Wednesday 30 July 2014

ಸೈಬರ್ ರೇಪ್ ಮಟ್ಟಹಾಕಿ..



ಮೊನ್ನೆ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ದಶಕಗಳಿಂದ ಜನಪರ, ಮಹಿಳಾಪರ ಹೋರಾಟಗಳಲ್ಲಿ ಕ್ರಿಯಾಶೀಲರಾಗಿರುವ ಎನ್ ಪ್ರಭಾ ಒಂದು ಸ್ಟೇಟಸ್ ಹಾಕಿದ್ದರು. ಹಲವು ಜನರ ಸಂಶೋಧನೆ-ಪ್ರಯತ್ನದ ಫಲವಾಗಿ ಉಪಗ್ರಹ, ರಾಕೆಟ್, ಮಂಗಲಯಾನ, ಚಂದ್ರಯಾನಗಳಂತಹ ವೈಜ್ಞಾನಿಕ ಆವಿಷ್ಕಾರಗಳಾಗಿರುವ ಕಾಲದಲ್ಲಿ ಮಂತ್ರತಂತ್ರಹೋಮಹವನ ಎಂದು ಪುರೋಹಿತಶಾಹಿಗಳು ಹಳ್ಳಿಯಿಂದ ದಿಲ್ಲಿ ದರಬಾರಿನವರೆಗೂ ಹರಡಿಕೊಂಡಿರುವುದು ಆಧುನಿಕ ಸಮಾಜದ ದುರಂತ ಎಂದು ಬಣ್ಣಿಸಿದ್ದರು. ಈ ಟೀಕೆಯಿಂದ ಕೆರಳಿದ ವಿ. ಆರ್. ಭಟ್ ಎಂಬ ವ್ಯಕ್ತಿ ಕೂಡಲೇ ‘ಎದೆಗೆ ಬಿದ್ದ ಅಕ್ಷರಗಳನ್ನು ಹೇಳಿದ ಓರಾಟಗಾರ್ತಿ’ಗೆ ಯಾರಾದರೂ ಒಬ್ಬ ರೇಪಿಸ್ಟ್ ಜುಟ್ಟು ಹಿಡಿದು ರೇಪ್ ಮಾಡಬೇಕೆಂದು ಅಪ್ಪಣೆ ಕೊಡಿಸಿದ!

ಗಮನಿಸಿ, ಯಾರೋ ಅನಾಮಧೇಯ ಹೀಗೆ ಬರೆಯಲಿಲ್ಲ. ಓದಿ ನೌಕರಸ್ಥನಾಗಿ ಮಧ್ಯವಯಸ್ಸು ದಾಟುತ್ತಿರುವ ಒಬ್ಬ ಸುಶಿಕ್ಷಿತ ವ್ಯಕ್ತಿ ಎಲ್ಲರೂ ಓದಲೆಂದು ಬಹಿರಂಗವಾಗಿ ಹೀಗೆ ಕಮೆಂಟಿಸಿದ್ದ. ಆತನನ್ನು ಬೆಂಬಲಿಸಿ ಹಲವರು ಮತ್ತಷ್ಟು ಬರೆದರು.

ದಶಕಗಳಿಂದ ಸಾರ್ವಜನಿಕ ಜೀವನದಲ್ಲಿ ತೊಡಗಿಕೊಂಡ ಮಹಿಳೆ ನೇರವಾಗಿ ಪ್ರಶ್ನಿಸಿದ್ದಕ್ಕೆ ಬಂದ ದುಷ್ಟ ಪ್ರತಿಕ್ರಿಯೆಗಳನ್ನು ಗಮನಿಸಿದರೆ ಸೈಬರ್ ಲೋಕಕ್ಕೆ ಅಮರಿಕೊಂಡ ಸನಾತನ ಸಂಸ್ಕೃತಿಯೆಂಬ ವೈರಸ್‌ನ ಪರಿಚಯವಾಗುತ್ತದೆ. ಪುರಾತನ ನಾಗರಿಕತೆಯ ಈ ಮಹಾನ್ ದೇಶ ಮಹಿಳೆ ‘ಭಾರತೀಯ ನಾರಿ’ಯಂತಿದ್ದರೆ ಕಿರೀಟಗಳ ತಲೆಗೆ ಕಟ್ಟುತ್ತದೆ. ಅದೇ ವಾಸ್ತವದ ಹುಳುಕುಗಳ ತೋರಿಸತೊಡಗಿದರೆ ಕೆರಳಿ ಮಾನಭಂಗಕ್ಕೆ ಯತ್ನಿಸುತ್ತದೆ.

ಆದರೆ ‘ಹೆಂಗಸ್ರದ್ದು ಹೆಚ್ಚಾಯ್ತು’ ಎಂದು ಹೆಚ್ಚಾದದ್ದನ್ನು ಕಡಿಮೆ ಮಾಡಲು ಚಡ್ಡಿ ಬಿಚ್ಚಿ ಹೊರಟಿರುವ ಈ ಎಲ್ಲ ಬಾಲಕರಿಗೆ ಹೆದರಬಾರದು. ಬದಲಾಗಿ ಅವರನ್ನು ಪೂರಾ ಬೆತ್ತಲಾಗಿಸಿ, ಅವರು ಸೇರಬೇಕಾದ ಜಾಗ ತಲುಪಿಸುವುದೊಂದೇ ಈಗ ಉಳಿದಿರುವ ದಾರಿ. ‘ಹಿತ ವಚನ, ಮಿತ ವಚನ, ಮೃದು ವಚನ’ಗಳನ್ನು ಪ್ರತಿಪಾದಿಸುವ ಸನಾತನಿಗಳ ಮುಖವಾಡ ಕಳಚುವ; ಶೀಲ-ಅಶ್ಲೀಲಗಳ, ಮಾನ-ಅವಮಾನದ ವ್ಯಾಖ್ಯೆ ಬದಲಿಸುವ ಜವಾಬುದಾರಿಯೂ ನಮ್ಮ ಮೇಲೇ ಇದೆ. ಇಲ್ಲದಿದ್ದರೆ ಮತ್ತೆ ಮರ್ಯಾದೆಗಂಜಿ ಮೌನಕ್ಕೆ ಶರಣಾದ ತ್ರೇತಾಯುಗದ ರಾಮರಾಜ್ಯಕ್ಕೆ ಮರಳಬೇಕಾಗುತ್ತದೆ.

ಮಹಿಳಾ ಒಕ್ಕೂಟವು ಈ ಸಂದರ್ಭದಲ್ಲಿ ಸೈಬರ್ ಅತ್ಯಾಚಾರ ಬೆದರಿಕೆಗೆ ಒಳಗಾದ ಅಸಂಖ್ಯ ಹೆಣ್ಣುಮಕ್ಕಳು ಹಾಗೂ ಅವರ ಬೆದರಿಕೆಗೆ ಮಣಿಯದೆ ನಿಂತು ಕೇಸು ಹಾಕಿರುವ ದಿಟ್ಟ ಗೆಳತಿಯ ಪರವಾಗಿ ನಿಲ್ಲುತ್ತದೆ. ಜೊತೆಗೆ ರೇಪ್ ಎಂಬ ಹುಚ್ಚುನಾಯಿ ಕಡಿತಕ್ಕೊಳಗಾದ ಸಮಾಜಕ್ಕೆ ಸೂಕ್ತ ಚಿಕಿತ್ಸೆ ನೀಡಿ ಸೈಬರ್ ಅತ್ಯಾಚಾರ ಎಸಗಿದವರಿಗೆ ತಕ್ಕ ಶಿಕ್ಷೆಯಾಗಬೇಕೆಂದು ಬಯಸುತ್ತದೆ.

- ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ.



No comments:

Post a Comment