ ಉಳಿಯಂಗಿಲ್ಲ. ಹುಳದ ಚಂಡು ಹಿಡಿದುಬಿಟ್ಟದೆ. ತಿಪ್ಪಿ ಗಂಟಲಿಗೇ ಬಂದಂಗಾತದೆ. ಇಲ್ಲಿ ತನಾ ಬಾಯಾಗೆ ಹತ್ತಿಪ್ಪತ್ತು ಹುಳ ಬಂದಿರಬೋದು ಅಮಾ, ಊಟ ಮಾಡ್ದೇ ಅಂತೂ ಒಂದು ವಾರಾತೋ ಏನೋ’ ಎಂದು ನನ್ನ ಕಂಡದ್ದೇ ತನ್ನ ಕಾಯಿಲೆಯ ಸವಿವರ ವರದಿ ಒಪ್ಪಿಸಿತು. ಕಾಯಿಲೆ ಶುರುವಾದ ಮೊದಲ ದಿನದಿಂದ ಇಲ್ಲಿಯವರೆಗೆ ಏನೇನಾಯಿತೆಂದು ಹೇಳಹೇಳುತ್ತ ಬಾಯಿ ಒಣಗಿ ನೀರು ಕೇಳಿತು. ನೀರಿನಂಶವೇ ಇಲ್ಲದೆ ಸೊರಗಿ ಹೋಗಿದ್ದ, ಆಳ ಗುಳಿಬಿದ್ದ ಕಣ್ಣುಗಳ ಅಜ್ಜಿಯನ್ನು ಪರೀಕ್ಷಿಸಿ, ಎರಡು ಇಂಜೆಕ್ಷನ್ ಹಾಕಿ, ಸಲೈನು ಏರಿಸಿ ಅದು ಮುಗಿಯುವುದನ್ನೇ ಕಾಯುತ್ತಾ ಕುಳಿತೆ. 



ಹೊರಗೆ ಮನೆ ಎದುರೇ ತುಳಸಿ ಗಿಡ ಕಾಣುತ್ತಿತ್ತು. ಕಟ್ಟೆ ಮುಳುಗಿ ಹೋಗಿತ್ತು. ಅಷ್ಟು ದೂರದಲ್ಲಿ ಆಳೆತ್ತರದ ಗೂಟಗಳ ಮೇಲೆ ನಿಂತ ಮೊಲದ ಗೂಡು, ಕೋಳಿಗೂಡು. ಅವುಗಳ ಮೇಲೆ ನೀಟಾಗಿ ಕತ್ತರಿಸಿದ ತೆಂಗಿನಮಡ್ಲು ನೇಯ್ದ ಮಾಡು. ಎಂತದೋ ಎಲೆ ಮೆಲ್ಲುತ್ತಾ ಕಿವಿ ನಿಮಿರಿಸಿಕೊಂಡು ಮೊಲಗಳು ಖುಷಿಯಾಗಿದ್ದಂತೆ ತೋರಿದರೆ, ಮುದುರಿ ಕುಳಿತ ಕೋಳಿಗಳು ವಿಷಾದದಲ್ಲಿದ್ದವು. ಬಲ ಮೂಲೆಯಲ್ಲಿ ಪುಟ್ಟ ದೇವಳದಂತೆ ಕಾಣುವ ಚೌಡಿಕಟ್ಟೆ. ಇಂದೂ ದೇವರಿಗೆ ಪೂಜೆಯಾದ ಎಲ್ಲ ಕುರುಹುಗಳು ಅಲ್ಲಿದ್ದವು.

 ಅಜ್ಜಿಯ ಬಳಿ ನಾಕಾರು ಮಾತನಾಡಿ ಅದು ನಿದ್ರೆಗೆ ಜಾರಿದ ಮೇಲೆ ಹೊರಬಂದು ನೋಡುತ್ತೇನೆ, ಸುತ್ತ ಎಲ್ಲೆಲ್ಲಿ ನೋಡಿದರೂ ನೀರು! ಕೆಂಪು ಸಮುದ್ರದಂತೆ ಕಾಣುತ್ತಿದೆ. ಅಜ್ಜಿಯ ಮಗ ಹೊರಬಂದು ನೆರೆ ತಾಪತ್ರಯದ ಬಗ್ಗೆ ಕತೆ ಹೇಳತೊಡಗಿದ. ‘ಈಗ ಭಾಳೊರ್ಸದ ಕೆಳಗೆ ಚೌತಿಗೆ ಒಂದಪ ನೆಗಸು ಬಂದಿತ್ರಾ ಅಮ. ರಾತ್ರಿ ಕಳ್ದು ಬೆಳಗಾಗುದ್ರಗೆ ಹಿತ್ಲ ಬಾಕ್ಲು ಒಡ್ದು ನೆರಿ ನೀರು ಒಳನುಗ್ಗಿಬಿಟ್ಟಿತ್ತು. ಒಂದೇ ರಾತ್ರೀಲಿ ಅಷ್ಟು ಮಳೆ ಮುಂಚೆ ಯಾವತ್ತೂ ಸುರ‍್ದಿರ್ಲಿಲ್ಲ. ಕಟಿಗೆ, ಅಕ್ಕಿ, ಅಡಕೆ, ಗೇರುಬೀಜ ಎಲ್ಲ ಮುಳುಗೋತು. ಬೆಳಗಾದ್ರೆ ಚೌತಿ ಹಬ್ಬ. ನಮ್ಮನೇಲಿ ಚೌತಿ ಹಬ್ಬಕೆ ದೇಸ್ಥಾನಕೆ ಹೋಗೇಹೋಗ್ಬೇಕು ಅಂಬೋ ರಿವಾಜು. ಎಲ್ಲ ನಿಂದೇ ಆಟ ಅಂತ ದೇವರ ನೆನ್ದು ದೋಣಿಮೇಲೆ ಆಚೆಬದಿ ಹೊಳೆ ದಾಟಿ, ಇಡಗುಂಜಿ ದೇಸ್ಥಾನಕೆ ಹೋಗಿ ಹಣ್ಣು ಕಾಯಿ ಮಾಡ್ಕಬಂದಿದ್ರು. ಈ ವರ್ಸವೂ ಮಳೆ ಸುರಿಯುದು ಕಂಡ್ರೆ ಅದೇ ಕತೆ ಅಂಬಂಗೆ ಕಾಂತದೆ. ಜೋಗದಾಗೆ ಹದಿನೆಂಟು ನೂರಡಿ ನೀರು ಆಯ್ತಂತೆ. ಇನ್ನು ಹತ್ತಡಿ ಏರಿದ್ರೆ ಎಲ್ಲ ಬಾಕ್ಲೂ ತೆಗೆದು ನೀರು ಬಿಡ್ತಾರೆ. ಆಗ ನಮ್ಮ ಬಂಗ ನೋಡ್ಬೇಕು ನೀವು. ಈ ಹೊಳೆಸಾಲಿನ ಬದುಕು ಯಾರಿಗೂ ಬೇಡ.’

ಅಣೆಕಟ್ಟೆಯ ಎಲ್ಲ ಗೇಟುಗಳನ್ನೂ ತೆರೆದಾಗ ಮೈದುಂಬಿಕೊಳ್ಳುವ ವಿಶ್ವವಿಖ್ಯಾತ ಜೋಗ ಜಲಪಾತವನ್ನು ನೋಡಿ ಲಕ್ಷಗಟ್ಟಲೆ ಜನ ಕಣ್ತುಂಬಿಕೊಂಡು ನಲಿದರೆ, ಶರಾವತಿಯ ಕೆಳಪಾತ್ರದ ಇಕ್ಕೆಲದ ಜನರೂ ಸಂಕಟದಲ್ಲಿ ಮುಳುಗಿ ಹೋಗಿರುತ್ತಾರೆ. ನಾನು ನೋಡಿದ್ದ ಜೋಗ ಕಣ್ಮುಂದೆ ಬಂದು ಎಂತಹ ವಿಪರ್ಯಾಸವೆನಿಸಿತು. ಕಣ್ತುಂಬುವ ಸೌಂದರ್ಯ ಕಣ್ಣೀರಿಗೂ ಕಾರಣವಾಗುತ್ತದೆ! ಆ ವೇಳೆಗೆ ಎರಡು ಸಲೈನು ಮುಗಿಯಿತೆಂಬ ಸೂಚನೆ ಮನೆಯೊಳಗಿಂದ ಬಂತು. ಒಳಹೋದರೆ ಅಜ್ಜಿ ಸ್ವಲ್ಪ ಗೆಲುವಾದಂತೆ ತೋರಿತು. ನಮ್ಮ ಮಾತನ್ನು ಕೇಳಿಸಿಕೊಂಡಿತ್ತೆಂದು ಕಾಣುತ್ತದೆ. ಈಗ ತನ್ನ ಮಾತನ್ನೂ ಸೇರಿಸುತ್ತಾ ಅಜ್ಜಿ ಹೇಳಿತು: ‘ಗುಡ್ಡ ಕಾಡು ಕಡಿದು ತೋಟ ಮಾಡ್ದಂಗೆ ಹೊಳೇನೂ ಅತಿಕ್ರಮಣ ಮಾಡಿದ್ರೆ ಸುಮ್ನಿದ್ದಾಳಾ ಗಂಗಮ್ಮ? ಗುಡ್ಡಿ ಮ್ಯಾನೆ ಮನಿ ಮಾಡಿದ್ರೆ ಈ ಕಷ್ಟ ಇರ್ತಿರ‍್ಲಿಲ್ಲ. ಬ್ಯಾಸಿಗೇಲಿ ನೀರಿಗೆ ಕಷ್ಟ ಆಗ್ಬಾರ‍್ದಂತ ಹೊಳೆ ಸಾಲಲ್ಲಿ ಮನೆ ಮಾಡ್ಕಂದ್ರೆ ಮಳೆಗಾಲ್ದಲ್ಲಿ ಕುತ್ಗಿಮಟ ನೀರಲ್ಲಿ ಬದ್ಕುದೆಯಾ.’

ಅಜ್ಜಿಯ ವಿಶ್ಲೇಷಣೆ ಜೀವನಾನುಭವದಿಂದ ಬಂದದ್ದಾಗಿತ್ತು, ಕರಾರುವಾಕ್ಕಾಗಿಯೂ ಇತ್ತು.




 ನಾಲ್ಕಾರು ಪಡ್ಡೆ ಹೈಕಳು ಹೊರಗೆ ಪಾತಿ ದೋಣಿಯಲ್ಲಿ ಓಡಾಡುತ್ತಿದ್ದವು. ಕೆಲವು ಮನೆಗಳ ಮುಂದೆ ಮುಳುಗಿದ ತೆಂಗಿನಮರಗಳ ಬುಡಕ್ಕೆ ದೋಣಿ ಕಟ್ಟಿಟ್ಟಿದ್ದರು. ಆಪತ್ಕಾಲಕ್ಕೆ ಹೊಳೆ ದಾಟಲು ಎಲ್ಲರ ಬಳಿಯೂ ಒಂದೊಂದು ದೋಣಿ ಇತ್ತು. ದೂರದಲ್ಲಿ ವೇಗವಾಗಿ ಗುಡ್ಡೇಕಾನು ಹೊಳೆ ಕೂಡಿಕೊಂಡ ಶರಾವತಿ ಬಿಟ್ಟ ಬಾಣದ ಹಾಗೆ ಹರಿಯುತ್ತಿದ್ದಳು. ಯಾಕೋ ಬಂದ ದಾರಿಯಲ್ಲೇ ವಾಪಸು ಸಾಗಿ ಮನೆ ಮುಟ್ಟುವುದಕ್ಕಿಂತ ನೀರಿನ ಮೇಲೆ ದೋಣಿಯಲ್ಲಿ ಹೋಗುವ ಉಮೇದಾಯಿತು. ‘ಇಗಾ ಈ ಗುಡ್ಡದಾಚೆ ಭಟ್ರ ಕೇರಿ ಬತ್ತದೆ. ಅದ್ನ ದಾಟಿದ್ದೇ ನಿಮ್ಮನೆ ಬತ್ತದೆ. ಇಲ್ಲೇ ಸನಿಯ’ ಎಂದು ಹೇಳಿದ ಅಜ್ಜಿಯ ಮಗನೂ ನನ್ನ ಉತ್ಸಾಹ ಹೆಚ್ಚಿಸಿದ. ನಮ್ಮ ಡ್ರೈವರನ ಭಯವನ್ನೆಲ್ಲ ಆಚೆ ತಳ್ಳಿ, ತಂದ ಔಷಧಗಳನ್ನು ಅಜ್ಜಿಗೆ ಕೊಟ್ಟು, ಬೇಗ ಗುಣವಾಗು ಎಂದು ಕೈಯೊತ್ತಿ, ಮತ್ತೊಂದು ಚಾಕಣ್ಣು-ಬಿಸ್ಕತ್ತು-ಬಾಳೆಹಣ್ಣು ಸಮಾರಾಧನೆ ಮಾಡಿಕೊಂಡು ಹೊರಟೆ. ‘ಅಮ, ದೇವ್ರು ಬಂದಂಗೆ ಬಂದು ನನ್ನ ಜೀಂವಾ ಉಳಿಸಿದ್ರಿ. ನಂಗೀಗ ಎಷ್ಟೋ ಆರಾಮ ಕಾಣ್ತಾ ಇದೆ. ನೀವಿಲ್ಲಾಗಿದ್ರೆ ನನ್ನ ಹೆಣಾ ಎತ್ತುಕೆ ತಯಾರು ಮಾಡುದೇ ಆಗಿತ್ತು’ ಎನ್ನುತ್ತಾ ಅಜ್ಜಿ ಕಣ್ಣೀರು ತುಂಬಿಕೊಂಡಿತು. ಒಂದು ಸೀತಾಳೆ ದಂಡೆ ನನ್ನ ಮುಡಿಗೇರಿತು. 

ಮರಕ್ಕೆ ಕಟ್ಟಿದ್ದ ಪಾತಿದೋಣಿ ಬಿಚ್ಚಿದ ಅಜ್ಜಿಯ ಮಗ ತಾನೇ ಹುಟ್ಟು ಹಾಕತೊಡಗಿದ. ಕುಕ್ಕುರುಗಾಲಲ್ಲಿ ಕೊಡೆ ಹಿಡಿದು ದೋಣಿಯ ಒಂದು ಮೂಲೆಯಲ್ಲಿ ನಾನು ಕುಳಿತೆ. ದೋಣಿಯೊಳಗೆ ಬಿದ್ದ ಮಳೆ ನೀರನ್ನು ಮೊಗೆದು ಹೊರಚೆಲ್ಲುತ್ತಿದ್ದ ಅಜ್ಜಿಯ ಮರಿಮಗ ಮತ್ತೊಂದು ಮೂಲೆಯಲ್ಲಿ ಕುಳಿತ. ಗಾಳಿಮಳೆ ಜೋರಾದಂತೆ ನಾನು ಬಿಡಿಸಿದ ಛತ್ರಿ ಹಿಡಿಯುವುದಕ್ಕಿಂತ ಮಡಚಿ ಕೂರುವುದೇ ಒಳ್ಳೆಯದೆನಿಸಿತು. ಪ್ರವಾಹದ ವಿರುದ್ಧ ದಿಕ್ಕಿನಲ್ಲಿ ದೋಣಿ ಹೋಗುತ್ತಲಿತ್ತು. 

ಹುಟ್ಟುಹಾಕುತ್ತ ಅಜ್ಜಿಯ ಮಗ ಮತ್ತೊಂದು ಕತೆ ಹೇಳಿದ. ಆ ದೊಡ್ಡ ನೆರೆ ಬಂದ ವರ್ಷವೇ ಅವರ ಕೇರಿಯ ಎರಡು ಮಕ್ಕಳು ಪ್ರಾಣ ತೆತ್ತವು. ಒಂದು ಶಾಲೆಗೆ ಹೋಗುವ ಹುಡುಗಿ ಸಂಕ ದಾಟುವಾಗ ಕಾಲು ಜಾರಿ ಹಳ್ಳಕ್ಕೆ ಬಿದ್ದರೆ, ಮತ್ತೊಂದು ಕೈಗೂಸು ಆಡಾಡುತ್ತ ಹೊಳೆಯಲ್ಲಿ ಬಳಿದುಕೊಂಡು ಹೋಯಿತಂತೆ. ಅದರ ಹೆಣ ತೆಗೆಯಲು ಎರಡು ಮೂರು ಮೈಲು ಹೊಳೆಸಾಲ ಉದ್ದಕ್ಕೂ ಎಲ್ಲರೂ ದೋಣಿ ತಗಂಡು ತಿರುಗಿದ್ದರಂತೆ. ಅಂತೂ ಬೇಲಿಯೊಂದಕ್ಕೆ ಸಿಕ್ಕಿದ ಮಗುವಿನ ಹೆಣ ಸ್ವಲ್ಪ ನೀರಿಳಿದ ಮೇಲೆ ಮೂರು ದಿನವಾದ ನಂತರ ಸಿಕ್ಕಿದಾಗ ಕೊಳೆತು ನಾರುತ್ತಿತ್ತಂತೆ. ಕೈಕಾಲುಗಳೆಲ್ಲ ಮೀನು ಕಚ್ಚಿತಿಂದು ಮೊಂಡಾಗಿದ್ದುವಂತೆ. ನೀರಿನಲ್ಲಿ ಮುಳುಗಿ ವಿರೂಪಗೊಂಡ ಎಳೆ ಮಗುವಿನ ಶವ ನೆನೆಸಿಕೊಂಡು ನನ್ನ ಹೊಟ್ಟೆಯೊಳಗೂ ಸುಳಿ ತಿರುಗತೊಡಗಿದ ಅನುಭವ.

ಆಹ್, ಗುಡ್ಡೆಕಾನು ಹೊಳೆ! ಎಂಥ ಅನ್ವರ್ಥನಾಮ! ಎರಡೂ ಕಡೆ ಕೋಟೆ ಕಟ್ಟಿದಂತೆ ನಿಂತಿದ್ದ ಬೆಟ್ಟಸಾಲುಗಳನ್ನು ಕತ್ತೆತ್ತಿ ನೋಡಿದರೆ ನಾನೇ ಎಲ್ಲೋ ಪಾತಾಳದಲ್ಲಿದ್ದಂತೆ ಭಾಸವಾಗುತ್ತಿತ್ತು. ಸಾಲು ಸಾಲು ಅಡಿಕೆ ತೆಂಗಿನ ತೋಟಗಳು... ಹಸಿರು ಹೊದ್ದ ಗುಡ್ಡದ ತುದಿಗಳನ್ನು ಮುಚ್ಚಿಕೊಂಡಿರುವ ತೆಳು ಮಂಜುಮೋಡಗಳು... ಇಂಥ ರಮ್ಯ ಪ್ರಕೃತಿಯ ಒಡಲಲ್ಲೇ ನೋವಿನ ಕತೆಗಳು ಅದೆಷ್ಟು ಅಡಗಿದ್ದಾವೋ? ಮಹಾನ್ ನಿಸರ್ಗದೆದುರು ಮಾನವ ಕ್ಷುದ್ರಾತಿಕ್ಷುದ್ರ ಜೀವಿಯಾದರೂ ಪ್ರಕೃತಿಯೊಂದಿಗೇ ನಿರಂತರ ಹೋರಾಟಕ್ಕೆಳಸಿದ್ದಾನಲ್ಲ!

 ಉಕ್ಕಿ ಹರಿಯುವ ಈ ಸೊಕ್ಕಿನ ನದಿ ದಾಟಲು ಈ ಪುಟ್ಟ ಪಾತಿದೋಣಿ ಸಾಕೇ ಎಂಬ ಅನುಮಾನವಾಗತೊಡಗಿತು. ಒಂದು ಕಿಲೋಮೀಟರಿನಷ್ಟು ಅಗಲವಿರಬಹುದಾದ ಈ ನದಿಗೂ ಅದರ ಸೆಳವಿಗೂ ಹೆದರದ ಮಾನವ, ನೀರನ್ನು ಜಯಿಸಲು ಏನೇನನ್ನೆಲ್ಲ ಹುಡುಕಿಕೊಂಡಿದ್ದಾನೆ! ಇವರಲ್ಲಿ ಯಾರು ಹೆಚ್ಚು? ಕೋಟ್ಯಂತರ ವರ್ಷಗಳಿಂದ ಭೂಮಿಯ ಎಲ್ಲ ಆಗುಹೋಗುಗಳಿಗೆ ಕಾರಣವಾಗಿ ಮೂಕಸಾಕ್ಷಿಯಾಗಿ ನಿಂತ ಪ್ರಕೃತಿಯೋ? ಅದನ್ನೇ ಅಂಕೆಗೊಳಪಡಿಸುವ ದುಷ್ಟ ಉತ್ಸಾಹದ, ಹೆಚ್ಚೆಂದರೆ ನೂರು ವರ್ಷ ಬದುಕಬಲ್ಲ ಪುಟಗೋಸಿ ಮನುಷ್ಯನೋ? 

ನನ್ನ ಮನಸ್ಸನ್ನು ಪ್ರಶ್ನೆಗಳು ತುಂಬಿಕೊಂಡಂತೆ ದೋಣಿಯಲ್ಲಿ ಮಳೆನೀರು ತುಂಬುತ್ತ ಹೋಗುತ್ತಿತ್ತು. ಹೊಳೆಯ ನೀರು ಕಡುಕೆಂಪು ವರ್ಣದ್ದಾಗಿ ಹೆದರಿಸುವಂತೆ ಇತ್ತು. ಎಷ್ಟೋ ದನ - ಜನ ಕೊಚ್ಚಿ ಹೋದ ಕತೆ ಕೇಳಿದ್ದೆ. ಸುಳಿಸುಳಿದು ಭೋರೆಂದು ಹರಿಯುತ್ತಿರುವ ನೀರಿನ ಶಕ್ತಿ ಎಷ್ಟೆಂದು ನನ್ನೆದುರೇ ಕೊಚ್ಚಿ ಹೋಗುತ್ತಿರುವ ಮರದ ದಿಮ್ಮಿ ನೋಡಿ ಅರ್ಥವಾಯಿತು. ಅಂತಹ ದಿಮ್ಮಿಯೊಂದಕ್ಕೆ ಢಿಕ್ಕಿ ಹೊಡೆದು ಈ ಪಾತಿ ದೋಣಿಯೇನಾದರೂ ಮಗುಚಿಕೊಂಡರೆ ಎಂಬ ವಿಚಾರ ಬಂದಿದ್ದೇ ಈಜಲೂ ಬಾರದ ನನಗೆ ಹೊಕ್ಕುಳಿಂದ ಚಳಿಯೆದ್ದು ನಡುಕ ಬಂದಂತಾಯಿತು. 

ಹಳ್ಳಿಯ ಜನ ಪುಕ್ಕಲರು, ಮಾತೆತ್ತಿದರೆ ದೇವರು - ದೆವ್ವ - ಮಂತ್ರ ಅಂತ ಕಾಣದ್ದರ ಮೊರೆ ಹೋಗುತ್ತಾರೆ, ಅಂಥ ಮೂಢನಂಬಿಕೆಗಳಿಂದ ತೊಂದರೆಗೊಳಗಾಗುತ್ತಿದ್ದಾರೆ ಎಂದೇ ನಾನು ಭಾವಿಸಿದ್ದೆ. ಈಗ, ತೊಡೆ ಮಟ್ಟ ನೀರಲ್ಲಿ ನಡೆಯುವಾಗ, ಸುತ್ತ ನೀರು ನಿಂತು ಅಟ್ಟ ಹತ್ತಿ ದಿನ ಕಳೆದು ಜೀವವುಳಿಸಿಕೊಳ್ಳುತ್ತಾರೆನ್ನುವುದು ತಿಳಿದಾಗ, ಸುಳಿಸುಳಿದು ಎತ್ತೆತ್ತಲೋ ಸೆಳೆಯುವ ನೀರಿನ ಜೊತೆ ಹೋರಾಡುತ್ತಾ ಬದುಕುವುದು ನೋಡಿದಾಗ - ಈ ಜನ ನನಗಿಂತ ಧೈರ್ಯಶಾಲಿಗಳು ಎಂದೆನಿಸತೊಡಗಿತು. ಸವಲತ್ತುಗಳ ನಡುವೆಯೇ ಬದುಕುವವರ ವಿಚಾರಗಳಿಗೂ, ಕಷ್ಟವನ್ನೇ ಹಾಸಿಹೊದ್ದು ಬದುಕುವವರ ನಂಬಿಕೆಗಳಿಗೂ ವ್ಯತ್ಯಾಸ ಇರುವುದು ಸಹಜ. ನಮ್ಮ ಅಂಕೆಯಲ್ಲಿಲ್ಲದ ಪ್ರಕೃತಿ, ಹಾಗೂ ಅದರ ವಿಕೋಪಗಳ ಬುಡದಲ್ಲೇ ಬದುಕಬೇಕಾದವರಿಗೆ ಕಾಣದ ಶಕ್ತಿಯನ್ನು ನಂಬಿ ಬದುಕುವುದೇ ಧೈರ್ಯ ಕೊಡುವ ಉತ್ತಮ ಮಾರ್ಗವಿರಬಹುದು ಎಂತಲೂ ಅನಿಸತೊಡಗಿತು.

 ಈ ಪ್ರಕೃತಿ, ಅದರ ಒಡಲಲ್ಲಿ ಬಡಿದಾಡುತ್ತ ಬದುಕುವ ಈ ಇವರ ಎದುರಿಗೆ ನಾನು ಸಣ್ಣವಳಾಗುತ್ತಾ ಹೋದ ಹಾಗೆ ಇಳಿವ ಜಾಗೆ ಬಂದಿತು. 


ಡಾ. ಎಚ್. ಎಸ್. ಅನುಪಮಾ

(೨೦೦೯)