Saturday 9 August 2014

ಗುಡ್ಲಿಗೆ ಬೆಂಕಿ



ಗುಡುಸ್ಲಿಗೆ ಬೆಂಕಿ ಬಿದ್ದದೆ
ಅಯ್ಯೋ, ಹೌದಲ, ಅವು ಉರ‍್ದೋಗ್ತಿದಾವೆ!

ಅಯ್ಯಯ್ಯೋ, ಅವು ಯಾರ ಗುಡುಸ್ಲಾಗಿರಬೋದು?
ಅವು ದಲಿತರವೇ, ನಿಕ್ಕಿ ಹೇಳ್ತೆ ಬೇಕಾದ್ರೆ.
ಗುಡ್ಲು ಇನ್ಯಾರತ್ರ ತಾನೇ ಇರಕ್ಕೆ ಸಾಧ್ಯ ಹೇಳು?

ಇಲ್ಲಿ ಧರ್ಮನೇ ಹಂಗಿದೆ
ಅದ್ರ ಪ್ರಕಾರನೇ
ಲಕ್ಷಾಂತರ ಗುಡುಸ್ಲಿದಾವೆ, ತಿಳಕ,
ಇವು ವರ್ಷಕೊಂದ್ಸಲ ಸುಟ್ಟೋಗ್ತನೇ ಇರ‍್ತಾವೆ.

ಒಂದ್ಸಲ ಸುಟ್ಟೋಗಿದ್ದು
ಮತ್ತೆಮತ್ತೆ ಸುಡದೆಂಗಣ್ಣ?
ಅವೇನು ಮೊಳೀತಾವಾ?

ಹೌದು ಮತ್ತೆ,
ಮತ್ತೆಲ್ಲಿಂದ ಬರ್ತಾವೆ ಅವು
ಮೊಳಕೆ ಒಡೀದೇ?

ಇದೇ ನಂ ಧರ್ಮದ ಗುಟ್ಟು ಕಳ್ಲಾ
ಗುಡುಸ್ಲೂ ಅವತಾರ ಎತ್ತತಾವೆ!
ಮತ್ತೆ ಮತ್ತೆ
ಧರ್ಮ ಸಂಸ್ಥಾಪನೆಗಾಗಿ ಸುಟ್ಟೋಯ್ತವೆ
ಮತ್ತೆಮತ್ತೆ ಅವತಾರ ಎತ್ತಿ ಎದ್ದೇಳತಾವೆ!

ಸುಟ್ಟುರಿಯದು
ಮತ್ತೆ ಏಳದು
ಈ ವಿಷಚಕ್ರ ಎಷ್ಟ್ ಕಾಲ ತಿರುಗುತ್ತಪ ಹಂಗಾರೆ?
ಇದು ಹೀಗೇನೇ,
ಆ ಗುಡುಸ್ಲಾಗೆ ಇದಾರ‍್ನೋಡು
ಅವ್ರಿಗೆ
ಈ ಧರ್ಮ ರಹಸ್ಯ ತಿಳಿಯೋವರೆಗೆ..



- ತೆಲುಗು ಮೂಲ: ಬೋಯಿ ಭೀಮಣ್ಣ
(ಗುಡಿಸೇಲು ಕಾಲಿಪೋತುನ್ನಾಯಿ) (೧೯೨೧-೨೦೦೫)

No comments:

Post a Comment